ಮೇ 2 ರಂದು ಸರ್ಕಾರದ ತುರ್ತು ಎಚ್ಚರಿಕೆ ವ್ಯವಸ್ಥೆಯ ಪರೀಕ್ಷಾರ್ಥವಾಗಿ ಮೊಬೈಲ್‌ಗಳಿಗೆ ಜೋರಾದ ಬೀಪ್ ಶಬ್ದದೊಂದಿಗೆ ಸಂದೇಶ ಬಂದಿತು. ಈ ಅನಿರೀಕ್ಷಿತ ಶಬ್ದದಿಂದ ಬಿಗ್‌ಬಾಸ್ ಖ್ಯಾತಿಯ ಮಲ್ಲಮ್ಮ ಸೇರಿದಂತೆ ಅನೇಕರು ಭಯಭೀತರಾದರು. ಈ ವ್ಯವಸ್ಥೆಯು ವಿಪತ್ತಿನ ಸಮಯದಲ್ಲಿ ಜನರಿಗೆ ಮಾಹಿತಿ ನೀಡುವ ಗುರಿಯನ್ನು ಹೊಂದಿದೆ.

ಮೇ 2ನೇ ತಾರೀಖು ನಿಮ್ಮ ಮೊಬೈಲ್​ಗೆ ಒಂದು ಸಂದೇಶ ಬರುತ್ತದೆ. ಆಗ ಜೋರಾಗಿ ಸೌಂಡ್​ ಬರುತ್ತದೆ. ಅದನ್ನು ಕೇಳಿ ನೀವು ಭಯಪಡಬೇಡಿ ಎನ್ನುವ ಸಂದೇಶ ಕೆಲವು ದಿನಗಳ ಹಿಂದೆ ಪ್ರತಿಯೊಬ್ಬರ ಮೊಬೈಲ್​ ಫೋನ್​ಗೂ ಬಂದಿತ್ತು. ಆದರೆ ಸಾಧಾರಣವಾಗಿ ವಾಟ್ಸ್​ಆ್ಯಪ್​ನ ಈ ಯುಗದಲ್ಲಿ SMS ನೋಡುವವರೇ ಬಹು ಅಪರೂಪ. ಅದರಲ್ಲಿಯೂ ಪ್ರಮೋಷನ್ ಆ್ಯಡ್​ಗಳು, ಡಾಟಾ ಖಾಲಿ ಆಗಿರುವ ಸಂದೇಶ, ಅದೂ ಇದೂ ಎಂದೆಲ್ಲಾ ಬರುವ ಕಾರಣ, ಎಸ್​ಎಂಎಸ್​ ನೋಡುವವರೇ ಇಲ್ಲ. ಇದೇ ಕಾರಣಕ್ಕೆ ನಿನ್ನೆ ಅರ್ಥಾತ್​ ಮೇ 2ರಂದು ಜೋರಾದ ಬೀಪ್ ಶಬ್ದದೊಂದಿಗೆ ಮೊಬೈಲ್​ ರಿಂಗ್​ ಆದಾಗ ಹೌಹಾರಿ ಹೋದವರೇ ಹೆಚ್ಚು. ಎಷ್ಟೋ ಮಂದಿ ತಮ್ಮ ಮೊಬೈಲ್ ಫೋನ್​ ಬ್ಲಾಸ್ಟ್​ ಆಗೋಯ್ತು ಎಂದು ಬೆಚ್ಚಿ ಬಿದ್ದವರು ಇದ್ದಾರೆ. ಕೆಲವರು ಭಯದಿಂದ ಮೊಬೈಲ್​ ಫೋನ್​ ಎಸೆದು ದೂರ ಓಡಿ ಹೋದವರೂ ಇದ್ದಾರೆ.

ಬೆಚ್ಚಿ ಬಿದ್ದ ಜನ

ಏಕೆಂದರೆ, ಈ ಸಂದೇಶ ಬರುತ್ತದೆ ಎಂದು ತಿಳಿಯದೇ ಹೋದವರು ಖಂಡಿತವಾಗಿಯೂ ಬೆಚ್ಚಿ ಬೀಳುವ ಸೌಂಡೇ ಅದಾಗಿತ್ತು. ಹಾರ್ಟ್​ ಪೇಷಂಟ್​ಗಳೇನಾದರೂ ಇದ್ದರೆ ಅರೆಕ್ಷಣ ಹೃದಯವೇ ನಿಂತುಹೋಗುವ ಭಯಾನಕ ಶಬ್ದವೂ ಆಗಿತ್ತದು. ಅಷ್ಟಕ್ಕೂ ಇದನ್ನು ಕೇಂದ್ರ ಸರ್ಕಾರ ಮೊದಲೇ ಸೂಚನೆ ಕೊಟ್ಟು ಮಾಡಿದೆ. ಇದು ಸರ್ಕಾರವು ಜಾರಿಗೆ ತರುತ್ತಿರುವ ಹೊಸ ತುರ್ತು ಎಚ್ಚರಿಕೆ ವ್ಯವಸ್ಥೆಯ ಭಾಗವಾಗಿದೆ. ಈ ವ್ಯವಸ್ಥೆಯು ವಿಪತ್ತಿನ ಸಮಯದಲ್ಲಿ ಜನರಿಗೆ ತಕ್ಷಣದ ಮಾಹಿತಿಯನ್ನು ಒದಗಿಸುವ ಗುರಿಯನ್ನು ಹೊಂದಿದೆ. ಯುದ್ಧ ಅಥವಾ ಇನ್ನಿತರ ಯಾವುದೇ ಭೀತಿಯ ಸಂದರ್ಭದಲ್ಲಿ ಜನರಿಗೆ ಎಚ್ಚರಿಕೆಯನ್ನು ಹೀಗೆ ನೀಡಲಾಗುತ್ತದೆ ಎಂದು ಹೇಳುವುದಕ್ಕಾಗಿ ಈ ಒಂದು ವ್ಯವಸ್ಥೆಯನ್ನು ಮಾಡಲಾಗಿದೆ.

ಬಿಗ್​ಬಾಸ್​ ಮಲ್ಲಮ್ಮ ಹೇಳಿದ್ದೇನು?

ಆದರೆ, ಬಹಳಷ್ಟು ಜನರಂತೆ ಇದನ್ನು ಅರಿಯದ ಬಿಗ್​ಬಾಸ್​ ಖ್ಯಾತಿಯ ಮಲ್ಲಮ್ಮ (Bigg Boss fame Mallamma) ಕೂಡ ಹೌಹಾರಿ ಹೋದ್ರಂತೆ. ನನ್ನ ಮೂರು ಮೊಬೈಲೂ ಒಂದೇ ಸಲ ವಿಚಿತ್ರವಾಗಿ ಕೂಗಿತು. ಏನೋ ಬಾಂಬ್​ ಬ್ಲಾಸ್ಟ್​ ಆಗೋಯ್ತು ಎಂದುಕೊಂಡೆ. ಹೃದಯ ಮೇಲೆ ಹೋಗಿ ಬಿಡ್ತು. ಆಮೇಲೆ ಸೌಂಡ್​ ಕಡಿಮೆ ಆದ್ಮೇಲೆ ಜೀವ ವಾಪಸ್​ ಬಂತು ಎಂದು ತಮ್ಮದೇ ಆದ ಶೈಲಿಯಲ್ಲಿ ಹೇಳಿದ್ದಾರೆ.

ಇದೇನು ಎಂದು ಪ್ರಶ್ನಿಸಿದಾಗ, ಇದು ಜನರ ಜೀವ ಉಳಿಸುವುದಕ್ಕಾಗಿ ಮಾಡಿರುವ ಒಂದು ಸಂದೇಶ ಅಷ್ಟೇ ಎಂಬ ಉತ್ತರ ಬಂತು. ಅದನ್ನು ಕೇಳಿ ಮಲ್ಲಮ್ಮ, ಹೀಗೆ ಮಾಡಿದ್ರೆ ಜೀವ ಉಳಿಯೋದಲ್ಲ, ಇರೋ ಜೀವನೂ ಮೇಲಕ್ಕೂ ಹೋಗ್ತದೆ. ಅಯ್ಯಬ್ಬಾ ನನಗಂಗೂ ಸಿಕ್ಕಾಪಟ್ಟೆ ಹೆದರಿಗೆ ಆಗೋಯ್ತು ಎಂದಿದ್ದಾರೆ. ಇದಕ್ಕೆ ಹಲವಾರು ಮಂದಿ ನಮ್ಮ ಸ್ಥಿತಿನೂ ಹೀಗೆಯೇ ಆಗಿತ್ತು. ಎಲ್ಲರ ಮೊಬೈಲ್ ಒಟ್ಟಿಗೇ ಈ ಕೂಗಿದಾಗ ಭಯಬಿದ್ದು ಹೋದ್ವಿ ಎಂದಿದ್ದಾರೆ. ಅದಕ್ಕೆ ಕೆಲವರು ಈಗ ಹಾಗೆ ಅನ್ನಿಸಬಹುದು. ಆದರೆ ಸದ್ಯ ಭಾರತ ಸೇಫ್​ ಆಗಿದೆ. ಇಂಥ ವಿಪತ್ತು ಬಂದಾಗಲೆಲ್ಲಾ ಜನರಿಗೆ ಇದೇ ರೀತಿಯ ಎಚ್ಚರಿಕೆ ಕೊಟ್ಟು ಅವರನ್ನು ಎಚ್ಚರಿಸಲಾಗುತ್ತದೆ ಎಂದಿದ್ದಾರೆ.

ಮೆಸೇಜ್‌ನಲ್ಲೇನಿದೆ?

ದೇಶೀಯ ತಂತ್ರಜ್ಞಾನವನ್ನು ಬಳಸಿಕೊಂಡು, ನಾಗರಿಕರಿಗೆ ವಿಪತ್ತುಗಳ ಬಗ್ಗೆ ತಕ್ಷಣದ ಮಾಹಿತಿಯನ್ನು ಒದಗಿಸಲು ಸೆಲ್ ಪ್ರಸಾರ ಸೇವೆಯನ್ನು ಪ್ರಾರಂಭಿಸಲಾಗಿದೆ. ಜಾಗರೂಕ ನಾಗರಿಕ, ಸುರಕ್ಷಿತ ರಾಷ್ಟ್ರ. ಈ ಸಂದೇಶವನ್ನು ಸ್ವೀಕರಿಸಿದ ನಂತರ ಸಾರ್ವಜನಿಕರು ಯಾವುದೇ ಕ್ರಮ ತೆಗೆದುಕೊಳ್ಳುವ ಅಗತ್ಯವಿಲ್ಲ. ಇದು ಪರೀಕ್ಷಾ ಸಂದೇಶ - ಭಾರತ ಸರ್ಕಾರ ಎಂದು ಬರೆಯಲಾಗಿತ್ತು.