ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ನಾಗರಪಂಚಮಿ ಪೂಜೆ ಮುಗಿಸಿದ ಬೆನ್ನಲ್ಲೇ ಅವರ ನಿವಾಸದ ಆವರಣದಲ್ಲಿ ಜೀವಂತ ನಾಗರಹಾವು ಪ್ರತ್ಯಕ್ಷವಾಗಿದೆ. ನಾಗದೇವರ ಮೂರ್ತಿಯ ಬಳಿ ಹಾವು ಕಾಣಿಸಿಕೊಂಡ ಈ ದೃಶ್ಯ ಮೊಬೈಲ್ನಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ 'ಪವಾಡ' ಎಂದು ವೈರಲ್ ಆಗುತ್ತಿದೆ.
ಬೆಳಗಾವಿ: ನಾಗರಪಂಚಮಿ ಎಂದರೆ ಭಕ್ತರಿಗೆ ವಿಶೇಷ ಸಂಭ್ರಮ. ಹುತ್ತಕ್ಕೆ ಹಾಲೆರೆದು ನಾಗದೇವನನ್ನು ಪೂಜಿಸುವ ಈ ದಿನದಂದು ಬೆಳಗಾವಿ ಜಿಲ್ಲೆಯ ಗೋಕಾಕನಲ್ಲಿ ಒಂದು ಅಚ್ಚರಿಯ ಘಟನೆ ನಡೆದಿದೆ. ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ನಿವಾಸದ ಆವರಣದಲ್ಲಿ ಪವಾಡವೊಂದು ನಡೆದಿದ್ದು, ಭಕ್ತರು ಬೆರಗಾಗಿದ್ದಾರೆ.
ಪೂಜೆ ಮುಗಿದ ಕೆಲವೇ ಕ್ಷಣದಲ್ಲಿ ಆಗಮನ!
ನಾಗರಪಂಚಮಿ ಹಿನ್ನೆಲೆಯಲ್ಲಿ ಗೋಕಾಕ ನಗರದ ಎನ್ಎಸ್ಎಫ್ (NSF) ಹಿಂಭಾಗದಲ್ಲಿರುವ ತಮ್ಮ ನಿವಾಸದ ಆವರಣದಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ನಾಗದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದರು. ಸಂಪ್ರದಾಯದಂತೆ ನಾಗರ ಕಲ್ಲಿಗೆ ಹಾಲೆರೆದು ಭಕ್ತಿಯಿಂದ ನಮಿಸಿದ್ದರು. ಆದರೆ ಪೂಜೆ ಮುಗಿಸಿ ಅವರು ಅಲ್ಲಿಂದ ತೆರಳಿದ ಕೆಲವೇ ಕ್ಷಣಗಳಲ್ಲಿ ಎಲ್ಲಿಂದಲೋ ಬಂದ ಜೀವಂತ ನಾಗರಹಾವೊಂದು ನಾಗದೇವರ ಕಲ್ಲಿನ ಬಳಿ ಪ್ರತ್ಯಕ್ಷವಾಗಿದೆ.
ಮೊಬೈಲ್ನಲ್ಲಿ ಸೆರೆಯಾಯ್ತು ದೃಶ್ಯ
ನಾಗದೇವರ ಮೂರ್ತಿಯ ಬಳಿ ಬಂದ ನಾಗರಹಾವು ಅಲ್ಲಿ ಕೆಲಕಾಲ ಸಮಯ ಕಳೆದಿರುವುದು ಕಂಡುಬಂದಿದೆ. ಪೂಜೆ ಸಲ್ಲಿಕೆಯಾದ ಬೆನ್ನಲ್ಲೇ ಈ ರೀತಿ ನಾಗರಹಾವು ಬಂದಿರುವುದನ್ನು ಅಲ್ಲಿ ನೆರೆದಿದ್ದವರು ತಮ್ಮ ಮೊಬೈಲ್ ಕ್ಯಾಮೆರಾಗಳಲ್ಲಿ ಸೆರೆಹಿಡಿದಿದ್ದಾರೆ. ಸಾಕ್ಷಾತ್ ನಾಗದೇವನೇ ಪೂಜೆ ಸ್ವೀಕರಿಸಲು ಬಂದಿದ್ದಾನೆ ಎಂದು ಸ್ಥಳೀಯರು ಭಾವಪರವಶರಾಗಿದ್ದಾರೆ.
ಸದ್ಯ ಈ ಘಟನೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ಜಾರಕಿಹೊಳಿ ಅಭಿಮಾನಿಗಳು ಹಾಗೂ ಭಕ್ತರು ಇದನ್ನು 'ನಾಗರಪಂಚಮಿಯ ಪವಾಡ' ಎಂದು ಬಣ್ಣಿಸುತ್ತಿದ್ದಾರೆ.


