Bigg Boss Kannada Season 12: ಬಿಗ್ ಬಾಸ್ ಶೋನಲ್ಲಿ ಗಿಲ್ಲಿ ನಟ ಅವರು ಟ್ರೋಫಿ ಗೆದ್ದಾಗಿದೆ. ಈಗ ಅವರ ಅಭಿಮಾನಿ ಬಳಗ ಗಿಲ್ಲಿ ನಟ ಹಾಗೂ ಕಾವ್ಯ ಶೈವ ಅವರ ಮದುವೆ ಮಾಡಿಸೋದಾಗಿ ಹೇಳಿಕೊಂಡಿದ್ದಾರೆ. ಇದಕ್ಕೆ ಗಿಲ್ಲಿ ನಟ ಏನಂದ್ರು? ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.
ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಗಿಲ್ಲಿ ನಟ ಅವರು ಕಾವ್ಯ ಶೈವರನ್ನು ರೇಗಿಸುತ್ತಿದ್ದರು, ಕಾವು ಕಾವು ಎಂದು ಹೇಳುತ್ತಿದ್ದರು. ಈಗ ಅಭಿಮಾನಿಗಳೇ ಗಿಲ್ಲಿ ನಟ, ಕಾವ್ಯ ಶೈವ ಮದುವೆ ಮಾಡಿಸೋದಾಗಿ ಹೇಳಿದ್ದರು. ಈಗ ಗಿಲ್ಲಿ ನಟ ಈ ಬಗ್ಗೆ ಮಾತನಾಡಿದ್ದಾರೆ.
ಜನರ ಪ್ರೀತಿ, ಅಭಿಮಾನ
“ನಾನು ಬಿಗ್ ಬಾಸ್ ಶೋ ವಿನ್ ಆದ ಬಳಿಕ, ಹೊರಗಡೆ ಹಾಗೆ ಕಟೌಟ್ ಹಾಕಿದ್ದಾರೆ ಅಂತೆಲ್ಲ ವಿಡಿಯೋ ತೋರಿಸಿದ್ದರು, ಅದನ್ನು ನಂಬೋಕೆ ಆಗುತ್ತಿಲ್ಲ. ಗಿಲ್ಲಿಕೊಂಡು ನೋಡುತ್ತಿದ್ದೇನೆ, ಅಳೋಣ ಎಂದರೂ ಕೂಡ ನನಗೆ ಅಳು ಬರೋದಿಲ್ಲ” ಎಂದು ಗಿಲ್ಲಿ ನಟ ಹೇಳಿದ್ದಾರೆ.
ಈ ಪ್ರೀತಿ ನಿರೀಕ್ಷೆ ಮಾಡಿದ್ರಾ?
“7-8 ವಾರ ಇದ್ದು ಬರೋಣ ಅಂತಿದ್ದೆ, ಆದರೆ ಆಮೇಲೆ ಸೆಟ್ ಆಯ್ತು. ಮೊದಲ ವಾರ ನನಗೆ ಕ್ಯಾಮರಾಗಳೆಲ್ಲ ನನಗೆ ಗನ್ ಥರ ಅನಿಸಿತು, ಹೀಗೆ ಮಾತಾಡಬೇಕು, ಹೀಗೆ ಇರಬೇಕು ಅಂತಿದ್ದೆ, ಆಮೇಲೆ ಕ್ಯಾಮರಾ ಇರೋದು ಮರೆತು ಹೋಯ್ತು, ನಾನು ನಾನಾಗಿದ್ದೆ ಅಷ್ಟೇ” ಎಂದು ಗಿಲ್ಲಿ ನಟ ಹೇಳಿದ್ದಾರೆ.
ಶಿವರಾಜ್ಕುಮಾರ್ ವಿಶ್ ಮಾಡಿದ್ರು
“ಶಿವರಾಜ್ಕುಮಾರ್ ನನಗೆ ವಿಶ್ ಮಾಡಿದ್ದು ನನ್ನ ಪುಣ್ಯ. ಶಿವಣ್ಣ ನನ್ನ ಬಗ್ಗೆ ಮಾತಾಡಿದ್ದನ್ನು ಬಿಗ್ ಬಾಸ್ ಮನೆಯಲ್ಲಿ ಹೇಳಿದೆ, ನಾನು ಅವರ ಕಾಲು ಧೂಳಿಗೂ ಸಮ ಇಲ್ಲ. ಜಗ್ಗೇಶ್ ಅವರು ಅನುಭವದಿಂದಲೇ ಹೇಳಿದ್ದು, ಅವರ ಆಶೀರ್ವಾದ ಅಷ್ಟೇ” ಎಂದು ಗಿಲ್ಲಿ ನಟ ಹೇಳಿದ್ದಾರೆ.
ಕಾವ್ಯ ಶೈವ ಅವರನ್ನು ಮದುವೆ ಆಗ್ತೀರಾ?
ಕಾವ್ಯ ಶೈವ ಹಾಗೂ ನಿಮ್ಮ ಮದುವೆ ಮಾಡಿಸ್ತೀನಿ ಅಂತ ಅಭಿಮಾನಿಗಳು ಹೇಳುತ್ತಿದ್ದಾರೆ. ಈ ಬಗ್ಗೆ ಮಾತನಾಡಿದ ಗಿಲ್ಲಿ ನಟ, “ಇದನ್ನು ಹೇಗೆ ಹೇಳೋದು, ಟೈಮ್. ಇವರ ಕಂಕಣಬಲ ಕೂಡಿ ಬರಬೇಕು ಅಷ್ಟೇ. ಕಾವ್ಯ ಶೈವ ಅವರು ನನ್ನ ಸ್ನೇಹಿತರು. ಕಾವ್ಯ ನನ್ನ ಸ್ನೇಹಿತರಾಗಿ ಇರುತ್ತಾರೆ ಅಷ್ಟೇ” ಎಂದು ಹೇಳಿದ್ದಾರೆ.
ದರ್ಶನ್ ಜೊತೆ ಸಿನಿಮಾ ಮಾಡಿದ್ರಿ
“ದರ್ಶನ್ ಅವರನ್ನು ನಾನು ದಿ ಡೆವಿಲ್ ಸಿನಿಮಾ ಶೂಟಿಂಗ್ನಲ್ಲಿ ನೋಡಿದ್ದೆ, ನನ್ನನ್ನು ನೋಡಿ ಅವರೇ ಕರೆದರು, ನಾನು ಬೇರೆ ಯಾರನ್ನೋ ಕರೆಯುತ್ತಿದ್ದಾರೆ ಎಂದುಕೊಂಡೆ, ಅವರು ಕರೆದು ಪ್ರಾಪರ್ಟಿ ಕಾಮಿಡಿ ಮಾಡುತ್ತೀರಾ ಎಂದರು. ಸಿಕ್ಕಾಪಟ್ಟೆ ಖುಷಿಯಾಗೋಯ್ತು” ಎಂದು ಗಿಲ್ಲಿ ನಟ ಅವರು ಹೇಳಿದ್ದಾರೆ.


