ಆಪರೇಷನ್ ಸಿಂದೂರ: ಬಾಲಿವುಡ್ ಖಾನ್ಗಳು ಬಹುದೂರ ! ವೈರಲ್ ಆಯ್ತು ವಾಜಪೇಯಿ ಹೇಳಿದ್ದ ಮಾತು...

Synopsis
ಸಿನಿಮಾಗಳಲ್ಲಿ ದೇಶಭಕ್ತಿಯ ಡೈಲಾಗ್ಗಳ ಮೂಲಕ ಕೋಟಿ ಕೋಟಿ ರೂಪಾಯಿ ಬಾಚಿಕೊಳ್ಳುವ ಬಾಲಿವುಡ್, ಆಪರೇಷನ್ ಸಿಂದೂರದ ವಿಷಯದಲ್ಲಿ ಫುಲ್ ಸೈಲೆಂಟ್ ಆಗಿದೆ. ಪಾಕಿಸ್ತಾನದ ವಿರುದ್ಧ ಒಂದೂ ಮಾತನಾಡದ ಖಾನ್ ತ್ರಯರ ನಿಲುವಿನ ಬಗ್ಗೆ ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ. ಅಟಲ್ ಬಿಹಾರಿ ವಾಜಪೇಯಿ ಮಾತೀಗ ವೈರಲ್ ಆಗಿದೆ.
ಸಿನಿಮಾಗಳಲ್ಲಿ ಅಬ್ಬಬ್ಬಾ ಅದೇನು ದೇಶಭಕ್ತಿ. ಅಭಿಮಾನಿಗಳು ಸೀಟಿ ಹೊಡೆಯೋದೇ ಹೊಡೆಯೋದು. ದೇಶ ಭಕ್ತಿಯ ಒಂದೊಂದು ಡೈಲಾಗ್ ಹೇಳುವಾಗಲೂ ಸಿನಿಮಾ ಮಂದಿರಗಳ ತುಂಬಾ ದೇಶ ಪ್ರೇಮದ ಕೋಲ್ಮಿಂಚು. ಸೇನೆಯ ವೇಷ ತೊಟ್ಟು, ಕೈಯಲ್ಲಿ ಗನ್ ಹಿಡಿದು ದೇಶಕ್ಕಾಗಿ ಪ್ರಾಣ ಕೊಡುವೆ ಎನ್ನುವ ಡೈಲಾಗ್ ಹೇಳಿದರಂತೂ ಮುಗಿದೇ ಹೋಯ್ತು... ನಮ್ಮ ದೇಶಕ್ಕೆ ಬೇಕಿರುವುದು ಇಂಥ ನಟರೇ ಎಂದು ಖುದ್ದು ಅವರೇ ಯುದ್ಧಕ್ಕೆ ಹೋಗುವಂತೆ ಬಿಂಬಿಸುವ ಅತಿರೇಕದ ಅಭಿಮಾನಿಗಳಿಗೇನೂ ಕಡಿಮೆ ಇಲ್ಲ. ಸಿನಿಮಾ ತಾರೆಯರೇ ದೇವರು, ಸಿನಿಮಾ ತಾರೆಯರೇ ದೇಶ ಪ್ರೇಮಿಗಳು, ಅವರೇ ಆದರ್ಶರು. ಅದರಲ್ಲಿಯೂ ದೇಶ ಭಕ್ತಿಯನ್ನು ಸಾರುವ ಹಾಡು ಬಂದರೆ ಅಭಿಮಾನಿಗಳ ಕಣ್ಣಲ್ಲಿ ಗಳಗಳ ನೀರು...
ಆದರೆ ಇಂದು ಬಾಲಿವುಡ್ನ ಅಲ್ಲೊಬ್ಬ ಇಲ್ಲೊಬ್ಬ ನಟ- ನಟಿ ಬಿಟ್ಟರೆ ಇಡೀ ಬಾಲಿವುಡ್ಡೇ ಗಪ್ಚುಪ್! ಅದರಲ್ಲಿಯೂ ದೇಶಪ್ರೇಮವನ್ನು ಅಭಿಮಾನಿಗಳಲ್ಲಿ ಸಾರಿ ಸಾರಿ ಹೇಳುವ ಮೂಲಕ ಕೋಟಿ ಕೋಟಿ ರೂಪಾಯಿ ಬಾಚಿಕೊಳ್ಳುವ ಖಾನ್ತ್ರಯರು ಆಪರೇಷನ್ ಸಿಂದೂರದ ವಿಷಯದಲ್ಲಿ ಫುಲ್ ಸೈಲೆಂಟ್ ಆಗುವ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಟ್ರೋಲ್ಗೆ ಒಳಗಾಗುತ್ತಿದ್ದಾರೆ. ಉಗ್ರರನ್ನು ಪೋಷಿಸುತ್ತಿರುವ, ಭಾರತದ ಹೆಣ್ಣುಮಕ್ಕಳ ಸಿಂದೂರನ್ನು ಕಿತ್ತುಕೊಂಡಿರುವ ಪಾಕಿಗಳ ಪರವಾಗಿ ನಿಜವಾದ ಭಾರತೀಯರೆಲ್ಲರೂ ಕೊತಕೊತ ಕುದಿಯುತ್ತಿದ್ದರೆ, ಬೇರೆ ಯಾವುದೇ ವಿಷಯಗಳಿಗೆ ಥಟ್ ಎಂದು ರಿಯಾಕ್ಟ್ ಮಾಡುವ ಖಾನ್ತ್ರಯರು ಮಾತ್ರ ಸುಮ್ಮನೇ ಇರುವುದು ಅವರ ಅಭಿಮಾನಿಗಳಿಗೂ ಸಹಿಸಿಕೊಳ್ಳಲು ಆಗುತ್ತಿಲ್ಲ! ಕೊನೆಯ ಪಕ್ಷ ಪಾಕಿಸ್ತಾನದ ವಿರುದ್ಧವಾದರೂ ಒಂದಾದರೂ ಮಾತನಾಡಬೇಕಲ್ವಾ? ಇದು ಯಾವ ದೇಶದ ಪ್ರೇಮ ಎಂದು ಪ್ರಶ್ನಿಸುತ್ತಿದ್ದಾರೆ ನೆಟ್ಟಿಗರು!
Operation Sindoor: ರಾಣಿ ಲಕ್ಷ್ಮಿ ಬಾಯಿ ಜತೆ ಸೋಫಿಯಾ ಖುರೇಷಿ ಸಂಬಂಧ! ರೋಚಕ ಇತಿಹಾಸ ತೆರೆದಿಟ್ಟ ಕರ್ನಲ್
ಇದರ ನಡುವೆ, ಅಂದಿನ ಪ್ರಧಾನಿ, ಭಾರತ ಕಂಡ ಅಪರೂಪದ ದಿಟ್ಟ ಪ್ರಧಾನಿಗಳಲ್ಲಿ ಒಬ್ಬರು ಎನಿಸಿರುವ ಅಟಲ್ ಬಿಹಾರಿ ವಾಜಪೇಯಿ ಅವರು ಹೇಳಿದ್ದ ಮಾತೊಂದು ಈಗ ಮತ್ತೆ ಸದ್ದು ಮಾಡುತ್ತಿದೆ. 1999ರ ಕಾರ್ಗಿಲ್ ಯುದ್ಧದ ಸಮಯದಲ್ಲಿ, ಅಟಲ್ ಅವರು ಭಾಷಣ ಮಾಡುವ ಸಮಯದಲ್ಲಿ ಭಾರತವು ಶಾಂತಿಯನ್ನು ಬಯಸುತ್ತದೆ. ಆದರೆ ಶಾಂತಿಯನ್ನು ಕದಡಲು ಬಂದವರಿಗೆ ಹೇಗೆ ಅವರದ್ದೇ ಆದ ಭಾಷೆಯಲ್ಲಿ ತಿರುಗೇಟು ಕೊಡಬೇಕು ಎನ್ನುವುದೂ ಭಾರತೀಯರಿಗೆ ಗೊತ್ತಿದೆ ಎಂದಿದ್ದರು. ಇದೇ ಸಂದರ್ಭದಲ್ಲಿ ನಟ ಆಮೀರ್ ಖಾನ್ ಅವರು, ವಾಜಪೇಯಿ ಅವರ ಬಳಿ 'ನೇತಾ ಖುಚ್ ಕರ್ನಾ ಚಾಹಿಯೇ' ಎಂದಿದ್ದರು. ಯುದ್ಧದ ಭೀತಿ ಉಂಟಾಗಿದ್ದರಿಂದ ರಾಜಕಾರಣಿಗಳು ಏನಾದರೂ ಮಾಡಬೇಕು ಎನ್ನುವುದು ಅವರ ಮಾತಾಗಿತ್ತು. ಅದಕ್ಕೆ ಮಾತಿನ ಚತುರ ವಾಜಪೇಯಿ ಅವರು, 'ಕೇವಲ್ ನೇತಾ ನಹಿ... ಅಭಿನೇತಾ ಭೀ ಕುಛ್ ಕರ್ ಸಕತಾ ಹೈ' (ಕೇವಲ ರಾಜಕಾರಣಗಳು ಮಾತ್ರವಲ್ಲ ಅಭಿನೇತಾ ಅಂದ್ರೆ ನಟರೂ ಏನಾದರೂ ಮಾಡಲು ಸಾಧ್ಯ) ಎಂದಿದ್ದರು.
ಏಕೆಂದರೆ, ರಾಜಕಾರಣಿಗಳಿಗಿಂತಲೂ ಜನರಿಗೆ ಹೆಚ್ಚು ಹತ್ತಿರವಾದವರು, ಅನುಯಾಯಿಗಳು, ದೇವರು ಎಂದು ನಂಬುವುದು ಚಿತ್ರನಟರನ್ನು ಮಾತ್ರ. ಅವರು ಒಂದು ಹೆಜ್ಜೆ ಮುಂದೆ ಹೋದರೆ ಅವರ ಹಿಂದೆ ಲಕ್ಷಾಂತರ ಅಭಿಮಾನಿಗಳು ಬರುತ್ತಾರೆ. ಏಕೆಂದರೆ ಇವರಿಗೆ ಅವರೇ ಆದರ್ಶ. ಕೊಡಲಿ, ಲಾಂಗು, ಮಚ್ಚು ಹಿಡಿಯುವುದರಿಂದ ಹಿಡಿದು ದೇಶಪ್ರೇಮವನ್ನು ಬಿತ್ತುವವರೆಗೂ ಸಿನಿ ತಾರೆಯರೇ ಹಲವರಿಗೆ ಆದರ್ಶಪ್ರಾಯ ಆಗಿದ್ದಾರೆ. ಆದ್ದರಿಂದ ನೇತಾಗಳ ಜೊತೆಗೆ ಅಭಿನೇತಾಗಳೂ ಏನಾದ್ರೂ ಮಾಡಿ ಎಂದು ವಾಜಪೇಯಿ ಹೇಳಿದ್ದರು. ಆದರೆ ಇಂದು ಬಹುತೇಕ ಅಭಿನೇತಾಗಳು ಸೈಲೆಂಟ್ ಆಗುವ ಮೂಲಕ ತಮ್ಮ ಸಂದೇಶವನ್ನು ಸಾರಿದ್ದಾರೆ!
ಪಾಕ್ನಲ್ಲಿ 7 ವರ್ಷ ಮುಸ್ಲಿಮಾಗಿದ್ದು ಕಿವಿಯಿಂದ ಸಿಕ್ಕಿಬಿದ್ದ 'ಆಪರೇಷನ್ ಸಿಂದೂರ'ದ ಹೀರೋ ಸ್ಟೋರಿ ಇದು!