ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರ ಮದುವೆಯ ನಂತರ ಸ್ಯಾಂಡಲ್‌ವುಡ್‌ನಿಂದ ಶುಭಾಶಯಗಳ ಕೊರತೆ ಚರ್ಚೆಗೆ ಕಾರಣವಾಗಿದೆ. ಇದಕ್ಕೆ 2017ರಲ್ಲಿ ರಶ್ಮಿಕಾ ಅವರು ಯಶ್ ಅವರನ್ನು 'ಶೋಆಫ್ ಪರ್ಸನ್' ಎಂದು ಕರೆದಿದ್ದ ಹಳೆಯ ವಿವಾದವೇ ಕಾರಣವಿರಬಹುದೆಂದು ಹೇಳಲಾಗುತ್ತಿದೆ.

ಬೆಂಗಳೂರು (ಫೆ.27):ಮಹಾಭಾರತ ಥೀಮ್‌ನಲ್ಲಿ ಅರ್ಜುನ-ದ್ರೌಪದಿ ರೀತಿಯಲ್ಲಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್‌ ದೇವರಕೊಂಡ ನಡುವಿನ ಡ್ರೀಮಿ ವೆಡ್ಡಿಂಗ್‌ ಮುಕ್ತಾಯವಾಗಿದೆ. ಇಡೀ ಮದುವೆಯ ಫೋಟೋಗಳನ್ನು ಯಾರೂ ತೆಗೆಯಬಾರದು ಎನ್ನುವ ಕಾರಣಕ್ಕೆ 'ನೋ ಮೊಬೈಲ್‌'ರೂಲ್‌ ಮಾಡಲಾಗಿತ್ತು. ಹಾಗಾಗಿ ಮದುವೆಯ ಫೋಟೋಗಳನ್ನು ಸಾರ್ವಜನಿಕವಾಗಿ ಇವರು ಹಂಚಿಕೊಳ್ಳುತ್ತಾರೋ ಇಲ್ಲವೋ ಎನ್ನುವ ಬಗ್ಗೆಯೂ ಅನುಮಾನಗಳಿದ್ದವು. ಇದಕ್ಕೆ ಫುಲ್‌ಸ್ಟಾಪ್‌ ಇಡುವಂತೆ ಸಂಜೆಯ ವೇಳೆಗೆ ಏಕಕಾಲದಲ್ಲಿ ರಶ್ಮಿಕಾ ಹಾಗೂ ವಿಜಯ್‌ ದೇವರಕೊಂಡ ಮದುವೆಯ ಫೋಟೋಗಳನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.

ಆದರೆ, ವಿಚಾರ ಇದಲ್ಲ. ಸಾಮಾನ್ಯವಾಗಿ ನಟ, ನಟಿಯರ ಮದುವೆಯಾದಾಗ ಅವರೊಂದಿಗೆ ನಟಿಸಿರುವವರು ವಿಶ್‌ ಮಾಡುವುದು ಸಾಮಾನ್ಯ. ಆದರೆ, ಸ್ಯಾಂಡಲ್‌ವುಡ್‌ನ ಯಾರೊಬ್ಬರೂ ವಿಶ್‌ ಮಾಡದೇ ಇರೋದಕ್ಕೆ ಕಾರಣವೂ ನೂರಾರಿದೆ. ಕನ್ನಡದ ಸ್ಟಾರ್‌ ದಂಪತಿ ಜೋಡಿಯಾದ ರಾಧಿಕಾ ಪಂಡಿತ್‌ ಹಾಗೂ ಯಶ್‌ ಕೂಡ ಈ ಜೋಡಿಗೆ ವಿಶ್‌ ಮಾಡದೇ ಇರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ.

ಕೆಲವರು ಯಶ್‌ ಹಾಗೂ ರಶ್ಮಿಕಾ ನಡುವಿನ 'ಶೋಆಫ್‌ ಪರ್ಸನ್‌' ಎನ್ನುವ ವಿವಾದವೇ ಕಾರಣ ಎನ್ನಲಾಗಿದೆ. ನಟಿ ರಶ್ಮಿಕಾ ಮಂದಣ್ಣ ಮತ್ತು ಕೆಜಿಎಫ್ ಸ್ಟಾರ್ ಯಶ್ ನಡುವಿನ ವಿವಾದವು 2017ರಲ್ಲಿ ದೊಡ್ಡ ಮಟ್ಟದ ಸುದ್ದಿಯಾಗಿತ್ತು. ಟಿವಿ ಇಂಟರ್‌ವ್ಯೂನಲ್ಲಿ ರಶ್ಮಿಕಾ ಅವರು ಯಶ್ ಅವರನ್ನು "ಮಿಸ್ಟರ್ ಶೋ ಆಫ್" (ಹೆಚ್ಚು ಬಡಾಯಿ ಕೊಚ್ಚಿಕೊಳ್ಳುವವರು) ಎಂದು ಕರೆದಿದ್ದು ವಿವಾದಕ್ಕೆ ಕಾರಣವಾಗಿತ್ತು.

ವಿವಾದದ ಕಿಡಿ ಹಚ್ಚಿದ ಆ ಕಾಮೆಂಟ್: ಖಾಸಗಿ ವಾಹಿನಿಯೊಂದರ 'ರ್ಯಾಪಿಡ್ ಫೈರ್' ಸುತ್ತಿನಲ್ಲಿ ರಶ್ಮಿಕಾ ಮಂದಣ್ಣ ಅವರಿಗೆ "ಕನ್ನಡ ಚಿತ್ರರಂಗದಲ್ಲಿ ಅತಿ ಹೆಚ್ಚು ಶೋ ಆಫ್ ಮಾಡುವವರು ಯಾರು?" ಎಂಬ ಪ್ರಶ್ನೆ ಎದುರಾಗಿತ್ತು. ಇದಕ್ಕೆ ರಶ್ಮಿಕಾ ಅವರು ಯಶ್ ಹೆಸರನ್ನು ಹೇಳಿದ್ದರು.

ವಾಸ್ತವವಾಗಿ ಈ ಸಂದರ್ಶನ ಹಳೆಯದಾಗಿತ್ತು. ಆದರೆ ಅದು ಮರುಪ್ರಸಾರವಾದಾಗ ಯಶ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಯಿತು. ರಶ್ಮಿಕಾ ಅವರ ಮಾತಿನಿಂದ ಆಕ್ರೋಶಗೊಂಡ ಅಭಿಮಾನಿಗಳು ಅವರನ್ನು 'ಅಹಂಕಾರಿ' ಎಂದು ಕರೆದು ಸೋಶಿಯಲ್ ಮೀಡಿಯಾದಲ್ಲಿ ಭಾರೀ ಟೀಕೆ ಮಾಡಿದ್ದರು.

ರಶ್ಮಿಕಾ ನೀಡಿದ ಸ್ಪಷ್ಟನೆ ಮತ್ತು ಕ್ಷಮೆ

ವಿವಾದ ತಾರಕಕ್ಕೇರುತ್ತಿದ್ದಂತೆ ರಶ್ಮಿಕಾ ಮಂದಣ್ಣ ಅವರು ಸ್ಪಷ್ಟನೆ ನೀಡಿದರು. "ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ಯಶ್ ಅವರ ಬಗ್ಗೆ ನನಗೆ ಯಾವುದೇ ಅಗೌರವವಿಲ್ಲ, ಅವರ ಕೆಲಸದ ಬಗ್ಗೆ ನನಗೆ ಅಪಾರವಾದ ಅಭಿಮಾನವಿದೆ" ಎಂದು ಹೇಳುವ ಮೂಲಕ ಪರಿಸ್ಥಿತಿಯನ್ನು ತಿಳಿಗೊಳಿಸಲು ಪ್ರಯತ್ನಿಸಿದ್ದರು.

ಯಶ್ ಅವರ ಪ್ರಬುದ್ಧ ಪ್ರತಿಕ್ರಿಯೆ

ಈ ವಿವಾದದ ಬಗ್ಗೆ ಯಶ್ ಅತ್ಯಂತ ಪ್ರಬುದ್ಧವಾಗಿ ಪ್ರತಿಕ್ರಿಯಿಸಿದ್ದರು. "ನನಗೆ ರಶ್ಮಿಕಾ ವೈಯಕ್ತಿಕವಾಗಿ ತಿಳಿದಿಲ್ಲ. ಆದರೆ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸುವ ಹಕ್ಕು ಅವರಿಗಿದೆ" ಎಂದು ಹೇಳಿದ್ದರು. ಅಲ್ಲದೆ, ಇಂತಹ ಸಣ್ಣ ವಿಷಯಗಳನ್ನು ನಿರ್ಲಕ್ಷಿಸಿ ಎಂದು ತಮ್ಮ ಅಭಿಮಾನಿಗಳಿಗೆ ಮನವಿ ಮಾಡುವ ಮೂಲಕ ವಿವಾದಕ್ಕೆ ಪೂರ್ಣವಿರಾಮ ಹಾಕಿದ್ದರು.