ತಮಿಳುನಾಡಿನ ಹೊಸೂರಿನ ಕೋರ್ಟ್ ಆವರಣದಲ್ಲಿ ವಕೀಲರೊಬ್ಬರ ಮೇಲೆ ಮಚ್ಚಿನಿಂದ ಹಲ್ಲೆ ನಡೆದಿದೆ. ಸಹಾಯಕನೊಬ್ಬ ಈ ಹಲ್ಲೆ ನಡೆಸಿದ್ದು, ವಕೀಲರ ಸ್ಥಿತಿ ಗಂಭೀರವಾಗಿದೆ.

ಹೊಸೂರು /ತಮಿಳುನಾಡು (ನ.20): ಬೆಂಗಳೂರಿನ ಗಡಿಗೆ ಹೊಂದಿಕೊಂಡಿರುವ ತಮಿಳುನಾಡು ರಾಜ್ಯದ ಹೊಸೂರಿನಲ್ಲಿ ಕೋರ್ಟ್ ಆವರಣದಲ್ಲಿಯೇ ವಕೀಲನ ಮೇಲೆ ಮಚ್ಚಿನಿಂದ ಬೀಸಿ ಬರ್ಬರವಾಗಿ ಹಲ್ಲೆ ಮಾಡಿರುವ ಘಟನೆ ನಡೆದಿದೆ. ಕೋರ್ಟ್ ಆವರಣದಲ್ಲಿ ಸಹಾಯಕ ಕೆಲಸ ಮಾಡುತ್ತಿದ್ದ ವ್ಯಕ್ತಿಯೇ ವಕೀಲನ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ್ದು, ಬದುಕುವ ಸಾಧ್ಯತೆ ತೀರಾ ಕಡಿಮೆ ಎಂದು ತಿಳಿದುಬಂದಿದೆ.

Add Asianetnews Kannada as a Preferred SourcegooglePreferred

ದೇಶದಲ್ಲಿ ನ್ಯಾಯ ಕಾಪಾಡುವ ನ್ಯಾಯಾಲದಲ್ಲಿ ಕೆಲಸ ಮಾಡುವ ವಕೀಲರ ಮೇಲೆ ಹಲ್ಲೆ ಮಾಡುವ ಘಟನೆಗಳು ಹೆಚ್ಚಾಗುತ್ತಿವೆ. ಇತ್ತೀಚೆಗೆ ದೆಹಲಿ ನ್ಯಾಯಾಲಯವೊಂದರಲ್ಲಿ ವಕೀಲರ ಮೇಲೆ ಗುಂಡು ಹಾರಿಸಿದ ಪ್ರಕರಣ ನಡೆದಿತ್ತು. ಇದರ ನಂತರ ಬೀದರ್‌ನಲ್ಲಿ ವಕೀಲನನ್ನು ಅಟ್ಟಾಡಿಸಿಕೊಂಡು ಹಲ್ಲೆ ಮಾಡಿ ಕೊಲೆಗೈದಿದ್ದರು. ಇತ್ತೀಚೆಗೆ ಹಾಸನದಲ್ಲಿ ವಕೀಲರೊಬ್ಬರನ್ನು ಕೋರ್ಟ್ ಕೆಲಸ ಮುಗಿಸಿ ಹೋಗುವಾಗ ಕಾರಿನಲ್ಲಿ ಎಳೆದುಕೊಂದು ಹೋಗಿ ಅಪಘಾತ ಮಾಡಿ ಕೊಲೆ ಮಾಡಿದ್ದರು. ಇದರ ಬೆನ್ನಲ್ಲಿಯೇ ಇದೀಗ ಹೊಸೂರಿನಲ್ಲಿ ಕೋರ್ಟ್ ಆವರಣದಲ್ಲಿ ಮಚ್ಚಿನಿಂದ ಬರ್ಬರವಾಗಿ ಕೊಚ್ಚಿ ಹಾಕಿರುವ ಘಟನೆ ನಡೆದಿದೆ.

ಇದನ್ನೂ ಓದಿ: ಉಡುಪಿ: ನಿಶ್ಚಿತಾರ್ಥದ ನಂತರ ಆತ್ಮಹತ್ಯೆಗೆ ಶರಣಾದ ಕೀರ್ತನಾ ಶೆಟ್ಟಿ

ಬೆಂಗಳೂರಿನ ಗಡಿಭಾಗ ಆನೇಕಲ್‌ಗೆ ತುಸು ದೂರದಲ್ಲಿರುವ ತಮಿಳುನಾಡಿದ ಹೊಸೂರು ಕೋರ್ಟ್ ಆವರಣದಲ್ಲಿ ಘಟನೆ ನಡೆದಿದೆ. ಹಲ್ಲೆಗೆ ಒಳಗಾದ ವಕೀಲ ಕಣ್ಣನ್ ಎಂದು ಗುರುತಿಸಲಾಗಿದೆ. ಆನಂದ್ ಎಂಬಾತನಿಂದ ಕೊಲೆ ಮಾಡಲು ಮಚ್ಚಿನಿಂದ ಹಲ್ಲೆ ಮಾಡಿದ್ದಾರೆ. ಈ ವೇಳೆ ಯಾರೂ ಸಹಾಯಕ್ಕೆ ಬರದೇ ವಕೀಲ ಕಣ್ಣನ್‌ಗೆ ಗಂಭೀರ ಗಾಯಗಳಾಗಿದ್ದು, ಕೋರ್ಟ್ ಆವರಣದಲ್ಲಿ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡಿದ್ದಾರೆ. ಇದಾದ ನಂತರ ಕೂಡಲೇ ಇತರೆ ವಕೀಲರು ಬಂದು ಅವರನ್ನು ಆಟೋದಲ್ಲಿ ಕರೆದೊಯ್ದು ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ದೃಶ್ಯವನ್ನು ನ್ಯಾಯಾಧೀಶರು ಕೂಡ ಕಣ್ಣಾರೆ ನೋಡಿದ್ದಾರೆ. ಇನ್ನು ಘಟನಾ ಸ್ಥಳಕ್ಕೆ ಹೊಸೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಕೊಲೆಗೆ ಯತ್ನಿಸಿದ ವ್ಯಕ್ತಿ ಆನಂದ್, ಕೋರ್ಟ್ ಆವರಣದಲ್ಲೇ ಸಹಾಯಕ ಕೆಲಸ ಮಾಡುತ್ತಿದ್ದನು. ಈತನ ಹೆಂಡತಿ ಮೇಲೆ ವಕೀಲ ಕಣ್ಣನ್ ನಡುವೆ ಅನೈತಿಕ ಸಂಬಂಧ ಇತ್ತು ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಕೊಲೆಗೆ ಯತ್ನ ಮಾಡಿದ್ದಾರೆ ಎನ್ನಲಾಗುತ್ತಿದೆ.