ಹುಲಸೂರು ಮಹಿಳಾ ಕಿಸಾನ್ ಮಿಲ್ಲೆಟ್ಸ್ ಪ್ರೊಡ್ಯುಸರ್ ಕಂಪನಿ, ವಿದೇಶಿಗರೂ ಇಲ್ಲಿಗೆ ಸಿರಿಧಾನ್ಯ ಅರಿತುಕೊಳ್ಳಲು ಭೇಟಿ ನೀಡ್ತಾರೆ, ನಾಲ್ವರು ಯುವಕರು ಸೇರಿ ಕಟ್ಟಿದ್ದ ಸಂಸ್ಥೆಯಲ್ಲಿ ಈಗ 300 ಮಹಿಳೆಯರು.

ಅಪ್ಪಾರಾವ್ ಸೌದಿ

Add Asianetnews Kannada as a Preferred SourcegooglePreferred

ಬೀದರ್: ಜಗತ್ತಿನಲ್ಲಿ ಕಾಡುತ್ತಿರುವ ಅನೇಕ ರೋಗಗಳಿಗೆ ಫರ್ಟಿಲೈಜರ್ ಭರಿತ ದವಸ ಧಾನ್ಯಗಳ ಸೇವನೆಯೇ ಕಾರಣವಾಗಿದ್ದು, ಇದರ ನಿರ್ಮೂಲನೆ ಸಿರಿಧಾನ್ಯದಿಂದ ಮಾತ್ರ ಸಾಧ್ಯ ಎಂಬುವುದೂ ಶತಸಿದ್ದ. ಈ ದಿಶೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಸಿರಿಧಾನ್ಯ ಬೆಳೆಗಳನ್ನು ಬೆಳೆಯಲು ಪ್ರೋತ್ಸಾಹಿಸುತ್ತಿದೆ. ಈ ಹಿನ್ನಲೆಯಲ್ಲಿ ಸಿರಿಧಾನ್ಯಗಳಿಂದ ವಿವಿಧ ಬಗೆಯ ಆಹಾರ ಪದಾರ್ಥಗಳನ್ನು ತಯಾರಿಸುವ ಪದ್ಧತಿ ಹಾಗೂ ವಿವಿಧ ಪ್ರಕಾರದ ಸಿರಿಧಾನ್ಯಗಳ ಉತ್ಪಾದನೆ ವಿಶ್ವದಲ್ಲಿ ಆಕರ್ಷಿತ.

ಸುಮಾರು ನಾಲ್ಕು ಜನ ಯುವಕರು ಸೇರಿಕೊಂಡು 2021ರ ಮಾರ್ಚ್ 2ರಂದು ಆರಂಭವಾದ ಬೀದರ್ ಜಿಲ್ಲೆಯ ಹುಲಸೂರ ಪಟ್ಟಣದಲ್ಲಿ ಮಹಿಳಾ ಕಿಸಾನ್ ಮಿಲ್ಲೆಟ್ಸ್ ಪ್ರೊಡ್ಯುಸರ್ ಕಂಪನಿಯು ವಾರ್ಷಿಕ ಲಕ್ಷಾಂತರ ರೂ. ವಹಿವಾಟು ನಡೆಸಿ, ದೇಶದ ತುಂಬೆಲ್ಲ ಸುದ್ದಿ ಮಾಡಿದೆ. ದೆಹಲಿ, ಬೆಂಗಳೂರು, ಹೈದ್ರಾಬಾದ್, ಬಸವಕಲ್ಯಾಣ ಹಾಗೂ ಬೀದರ್ ಮಾರುಕಟ್ಟೆ ಪ್ರಮುಖವಾಗಿದೆ.

Raichuru: ಆಹಾರ ಉತ್ಪನ್ನಗಳಲ್ಲಿ 'ಸಮೃದ್ಧಿ' ಗೆಲವಿನ ಹಾದಿ ಹಿಡಿದ ಸ್ಟಾರ್ಟಪ್

ಪ್ರಧಾನಿ ಮೋದಿಯಿಂದಲೂ ಭೇಷ್ ಎನಿಸಿಕೊಂಡ ಕಂಪನಿ:
ಈ ಕಂಪನಿ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮನ್ ಕಿ ಬಾತ್‌ನಲ್ಲಿ ಅನೇಕ ಸಲ ಉಲ್ಲೇಖಿಸಿದ್ದಾರೆ. ಈ ಹಿನ್ನಲೆಯಲ್ಲಿ ಹೆಚ್ಚಿನ ಪ್ರಚಾರ ಕಂಡಿರುವ ಈ ಮಹಿಳಾ ಸಂಘದ ಸಿರಿಧಾನ್ಯ ಸಾಧನೆಗೆ ವಿಶ್ವದ ಹಲವಾರು ದೇಶದ ಪ್ರತಿನಿಧಿಗಳು ಬಂದು, ಈ ಘಟಕವನ್ನು ನೋಡಿ ತಿಳಿದುಕೊಳ್ಳುತ್ತಿದ್ದಾರೆ. 

ಸಿರಿಧಾನ್ಯಗಳಾದ ರಾಗಿ, ಜೋಳ, ಅರಕಾ, ಸಾಮೆ, ಸಜ್ಜೆ, ನವಣೆ, ಉರುಲು, ಬರ್ಗು ಹೀಗೆ 9 ಬಗೆಯ ಸಿರಿಧಾನ್ಯಗಳಿಂದ 22 ಬಗೆಯ ಆಹಾರ ಪದಾರ್ಥಗಳನ್ನು ತಯಾರಿಸಲಾಗುತ್ತಿದ್ದು, ಇದರಲ್ಲಿ ಪ್ರಮುಖವಾಗಿ ರಾಗಿ ಮಿಲೆಟ್, ಅರಕಾ ಉಪ್ಪಿಟ್ಟು, ರಾಗಿ ಹಿಟ್ಟು, ಜೋಳದ ಹಿಟ್ಟು, ಸಜ್ಜೆ ಹಿಟ್ಟು ತಯಾರಿಸಿ, ತಮ್ಮದೇ ಬ್ರ‍್ಯಾಂಡ್ ಹೆಸರಲ್ಲಿ ಮಾರಲಾಗುತ್ತಿದೆ. 

Shivamogga: ಮಕ್ಕಳಲ್ಲಿ ಕೌಶಲ್ಯಾಭಿವದ್ಧಿಗೆ ವಿಶೇಷ ಟೂಲ್ ರೆಡಿ ಮಾಡಿದ ಮಲೆನಾಡಿಗರು

ವಿದೇಶದಿಂದಲೂ ರೈತರು, ಅಧಿಕಾರಿಗಳ ಭೇಟಿ:
ಇಲ್ಲಿಯ ಸಿರಿಧಾನ್ಯಗಳ ಕುರಿತು ದೇಶ, ವಿದೇಶಿ ರೈತರಿಗೆ ಸಿರಿಧಾನ್ಯಗಳ ತರಬೇತಿ ನೀಡುತ್ತಿದ್ದಾರೆ. ರೈತ ಉತ್ಪಾದಕ ಸಂಸ್ಥೆ ಉತ್ತೇಜಿಸುವಲ್ಲಿ ಎದುರಿಸುತ್ತಿರುವ ತೊಂದರೆ ಮತ್ತು ಸವಾಲುಗಳ ಕುರಿತು ಅಂತರಾಷ್ಟ್ರೀಯ ತರಬೇತಿ ಕಾರ್ಯಕ್ರಮ ಇತ್ತೀಚೆಗೆ ಇಲ್ಲಿಯೇ ನಡೆದು ನೈಜೇರಿಯಾ, ಸುಡಾನ್, ದಕ್ಷಿಣ ಸುಡಾನ್, ಉಗಾಂಡ, ನೇಪಾಳ, ತಜಕಿಸ್ತಾನ್, ಕಜಕಿಸ್ತಾನ್, ತಾಂಜಾನಿಯಾ, ಉಜ್ಬೇಕಿಸ್ತಾನ್, ಮೊಜಾಂಬಿಕ್, ಅಜರ್ಬೈಜಾನ್, ಬಾಂಗ್ಲಾದೇಶ, ಘಾನಾ, ಇಥಿಯೋಪಿಯಾ, ದಕ್ಷಿಣ ಆಫ್ರಿಕಾ ಮತ್ತು ಝಾಂಬಿಯಾ ದೇಶದ ನೀತಿ ಸಂಯೋಜಕರು, ಆಡಳಿತ ಮಂಡಳಿ, ಸಂಶೋಧಕರು, ಹಿರಿಯ ಅಧಿಕಾರಿಗಳು ಸೇರಿ 27 ಅಂತರಾಷ್ಟ್ರೀಯ ಪ್ರತಿನಿಧಿಗಳು ಭಾರತೀಯ ಸಿರಿ ಧಾನ್ಯ ಸಂಶೋಧನಾ ಸಂಸ್ಥೆ ಹೈದ್ರಾಬಾದ್ ವತಿಯಿಂದ ರಚನೆಯಾದ ಹುಲಸೂರ ಮಹಿಳಾ ಕಿಸಾನ್ ಮಿಲ್ಲೆಟ್ಸ್ ಪ್ರೊಡ್ಯುಸರ್ ಕಂಪನಿಗೆ ಭೇಟಿ ನೀಡಿ ಸಿರಿಧಾನ್ಯಗಳ ಮಹತ್ವ, ಮಾರಾಟ ಮಾಹಿತಿ ಕಲೆ ಹಾಕಿದ್ದಾರೆ. 

ಏನೇನು ತಯಾರಿಸಲಾಗ್ತದೆ?:
ಕುಸಬೆ ಬೀಜ ಸಂಸ್ಕರಿಸಿ ಆರೋಗ್ಯಕ್ಕೆ ಪೂರಕವಾದ ಎಣ್ಣೆ ಸಂಸ್ಕರಿಸಿ, ಪ್ಯಾಕ್ ಮಾಡಿ ಗ್ರಾಹಕರಿಗೆ ಪೂರೈಸಲಾಗುತ್ತದೆ. ರಾಗಿ ಲಡ್ಡು, ನವಣೆ ಅಕ್ಕಿ ಖಾದ್ಯಗಳು, ಹಾರಕ ಅಕ್ಕಿ ಹಲ್ವಾ, ಬಹು ಸಿರಿಧಾನ್ಯದ ಲಡ್ಡು, ಬಹು ಸಿರಿಧಾನ್ಯದ ಖಾರ ಪದಾರ್ಥ(ನಮ್ಕೀನ್), ಉದಲು ಕರಜಿಕಾಯಿ ಸ್ವೀಟ್, ಅಗಸೆ ಬೀಜದ ಲಡ್ಡು. ನವಣೆ ಅಕ್ಕಿ ಚಕ್ಲಿ. ಜೋಳದ ಖಡಕ್ ರೊಟ್ಟಿ, ಸಜ್ಜೆ ಖಡಕ್ ರೊಟ್ಟಿ, ರಾಗಿ ಖಡಕ್ ರೊಟ್ಟಿ, ರಾಗಿ ಪೌಷ್ಟಿಕ ಆಹಾರ ಸೇರಿ ರಾಗಿ ಚಹಾ ಮುಂತಾದವುಗಳನ್ನು ತಯಾರಿಸಿ ಮಾರುಕಟ್ಟೆ ಮಾಡಲಾಗುತ್ತದೆ.

ಕಂಪನಿಯ ಮುಂದಾಳತ್ವ:
ಕಂಪನಿಯಲ್ಲಿ 300 ಮಹಿಳಾ ಷೇರುದಾರರಿದ್ದಾರೆ. 63 ಜನ ಸಣ್ಣ ರೈತರು, 50 ಮಹಿಳಾ ರೈತರಿದ್ದು ಈ ರೈತರಿಂದ ಬೆಳೆದ ಸಿರಿಧಾನ್ಯವನ್ನು ಖರೀದಿಸಿ ಉತ್ಪನ್ನಗಳನ್ನ ತಯಾರಿಸಿ ಮಾರಾಟ ಮಾಡಲಾಗುತ್ತದೆ. ಹುಲಸೂರು ಮಹಿಳಾ ಕಿಸಾನ್ ಮಿಲ್ಲೆಟ್ಸ್ ಪ್ರೊಡ್ಯುಸರ್ ಕಂಪನಿಯ ಅಧ್ಯಕ್ಷೆ ಅಂಬಿಕಾ ಗಿರೀಶ್ ಮೇಹಕರೆ ಮಹಿಳೆಯರ ಗುಂಪನ್ನು ಕಟ್ಟಿಕೊಂಡು ಕಂಪನಿಯನ್ನು ಅತ್ಯುತ್ತಮವಾಗಿ ನಡೆಸುತ್ತಿದ್ದಾರೆ.