Ramachari serial: ರಾಮಾಚಾರಿ ಕೊಡ್ತಿರೋ ಶಾಕ್ಗೆ ಚಡಪಡಿಸ್ತಿದ್ದಾಳೆ ಚಾರು
Ramachari Serial Update: ರಾಮಾಚಾರಿ ಸೀರಿಯಲ್ನಲ್ಲಿ ಮೇಲಿಂದ ಮೇಲೆ ಹೊಸ ಹೊಸ ಟ್ವಿಸ್ಟ್ ಗಳು ಬರುತ್ತಿವೆ. ಸದ್ಯಕ್ಕೀಗ ರಾಮಾಚಾರಿಗೆ ಡ್ರಗ್ಸ್ ಜಾಲದ ನಂಟಿದೆ, ಅಂತ ಹೇಳಿ ಆತನನ್ನು ಅರೆಸ್ಟ್ ಮಾಡಲಾಗಿದೆ. ಇದರ ಹಿಂದಿರೋದು ಮಾನ್ಯತಾ ಮಸಲತ್ತು. ಅದನ್ನು ರಾಮಾಚಾರಿ ಹೇಗೆ ನಿವಾರಿಸ್ತಾನೆ ಅನ್ನೋದೇ ರೋಚಕ ಟ್ವಿಸ್ಟ್.
'ರಾಮಾಚಾರಿ' ಕಲರ್ಸ್ ಕನ್ನಡದ ಫೇಮಸ್ ಸೀರಿಯಲ್. ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿ ದಿನ ರಾತ್ರಿ 9 ಗಂಟೆಗೆ ಪ್ರಸಾರ ಆಗುತ್ತೆ. ಈ ಸೀರಿಯಲ್ ಹೀರೋ ರಾಮಾಚಾರಿ. ನಾರಾಯಣ ಶಾಸ್ತ್ರಿಗಳು ಎಂಬ ಹೆಸರಿನ ಪುರೋಹಿತರ ಮನೆಯ ಸುಸಂಸ್ಕತ ಮನೆ ಹುಡುಗ. ಆಚಾರ, ವಿಚಾರ, ಹಿರಿಯರಿಗೆ ಗೌರವ ಕೊಡುವ ಪಾತ್ರ. ಬೇರೆಲ್ಲ ಸೀರಿಯಲ್ಗಳಲ್ಲಿ ನಾಯಕಿಯೇ ಮೇನ್ ಆಗಿದ್ರೆ ಇದು ನಾಯಕ ಪ್ರಧಾನ ಸೀರಿಯಲ್. ಇದರಲ್ಲಿ ರಾಮಾಚಾರಿ ಸಿನಿಮಾದ ಹೀರೋ ಸ್ಟೈಲಲ್ಲಿ ತನಗೆ ಬಂದಿರೋ ಕಷ್ಟಗಳ ವಿರುದ್ಧ ಹೋರಾಡ್ತಾನೆ. ಯಾವತ್ತೂ ಸತ್ಯದ ಪರವಾಗಿ ನಿಂತು ಸತ್ಯವನ್ನು ಗೆಲ್ಲಿಸುತ್ತಾನೆ. ಆತ ಎಲ್ಲ ಕಾರ್ಯಗಳಿಗೆ ದೊಡ್ಡ ಅಡ್ಡಿ ಆಗ್ತಿರೋದು ಚಾರುಲತಾ. ಇದರ ನಾಯಕಿ ಚಾರುಲತಾ. ಶ್ರೀಮಂತರ ಮನೆ ಹುಡುಗಿ. ತಾನು ಒಳಗಿನಿಂದ ಒಳ್ಳೆಯವಳೇ ಆಗಿದ್ದರೂ ತಾಯಿ ಮಾನ್ಯತಾಳಿಂದ ಕೆಟ್ಟ ಬುದ್ಧಿ ಕಲಿತಿದ್ದಾಳೆ. ಹಣ ಮದದಿಂದ ಎಲ್ಲರನ್ನೂ ಕೇವಲವಾಗಿ ನೋಡುವ ಚಾರು ಮತ್ತು ವಿರುದ್ಧ ಸ್ವಭಾವದ ರಾಮಾಚಾರಿಯದು ಹಾವು ಮುಂಗುಸಿ ಸಂಬಂಧ. ಸದ್ಯಕ್ಕೀಗ ರಾಮಾಚಾರಿ ಮಾಡಿದ ಅವಮಾನದಿಂದ ಚಾರುಲತಾ ಬೇಸತ್ತಿದ್ದಾಳೆ. ಅವನಿಗೆ ಏನಾದರೂ ಪಾಠ ಕಲಿಸಬೇಕು ಅಂತಲೇ ಚಾರು ಅಮ್ಮ ಮಾನ್ಯತಾ, ರಾಮಾಚಾರಿಯನ್ನು ಡ್ರಗ್ಸ್ ಸುಳಿಯಲ್ಲಿ ಸಿಲುಕಿಸಿದ್ದಾಳೆ. ಈಗ ರಾಮಾಚಾರಿ ಜೈಲು ಸೇರಿದ್ದಾನೆ. ಆದರೆ ನಿಜ ಆತನಿಗೆ ತಿಳಿದಿದ್ದು ರೋಚಕವಾಗಿ ತನ್ನದಲ್ಲದ ತಪ್ಪಿನಿಂದ ಹೊರಬರ್ತಾನೆ.
ಹಾಗೆ ನೋಡಿದರೆ ರಾಮಾಚಾರಿಯನ್ನು ಜೈಲಿಗೆ ಅಟ್ಟಿದ ಪೊಲೀಸ್ ಮಾನ್ಯತಾ ಕಡೆಯವನು. ರಾಮಾಚಾರಿಯನ್ನು ಡ್ರಗ್ ಜಾಲದಲ್ಲಿ ಸಿಲುಕಿಸಿ ಅರೆಸ್ಟ್ ಮಾಡಲು ಆತನಿಗೆ ಮಾನ್ಯತಾ ಸಾಕಷ್ಟು ಹಣ ನೀಡಿದ್ದಾರೆ. ರಾಮಾಚಾರಿ ಅರೆಸ್ಟ್ ಆಗಿರುವ ಪೊಲೀಸ್ ಸ್ಟೇಶನ್ನಲ್ಲಿರುವ ದಯಾಳು ಪೊಲೀಸ್ ಒಬ್ಬರಿಂದ ರಾಮಾಚಾರಿಗೆ ಈ ವಿಚಾರ ಗೊತ್ತಾಗಿದೆ. ತನ್ನನ್ನು ಡ್ರಗ್ಸ್ ಸುಳಿಯಲ್ಲಿ ಸಿಲುಕುವಂತೆ ಮಾಡಿರೋದು ಚಾರು ಮತ್ತು ಅವರ ಅಮ್ಮ ಮಾನ್ಯತಾ. ಅದಕ್ಕೆ ದುಡ್ಡು ಪಡೆದು ಪೊಲೀಸ್ ಸಾಥ್ ನೀಡ್ತಿದ್ದಾರೆ ಎಂದು ಆತನಿಂದ ರಾಮಾಚಾರಿಗೆ ಗೊತ್ತಾಗಿದೆ. ಅದಕ್ಕೆ ರಾಮಾಚಾರಿ ಹೊಸ ಉಪಾಯ ಮಾಡಿದ್ದಾನೆ. ಮಾನ್ಯತಾ ಮತ್ತು ಪೊಲೀಸ್ ಹೋದ ದಾರಿಯಲ್ಲೇ ಹೋಗಿ ತನಗಾದ ಅನ್ಯಾಯದ ವಿರುದ್ಧ ಹೋರಾಡಬೇಕು ಎಂದು ಕೊಂಡಿದ್ದಾನೆ.
ಇದನ್ನೂ ಓದಿ: ಗಣೇಶ ಹಬ್ಬಕ್ಕೆ ಗೌರಿಯಾದ ಕನ್ನಡತಿ ಭುವಿ! ರಂಜನಿ ಸಿಂಗಾರಕ್ಕೆ ಫ್ಯಾನ್ಸ್ ಫಿದಾ
ರಾಮಾಚಾರಿ ಮತ್ತು ಆತನ ಅತ್ತಿಗೆಯದು ಒಂದು ರೀತಿಯಲ್ಲಿ ಒಳ್ಳೆಯ ಫ್ರೆಂಡ್ಶಿಪ್. ಮತ್ತೊಂದು ರೀತಿಯಲ್ಲಿ ತಾಯಿ ಮಗನಂಥಾ ಸಂಬಂಧ. ರಾಮಾಚಾರಿ ಎಂಥಾ ಪರಿಸ್ಥಿತಿಯಲ್ಲಿದ್ದರೂ ಆತನ ಪರವಾಗಿ ಅತ್ತಿಗೆ ನಿಲ್ಲುತ್ತಾಳೆ. ಆತನ ಪ್ಲಾನ್ ಚೆನ್ನಾಗಿ ಅರಿತುಕೊಂಡು ಸಹಾಯ ಮಾಡುತ್ತಾಳೆ. ಸದ್ಯಕ್ಕೀಗ ರಾಮಾಚಾರಿಯದ್ದು ಏನೂ ತಪ್ಪಿಲ್ಲ ಎಂದು ಪೊಲೀಸ್ ಠಾಣೆಯಲ್ಲಿರುವ ಕಾನ್ಸ್ಟೇಬಲ್ ಗೊತ್ತಾಗಿ ಆತ ರಾಮಾಚಾರಿಗೆ ಸಹಾಯ ಮಾಡುತ್ತಿದ್ದಾನೆ. ರಾಮಾಚಾರಿ ಅವರ ಬಳಿ ಪೋನ್ ಪಡೆದು ಅತ್ತಿಗೆಗೆ ಕಾಲ್ ಮಾಡಿದ್ದಾನೆ. ಏನೋ ಪ್ಲ್ಯಾನ್ ಮಾಡಿದ್ದಾನೆ. ಅದನ್ನು ಅವರ ಅತ್ತಿಗೆಗೆ ವಿವರಿಸಿದ್ದಾನೆ. ರಾಮಾಚಾರಿ ಹೇಳಿದಂತೆ, ಅತ್ತಿಗೆ ಅಪರ್ಣ, ತಂಗಿ ಶೃತಿ, ಮುರಾರಿ ರಾಮಾಚಾರಿ ಸಹಾಯಕ್ಕೆ ನಿಂತಿದ್ದಾರೆ.
ಇದನ್ನೂ ಓದಿ: ಟಿ ಎನ್ ಸೀತಾರಾಂ ನಿರ್ದೇಶನದಲ್ಲಿ ಹೊಸ ಮಾಯಾಮೃಗ ಬರ್ತಿದೆ!
ಈಗ ಈ ಜಾಲದಿಂದ ಹೊರಬರಲು ರಾಮಾಚಾರಿಯ ಪ್ಲಾನ್ ಏನು ಅನ್ನೋದು ವೀಕ್ಷಕರಿಗೂ ರಿವೀಲ್ ಆಗಿದೆ. ರಾಮಾಚಾರಿ ತನ್ನ ಅತ್ತಿಗೆ ಬಳಿ ಇದೆ ಪ್ಲ್ಯಾನ್ ಹೇಳಿದ್ದಾನೆ. ಪೊಲೀಸ್ ಮಗಳನ್ನು ಕಿಡ್ನ್ಯಾಪ್ ಮಾಡುವಂತೆ ಹೇಳಿದ್ದಾನೆ. ಮೊದಲು ತನ್ನನ್ನು ಅರೆಸ್ಟ್ ಮಾಡಿರೋ ಪೊಲೀಸ್ ಒಳ್ಳೆಯವರು ಎಂದುಕೊಂಡು ರಾಮಾಚಾರಿ ಸುಮ್ಮನೇ ಇದ್ದ. ಯಾವಾಗ ಆತ ಚಾರು ಅಮ್ಮ ಮಾನ್ಯತಾ ಅವರಿಂದ 25 ಲಕ್ಷ ಪಡೆದು ಈ ರೀತಿ ಮಾಡ್ತಿದ್ದಾನೆ ಎಂದು ಗೊತ್ತಾಯ್ತೋ, ಆಗಲೇ ರಾಮಾಚಾರಿ ತನ್ನ ಆಟ ಶುರು ಮಾಡಿಕೊಂಡಿದ್ದಾನೆ. ಆ ಪೊಲೀಸ್ ಮಗಳನ್ನು ಕಿಡ್ನ್ಯಾಪ್ ಮಾಡಿಸಿದ್ದಾನೆ. ಈ ಮೂಲಕ 25 ಲಕ್ಷ ಪಡೆದು ಆ ಹಣದಲ್ಲಿ ಎಂಜಾಯ್ ಮಾಡಬಹುದು ಎಂದುಕೊಂಡಿದ್ದ ಪೊಲೀಸ್ಗೆ ದೊಡ್ಡ ಶಾಕ್ ಎದುರಾಗಿದೆ. ಅನ್ಯಾಯ ಮಾಡೋರಿಗೆ ಅವರ ದಾರಿಯಲ್ಲೇ ಹೋಗಿ ಬುದ್ಧಿ ಕಲಿಸಬೇಕು ಎಂದು ಕೊಂಡಿದ್ದಾನೆ ರಾಮಾಚಾರಿ.
ಜೈಲಿನಲ್ಲಿದ್ದೂ ರಾಮಾಚಾರಿ ಚಾರುಗೆ ಪತ್ರ ಬರೆದಿದ್ದಾನೆ. 'ಚಾರು ಮೇಡಂ ನಿಮ್ಮ ಆಟವನ್ನು ನೀವು ಆಡಿದ್ದೀರಿ. ಈಗ ನಾನು ನನ್ನ ಆಟವನ್ನು ಆಡುತ್ತೇನೆ. ಅದನ್ನು ತಡೆಯಲು ರೆಡಿಯಾಗಿ, ಬರ್ತಿರೋದು ಸುನಾಮಿ ರಾಮಾಚಾರಿ' ಎಂದು ಬರೆದಿದ್ದಾನೆ. ಅದಕ್ಕೆ ಚಾರುಗೆ ಭಯ ಶುರುವಾಗಿದೆ. ಈ ಹಿಂದೆಯೂ ರಾಮಾಚಾರಿ ಆಡಿರುವ ಆಟ ನೋಡಿರುವ ಅವಳು ಆತ ಏನ್ ಮಾಡ್ತಾನೋ ಎಂದು ಗಾಬರಿಯಾಗಿದ್ದಾಳೆ. ರಾಮಾಚಾರಿಯಾಗಿ ಋತ್ವಿಕ್ ಕೃಪಾಕರ್, ಚಾರುವಾಗಿ ಮೌನಾ ಗುಡ್ಡೆಮನೆ ನಟಿಸಿದ್ದಾರೆ.