ಇನ್ನೇನು ಶುರುವಾಗಲಿರುವ ಅಗ್ನಿಪರ್ವತದಂತಿರುವ ಅಗ್ನಿ ಮತ್ತು ಸ್ವಾಭಿಮಾನದ ಚಂಡಮಾರುತ ಸಾಕ್ಷಿಯ ಕಥೆಯನ್ನು ಹೇಳುವ ‘ಅಗ್ನಿಸಾಕ್ಷಿ’ ಧಾರಾವಾಹಿಯಲ್ಲಿ ಕಲರ್ಸ್ ಕನ್ನಡದ ಸ್ಟಾರ್ ನಟರೆಲ್ಲಾ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ. ಯಾವೆಲ್ಲಾ ನಟರು ಧಾರಾವಾಹಿಯಲ್ಲಿ ನಟಿಸಲಿದ್ದಾರೆ ನೋಡೋಣ. 

ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ಕಲರ್ಸ್ ಕನ್ನಡದ ಸ್ಟಾರ್ ನಟರು

ವಿಜಯ್ ಸೂರ್ಯ ಮತ್ತು ವೈಷ್ಣವಿ ಗೌಡ ನಟಿಸಿದ್ದ ಕನ್ನಡ ಕಿರುತೆರೆಯ ಜನಪ್ರಿಯ ಬ್ಲಾಕ್ ಬಸ್ಟರ್ ಸೀರಿಯಲ್ ‘ಅಗ್ನಿಸಾಕ್ಷಿ’ ಹೆಸರಿನಲ್ಲಿ ಮತ್ತೆ ಶೀಘ್ರದಲ್ಲಿ ಶುರುವಾಗಲಿದೆ ಹೊಸ ಅಗ್ನಿಸಾಕ್ಷಿ. ಅಹಂಕಾರದ ಅಗ್ನಿಪರ್ವತವಾಗಿರುವ ನಾಯಕ ಅಗ್ನಿ ಹಾಗೂ ಸ್ವಾಭಿಮಾನದ ಚಂಡಮಾರುತವಾಗಿರುವ ನಾಯಕಿ ಸಾಕ್ಷಿ ಇವರಿಬ್ಬರು ಹೇಗೆ ಒಂದಾಗುತ್ತಾರೆ ಅನ್ನೋದೆ ಸೀರಿಯಲ್ ಕಥೆ. ಇದೀಗ ಧಾರಾವಾಹಿಯಲ್ಲಿ ಅಗ್ನಿ ಮತ್ತು ಸಾಕ್ಷಿಯನ್ನು ಒಂದು ಮಾಡಲು ಕಲರ್ಸ್ ಕನ್ನಡದ ಸ್ಟಾರ್ ನಟರು ಒಂದೇ ಸೀರಿಯಲ್ ನಲ್ಲಿ ಮತ್ತೆ ಕಾಣಿಸಿಕೊಳ್ಳಲಿದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅಗ್ನಿ ಸಾಕ್ಷಿ ಧಾರಾವಾಹಿ ಇದೇ ಜೂನ್ 8ರಿಂದ ಶುರುವಾಗಲಿದೆ. ಈಗಾಗಲೇ ಪ್ರೊಮೋ ರಿಲೀಸ್ ಆಗಿ ಸಖತ್ ಸೌಂಡ್ ಮಾಡುತ್ತಿದೆ. ಆಗರ್ಭ ಶ್ರೀಮಂತ ಅಷ್ಟೇ ಹಠಮಾರಿಯಾಗಿರುವ ನಾಯಕ ಅಗ್ನಿ, ದೊಡ್ಡ ಬ್ಯುಸಿನೆಸ್ ಲೋಕದ ಒಡೆಯ ಜೊತೆಗೆ ಅಹಂಕಾರಿಯೂ ಹೌದು. ಇನ್ನು ನಾಯಕಿ ಸಾಕ್ಷಿ ಮಿಡಲ್ ಕ್ಲಾಸ್ ಹುಡುಗಿ, ತಾಯಿ ಇಲ್ಲದೇ ಮಲತಾಯಿಯೊಂದಿಗೆ ಬೆಳೆಯುವಂತೆ ವಿಡಿಯೋದಲ್ಲಿ ತೋರಿಸಲಾಗಿದೆ. ಮನೆಯಲ್ಲಿ ಎಷ್ಟೆ ಕಷ್ಟ ಅನುಭವಿಸಿದರು ಸುಮ್ಮನಿರುವ ಸಾಕ್ಷಿ, ತನ್ನ ಸ್ವಾಭಿಮಾನಕ್ಕೆ ಅಡ್ಡ ಬಂದರೆ ಮಾತ್ರ ಸುಮ್ಮನೆ ಕೂರುವ ಮಾತೇ ಇಲ್ಲ. ಆದರೆ ಈ ಜರ್ನಿಯಲ್ಲಿ ಆಕೆಗೆ ಎದುರಾಗುವವನೇ ಅಗ್ನಿ. ಅಗ್ನಿಯ ಅಹಂ ಮತ್ತು ಸಾಕ್ಷಿಯ ಸ್ವಾಭಿಮಾನ ಎರಡೂ ಜೊತೆ ಸೇರಿದರೆ ಅಲ್ಲಿ ಯುದ್ಧ ಗ್ಯಾರಂಟಿ ಆದರೆ ಆ ಯುದ್ಧ ಮುಗಿದು ಇಬ್ಬರಲ್ಲಿ ಪ್ರೀತಿ ಯಾವಾಗ ಮೂಡುವುದು ಅನ್ನೋದೇ ಕಥೆ. ಇದೀಗ ಇವರಿಬ್ಬರನ್ನು ಒಂದು ಮಾಡೋದಕ್ಕೆ ಧಾರಾವಾಹಿಯಲ್ಲಿ ಸಾಲು ಸಾಲು ನಟರು ಕಾಣಿಸಿಕೊಳ್ಳಲಿದ್ದಾರೆ.

ಯಾರ್ಯಾರು ಗೆಸ್ಟ್ ಅಪಿಯರೆನ್ಸ್ ಕೊಡಲಿದ್ದಾರೆ ಗೊತ್ತಾ?

ಕರಿಮಣಿ ಧಾರಾವಾಹಿಯ ಕರ್ಣ ಅಂದ್ರೆ ಅಶ್ವಿನ್, ಲಕ್ಷ್ಮೀ ಬಾರಮ್ಮ ಧಾರಾವಾಹಿಯ ಗೊಂಬೆ ಅಂದರೆ ನೇಹಾ ಗೌಡ, ಲಕ್ಷಣ ಧಾರಾವಾಹಿಯ ನಕ್ಷತ್ರ ಅಂದ್ರೆ ವಿಜಯಲಕ್ಷ್ಮೀ, ರಾಧಾ ರಮಣ ಧಾರಾವಾಹಿಯ ರಮಣ ಅಂದ್ರೆ ಸ್ಕಂದ ಅಶೋಕ್ ಸ್ಪೆಷಲ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇನ್ನು ಈ ಧಾರಾವಾಹಿಯಲ್ಲಿ ಮಂಜು ಪಾವಗಡ ಹಾಗೂ ಧ್ರುವಂತ್ ಕೂಡ ನಟಿಸುತ್ತಿದ್ದಾರೆ. ಆದರೆ ಇವರದ್ದು ಖಂಡಿತವಾಗಿಯೂ ಸ್ಪೆಷಲ್ ಅಪಿಯರೆನ್ಸ್ ಅಲ್ಲ ಅನಿಸುತ್ತದೆ. ಮಂಜು ಅಗ್ನಿಯ ಕುಟುಂಬದ ಸದಸ್ಯ ಹಾಗೂ ಧ್ರುವಂತ್ ಪೊಲೀಸ್ ಪಾತ್ರದಲ್ಲಿ ನಟಿಸಲಿದ್ದಾರೆ ಎನ್ನುವ ಮಾಹಿತಿ ಇದೆ. ಯಾವುದಕ್ಕೂ ಈ ಕಥೆ ಹೇಗೆ ಮೂಡಿ ಬರಲಿದೆ ಅನ್ನೋದನ್ನು ಕಾದು ನೋಡಬೇಕು.

ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ಶಮಂತ್ ಬ್ರೋ ಗೌಡ ಮತ್ತು ವರ್ಷಿಣಿ ಗೌಡ ಅಭಿನಯಿಸುತ್ತಿದ್ದಾರೆ. ಶಮಂತ್ ಬ್ರೋ ಗೌಡ, ‘ಬಿಗ್ ಬಾಸ್’ ಸೀಸನ್ 8ರಲ್ಲಿ ಸ್ಪರ್ಧಿಸಿದ್ದರು. ಆ ಬಳಿಕ ‘ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ನಟಿಸಿದರು. ಮದುವೆ ನಂತರ ಸಣ್ಣ ಬ್ರೇಕ್ ತೆಗೆದುಕೊಂಡಿದ್ದ ಶಮಂತ್, ಈಗ ಅಗ್ನಿಸಾಕ್ಷಿ ಮೂಲಕ ಮತ್ತೆ ಮರಳಿದ್ದಾರೆ. ಇನ್ನು, ವರ್ಷಿಣಿ ಗೌಡ ‘ಜಯಂ’ ಎನ್ನುವ ತೆಲುಗು ಧಾರಾವಾಹಿಯಲ್ಲಿ ನಟಿಸಿದ್ದರು. ಈಗ ಅವರು ಕನ್ನಡದಲ್ಲಿ ಮಿಂಚಲು ರೆಡಿ ಆಗಿದ್ದಾರೆ.

View post on Instagram