ರೇಣುಕಾಸ್ವಾಮಿ ಪ್ರಕರಣದಲ್ಲಿ 14ನೇ ಆರೋಪಿ ಮಾಫಿ ಸಾಕ್ಷಿ ಆಗಿರೋದು ಭಾರೀ ಕುತೂಹಲ ಮೂಡಿಸಿದೆ. ಬೆನ್ನಲ್ಲೇ ದರ್ಶನ್ ಪರ ಮತ್ತೊಮ್ಮೆ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ. ಯಾಕೆ ದರ್ಶನ್ ಅವರಿಗೆ ಆತಂಕ ಶುರುವಾಗಿದ್ಯಾ? ಈ ಕುರಿತು ಕಂಪ್ಲೀಟ್ ಡಿಟೈಲ್ಡ್ ಸ್ಟೋರಿ ಇಲ್ಲಿದೆ.

ಬೆಂಗಳೂರು: ರೇಣುಕಾಸ್ವಾಮಿ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಇದೀಗ ನಟ ದರ್ಶನ್ ಮತ್ತೊಂದು ಮಹತ್ವದ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ. ಸಾಕ್ಷ್ಯ ವಿಚಾರಣೆ ವೇಳೆ ತಾನು ಖುದ್ದಾಗಿ ಕೋರ್ಟ್‌ನಲ್ಲಿ ಹಾಜರಿರಬೇಕು ಎಂಬ ಬೇಡಿಕೆಯೊಂದಿಗೆ ದರ್ಶನ್ ಪರ ವಕೀಲರು ಈಗ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ಏನಿದು ದರ್ಶನ್ ಸಲ್ಲಿಸಿರುವ ಹೊಸ ಅರ್ಜಿ?

ರೇಣುಕಾಸ್ವಾಮಿ ಪ್ರಕರಣದ ಸಾಕ್ಷ್ಯ ವಿಚಾರಣೆ ಆರಂಭವಾಗುತ್ತಿರುವ ಬೆನ್ನಲ್ಲೇ, ದರ್ಶನ್ ಪರಪ್ಪನ ಅಗ್ರಹಾರ ಜೈಲಿನಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗುತ್ತಿದ್ದಾರೆ. ಆದರೆ, ಇದನ್ನು ದರ್ಶನ್ ವಿರೋಧಿಸಿದ್ದಾರೆ. ತಾವು ಖುದ್ದಾಗಿ ನ್ಯಾಯಾಲಯಕ್ಕೆ ಹಾಜರಾಗಲು ಅನುಮತಿ ನೀಡಬೇಕು ಎಂದು ಸಲ್ಲಿಸಿದ್ದ ಅರ್ಜಿಯನ್ನು 59ನೇ ಸಿಸಿಹೆಚ್ ಕೋರ್ಟ್ ತಿರಸ್ಕರಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ದರ್ಶನ್ ಪರ ವಕೀಲರು ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದಾರೆ.

ದರ್ಶನ್ ಮಂಡಿಸಿರುವ ಪ್ರಮುಖ ವಾದಗಳೇನು?

ನ್ಯಾಯಾಲಯಕ್ಕೆ ದರ್ಶನ್ ಪರ ವಕೀಲರು ಹಲವು ತಾಂತ್ರಿಕ ಮತ್ತು ಕಾನೂನಾತ್ಮಕ ಅಂಶಗಳನ್ನು ಮುಂದಿಟ್ಟಿದ್ದಾರೆ. ಸಾಕ್ಷಿಗಳು ಹೇಳಿಕೆ ನೀಡುವಾಗ ಆರೋಪಿಯು ಅವರ ಎದುರೇ ಇರಬೇಕು. ಸಾಕ್ಷ್ಯ ವಿಚಾರಣೆಯನ್ನು ನೇರವಾಗಿ ಆಲಿಸುವುದು ಮತ್ತು ವೀಕ್ಷಿಸುವುದು ಆರೋಪಿಯ ಸಾಂವಿಧಾನಿಕ ಹಕ್ಕು. ಪ್ರಸ್ತುತ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಹಲವು ತಾಂತ್ರಿಕ ಸಮಸ್ಯೆಗಳಿವೆ. ಜೈಲು ಮತ್ತು ನ್ಯಾಯಾಲಯದಲ್ಲಿರುವ ಉಪಕರಣಗಳು ಹಳೆಯದಾಗಿದ್ದು, ಸರಿಯಾಗಿ ಸಂವಹನ ನಡೆಸಲು ಸಾಧ್ಯವಾಗುತ್ತಿಲ್ಲ.

ಪ್ರದೋಷ್ 'ಮಾಫಿ ಸಾಕ್ಷಿ'ಯಾಗಿದ್ದೇ ದರ್ಶನ್ ಆತಂಕಕ್ಕೆ ಕಾರಣವೇ?

ವಿಚಾರಣೆ ನಡೆಯುವ ಸಂದರ್ಭದಲ್ಲಿ ಕಾಲಕಾಲಕ್ಕೆ ತನ್ನ ವಕೀಲರಿಗೆ ಅಗತ್ಯ ಸೂಚನೆಗಳನ್ನು ನೀಡಲು ವಿಡಿಯೋ ಕಾನ್ಫರೆನ್ಸ್‌ನಲ್ಲಿ ಸಾಧ್ಯವಾಗುತ್ತಿಲ್ಲ. ಆರೋಪಿ ಮತ್ತು ವಕೀಲರ ನಡುವಿನ ನೇರ ಸಂವಹನಕ್ಕೆ ಸೂಕ್ತ ವ್ಯವಸ್ಥೆಯಿಲ್ಲ. ಈ ಪ್ರಕರಣದಲ್ಲಿ ಅತಿ ದೊಡ್ಡ ಟ್ವಿಸ್ಟ್ ಎಂದರೆ 14ನೇ ಆರೋಪಿಯಾಗಿರುವ ಪ್ರದೋಷ್ ಈಗ 'ಮಾಫಿ ಸಾಕ್ಷಿ' (Approver) ಆಗಿ ಬದಲಾಗಿರುವುದು. ಈ ಕೊಲೆ ಪ್ರಕರಣದ ಬಗ್ಗೆ ಸತ್ಯ ಹೇಳುವುದಾಗಿ ಒಪ್ಪಿಕೊಂಡಿರುವ ಪ್ರದೋಷ್, ಈಗಾಗಲೇ ಎವಿಡೆನ್ಸ್ ಬುಕ್ ಹಿಡಿದು ಬಿಗಿ ಪೊಲೀಸ್ ಭದ್ರತೆಯಲ್ಲಿ ಕೋರ್ಟ್‌ಗೆ ಹಾಜರಾಗಿದ್ದರು.

ಪ್ರದೋಷ್ ನೀಡುವ ಹೇಳಿಕೆ ದರ್ಶನ್ ಪಾಲಿಗೆ ಸಂಕಷ್ಟ ತರುವ ಸಾಧ್ಯತೆ ಇರುವುದರಿಂದ ಆತ ಹೇಳಿಕೆ ನೀಡುವಾಗ ತಾನು ಖುದ್ದಾಗಿ ಹಾಜರಿರಬೇಕು ಎಂಬುದು ದರ್ಶನ್ ಉದ್ದೇಶ ಎನ್ನಲಾಗುತ್ತಿದೆ. ಇದರ ಜೊತೆಗೆ ಪ್ರದೋಷ್ ಮಾಫಿ ಸಾಕ್ಷಿ ಆಗುವುದನ್ನೂ ಪ್ರಶ್ನಿಸಿ ದರ್ಶನ್ ಪರವಾಗಿ ಹೈಕೋರ್ಟ್‌ಗೆ ಪ್ರತ್ಯೇಕ ಅರ್ಜಿ ಸಲ್ಲಿಸಲಾಗಿದೆ. ಒಟ್ಟಾರೆಯಾಗಿ ವಿಡಿಯೋ ಕಾನ್ಫರೆನ್ಸ್ ಬದಲು ತಮ್ಮನ್ನು ಭೌತಿಕವಾಗಿ ನ್ಯಾಯಾಲಯಕ್ಕೆ ಹಾಜರುಪಡಿಸಲು ಜೈಲು ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕೆಂದು ದರ್ಶನ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಪ್ರದೋಷ್ ನೀಡುವ ಸಾಕ್ಷ್ಯ ಮತ್ತು ದರ್ಶನ್ ಸಲ್ಲಿಸಿರುವ ಈ ಅರ್ಜಿ ಮುಂದಿನ ದಿನಗಳಲ್ಲಿ ಈ ಕೇಸ್‌ನಲ್ಲಿ ಯಾವ ಹಂತಕ್ಕೆ ತಲುಪಲಿದೆ ಎಂಬುದು ಕುತೂಹಲ ಮೂಡಿಸಿದೆ.