Why Sandalwood Stars Ignored Rashmika Mandanna's Wedding ರಾಷ್ಟ್ರಮಟ್ಟದ ತಾರೆ ರಶ್ಮಿಕಾ ಮಂದಣ್ಣ, ವಿಜಯ್ ದೇವರಕೊಂಡ ಜೊತೆ ರಾಜಸ್ಥಾನದಲ್ಲಿ ವಿವಾಹವಾಗಿದ್ದಾರೆ. ಆದರೆ, ಈ ಮದುವೆಗೆ ಕನ್ನಡ ಚಿತ್ರರಂಗದಿಂದ ಯಾವುದೇ ಶುಭಾಶಯಗಳು ವ್ಯಕ್ತವಾಗಿಲ್ಲ, ಬದಲಾಗಿ ಮೌನ ಆವರಿಸಿದೆ.
ಬೆಂಗಳೂರು (ಫೆ.27): ಸ್ಯಾಂಡಲ್ವುಡ್ನ ಸಾರ್ವಕಾಲಿಕ ಯೂತ್ ಫಿಲ್ಮ್ ಕಿರಿಕ್ ಪಾರ್ಟಿಯಿಂದ ದೊಡ್ಡ ಮಟ್ಟದ ಫೇಮ್ ಪಡೆದು ಇಂದು ರಾಷ್ಟ್ರಮಟ್ಟದಲ್ಲಿ ತಾರೆಯಾಗಿ ಗುರುತಿಸಿಕೊಂಡಿರುವ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಮದುವೆಯಾಗಿದ್ದಾರೆ. ರಾಜಸ್ಥಾನದ ಉದಯಪುರದಲ್ಲಿ ಅದ್ದೂರಿಯಾಗಿ ಮದುವೆ ನಡೆದಿದೆ. ಮದುವೆಗೆ ಕೇವಲ 100 ಮಂದಿಗಷ್ಟೇ ಆಹ್ವಾನವಿತ್ತು ಎನ್ನಲಾಗಿತ್ತು. ಮಾರ್ಚ್ 4 ರಂದು ನಡೆಯಲಿರುವ ರಿಸಪ್ಶನ್ಗೆ ರಾಜಕೀಯ ಹಾಗೂ ಸಿನಿಮಾ ರಂಗದ ಗಣ್ಯರನ್ನು ಆಹ್ವಾನಿಸಲಾಗಿದೆ. ಚಿತ್ರರಂಗದ ತಾರೆಯರು ಕೂಡ ಇದರಲ್ಲಿ ಭಾಗವಹಿಸುವ ನಿರೀಕ್ಷೆ ಇದೆ.
ಇಷ್ಟೆಲ್ಲದರ ನಡುವೆ ಭಾರೀ ಕುತೂಹಲಕ್ಕೆ ಕಾರಣವಾಗಿರುವುದು ಸ್ಯಾಂಡಲ್ವುಡ್ ಸ್ಟಾರ್ಗಳ ಮೌನ. ರಶ್ಮಿಕಾ ಮಂದಣ್ಣ ಮದುವೆಯ ಫೋಟೋ ಹಂಚಿಕೊಂಡರೂ ಕೂಡ ಸ್ಯಾಂಡಲ್ವುಡ್ನ ಯಾರೊಬ್ಬರೂ ಕೂಡ ಸೋಶಿಯಲ್ ಮೀಡಿಯಾ ಮೂಲಕ ಅವರಿಗೆ ವಿಶ್ ಮಾಡಿದ್ದು ಕಂಡಿಲ್ಲ. ಶ್ವೇತಾ ಚೆಂಗಪ್ಪ, ಅಶ್ವಿಧಿ ಶೆಟ್ಟಿ, ಅದ್ವಿತಿ ಶೆಟ್ಟಿಯಂಥ ಕೆಲವರು ರಶ್ಮಿಕಾ ಮಂದಣ್ಣ ಫೋಟೋಗೆ ವಿಶ್ ಮಾಡಿ ಶುಭ ಕೋರಿದ್ದರೆ, ಆಶಿಕಾ ರಂಗನಾಥ್ ಒಬ್ಬರೇ ರಶ್ಮಿಕಾ ಮದುವೆಗೂ ಕೂಡ ಹಾಜರಾಗಿದ್ದರು.
ಆದರೆ, ಕನ್ನಡದಲ್ಲಿ ರಶ್ಮಿಕಾ ಕೆಲಸ ಮಾಡಿದ ಸಿನಿಮಾದ ಯಾವೊಬ್ಬ ಸಹಕಲಾವಿದರೂ ಕೂಡ ರಶ್ಮಿಕಾಗೆ ವಿಶ್ ಮಾಡಿದ್ದು ಕಂಡಿಲ್ಲ.ಕಿರಿಕ್ ಪಾರ್ಟಿ ಸಿನಿಮಾ ಟೀಮ್ ವಿಶ್ ಮಾಡದೇ ಇರೋದಕ್ಕೆ ಸಾಕಷ್ಟು ಕಾರಣಗಳಿವೆ. ಆದರೆ, ಇತರ ಕಲಾವಿದರು ರಶ್ಮಿಕಾಗೆ ವಿಶ್ ಮಾಡಿಲ್ಲ ಅನ್ನೋದೇ ಕುತೂಹಲ. ಚಮಕ್ ಸಿನಿಮಾದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ರಶ್ಮಿಕಾ ನಟಿಸಿದ್ದರು. ಗಣೇಶ್ ಆಗಲಿ, ಸಿನಿಮಾದ ನಿರ್ದೇಶಕ ಸಿಂಪಲ್ ಸುನಿಯಾಗಲಿ ರಶ್ಮಿಕಾಗೆ ಸೋಶಿಯಲ್ ಮೀಡಿಯಾದಲ್ಲಿ ವಿಶ್ ಮಾಡಿದ್ದು ಕಂಡಿಲ್ಲ. ಇಬ್ಬರೂ ಕೂಡ ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿಯೇ ಇದ್ದಾರೆ.
ಅಂಜನಿಪುತ್ರ ಸಿನಿಮಾದಲ್ಲಿ ರಶ್ಮಿಕಾ, ಪುನೀತ್ ಜೊತೆ ನಟಿಸಿದ್ದರು. ಆದರೆ, ಈ ಸಿನಿಮಾ ನಿರ್ದೇಶನ ಮಾಡಿದ್ದ ಎ.ಹರ್ಷ ಕೂಡ ವಿಶ್ ಮಾಡಿದ್ದು ಎಲ್ಲೂ ಕಂಡಿಲ್ಲ. ರಶ್ಮಿಕಾ ಸಿನಿ ಬದುಕಿನಲ್ಲಿ ಆರಂಭಿಕ ಅವಕಾಶ ಕೊಟ್ಟ ನಿರ್ದೇಶಕರಲ್ಲಿ ಹರ್ಷ ಕೂಡ ಒಬ್ಬರು ಎನ್ನುವುದು ಗಮನಿಸಬೇಕಾದ ಅಂಶ. ಕನ್ನಡದಲ್ಲಿ ರಶ್ಮಿಕಾ ಕೊನೆಯದಾಗಿ ನಟಿಸಿದ್ದು ಪೊಗರು ಸಿನಿಮಾದಲ್ಲಿ. ಇದರ ನಾಯಕ ನಟ ಧ್ರುವ ಸರ್ಜಾ ಆಗಲಿ, ನಿರ್ದೇಶಕ ನಂದಕಿಶೋರ್ ಆಗಲಿ ಮದುವೆಗೆ ವಿಶ್ ಮಾಡಿರುವ ಯಾವ ಸೂಚನೆಯೂ ಸಿಕ್ಕಿಲ್ಲ.
ಇನ್ನು ಸ್ಯಾಂಡಲ್ವುಡ್ನಲ್ಲಿ ರಶ್ಮಿಕಾ ನಾಯ ನಟಿಯರೊಂದಿಗೆ ಉತ್ತಮ ಬಾಂಧವ್ಯ ಹೊಂದಿಲ್ಲ ಎನ್ನುವುದು ಈ ಹಂತದಲ್ಲೂ ಗೊತ್ತಾಗಿದೆ. ದಕ್ಷಿಣ ಭಾರತ ಸಿನಿಮಾ ರಂಗದಲ್ಲೂ ರಶ್ಮಿಕಾ-ವಿಜಯ್ ದೇವರಕೊಂಡ ಮದುವೆಯಲ್ಲಿ ಅಷ್ಟಾಗಿ ಸಂಭ್ರಮ ಕಂಡಿಲ್ಲ. ಆದರೆ, ಬಾಲಿವುಡ್ ಮಾತ್ರ ಈ ಮದುವೆಯನ್ನು ಭರ್ಜರಿಯಾಗಿ ಸಂಭ್ರಮಿಸಿದೆ.
ಸ್ಯಾಂಡಲ್ವುಡ್ ನಂಟು ಕಳೆಯಲು ಕಾರಣವೇನು?
ರಶ್ಮಿಕಾ ಮಂದಣ್ಣ ಹಾಗೂ ಸ್ಯಾಂಡಲ್ವುಡ್ ನಡುವೆ ಬಿರುಕು ಬೆಳೆಯಲು ಸಾಕಷ್ಟು ಕಾರಣಗಳಿವೆ. ರಕ್ಷಿತ್ ಶೆಟ್ಟಿ ಜೊತೆಗಿನ ಎಂಗೇಜ್ಮೆಂಟ್ ಆಕೆಯ ವೈಯಕ್ತಿಕ ವಿಚಾರವಾದರೂ, ನಂತರದ ದಿನಗಳಲ್ಲಿ ಕನ್ನಡದ ಕುರಿತಾಗಿ ಆಕೆಯ ತಾತ್ಸಾರದ ಮಾತುಗಳು ಪ್ರಮುಖ ಕಾರಣ ಎನ್ನಲಾಗಿದೆ. ಇನ್ನು ಆಕೆಗೆ ದೊಡ್ಡ ಅವಕಾಶ ಕೊಟ್ಟಿದ್ದ 'ಪರಮ್ವಾ ಸ್ಟುಡಿಯೋಸ್' ಪ್ರೊಡಕ್ಷನ್ ಹೌಸ್ ಬಗ್ಗೆ 'ಕೋಟ್' ಮಾಡಿ ಮಾತನಾಡಿದ್ದು ಆಕ್ರೋಶಕ್ಕೆ ಕಾರಣ. ಕನ್ನಡದ ಕಾರ್ಯಕ್ರಮಗಳಲ್ಲಿ ಇಂಗ್ಲೀಷ್ನಲ್ಲಿ ಮಾತನಾಡುತ್ತಿದ್ದ ರಶ್ಮಿಕಾ, ತೆಲುಗು ವೇದಿಕೆಗಳಲ್ಲಿ ತೆಲುಗು ಭಾಷೆಯಲ್ಲಿ ಮಾತನಾಡುತ್ತಿದ್ದರು. ಇದು ಕೂಡ ಕನ್ನಡಿಗ ಅಭಿಮಾನಿಗಳನ್ನು ಕೆರಳಿಸಿತ್ತು. ಇದೆಲ್ಲವೂ ಸ್ಯಾಂಡಲ್ವುಡ್ ಆಕೆಯ ಮೇಲೆ ಸಿಟ್ಟಾಗಲು ಕಾರಣವಿರಬಹುದು.


