ವರದಕ್ಷಿಣೆಗಾಗಿ ನಿರಂತರ ಕಿರುಕುಳ ನೀಡಿ ಸೊಸೆಗೆ ಆಹಾರ ನೀಡದೇ ಉಪವಾಸ ಸಾಯುವಂತೆ ಮಾಡಿದ ಗಂಡ ಹಾಗೂ ಅತ್ತೆಗೆ ಕೇರಳದ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.

ಕೊಲ್ಲಂ: ವರದಕ್ಷಿಣೆಗಾಗಿ ನಿರಂತರ ಕಿರುಕುಳ ನೀಡಿ ಸೊಸೆಗೆ ಆಹಾರ ನೀಡದೇ ಉಪವಾಸ ಸಾಯುವಂತೆ ಮಾಡಿದ ಮಹಿಳೆಯ ಗಂಡ ಹಾಗೂ ಆತನ ತಾಯಿಗೆ ಕೇರಳದ ನ್ಯಾಯಾಲಯವೊಂದು ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ನೀಡಿದೆ. ಕೊಲ್ಲಂ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ತಾಯಿ ಮಗನಿಗೆ ಈ ಕಠಿಣ ಶಿಕ್ಷೆ ನೀಡಿ ಆದೇಶಿಸಿದೆ. ಮಹಿಳೆಯ ಮರಣೋತ್ತರ ಪರೀಕ್ಷೆಯ ವೇಳೆ ಆಕೆಯ ಹೊಟ್ಟೆಯಲ್ಲಿ ಯಾವುದೇ ಆಹಾರವಿರಲಿಲ್ಲ, ಅಲ್ಲದೇ ಆಕೆ ಕೇವಲ 21 ಕೇಜಿ ತೂಕವಿದ್ದಳು ಎಂಬುದು ಬಯಲಾಗಿತ್ತು. ಮದುವೆಯಾಗಿ ಎರಡು ಮಕ್ಕಳನ್ನು ಹೆತ್ತಿರುವ ಹೆಣ್ಣು ಮಗಳೊಬ್ಬಳು ಕೇವಲ 21 ಕೇಜಿ ತೂಕವಿದ್ದು, ಆಕೆಯ ಹೊಟ್ಟೆಯಲ್ಲಿ ತುತ್ತು ಅನ್ನವೂ ಇಲ್ಲದೇ ಹೋಗಿತ್ತು ಎಂದರೆ ಈ ಪಾಪಿಗಳು ಅದೆಷ್ಟು ಕ್ರೂರಿಗಳಾಗಿದ್ದಿರಬಹುದು ನೀವೇ ಯೋಚನೆ ಮಾಡಿ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಆರೋಪಿಗಳಿಗೆ ನ್ಯಾಯಾಲಯವೂ 1 ಲಕ್ಷ ರೂಪಾಯಿ ದಂಡವನ್ನು ವಿಧಿಸಿದೆ. ಛಂತುಲಾಲ್‌ ಹಾಗೂ ಆತನ ತಾಯಿ ಗೀತಾ ಲಾಲಿ ಎಂಬುವವರೇ ಈ ಪ್ರಕರಣದಲ್ಲಿ ಶಿಕ್ಷೆಗೊಳಗಾದ ಆರೋಪಿಗಳು. 2019ರಲ್ಲಿ ಕೊಲ್ಲಂನ ಕರುಂಗಪಲ್ಲಿ ನಿವಾಸಿಯಾದ ತುಷಾರಾ ಎಂಬ ಹೆಣ್ಣು ಮಗಳು ಸಾವಿಗೀಡಾಗಿದ್ದಳು. ಈಕೆಯ ಸಾವಿನ ಪ್ರಕರಣದ ವಿಚಾರಣೆ ನಡೆಸಿದ ಪೊಲೀಸರೇ ಆಘಾತಕ್ಕೊಳಗಾಗಿದ್ದರು. ಈಕೆಗೆ ತೀವ್ರವಾಗಿ ಕಿರುಕುಳ ನೀಡಿ ಆಹಾರವನ್ನು ನೀಡದೇ ಆಕೆಯೇ ಪ್ರಾಣ ಬಿಡುವಂತೆ ಮಾಡಲಾಗಿತ್ತು. ಸಾಯುವ ವೇಳೆ ಆಕೆ ಅಸ್ತಿಪಂಜರದ ಗೂಡಾಗಿದ್ದಳು ಕೇವಲ 20ರಿಂದ 21 ಕೇಜಿ ತೂಗುತ್ತಿದ್ದಳು. ಸಾಯುವ ವೇಳೆ ಆಕೆ ಸಂಪೂರ್ಣ ಅನಾರೋಗ್ಯಪೀಡಿತಳಾಗಿದ್ದಳು ಎಂಬುದು ಪೊಲೀಸ್ ತನಿಖೆಯಿಂದ ಬಯಲಾಗಿತ್ತು. ಎರಡೂ ಪುಟ್ಟ ಮಕ್ಕಳೂ ಇರುವ ತಾಯಿಯೊಬ್ಬಳಿಗೆ ಹೀಗೆ ತುತ್ತು ನೀಡದೇ ಆಕೆ 21ಕೆಜಿ ಇಳಿಯುವಷ್ಟು ಕೃಶವಾಗಿ ಸಾಯಬೇಕು ಎಂದರೆ ಈ ಕ್ರೂರಿಗಳದ್ದು ಅದೆಂತಹ ಕ್ರೌರ್ಯವಾಗಿದ್ದಿರಬಹುದು.

ಅದರಲ್ಲೂ ಮರಣೋತ್ತರ ವರದಿ ಆಕೆಯ ಸಾವಿಗೆ ಕಾರಣ ಏನು ಎಂಬುದನ್ನು ಪತ್ತೆ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿತ್ತು. ಆಕೆಯ ಹೊಟ್ಟೆಯಲ್ಲಿ ಒಂದೇ ಒಂದು ಅನ್ನದ ಅಗುಳಿರಲಿಲ್ಲ. ಈ ಪ್ರಕರಣದಲ್ಲಿ ಈಗ ನ್ಯಾಯಾಲಯ ನೀಡುವ ತೀರ್ಪು ಸಮಾಜಕ್ಕೆ ಸಂದೇಶ ರವಾನಿಸಬೇಕು ಎಂಬ ಪ್ರಾಸಿಕ್ಯೂಷನ್ ವಾದವನ್ನು ನ್ಯಾಯಾಲಯ ಒಪ್ಪಿಕೊಂಡಿತು. ಇತ್ತ ತುಷಾರಾ ಹಾಗೂ ಛಂತುಲಾಲ್ ದಂಪತಿಗೆ ಇಬ್ಬರು ಮಕ್ಕಳೂ ಕೂಡ ಇದ್ದಾರೆ. ಈ ಪ್ರಕರಣದಲ್ಲಿ ಮೂರನೇ ಆರೋಪಿಯಾಗಿರುವ ಛಂತುಲಾಲ್‌ನ ತಂದೆ ಕೆಲ ತಿಂಗಳ ಹಿಂದೆ ಇತಿಕ್ಕರ್‌ ಬಳಿ ನದಿಯ ಬಳಿ ಶವವಾಗಿ ಪತ್ತೆಯಾಗಿದ್ದರು. 

ದೇಶದಲ್ಲೇ ಶೇಕಡಾ 100 ಸಾಕ್ಷರತೆ ಇರುವ ದೇವರ ನಾಡು ಎಂದು ಕರೆಯಲ್ಪಡುವ ಕೇರಳದಲ್ಲೇ ವರದಕ್ಷಿಣೆಯೆಂಬ ಪಿಡುಗು ಇನ್ನೂ ಕಂಡು ಕಾಣದಂತೆ ತೆರೆಮರೆಯಲ್ಲಿ ಜಾರಿಯಲ್ಲಿದೆ. 2023ರಲ್ಲಿ ಕೇರಳದ ತಿರುವನಂತಪುರಂನಲ್ಲಿ 26 ವರ್ಷದ ಸುಶಿಕ್ಷಿತ ವೈದ್ಯಯೇ ಈ ಪಿಡುಗಿಗೆ ಬಲಿಯಾಗಿದ್ದಳು. ಗೆಳೆಯನ ಕುಟುಂಬದವರು ಬೇಡಿಕೆ ಇಟ್ಟಷ್ಟು ವರದಕ್ಷಿಣೆ ನೀಡಲು ಆಕೆಯ ಕುಟುಂಬ ವಿಫಲವಾದ ನಂತರ ಗೆಳೆಯ ಮದುವೆ ಮುರಿದುಕೊಂಡಿದ್ದರಿಂದ ಆಕೆ ಸಾವಿಗೆ ಶರಣಾಗಿದ್ದಳು. ಆಕೆಯ ಗೆಳೆಯ ಮೆಡಿಕಲ್ ಪಿಜಿ ವೈದ್ಯರ ಅಸೋಸಿಯೇಷನ್‌ನ ಪ್ರತಿನಿಧಿಯಾಗಿದದು, ಆತನ ಕುಟುಂಬ ವರದಕ್ಷಿಣೆಯಾಗಿ ಚಿನ್ನ, ಭೂಮಿ ಹಾಗೂ ಬಿಎಂಡ್ಬ್ಯು ಕಾರನ್ನು ನೀಡಬೇಕು ಎಂದು ಬೇಡಿಕೆ ಇಟ್ಟಿದ್ದರು ಎಂದು ವರದಿಯಾಗಿದೆ.