ಟ್ಯಾಟೂ ಘೋಸ್ಟ್ ಖ್ಯಾತಿಯ ಟ್ಯಾಟೂ ಆರ್ಟಿಸ್ಟ್ ಅರ್ಜುನ್ ಮತ್ತು ಸಂಪ್ರಿತಾ ಎಂಬ ಮಹಿಳೆಯ ನಡುವಿನ ಹಲ್ಲೆ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಅರ್ಜುನ್ ದೂರಿನ ಬೆನ್ನಲ್ಲೇ, ಆತನೇ ತನ್ನ ಮೇಲೆ ಹಲ್ಲೆ ಹಾಗೂ ಬ್ಲ್ಯಾಕ್‌ಮೇಲ್ ಮಾಡಿದ್ದಾನೆ ಎಂದು ಮಹಿಳೆ ಗಂಭೀರ ಆರೋಪ ಮಾಡಿದ್ದಾರೆ. ಇದಕ್ಕೆ ಅರ್ಜುನ್, ಕಾನೂನು ಹೋರಾಟದ ಮೂಲಕ ನ್ಯಾಯ ಪಡೆಯುವುದಾಗಿ ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರು (ಸೆ.18): 'ಟ್ಯಾಟೂ ಘೋಸ್ಟ್' ಎಂದೇ ಖ್ಯಾತಿ ಪಡೆದಿರುವ ಪ್ರಸಿದ್ಧ ಟ್ಯಾಟೂ ಆರ್ಟಿಸ್ಟ್ ಅರ್ಜುನ್ ಹಾಗೂ ಮಹಿಳೆಯೊಬ್ಬರ ನಡುವಿನ ಹಲ್ಲೆ ಮತ್ತು ಹಣಕಾಸು ವಿವಾದದ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ತಮ್ಮ ಮೇಲೆ ಹಲ್ಲೆ ನಡೆಸಿರುವುದಾಗಿ ಟ್ಯಾಟೂ ಆರ್ಟಿಸ್ಟ್ ಅರ್ಜುನ್ ದೂರು ನೀಡಿದ್ದ ಬೆನ್ನಲ್ಲೇ, ಇದೀಗ ಸಂಪ್ರಿತಾ ಎಂಬ ಮಹಿಳೆ ಅರ್ಜುನ್ ವಿರುದ್ಧ ಗಂಭೀರ ಪ್ರತ್ಯಾರೋಪಗಳನ್ನು ಮಾಡಿದ್ದಾರೆ.

ಮಹಿಳೆಯ ಗಂಭೀರ ಆರೋಪಗಳು:

ಮಾಧ್ಯಮಗಳೊಂದಿಗೆ ಮಾತನಾಡಿರುವ ಸಂಪ್ರಿತಾ, ಅರ್ಜುನ್ ತನ್ನ ಮೇಲೆ ಮಾಡಿರುವ ಆರೋಪಗಳು ಸಂಪೂರ್ಣ ಸುಳ್ಳು ಎಂದು ತಳ್ಳಿಹಾಕಿದ್ದಾರೆ. ‘ನನ್ನ ಪತಿಯ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದನ್ನು ನೋಡಿ ಅರ್ಜುನ್ ನಮ್ಮ ಮನೆಗೆ ಬಂದಿದ್ದ. ಅಲ್ಲಿ ನನ್ನ ಮೇಲೆ ದಬ್ಬಾಳಿಕೆ ನಡೆಸಿ ಹಲ್ಲೆ ನಡೆಸಿದನು. ನನ್ನ ಪ್ರಾಣ ಉಳಿಸಿಕೊಳ್ಳಲು ನಾನು ಆತನ ಮೇಲೆ ತಿರುಗಿ ಬಿದ್ದು ಹಲ್ಲೆ ಮಾಡಬೇಕಾಯಿತು’ ಎಂದು ಸ್ಪಷ್ಟಪಡಿಸಿದ್ದಾರೆ.

ಮುಂದುವರಿದು ಮಾತನಾಡಿದ ಅವರು, 'ಅರ್ಜುನ್ ಪರಿಚಯವಾದಾಗಿನಿಂದಲೂ ಆತನಿಗೆ ಸಾಲ ಮಾಡಿ ಹಣ ನೀಡಿದ್ದೇನೆ. ಆದರೆ ಆ ಹಣವನ್ನು ಇದುವರೆಗೆ ಆತ ಹಿಂದಿರುಗಿಸಿಲ್ಲ. ನನಗೆ ನಿರಂತರವಾಗಿ ಟಾರ್ಚರ್ ಹಾಗೂ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ. ಆತ ಹೇಳಿದ ಹಾಗೆ ಕೇಳಬೇಕೆಂದು ಬೆದರಿಕೆ ಹಾಕುತ್ತಿದ್ದನು. ಆ ವ್ಯಕ್ತಿ ಸಮಾಜದಲ್ಲಿ ಬಿಂಬಿತವಾಗಿರುವಂತೆ ಒಳ್ಳೆಯವರಲ್ಲ, ಆತನ ನಿಜವಾದ ಮುಖ ನನಗೆ ಮಾತ್ರ ಗೊತ್ತು' ಎಂದು ಅಳಲು ತೋಡಿಕೊಂಡಿದ್ದಾರೆ.

ಟ್ಯಾಟೂ ಆರ್ಟಿಸ್ಟ್ ಅರ್ಜುನ್ ಸ್ಪಷ್ಟನೆ:

ಮಹಿಳೆಯ ಆರೋಪಗಳ ಕುರಿತು ಪ್ರತಿಕ್ರಿಯೆ ನೀಡಿರುವ ಟ್ಯಾಟೂ ಆರ್ಟಿಸ್ಟ್ ಅರ್ಜುನ್, ವಿಡಿಯೋ ಮೂಲಕ ತಮ್ಮ ಅಳಲು ತೋಡಿಕೊಂಡಿದ್ದಾರೆ. 'ನನ್ನ ವೈಯಕ್ತಿಕ ಜೀವನದ ವಿಚಾರ ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿರುವುದು ನೋವತಂದಿದೆ. ಈ ವಿಚಾರ ಹೊರಬರಲಿ ಎಂದು ನಾನು ಬಯಸಿರಲಿಲ್ಲ. ಯಾರ ಮಾನವನ್ನು ಬೀದಿಗೆ ತರುವ ಉದ್ದೇಶವೂ ನನ್ನದಿಲ್ಲ. ನನ್ನ ಮೇಲೆ ಮಾರಣಾಂತಿಕ ಹಲ್ಲೆಯಾಗಿದ್ದರಿಂದ ನನ್ನ ಸುರಕ್ಷತೆ ಮತ್ತು ನ್ಯಾಯಕ್ಕಾಗಿ ಮಾತ್ರ ಪೊಲೀಸರಿಗೆ ದೂರು ನೀಡಿದ್ದೇನೆ' ಎಂದಿದ್ದಾರೆ.

'ಆಕೆ ಇಬ್ಬರು ಮಕ್ಕಳ ತಾಯಿ. ಹೊರಗಿನವರು ಮಕ್ಕಳ ಮುಂದೆ ತಾಯಿಯ ಬಗ್ಗೆ ಕೇವಲವಾಗಿ ಮಾತನಾಡಿದರೆ ಎಷ್ಟು ನೋವಾಗುತ್ತದೆ ಎಂಬುದು ನನಗೆ ಗೊತ್ತು. ಈ ವಿಚಾರವನ್ನು ದೊಡ್ಡದು ಮಾಡಲು ಅಥವಾ ವೈಯಕ್ತಿಕ ಆರೋಪ ಮಾಡಲು ನನಗೆ ಇಷ್ಟವಿಲ್ಲ. ಕಾನೂನು ಚೌಕಟ್ಟಿನಲ್ಲಿಯೇ ಇದಕ್ಕೆ ನ್ಯಾಯ ಸಿಗಲಿ, ಕಾನೂನು ಕೇಳುವ ಎಲ್ಲ ದಾಖಲೆಗಳನ್ನು ಒದಗಿಸಲು ನಾನು ಸಿದ್ಧನಿದ್ದೇನೆ. ಸಾರ್ವಜನಿಕರು ಈ ವಿಚಾರವನ್ನು ಮಾನವೀಯತೆ ದೃಷ್ಟಿಯಿಂದ ನೋಡಬೇಕು' ಎಂದು ಅರ್ಜುನ್ ಮನವಿ ಮಾಡಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ತಮ್ಮ ವಿರುದ್ಧ ಬರುತ್ತಿರುವ ಕಾಮೆಂಟ್‌ಗಳ ಬಗ್ಗೆಯೂ ಮಾತನಾಡಿರುವ ಅವರು, 'ನಿಮಗೆ ನನ್ನ ಮೇಲೆ ಏನೇ ಅಸಮಾಧಾನವಿದ್ದರೂ ಮಾತನಾಡಿಕೊಳ್ಳಿ, ನೀವು ಮಾತನಾಡಿ ಮುಗಿಸಿದ ಮೇಲೆ ನಾನು ಮಾತನಾಡುತ್ತೇನೆ. ಮೌನವಾಗಿರುವುದನ್ನು ನನ್ನ ದೌರ್ಬಲ್ಯ ಎಂದು ಭಾವಿಸಬೇಡಿ. ತಕ್ಕ ಸಮಯ ಬಂದಾಗ ನಾನು ಮಾತನಾಡುತ್ತೇನೆ' ಎಂದು ತಿಳಿಸಿದ್ದಾರೆ. ಸದ್ಯ ಈ ವಿವಾದ ಸೋಷಿಯಲ್ ಮೀಡಿಯಾದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.