Ashwini Gowda Interview: ಬಿಗ್‌ಬಾಸ್ ಕನ್ನಡ ಸೀಸನ್‌ 12 ಸ್ಪರ್ಧಿ ಹಾಗೂ ನಟಿ ಅಶ್ವಿನಿ ಗೌಡ ನೀಡಿರುವ ಹೇಳಿಕೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ತಮಿಳು ನಟ..

ಬಿಗ್‌ಬಾಸ್ ಕನ್ನಡ ಸೀಸನ್‌ 12 ಸ್ಪರ್ಧಿ ಹಾಗೂ ನಟಿ ಅಶ್ವಿನಿ ಗೌಡ ನೀಡಿರುವ ಹೇಳಿಕೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ತಮಿಳು ನಟ ದಳಪತಿ ವಿಜಯ್ (ಸಿ. ಜೋಸೆಫ್ ವಿಜಯ್) ಅವರಂತೆ ಕರ್ನಾಟಕದಲ್ಲೂ ಚಿತ್ರರಂಗದಿಂದ ರಾಜಕೀಯಕ್ಕೆ ಬರಬಹುದಾದ ನಾಯಕ ಯಾರು ಎಂಬ ಪ್ರಶ್ನೆಗೆ ಅಶ್ವಿನಿ, ನಟ ದರ್ಶನ್ ಅವರ ಹೆಸರನ್ನು ಸೂಚಿಸಿದ್ದಾರೆ.

ಪ್ರಾದೇಶಿಕ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಈ ಕುರಿತು ಮಾತನಾಡಿದ ಅಶ್ವಿನಿ ಗೌಡ, "ಸಿನಿಮಾ ಮತ್ತು ರಾಜಕೀಯ ಎರಡೂ ವಿಭಿನ್ನ ಕ್ಷೇತ್ರಗಳು. ಚಿತ್ರರಂಗದಲ್ಲಿರುವ ಯಾರಿಗಾದರೂ ರಾಜಕೀಯದ ಬಗ್ಗೆ ಆಸಕ್ತಿ ಇದ್ದು, ಅದಕ್ಕಾಗಿ ಎಲ್ಲವನ್ನೂ ಬಿಟ್ಟು ಜನಸೇವೆಗೆ ಬರಲು ಸಿದ್ಧರಾಗಿದ್ದರೆ ಖಂಡಿತ ಬರಬೇಕು. ನನ್ನ ಅಭಿಪ್ರಾಯದಲ್ಲಿ ದರ್ಶನ್ ಅವರು ರಾಜಕೀಯಕ್ಕೆ ಬಂದರೆ ಉತ್ತಮ ಆಯ್ಕೆಯಾಗುತ್ತಾರೆ. ಅವರಿಗೆ ಶುಭವಾಗಲಿ" ಎಂದು ಹೇಳಿದ್ದಾರೆ.

ಟಿ. ನಾರಾಯಣ ಗೌಡರಿಗೂ ಮೆಚ್ಚುಗೆ

ಸಂದರ್ಶನದ ವೇಳೆ ಕನ್ನಡಪರ ಹೋರಾಟಗಾರ ಟಿ. ನಾರಾಯಣ ಗೌಡ ಅವರ ಬಗ್ಗೆಯೂ ಅಶ್ವಿನಿ ಮೆಚ್ಚುಗೆ ವ್ಯಕ್ತಪಡಿಸಿದರು. "ಕರ್ನಾಟಕದ ನೆಲ, ಜಲ, ಭಾಷೆ ಹಾಗೂ ಸಂಸ್ಕೃತಿಯ ರಕ್ಷಣೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿರುವ ನಾಯಕರಲ್ಲಿ ಟಿ. ನಾರಾಯಣ ಗೌಡ ಕೂಡ ಒಬ್ಬರು" ಎಂದು ಅವರು ಹೇಳಿದರು.

2028ರ ಚುನಾವಣೆಗೆ ಸ್ಪರ್ಧಿಸುತ್ತಾರಾ?

ಮುಂದಿನ 2028ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಯೋಚನೆ ಇದೆಯೇ ಎಂಬ ಪ್ರಶ್ನೆಗೆ ಅಶ್ವಿನಿ ನೇರ ಉತ್ತರ ನೀಡದೆ, "ನಾನು ಯಾವ ಪಕ್ಷ ಸೇರುತ್ತೇನೆ? ರಾಜಕೀಯಕ್ಕೆ ಬರುತ್ತೇನಾ? ಎಂಬ ಪ್ರಶ್ನೆಗಳನ್ನು ಹಲವರು ಕೇಳುತ್ತಾರೆ. ಪ್ರತಿಯೊಂದಕ್ಕೂ ಸೂಕ್ತ ಸಮಯ ಇರುತ್ತದೆ. ಒಂದು ದಿನ ಅವಕಾಶ ಬಂದರೆ ಆಗ ಆ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತೇನೆ" ಎಂದು ಪ್ರತಿಕ್ರಿಯಿಸಿದರು.

ಗಿಲ್ಲಿ ಬಗ್ಗೆ ಹೇಳಿದ್ದೇನು?

ಬಿಗ್‌ಬಾಸ್ ಕನ್ನಡ 12ರ ಸಹ ಸ್ಪರ್ಧಿ ಗಿಲ್ಲಿ ಬಗ್ಗೆ ಕೂಡ ಅಶ್ವಿನಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಪೈಪೋಟಿ ಇದ್ದರೂ, ಅದರ ಹೊರಗೆ ಯಾವುದೇ ವೈಮನಸ್ಸಿಲ್ಲ ಎಂದು ಸ್ಪಷ್ಟಪಡಿಸಿದರು. "ಗಿಲ್ಲಿಗೆ ನಾನು ಮನಸಾರೆ ಶುಭ ಹಾರೈಸುತ್ತೇನೆ. ಬಿಗ್‌ಬಾಸ್ ಒಂದು ಆಟ ಅಷ್ಟೇ. ಅವರು ಗೆದ್ದಿದ್ದಾರೆ ಎಂದು ನನಗೆ ಬೇಸರವಿಲ್ಲ. ಮುಂದಿನ ದಿನಗಳಲ್ಲಿ ಅವರು ಇನ್ನಷ್ಟು ಉತ್ತಮ ಸಿನಿಮಾಗಳಲ್ಲಿ ನಟಿಸಿ ಯಶಸ್ಸು ಕಾಣಲಿ ಎಂದು ಹಾರೈಸುತ್ತೇನೆ" ಎಂದು ಅಶ್ವಿನಿ ಹೇಳಿದರು. ಸದ್ಯ ಅಶ್ವಿನಿ ಗೌಡ ಅವರ ಈ ಹೇಳಿಕೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ದರ್ಶನ್ ರಾಜಕೀಯ ಪ್ರವೇಶದ ಕುರಿತು ಮತ್ತೊಮ್ಮೆ ಚರ್ಚೆ ಶುರುವಾಗಿದೆ.