ಮಲ್ಲಿಕಾ ಶೆರಾವತ್ ಜೊತೆ ಆಟ: ಶಾರುಖ್ ಖಾನ್ ಅಶ್ಲೀಲ ಹೇಳಿಕೆಗೆ ಭಾರಿ ಟ್ರೋಲ್
ಕಾಫಿ ವಿತ್ ಕರಣ್ನಲ್ಲಿ ಕರಣ್ ಕೇಳಿದ ಪ್ರಶ್ನೆಗೆ ಶಾರುಖ್ ಖಾನ್ ನೀಡಿದ ಉತ್ತರ ಅಸಭ್ಯ ಎಂದು ಭಾರಿ ಟ್ರೋಲ್ ಆಗುತ್ತಿದೆ. ಏನಿದು?
ಚಿತ್ರ ನಿರ್ದೇಶಕ ಕರಣ್ ಜೋಹರ್ ಕಳೆದ ಕೆಲವು ವರ್ಷಗಳಿಂದ ಚಾನೆಲ್ ಒಂದರಲ್ಲಿ ಕಾಫಿ ವಿತ್ ಕರಣ್ (Koffee With Karan) ನಡೆಸಿಕೊಡುತ್ತಿದ್ದಾರೆ. ಈ ಸಂಚಿಕೆಗಳಲ್ಲಿ ಇದಾಗಲೇ ಹಲವಾರು ಚಿತ್ರತಾರೆಯರು ಅತಿಥಿಯಾಗಿ ಬಂದು ಹೋಗಿದ್ದಾರೆ. ಚಿತ್ರ ತಾರೆಯರ ಜೊತೆ ಕರಣ್ ಜೋಹರ್ ನೇರಾನೇರವಾಗಿ ಪ್ರಶ್ನೆಗಳನ್ನು ಕೇಳುತ್ತಾರೆ. ಅದರಲ್ಲಿ ಕೆಲವು ತೀರಾ ವೈಯಕ್ತಿಕ ಎನಿಸುವುದೂ ಉಂಟು, ಇನ್ನು ಕೆಲವು ಹಾಸ್ಯದ ರೂಪದಲ್ಲಿ ಇರುತ್ತವೆ. ಈವರೆಗೂ 7 ಸೀಸನ್ಗಳನ್ನು ಯಶಸ್ವಿಯಾಗಿ ಪೂರೈಸಲಾಗಿದ್ದು, ‘ಕಾಫಿ ವಿತ್ ಕರಣ್’ 8ನೇ ಸೀಸನ್ಗೆ ಸಕಲ ಸಿದ್ಧತೆ ನಡೆಯುತ್ತಿದೆ. ‘ಕಾಫಿ ವಿತ್ ಕರಣ್’ ಕಾರ್ಯಕ್ರಮದ ಜೊತೆ ಒಂದಷ್ಟು ವಿವಾದಗಳು ಕೂಡ ಅಂಟಿಕೊಂಡಿವೆ. ಇದರಲ್ಲಿ ಬರೀ ವಿವಾದಾತ್ಮಕ ಪ್ರಶ್ನೆ ಕೇಳಲಾಗುತ್ತದೆ ಹಾಗೂ ಲೈಂಗಿಕತೆ ಬಗ್ಗೆಯೇ ಹೆಚ್ಚು ಚರ್ಚೆ ಆಗುತ್ತದೆ ಎಂಬ ಕಳಂಕ ಇದೆ. ಹಾಗಾಗಿ ಕೆಲವು ಸೆಲೆಬ್ರಿಟಿಗಳು ಈ ಶೋಗೆ ಬರಲು ಹಿಂದೇಟು ಹಾಕಿದ್ದು ಕೂಡ ಉಂಟು. ಇಂಥದ್ದೇ ಒಂದು ಪ್ರಶ್ನೋತ್ತರ ಈಗ ಭಾರಿ
ಸದ್ದು ಮಾಡುತ್ತಿದೆ.
ಅಂದಹಾಗೆ ಇದು ಹಳೆಯ ಎಪಿಸೋಡ್. ಹಳೇ ಎಪಿಸೋಡ್ಗಳನ್ನು ಇಟ್ಟುಕೊಂಡು ಜನರು ಈಗ ಶಾರುಖ್ ಖಾನ್ (Shah Rukh Khan) ಅವರನ್ನು ಟ್ರೋಲ್ ಮಾಡುತ್ತಿದ್ದದಾರೆ. ಇದು ಸಾಕಷ್ಟು ವೈರಲ್ ಆಗಿದ್ದು, ಇದರಲ್ಲಿ ಶಾರುಖ್ ಅಸಭ್ಯವಾಗಿ ಮಾತನಾಡಿದ್ದಾರೆ ಎಂದು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ. ಈ ಕಾರ್ಯಕ್ರಮದಲ್ಲಿ ಶಾರುಖ್ ಖಾನ್ ಜೊತೆ ರಾಣಿ ಮುಖರ್ಜಿ ಮತ್ತು ಕಾಜೋಲ್ ಅವರು ‘ಕಾಫಿ ವಿತ್ ಕರಣ್’ ಶೋನಲ್ಲಿ ಭಾಗಿ ಆಗಿದ್ದರು. ಆಗ ಅವರಿಗೆ ಬಾಲಿವುಡ್ ತಾರೆ ಮಲ್ಲಿಕಾ ಶೆರಾವತ್ (Mallika Sherawat) ಬಗ್ಗೆ ಪ್ರಶ್ನೆ ಕೇಳಲಾಗಿತ್ತು. ಅದಕ್ಕೆ ಶಾರುಖ್ ಖಾನ್ ತಮಾಷೆಯ ಉತ್ತರ ನೀಡಿದ್ದರು. ಅಸಲಿಗೆ ಇದು ತಮಾಷೆ ಅಲ್ಲ, ಬದಲಿಗೆ ಅಶ್ಲೀಲ ಎನ್ನುವುದು ನೆಟ್ಟಿಗರ ವಾದ. ಇಂಥ ದೊಡ್ಡ ಸ್ಟಾರ್ ಈ ಪರಿಯ ತೀರಾ ಕೆಳಮಟ್ಟದ ಉತ್ತರ ಕೊಟ್ಟಿರುವುದಕ್ಕೆ ಸ್ಟಾರ್ ನಟನನ್ನು ನೆಟ್ಟಿಗರು ಹಿಗ್ಗಾಮಗ್ಗಾ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಇನ್ನೂ ಕೆಲವರು ನೇರವಾಗಿ ಕರಣ್ ಜೋಹರ್ ಅವರನ್ನು ದೂಷಿಸುತ್ತಿದ್ದಾರೆ.
SRK ಅಂದ್ರೆ ಶೇಖರ್ ರಾಧಾ ಕೃಷ್ಣ ಎಂದ ನಟ ಶಾರುಖ್ ಧರ್ಮದ ಬಗ್ಗೆ ಹೇಳಿದ್ದೇನು?
ಅಷ್ಟಕ್ಕೂ ಇಲ್ಲಿ ಕೇಳಿರುವ ಪ್ರಶ್ನೆ ಹಾಗೂ ಶಾರುಖ್ ಅವರು ಹೇಳಿರುವ ಉತ್ತರ ಏನೆಂದರೆ, ಕರಣ್ ಅವರು, ಶಾರುಖ್ಗೆ‘ಒಂದು ವೇಳೆ ಮಲ್ಲಿಕಾ ಶೆರಾವತ್ ಮೇಲೆ ಆರ್ಯನ್ ಖಾನ್ಗೆ ಕ್ರಶ್ ಆದರೆ ಆತನಿಗೆ ನಿಮ್ಮ ಸಲಹೆ ಏನು?’ ಎಂದು ಪ್ರಶ್ನಿಸಿದ್ದರು. ಅದಕ್ಕೆ ಶಾರುಖ್ ‘ಆಕೆ ಇನ್ನೂ ತುಂಬ ಚಿಕ್ಕವಳು. ಅವಳ ಜೊತೆ ಆರ್ಯನ್ ಖಾನ್ಗೆ ಕ್ರಶ್ ಆದರೆ ಆಟ ಆಡುತ್ತಾನೆ. ನಾನೂ ಕೂಡ ಅವಳ ಜೊತೆ ಸ್ವಲ್ಪ ಹೊತ್ತು ಆಟ ಆಡಬಹುದಾ ಅಂತ ಕೇಳುತ್ತೇನೆ’ ಎಂದು ಉತ್ತರಿಸಿದ್ದರು. ಈ ಉತ್ತರಕ್ಕೆ ಕಾರ್ಯಕ್ರಮದಲ್ಲಿ ಹಾಜರು ಇದ್ದ ಕಾಜೋಲ್ (Kajol) ಮತ್ತು ರಾಣಿ ಮುಖರ್ಜಿ ಅವರು ಜೋರಾಗಿ ನಕ್ಕಿದ್ದರು. ಆಗ ಶಾರುಖ್ ಕೂಡಲೇ ‘ಇವರು ಏನೋ ಯೋಚನೆ ಮಾಡುತ್ತಿದ್ದಾರೆ. ಇವರು ಕೆಟ್ಟ ಮನಸ್ಥಿತಿಯವರು’ ಎಂದರು. ಈ ವಿಡಿಯೋ ಈಗ ವೈರಲ್ ಆಗಿದೆ. ‘ಇದರಲ್ಲಿ ನಿಜಕ್ಕೂ ಕೆಟ್ಟ ಮನಸ್ಥಿತಿ ಇರುವುದು ಕರಣ್ ಜೋಹರ್ಗೆ. ಅವರು ಕೆಟ್ಟ ಪ್ರಶ್ನೆ ಕೇಳಿದ್ದಾರೆ’ ಎಂದು ಕೆಲವರು ಹೇಳಿದರೆ, ಇದರಲ್ಲಿ ಕರಣ್ ತಪ್ಪಿಲ್ಲ. ಅವರು ಸಹಜವಾಗಿಯೇ ಪ್ರಶ್ನೆ ಕೇಳಿದ್ದಾರೆ. ಆದರೆ ಕೆಟ್ಟ ಮನಸ್ಥಿತಿ ಇರುವುದು ಶಾರುಖ್ದು. ಒಂದು ಹೆಣ್ಣಿನ ಬಗ್ಗೆ ಇಷ್ಟು ಕಳಪೆಯಾಗಿ ಉತ್ತರಿಸಿದ್ದಾರೆ ಎಂದಿದ್ದಾರೆ.
ಪ್ರಸ್ತುತ ‘ಡಂಕಿ’ ಮತ್ತು ‘ಜವಾನ್’ (Jawan) ಚಿತ್ರದ ಕೆಲಸಗಳಲ್ಲಿ ಶಾರುಖ್ ಖಾನ್ ಬ್ಯುಸಿ ಆಗಿದ್ದಾರೆ. ‘ಜವಾನ್’ ಸಿನಿಮಾ ಸೆಪ್ಟೆಂಬರ್ 7ರಂದು ಬಿಡುಗಡೆ ಆಗಲಿದೆ. ಈ ಚಿತ್ರಕ್ಕೆ ಕಾಲಿವುಡ್ನ ಖ್ಯಾತ ನಿರ್ದೇಶಕ ಅಟ್ಲಿ ಕುಮಾರ್ ನಿರ್ದೇಶನ ಮಾಡುತ್ತಿದ್ದಾರೆ. ರಾಜ್ಕುಮಾರ್ ಹಿರಾನಿ ಅವರ ನಿರ್ದೇಶನದಲ್ಲಿ ‘ಡಂಕಿ’ ಸಿನಿಮಾ ಮೂಡಿಬರುತ್ತಿದೆ. ಇನ್ನು ಮಲ್ಲಿಕಾ ಶೆರಾವತ್ ಬಗ್ಗೆ ಹೇಳುವುದಾದರೆ ಇವರು ಸಿಕ್ಕಾಪಟ್ಟೆ ಬೋಲ್ಡ್ ನಟಿ. ಯಾವುದೇ ಹಿಂಜರಿಕೆ ಇಲ್ಲದೇ ಎಂಥ ದೃಶ್ಯಗಳನ್ನೂ ಲೀಲಾಜಾಲವಾಗಿ ಮಾಡಬಲ್ಲರು. ಇದೇ ಕಾರಣಕ್ಕೆ ಈಕೆಯನ್ನು ನೀಲಿ ತಾರೆ ಎಂದೂ ಕರೆಯಲಾಗಿತ್ತು. ಈ ಬಗ್ಗೆ ಖುದ್ದು ಮಲ್ಲಿಕಾ ಅವರೇ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.
ಆರ್ಯನ್ ಖಾನ್ಗೆ ಮಾತನಾಡಲೂ ಪುರುಸೊತ್ತಿಲ್ವಂತೆ! ಶಾರುಖ್ ಪತ್ನಿ ಹೇಳಿದ್ದೇನು?