Asianet Suvarna News Asianet Suvarna News

Ind vs Eng 3rd Test: ಕೆ ಎಲ್ ರಾಹುಲ್ ಔಟ್, ದೇವದತ್ ಪಡಿಕ್ಕಲ್ ಇನ್..!

ರಾಹುಲ್ ಆರಂಭಿಕ ಪಂದ್ಯದಲ್ಲಿ ಗಾಯಗೊಂಡಿದ್ದು, 2ನೇ ಪಂದ್ಯಕ್ಕೆ ಗೈರಾಗಿದ್ದರು. ಗಾಯದ ಹೊರತಾಗಿಯೂ ರಾಹುಲ್ ಹಾಗೂ ಜಡೇಜಾರನ್ನು ಕೊನೆ 3 ಟೆಸ್ಟ್‌ಗಳಿಗೆ ಆಯ್ಕೆ ಮಾಡಲಾಗಿತ್ತು. ಆದರೆ ಫಿಟ್ನೆಸ್ ಸಾಬೀತುಪಡಿಸಬೇಕೆಂದು ಬಿಸಿಸಿಐ ತಿಳಿಸಿತ್ತು.

KL Rahul ruled out of third Test against England Devdutt Padikkal called up kvn
Author
First Published Feb 13, 2024, 11:59 AM IST

ರಾಜ್‌ಕೋಟ್(ಫೆ.13): ತೊಡೆಯ ಗಾಯದಿಂದ ಇನ್ನೂ ಚೇತರಿಸಿಕೊಳ್ಳದ ಕಾರಣ ತಾರಾ ಬ್ಯಾಟರ್ ಕೆ.ಎಲ್.ರಾಹುಲ್ ಇಂಗ್ಲೆಂಡ್ ವಿರುದ್ಧದ 3ನೇ ಟೆಸ್ಟ್ ಪಂದ್ಯದಿಂದ ಹೊರಬಿದ್ದಿದ್ದಾರೆ. ಅವರ ಬದಲು ಕರ್ನಾಟಕದ ಮತ್ತೋರ್ವ ಬ್ಯಾಟರ್ ದೇವದತ್ ಪಡಿಕ್ಕಲ್ ಚೊಚ್ಚಲ ಬಾರಿ ಭಾರತ ಟೆಸ್ಟ್ ತಂಡಕ್ಕೆ ಸೇರ್ಪಡಗೊಂಡಿದ್ದಾರೆ.

ರಾಹುಲ್ ಆರಂಭಿಕ ಪಂದ್ಯದಲ್ಲಿ ಗಾಯಗೊಂಡಿದ್ದು, 2ನೇ ಪಂದ್ಯಕ್ಕೆ ಗೈರಾಗಿದ್ದರು. ಗಾಯದ ಹೊರತಾಗಿಯೂ ರಾಹುಲ್ ಹಾಗೂ ಜಡೇಜಾರನ್ನು ಕೊನೆ 3 ಟೆಸ್ಟ್‌ಗಳಿಗೆ ಆಯ್ಕೆ ಮಾಡಲಾಗಿತ್ತು. ಆದರೆ ಫಿಟ್ನೆಸ್ ಸಾಬೀತುಪಡಿಸಬೇಕೆಂದು ಬಿಸಿಸಿಐ ತಿಳಿಸಿತ್ತು. 3ನೇ ಟೆಸ್ಟ್‌ಗೂ ಮುನ್ನ ಸಂಪೂರ್ಣ ಫಿಟ್ ಆಗದ ಕಾರಣ ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ ಎಂದು ಬಿಸಿಸಿಐ ಪ್ರಕಟಿಸಿದೆ. ಪಡಿಕ್ಕಲ್ ದೇಸಿ ಕ್ರಿಕೆಟ್‌ನಲ್ಲಿ ಅಭೂತಪೂರ್ವ ಲಯದಲ್ಲಿದ್ದು, ರಣಜಿಯ 4 ಪಂದ್ಯಗಳಲ್ಲಿ 3 ಶತಕ ಬಾರಿಸಿದ್ದಾರೆ. ವಿಜಯ್ ಹಜಾರೆ, ಭಾರತ ‘ಎ’ ತಂಡದ ಪರವಾಗಿಯೂ ಅತ್ಯುತ್ತಮ ಆಟ ಪ್ರದರ್ಶಿಸಿದ್ದರು. ಪಡಿಕ್ಕಲ್ ಈ ವರೆಗೂ ಭಾರತದ ಪರ 2 ಟಿ20 ಪಂದ್ಯಗಳನ್ನು ಆಡಿದ್ದಾರೆ.

ಭರತ್ ಬದಲು ಜುರೆಲ್?: ವಿಕೆಟ್ ಕೀಪರ್ ಬ್ಯಾಟರ್ ಶ್ರೀಕರ್ ಭರತ್ ಬದಲು ಧ್ರುವ್ ಜುರೆಲ್‌ಗೆ ಅವಕಾಶ ಸಿಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಭರತ್, ಈವರೆಗೂ ಆಡಿರುವ 7 ಪಂದ್ಯಗಳಲ್ಲಿ ಕೇವಲ 221 ರನ್ ಬಾರಿಸಿದ್ದು, ಒಂದೂ ಅರ್ಧಶತಕ ದಾಖಲಾಗಿಲ್ಲ.

Ranji Trophy ಕರ್ನಾಟಕ vs ತಮಿಳುನಾಡು ಪಂದ್ಯ ರೋಚಕ ಡ್ರಾ!

ಅಭ್ಯಾಸ ಶುರು: 2ನೇ ಟೆಸ್ಟ್ ಬಳಿಕ ಅಗತ್ಯ ವಿಶ್ರಾಂತಿ ಪಡೆದಿರುವ ಭಾರತೀಯ ಆಟಗಾರರು ರಾಜ್‌ಕೋಟ್‌ಗೆ ಆಗಮಿಸಿದ್ದು, ಅಭ್ಯಾಸ ಪ್ರಾರಂಭಿಸಿದ್ದಾರೆ. ಇಂಗ್ಲೆಂಡ್ ಆಟಗಾರರು ಕೂಡಾ ಅಬು ಧಾಬಿಯಿಂದ ರಾಜ್‌ಕೋಟ್‌ಗೆ ಮರಳಿದ್ದಾರೆ. 3ನೇ ಪಂದ್ಯ ಫೆ.15ರಿಂದ ಆರಂಭಗೊಳ್ಳಲಿದೆ.

ರಣಜಿ ಆಡದೆ ಐಪಿಎಲ್‌ಗೆ ಸಿದ್ಧತೆ: ಆಟಗಾರರ ಬಗ್ಗೆ ಬಿಸಿಸಿಐ ಅಸಮಾಧಾನ

ನವದೆಹಲಿ: ರಾಷ್ಟ್ರೀಯ ತಂಡದಲ್ಲಿ ಇಲ್ಲದಿದ್ದರೂ ರಣಜಿ ಆಡದೆ ಐಪಿಎಲ್‌ಗೆ ಸಿದ್ಧತೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಕೆಲ ಆಟಗಾರರ ಬಗ್ಗೆ ಬಿಸಿಸಿಐ ಅಸಮಾಧಾನಗೊಂಡಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.

ಸಾಮಾನ್ಯವಾಗಿ ರಾಷ್ಟ್ರೀಯ ತಂಡದಲ್ಲಿರುವ ಅಥವಾ ಗಾಯಗೊಂಡು ಎನ್‌ಸಿಎನಲ್ಲಿರುವ ಆಟಗಾರರಿಗೆ ಮಾತ್ರ ದೇಸಿ ಕ್ರಿಕೆಟ್‌ನಿಂದ ವಿನಾಯಿತಿ ಇದೆ. ಆದರೆ ಸದ್ಯದ ಮಾಹಿತಿ ಪ್ರಕಾರ ಇಶಾನ್‌ ಕಿಶನ್‌ ಸೇರಿದಂತೆ ಕೆಲ ಆಟಗಾರರು ರಾಷ್ಟ್ರೀಯ ತಂಡದಿಂದ ಹೊರಗುಳಿದಿದ್ದು, ಅತ್ತ ರಣಜಿಯಲ್ಲೂ ಆಡುತ್ತಿಲ್ಲ. ಇಶನ್‌ ಐಪಿಎಲ್‌ಗೆ ಸಿದ್ಧತೆ ನಡೆಸುತ್ತಿರುವ ಬಗ್ಗೆಯೂ ವರದಿಯಾಗಿತ್ತು. ಇದರಿಂದ ಬಿಸಿಸಿಐ ಅಸಮಾಧಾನಗೊಂಡಿದೆ ಎನ್ನಲಾಗಿದ್ದು, ಶೀಘ್ರದಲ್ಲೇ ಅವರ ಜೊತೆ ಬಿಸಿಸಿಐ ಮಾತುಕತೆ ನಡೆಸಿ, ತಮ್ಮ ತಮ್ಮ ರಾಜ್ಯ ತಂಡಗಳ ಪರ ಆಡುವಂತೆ ಸೂಚಿಸಲಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.

ರೋಹಿತ್ ಶರ್ಮಾ ನೋಡಿದ ಕೊನೆಯ ಸಿನಿಮಾ ಯಾವುದು? ಸ್ವತಃ ಇಂಟ್ರೆಸ್ಟಿಂಗ್ ಮಾಹಿತಿ ಹಂಚಿಕೊಂಡ ಹಿಟ್‌ಮ್ಯಾನ್

ಸೌರಭ್‌ ತಿವಾರಿ ಎಲ್ಲಾ ಮಾದರಿ ಕ್ರಿಕೆಟ್‌ಗೆ ನಿವೃತ್ತಿ

ನವದೆಹಲಿ: ಭಾರತದ ಎಡಗೈ ಬ್ಯಾಟರ್‌ ಸೌರಭ್‌ ತಿವಾರಿ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಸೋಮವಾರ ನಿವೃತ್ತಿ ಘೋಷಿಸಿದ್ದಾರೆ. ರಣಜಿ ಟ್ರೋಫಿಯಲ್ಲಿ ಜಾರ್ಖಂಡ್‌ ಪರ ಆಡುತ್ತಿರುವ 34ರ ತಿವಾರಿ ಫೆ.16ರಿಂದ ಆರಂಭಗೊಳ್ಳಲಿರುವ ರಾಜಸ್ಥಾನ ವಿರುದ್ಧ ಕೊನೆ ಬಾರಿ ಕಣಕ್ಕಿಳಿಯುವಾಗಿ ಪ್ರಕಟಿಸಿದ್ದಾರೆ. ತಿವಾರಿ ಭಾರತದ ಪರ 3 ಏಕದಿನ ಪಂದ್ಯಗಳನ್ನಾಡಿದ್ದು, ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 189 ಇನ್ನಿಂಗ್ಸ್‌ಗಳಲ್ಲಿ 8030 ರನ್‌ ಕಲೆಹಾಕಿದ್ದಾರೆ. ಐಪಿಎಲ್‌ನಲ್ಲೂ 93 ಪಂದ್ಯಗಳನ್ನಾಡಿದ್ದಾರೆ.

ಕಿರಿಯರ ವಿಶ್ವಕಪ್‌ ಶ್ರೇಷ್ಠ ತಂಡದಲ್ಲಿ ಉದಯ್‌ ಸೇರಿ ಭಾರತದ ನಾಲ್ವರಿಗೆ ಸ್ಥಾನ

ಬೆನೋನಿ: ಅಂಡರ್‌-19 ವಿಶ್ವಕಪ್‌ ಟೂರ್ನಿಯ ಶ್ರೇಷ್ಠ ತಂಡವನ್ನು ಸೋಮವಾರ ಐಸಿಸಿ ಘೋಷಿಸಿದ್ದು, ಉದಯ್‌ ಸಹರನ್‌ ಸೇರಿ ಭಾರತದ ನಾಲ್ವರು ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಮುಶೀರ್ ಖಾನ್‌, ಸಚಿನ್‌ ಧಾಸ್, ಸೌಮಿ ಪಾಂಡೆ ತಂಡದಲ್ಲಿದ್ದಾರೆ. ಆಸ್ಟ್ರೇಲಿಯಾದ ಹ್ಯೂಸ್‌ ವೀಬ್‌ಗೆನ್‌ ನಾಯಕನಾಗಿ ನೇಮಕಗೊಂಡಿದ್ದಾರೆ.

Follow Us:
Download App:
  • android
  • ios