ಪಾಕ್ ಡಿಸೈನರ್ ಜೊತೆ ಪೋಸ್: ನಟಿ ಕರೀನಾ ಕಪೂರ್ ದುಬೈ ಫೋಟೋಶೂಟ್ಗೆ ಭಾರಿ ಆಕ್ರೋಶ

Synopsis
ಪಹಲ್ಗಾಮ್ ದಾಳಿಯ ನಂತರ ದುಬೈನಲ್ಲಿ ಪಾಕಿಸ್ತಾನ ಮೂಲದ ಡಿಸೈನರ್ ಜೊತೆ ಫೋಟೋಗೆ ಪೋಸ್ ನೀಡಿದ ಕರೀನಾ ಕಪೂರ್ ನಡೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ನವದೆಹಲಿ: ಪಹಲ್ಗಾಮ್ ದಾಳಿಯ ನಂತರ ದುಬೈನಲ್ಲಿ ಪಾಕಿಸ್ತಾನ ಮೂಲದ ಡಿಸೈನರ್ ಜೊತೆ ಫೋಸ್ ನೀಡಿದ ಬಾಲಿವುಡ್ ನಟಿ ಕರೀನಾ ಕಪೂರ್ ನಡೆಗೆ ಈಗ ತೀವ್ರ ಆಕ್ರೋಶ ವ್ಯಕ್ತವಾಗಿದೆ. ನಟಿ ಕರೀನಾ ಕಪೂರ್ ತಮ್ಮ ದುಬೈ ಪ್ರವಾಸದ ವೇಳೆ ಪಾಕಿಸ್ತಾನಿ ಡಿಸೈನರ್ ಫರಾಜ್ ಮನನ್ ಜೊತೆ ಫೋಟೋವೊಂದಕ್ಕೆ ಪೋಸ್ ನೀಡಿದ್ದಾರೆ. ಈ ಫೋಟೋವನ್ನು ಫರಾಜ್ ಮನನ್ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಫೋಟೋ ವೈರಲ್ ಆಗುತ್ತಿದ್ದಂತೆ ಅನೇಕರು ಕರೀನಾ ಕಪೂರ್ ಮೇಲೆ ಮುಗಿಬಿದ್ದಿದ್ದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಹಲ್ಗಾಮ್ ದಾಳಿಯ ನಂತರ ಭಾರತ ಪಾಕಿಸ್ತಾನದ ನಡುವೆ ತೀವ್ರ ಉದ್ವಿಘ್ನತೆ ಏರ್ಪಟ್ಟಿರುವ ಸಂದರ್ಭದಲ್ಲೇ ಈ ಫೋಟೋ ಸೆಷನ್ ನಡೆದಿದ್ದು, ಈ ಫೋಟೋ ವೈರಲ್ ಆಗಿದೆ. ಈ ಫೋಟೋ ನೋಡಿದ ಅನೇಕರು ಕರೀನಾ ಕಪೂರ್ನ್ನು ಇದೇ ಕಾರಣಕ್ಕೆ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡ್ತಿದ್ದಾರೆ.
ಫರಾಜ್ ಮನನ್ ವಿತ್ ಓಜಿ ಎಂದು ಬರೆದು ಕರೀನಾ ಜೊತೆಗಿನ ಫೋಟೋವನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದರು. ಆದರೆ ಕರೀನಾ ಈ ಫೋಟೋವನ್ನೇನೂ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ರೀ ಶೇರ್ ಮಾಡಿರಲಿಲ್ಲ, ಆದರೆ ಸೆಲೆಬ್ರಿಟಿಗಳ ಮೇಲೆ ಹದ್ದಿನ ಕಣ್ಣಿಟ್ಟಿರುವ ಅಭಿಮಾನಿಗಳ ಕಣ್ಣಿಗೆ ಈ ಫೋಟೋ ಬಿದ್ದಿದೆ.
ಇದನ್ನೂ ಓದಿ:ಅತಿಥಿಗಳಿಗೆ ರಕ್ಷಣೆ ಕೊಡುವಲ್ಲಿ ನಾನು ವಿಫಲ, ರಾಜ್ಯ ಸ್ಥಾನಮಾನ ಕೇಳಲ್ಲ; ಸಿಎಂ ಓಮರ್ ಭಾವುಕ
ಭಾರತ ಪಾಕಿಸ್ತಾನದ ಜೊತೆ ಸಮರದಲ್ಲಿ ತೊಡಗಿರುವಾಗ, ಕರೀನಾ ಕಪೂರ್ ಖಾನ್ ಮಾತ್ರ ಪಾಕಿಸ್ತಾನಿ ಡಿಸೈನರ್ ಫರಾಜ್ ಮನನ್ ಜೊತೆ ದುಬೈನಲ್ಲಿ ಭರ್ಜರಿ ಫೋಟೋಶೂಟ್ ಮಾಡುವುದರಲ್ಲಿ ನಿರತರಾಗಿದ್ದಾರೆ. ಕಳೆದ ವರ್ಷ, ಕರೀನಾ ಪ್ಯಾಲೆಸ್ತೇನ್ಗೆ ಬೆಂಬಲ ವ್ಯಕ್ತಪಡಿಸಿದ್ದರು. ಆದರೆ ಈಗ ಅವರು ತಮ್ಮ ಸ್ವಂತ ದೇಶದ ಜೊತೆ ನಿಲ್ಲಲು ಅವರಿಗೆ ಸಾಧ್ಯವಾಗುತ್ತಿಲ್ಲ. ರಾಷ್ಟ್ರಕ್ಕಾಗಿ ತ್ಯಾಗ ಮಾಡುವ ಜವಾಬ್ದಾರಿಯನ್ನು ಹೊರುವುದು ಸೈನ್ಯ ಮಾತ್ರವೇ? ಬಾಲಿವುಡ್ ಸೆಲೆಬ್ರಿಟಿಗಳಿಗೆ ತಮ್ಮದೇ ದೇಶದ ಬಗ್ಗೆ ಯಾವುದೇ ಕರ್ತವ್ಯವಿಲ್ಲವೇ? ಎಂದು ಎಕ್ಸ್ನಲ್ಲಿ ಒಬ್ಬರು ಕರೀನಾ ಫರಾಜ್ ಜೊತೆ ಇರುವ ಫೋಟೋ ಶೇರ್ ಮಾಡಿ ಪ್ರಶ್ನೆ ಮಾಡಿದ್ದಾರೆ.
ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ, ಕರೀನಾ ಕಪೂರ್ ಘಟನೆಯನ್ನು ಖಂಡಿಸಿ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದರು. ಈ ಪಹಲ್ಗಾಮ್ ಸಂತ್ರಸ್ತರು ಮತ್ತು ಅವರ ಕುಟುಂಬಗಳಿಗೆ ಹೃದಯ ಮಿಡಿಯುತ್ತಿದೆ. ಕಳೆದುಹೋದ ಜೀವಗಳಿಗಾಗಿ ಪ್ರಾರ್ಥಿಸುತ್ತಿದ್ದೇನೆ #ಪಹಲ್ಗಾಮ್ ಎಂದು ಅವರು ಬರೆದುಕೊಂಡಿದ್ದರು. ದುಬೈಗೆ ಹೋಗಿದ್ದ ಕರೀನಾ ಭಾನುವಾರ ಮುಂಜಾನೆಯೇ ಮುಂಬೈಗೆ ಬಂದಿಳಿದಿದ್ದಾರೆ. ಆದರೆ ಅವರು ಫರಾಜ್ ಖಾನ್ ಜೊತೆಗೆ ತೆಗೆಸಿಕೊಂಡ ಫೋಟೋ ವೃತ್ತಿಗೆ ಸಂಬಂಧಿಸಿದ ಒಪ್ಪಂದವಾಗಿತ್ತೆ ಎಂಬ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ.
ಇದನ್ನೂ ಓದಿ:ಅಷ್ಟ ದಿಕ್ಕುಗಳಲ್ಲೂ ಆಕ್ರಮಣ ಆಪ್ತಮಿತ್ರನ ಮಹಾಮೌನ.. ರಣರಂಗದಲ್ಲಿ ಏಕಾಂಗಿ ಪಾಕಿಸ್ತಾನ
ಕರೀನಾ ಕೈಯಲ್ಲಿ 'ದೈರಾ' ಎಂಬ ಸಿನಿಮಾವಿದ್ದು, ಈ ಸಿನಿಮಾದಲ್ಲಿ ಮಲೆಯಾಳಂ ನಟ ಪೃಥ್ವಿರಾಜ್ ಸುಕುಮಾರನ್ ಜೊತೆ ನಟಿಸಲಿದ್ದಾರೆ. ಈ ಸಿನಿಮಾವನ್ನು ರಾಝಿ ಖ್ಯಾತಿಯ ಮೇಘನಾ ಗುಲ್ಜಾರ್ ನಿರ್ದೇಶಿಸುತ್ತಿದ್ದಾರೆ. ಈ ಚಿತ್ರದ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಇಲ್ಲ. ಆದರೆ ಈ ಸಿನಿಮಾ 2026 ರ ಆರಂಭದಲ್ಲಿ ಚಿತ್ರಮಂದಿರಗಳಿಗೆ ಬರುವ ನಿರೀಕ್ಷೆಯಿದೆ.
ಅಫ್ಘಾನ್ ವಿದೇಶಾಂಗ ಸಚಿವರ ಭೇಟಿ ಮಾಡಿದ ಭಾರತೀಯ ರಾಯಭಾರಿಗಳು
ನವದೆಹಲಿ: ಶತ್ರುವಿನ ಶತ್ರು ಮಿತ್ರ ಎಂಬ ಮಾತಿದೆ. ಅದೇ ರೀತಿ ಈಗ ಭಾರತ ತನ್ನ ರಾಜತಾಂತ್ರಿಕ ತಂತ್ರಗಳ ಮೂಲಕವೇ ಪಾಕಿಸ್ತಾನವನ್ನು ಕಟ್ಟಿ ಹಾಕುವ ಎಲ್ಲಾ ಪ್ರಯತ್ನ ಮಾಡಿದೆ. ಈಗಾಗಲೇ ಪಾಕಿಸ್ತಾನದ ಮಿತ್ರನಾಗಿದ್ದ ಚೀನಾ ಇಂತಹ ಯುದ್ಧದ ಆತಂಕವಿರುವ ಸಂದರ್ಭದಲ್ಲೇ ನಿಧಾನವಾಗಿ ಪಾಕಿಸ್ತಾನವನ್ನು ನಡುನೀರಿನಲ್ಲಿ ಕೈಬಿಟ್ಟ ಬಗ್ಗೆ ವರದಿಯಾಗಿದೆ. ಹೀಗಿರುವಾಗ ಈಗ ಪಾಕಿಸ್ತಾನದ ಬಗ್ಗಲಿನಲ್ಲೇ ಇರುವ ಇನ್ನೊಂದು ರಾಷ್ಟ್ರ ಅಫ್ಘಾನಿಸ್ತಾನದ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಾಖಿ ಅವರನ್ನು ಭಾರತದ ರಾಜತಾಂತ್ರಿಕ ಅಧಿಕಾರಿಗಳು ಭೇಟಿ ಮಾಡಿದ್ದು, ಹಲವು ವಿಚಾರಗಳ ಬಗ್ಗೆ ಅವರೊಂದಿಗೆ ಚರ್ಚೆ ನಡೆಸಿದ್ದಾರೆ ಎಂದು ವರದಿಯಾಗಿದೆ. ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತ ಪಾಕಿಸ್ತಾನ ನಡುವೆ ಸಂಬಂಧ ಉದ್ವಿಘ್ನಗೊಂಡ ಬಗ್ಗೆ ಹಾಗೂ ರಾಜಕೀಯ, ಪ್ರಾದೇಶಿಕ ಬೆಳವಣಿಗೆಗಳ ಕುರಿತು ಚರ್ಚಿಸಿದ್ದಾರೆ ಎಂದು ತಿಳಿದು ಬಂದಿದೆ.