ಲಕ್ಷಣ ಸೀರಿಯಲ್‌ನಲ್ಲಿ ಹೊಸ ವಿಲನ್‌ ಹವಾ ಜೋರಾಗ್ತಿದೆ. ತಾನು ಯಾರನ್ನೂ ಬಿಡಲ್ಲ ಎಂದು ಎಲ್ಲರಲ್ಲೂ ನಡುಕ ಹುಟ್ಟಿಸಿದ್ದಾಳೆ ಡೆವಿಲ್‌. ಕೊರಿಯರ್‌ ಮೂಲಕವೇ ಭೂಪತಿಯನ್ನು ಆಟ ಆಡಿದ್ತಿದ್ದಾಳೆ. ಸದ್ಯಕ್ಕೀಗ ಭೂಪತಿ ಫ್ಯಾಮಿಲಿ ಡೆವಿಲ್‌ ಭಯದಲ್ಲಿ ಬಿದ್ದಿದೆ. 

ಲಕ್ಷಣ ಸೀರಿಯಲ್‌ನಲ್ಲಿ ಹೊಸ ವಿಲನ್‌ ಸದ್ಯ ಎಲ್ಲರಲ್ಲೂ ನಡುಕ ಹುಟ್ಟಿಸಿದ್ದಾಳೆ. ಕಲರ್ಸ್ ಕನ್ನಡದಲ್ಲಿ ರಾತ್ರಿ 8.30ಕ್ಕೆ ಪ್ರಸಾರವಾಗುತ್ತಿರುವ ಲಕ್ಷಣ ಸೀರಿಯಲ್‌ನಲ್ಲಿ ಈಕೆಯ ಆಗಮನದ ಬಳಿಕ ಹೊಸ ಸಂಚಲನವೇ ಮೂಡುತ್ತಿದೆ. ಈ ಸೀರಿಯಲ್‌ ದಿನಕ್ಕೊಂದು ತಿರುವುಗಳನ್ನು ಪಡೆಯುತ್ತಾ ಜನರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿದೆ. ಇದರಲ್ಲಿ ನಾಯಕಿ ಹೆಸರು ನಕ್ಷತ್ರಾ. ಕಪ್ಪು ಮೈ ಬಣ್ಣದ ಲಕ್ಷಣವಾದ ಹುಡುಗಿ. ಆದರೆ ತನ್ನ ಮೈ ಬಣ್ಣದ ಕಾರಣಕ್ಕೆ ತಾನು ಬೆಳೆದ ಮನೆಯಲ್ಲೇ ಮೂದಲಿಕೆಗೆ ತುತ್ತಾದವಳು. ಸಮಾಜದಲ್ಲೂ ಅವಳ ಬಣ್ಣದ ಕಾರಣಕ್ಕೆ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಾಳೆ. ಇನ್ನೊಬ್ಬಳು ಶ್ವೇತಾ. ಬಿಳಿ ಬಣ್ಣದವಳು. ಡಾಕ್ಟರ್‌ ಮಾಡಿದ ಎಡವಟ್ಟಿನಿಂದ ಇವರಿಬ್ಬರ ಮನೆ ಅದಲು ಬದಲಾಗುತ್ತೆ. ಶ್ರೀಮಂತ ಚಂದ್ರಶೇಖರ್‌ ಮನೆಯಲ್ಲಿ ಬೆಳೆಯಬೇಕಾದ ನಕ್ಷತ್ರಾ ಕೆಳ ಮಧ್ಯಮ ವರ್ಗದಲ್ಲಿ ಬೆಳೆಯುತ್ತಾಳೆ. ಶ್ವೇತಾ ಶ್ರೀಮಂತರ ಮನೆಯಲ್ಲಿ ದರ್ಪದೊಂದಿಗೆ ಬೆಳೆಯುತ್ತಾಳೆ. ಕೊನೆಗೂ ಈ ಇಬ್ಬರೂ ತಮ್ಮ ರಿಯಲ್ ತಂದೆ ತಾಯಿಯ ಮನೆ ಸೇರಿದ್ದಾರೆ. ನಕ್ಷತ್ರಾ ಜೊತೆಗೆ ಭೂಪತಿ ಮದುವೆ ಫಿಕ್ಸ್ ಆಗಿರುತ್ತೆ. ಆದರೆ ಭೂಪತಿಯನ್ನು ನಕ್ಷತ್ರಾ ಮನಸಾರೆ ಪ್ರೀತಿಸಿರುತ್ತಾಳೆ. ನಕ್ಷತ್ರಾ ರಿಯಲ್‌ ತಂದೆ ಚಂದ್ರಶೇಖರ್ ಇದನ್ನು ತಿಳಿದು ಬಲವಂತದಿಂದ ಭೂಪತಿ ಜೊತೆಗೆ ನಕ್ಷತ್ರಾ ಮದುವೆ ಮಾಡಿಸುತ್ತಾರೆ. ಇದರಿಂದ ಹಲವು ಸಮಸ್ಯೆಗಳು ಶುರುವಾಗುತ್ತವೆ.

Add Asianetnews Kannada as a Preferred SourcegooglePreferred

ನಕ್ಷತ್ರಾ ತಂದೆ ಚಂದ್ರಶೇಖರ್ ಆಗರ್ಭ ಶ್ರೀಮಂತ. ಅವರಿಗೆ ಶತ್ರುಗಳೂ ಹೆಚ್ಚು. ಈವರೆಗೆ ತನ್ನ ತಾಯಿ ಶಕುಂತಲಾ ದೇವಿಯನ್ನು ಯಾಮಾರಿಸಿ ಭೂಪತಿಗೆ ತನ್ನ ಮಗಳು ನಕ್ಷತ್ರಾ ಜೊತೆಗೆ ಮದುವೆ ಮಾಡಿದ್ದಕ್ಕೆ ಭೂಪತಿ ತಮ್ಮ ಮೌರ್ಯ ಚಂದ್ರಶೇಖರ್ ಮೇಲೆ ಸಿಟ್ಟಾಗಿದ್ದಾನೆ. ಅವರ ಜೊತೆಗೆ ನಕ್ಷತ್ರಾಳನ್ನೂ ಕೊಲ್ಲಲು ಪ್ರಯತ್ನಿಸಿದ್ದಾನೆ. ಆದರೆ ಭೂಪತಿ ಮೌರ್ಯನನ್ನು ಸದೆ ಬಡಿದು ನಕ್ಷತ್ರಾಳನ್ನು ಸಾವಿನ ದವಡೆಯಿಂದ ಕಾಪಾಡಿದ್ದಾನೆ. ಇನ್ನೇನು ಮೌರ್ಯ ಪೊಲೀಸರ (Police) ಕೈ ಸೇರಬೇಕು ಅನ್ನುವಾಗ ಮತ್ತೊಬ್ಬ ವಿಲನ್‌ ಅವನನ್ನು ಅಪಹರಿಸಿದ್ದಾಳೆ. ಚಂದ್ರಶೇಖರ್‌ ತನ್ನ ಬಲಿ, ಆತನನ್ನು ತಾನೇ ಕೊಲ್ಲಬೇಕು ಅಂತ ಮೌರ್ಯನನ್ನು ತನ್ನ ಸೆರೆಯಲ್ಲಿ ಇಟ್ಟಿದ್ದಾಳೆ. ಈ ನಡುವೆ ಭೂಪತಿಯನ್ನೂ ಆಟ ಆಡಿಸುತ್ತಿದ್ದಾಳೆ. ತಾನು ಯಾರನ್ನೂ ಬಿಡಲ್ಲ ಅನ್ನೋ ಹಾಗೆ ಓಡಾಡುತ್ತಿದ್ದಾಳೆ. ಸದ್ಯಕ್ಕೀಗ ಭೂಪತಿಗೆ ಕೊರಿಯರ್ ನಲ್ಲೇ ಆಟವಾಡಿಸುತ್ತಿದ್ದಾಳೆ. ಕೊರಿಯರ್ ನೋಡಿ ಬೆಚ್ಚಿಬಿದ್ದ ಅಮ್ಮ ಶಕುಂತಲಾ, ಮಗ ಭೂಪತಿಗೆ ಕಾಲ್ ಮಾಡಿ, 'ಇದು ಯಾರು ಕೊರಿಯರ್ ಕಳಿಸಿರೋದು? ಏನ್ ಆಗ್ತಿದೆ ಭೂಪತಿ, ನೋಡ್ತಾ ಇದ್ರೆ ಭಯ ಆಗುತ್ತೆ. ಸಾವಂತೆ, ಸಾವನ್ನು ಯಾರ ಕೈಯಲ್ಲೂ ತಡೆಯೋಕೆ ಆಗಲ್ವಂತೆ. ಏನಿದೆಲ್ಲಾ ವಾಟ್ ಇಸ್ ದಿಸ್?' ಎಂದು ಭಯದಲ್ಲೇ ಮಗನನ್ನು ಕೇಳುತ್ತಾಳೆ. 

ಒಂದು ಕಡೆ ಅತ್ತಿಗೆಯ ಚಿಂತಾಜನಕ ಸ್ಥಿತಿ, ಇನ್ನೊಂದು ಕಡೆ ಚಾರು 15 ಲಕ್ಷದ ಪಾರ್ಟಿ

ಭೂಪತಿಗೆ ಇದನ್ನು ಕೇಳಿ ಭಯವಾದರೂ, 'ಅದು ನನಗೆ ಬಂದಿರೋ ಲೆಟರ್ ಅಲ್ಲ. ಬೇರೆ ಯಾರಿಗೂ ಬಂದಿರೋದು ಆ ಲೆಟರ್ ಫೋಟೋ ಕಳಿಸಮ್ಮ' ಎಂದು ಹೇಳ್ತಾನೆ. ಅದಕ್ಕೆ ಶಕುಂತಲಾ ದೇವಿ, 'ನೀನು ಹುಷಾರಾಗಿರು ಭೂಪತಿ. ನಿನಗೆ ಏನಾದ್ರೂ ಆದ್ರೆ, ನಾನ್ ಏನ್ ಆಗ್ತೀನೋ ಗೊತ್ತಿಲ್ಲ' ಎಂದು ನೋವು ವ್ಯಕ್ತಪಡಿಸುತ್ತಾಳೆ. ಅದಕ್ಕೆ ಭೂಪತಿ, 'ನಾನ್ ಸೇಫ್ ಆಗಿದ್ದೀನಿ ಅಮ್ಮ' ಎಂದು ಧೈರ್ಯ ತುಂಬುತ್ತಾನೆ. ಅಮ್ಮ ಕಳಿಸಿರುವ ಫೋಟೋದಲ್ಲಿ ಪ್ರಖ್ಯಾತ್ ಕೊಲೆ ಮಾಡುವ ಬಗ್ಗೆ ವಿವರಗಳಿವೆ. 

ಪ್ರಖ್ಯಾತ್ ಈ ಹಿಂದೆ ನಕ್ಷತ್ರಾ ಅಪ್ಪ ಚಂದ್ರಶೇಖರ್ ನನ್ನು ಸಾಯಿಸಲು ಬಂದಿರುತ್ತಾನೆ. ಅವನನ್ನು ಲೇಡಿ ವಿಲನ್ ತಡೆದಿರುತ್ತಾಳೆ. ಪ್ರಖ್ಯಾತ್ ಆಕೆಯನ್ನು ನೋಡಿದ್ದಾನೆ. ಅವನ ಸಹಾಯದಿಂದ ಆಕೆಯನ್ನು ಹಿಡಿಯಬಹುದು ಎಂದು ನಕ್ಷತ್ರ-ಭೂಪತಿ ಅವನನ್ನು ಹುಡುಕಿಕೊಂಡು ಬಂದಿರುತ್ತಾರೆ. ಆದ್ರೆ ಪ್ರಖ್ಯಾತ್ ನನ್ನು ಡೆವಿಲ್ ಕಿಡ್ನ್ಯಾಪ್ ಮಾಡಿದ್ದಾಳೆ. ಅಲ್ಲದೇ ಬನಶಂಕರಿ ಗ್ರೌಂಡ್‌ನಲ್ಲಿ ಆತನನ್ನು ಸಾಯಿಸುವುದಾಗಿ ಹೇಳಿದ್ದಾಳೆ. ಆತನ ಸಾವನ್ನು ತಡೆಯೋದಕ್ಕೆ ಯಾರಿಂದಲೂ ಸಾಧ್ಯ ಇಲ್ಲ. ಕಥೆಗೊಂದು ಹೊಸ ಟ್ವಿಸ್ಟ್ ಸಿಗುತ್ತೆ ಅಂತಲೂ ಹೇಳಿದ್ದಾಳೆ. 

ಸದ್ಯಕ್ಕೀಗ ಲೇಡಿ ವಿಲನ್‌ ಭೂಪತಿ ಫ್ಯಾಮಿಲಿಯನ್ನೂ, ಚಂದ್ರಶೇಖರ್ ಕುಟುಂಬವನ್ನೂ ಇನ್ನಿಲ್ಲದ ಹಾಗೆ ಕಾಡುತ್ತಿದ್ದಾಳೆ. ಅವಳಿಗೆ ಈ ಕುಟುಂಬಗಳಿಂದ ಆಗಿರುವ ಅನ್ಯಾಯವಾದರೂ ಏನು, ಅವಳ್ಯಾಕೆ ಇವರನ್ನು ಸಾಯಿಸಲು ಪ್ರಯತ್ನಿಸುತ್ತಿದ್ದಾಳೆ ಅನ್ನೋದೆಲ್ಲ ಸದ್ಯ ಸಸ್ಪೆನ್ಸ್ ಆಗಿಯೇ ಉಳಿದಿದೆ. 

ಜೊತೆ ಜೊತೆಯಲಿ: ಆರ್ಯವರ್ಧನ್ ಸುಳಿವು ಕೊಟ್ಟ ಜೋಗವ್ವ