ಜನಪ್ರಿಯ ನಿರೂಪಕ ಅಕುಲ್ ಬಾಲಾಜಿ, ಯೂಟ್ಯೂಬ್ ಸಂದರ್ಶನವೊಂದರಲ್ಲಿ ತಮ್ಮ ಯಶಸ್ಸಿನ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ. ಆಂಧ್ರದಿಂದ ಬಂದ ತಮ್ಮನ್ನು ಕನ್ನಡಿಗರು ಬೆಳೆಸಿದ್ದು, ತಾನು ಗಳಿಸಿದ್ದೆಲ್ಲವೂ ಕನ್ನಡಿಗರು ನೀಡಿದ ಭಿಕ್ಷೆ ಎಂದು ಭಾವುಕರಾಗಿ ಹೇಳಿಕೊಂಡಿದ್ದಾರೆ.
ಬೆಂಗಳೂರು (ಆ.14): ಕನ್ನಡ ಕಿರುತೆರೆಯಲ್ಲಿ ತಮ್ಮದೇ ಆದ ವಿಶಿಷ್ಟ ಶೈಲಿಯ ನಿರೂಪಣೆಯಿಂದ ಕನ್ನಡಿಗರ ಮನಗೆದ್ದಿರುವ ಸ್ಟಾರ್ ನಿರೂಪಕ ಅಕುಲ್ ಬಾಲಾಜಿ, ತಮ್ಮ ಆರಂಭಿಕ ದಿನಗಳ ನಟನಾ ಪಯಣ ಹಾಗೂ ಕನ್ನಡಿಗರು ತಮ್ಮ ಮೇಲಿಟ್ಟಿರುವ ಪ್ರೀತಿಯ ಕುರಿತು ಯೂಟ್ಯೂಬ್ ಸಂದರ್ಶನದಲ್ಲಿ ಮನಬಿಚ್ಚಿ ಮಾತನಾಡಿದ್ದಾರೆ. ಕನ್ನಡದ ಜನಪ್ರಿಯ ನಿರೂಪಕರ ಸಾಲಿನಲ್ಲಿ ನಟಿ ಅನುಶ್ರೀ ಅವರ ಜೊತೆಗೆ ಪ್ರಮುಖವಾಗಿ ಕೇಳಿಬರುವ ಹೆಸರೇ ಅಕುಲ್ ಬಾಲಾಜಿ. ಸದ್ಯ 'ಹಳ್ಳಿ ಪವರ್' ಎನ್ನುವ ಬಿಗ್ ರಿಯಾಲಿಟಿ ಶೋನಲ್ಲಿ ನಿರೂಪಕರಾಗಿ ಕಾರ್ಯನಿರ್ವಹಿಸುತ್ತಿರುವ ಅಕುಲ್, 'ಬಿಗ್ ಬಾಸ್ ಕನ್ನಡ'ದ ಮಾಜಿ ಸ್ಪರ್ಧಿಯೂ ಹೌದು. ಇಂದು ಕೇವಲ ನಿರೂಪಕರಾಗಿ ಗುರುತಿಸಿಕೊಂಡಿರುವ ಇವರು, ಆರಂಭದಲ್ಲಿ ಬೆಳ್ಳಿ ತೆರೆಯಲ್ಲಿಯೂ ಅದೃಷ್ಟ ಪರೀಕ್ಷೆಗೆ ಇಳಿದಿದ್ದರು. ಮೂರು ಸಿನಿಮಾಗಳಲ್ಲಿ ಮುಖ್ಯ ಪಾತ್ರಗಳಲ್ಲಿ ಹಾಗೂ ಹಲವು ಚಿತ್ರಗಳಲ್ಲಿ ಅತಿಥಿ ಪಾತ್ರಗಳಲ್ಲಿ ನಟಿಸಿದ್ದನ್ನು ಅವರು ನೆನಪಿಸಿಕೊಂಡಿದ್ದಾರೆ.
ಆಂಧ್ರದಿಂದ ಬಂದ ಹುಡುಗನನ್ನು ಬೆಳೆಸಿದ್ದು ಕನ್ನಡಿಗರು!
ತಮ್ಮ ಬೆಳವಣಿಗೆಯ ಕುರಿತು ಅತ್ಯಂತ ವಿನಮ್ರವಾಗಿ ಮಾತನಾಡಿದ ಅಕುಲ್, ನಾನು ಆಂಧ್ರದಿಂದ ಬಂದ ಹುಡುಗ. ನನ್ನನ್ನು ಬೆಳೆಸಿದ್ದು ಕನ್ನಡಿಗರು ಎಂಬ ಮಾತು ಶೇ. 100ರಷ್ಟು ನಿಜ. ನಾನು ಇಲ್ಲಿ ಏನೇ ಹೆಸರು, ಹಣ ಸಂಪಾದನೆ ಮಾಡಿದ್ದರೂ ಅದು ಕನ್ನಡಿಗರು ನೀಡಿದ ಭಿಕ್ಷೆ ಎಂದು ಭಾವುಕರಾಗಿದ್ದಾರೆ.
ತಮ್ಮ ಈ ಮಾತನ್ನು ಸ್ಪಷ್ಟಪಡಿಸುತ್ತಾ, ನಾವು ಕಷ್ಟದಲ್ಲಿದ್ದಾಗ ಅಥವಾ ತುಂಬಾ ನೋವಿನಲ್ಲಿದ್ದಾಗ ಯಾರಾದರೂ ಬಂದು ಸಹಾಯ ಮಾಡಿದರೆ ಅವರನ್ನು ಜೀವನಪೂರ್ತಿ ನೆನಪಿಸಿಕೊಳ್ಳುತ್ತೇವೆ. ಹಾಗೆಯೇ ನಾನು ಏನೂ ಇಲ್ಲದೆ ಕಷ್ಟದಲ್ಲಿದ್ದಾಗ ಕನ್ನಡ ತಾಯಿ ನನ್ನ ಸಹಾಯಕ್ಕೆ ಬಂದು ತನ್ನ ಮಡಿಲಲ್ಲಿ ಬೆಳೆಸಿದ್ದಾರೆ. ಅದಕ್ಕಾಗಿಯೇ ನನಗೆ ಕನ್ನಡ ಮತ್ತು ಕನ್ನಡಿಗರು ಎಂದರೆ ಅಷ್ಟೊಂದು ಪ್ರೀತಿ ಮತ್ತು ಗೌರವ," ಎಂದು ಕನ್ನಡ ನಾಡಿನ ಮೇಲಿರುವ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ.
ತುಂಬಾ ಜನ ಹೇಳಬಹುದು, ಏನು ಬರೀ ಡವ್ ಮಾಡ್ತಾನೆ ಅಂತಾ. ಆದರೆ, ನನಗೆ ಅದರಲ್ಲಿ ಬೇಸರವೇ ಇಲ್ಲ. ತುಂಬಾ ನೋವಲ್ಲಿ ಇದ್ದಾಗ ಯಾರೋ ಒಬ್ಬರು ನಿಮ್ಮ ಸಹಾಯಕ್ಕೆ ಬರ್ತಾರೆ. ಅವರನ್ನು ನೀವು ಜೀವನ ಪೂರ್ತಿ ನೆನಪಿಸಿಕೊಳ್ಳುತ್ತೀರಿ ತಾನೆ. ಅದೇ ರೀತಿ ನನಗೆ ಕರ್ನಾಟಕ. ಅದೇ ಕಾರಣಕ್ಕೆ ಕನ್ನಡಿಗರು ಅಂದರೆ ನನಗೆ ಪ್ರೀತಿ. ಇಷ್ಟು ಭಿಕ್ಷೆ ಕೊಟ್ಟ ಮೇಲೆ ಅದನ್ನ ವಾಪಾಸ್ ಕೇಳುವ ಹಾಗಿಲ್ಲ. ಒಂದು ಸತಿ ಭಿಕ್ಷೆ ಕೊಟ್ಟ ಮೇಲೆ ಮುಗಿಯಿತು. ಮತ್ತೆ ಅದನ್ನು ಕೇಳುವ ಹಾಗಿಲ್ಲ. ಅಷ್ಟೊಂದು ಪ್ರೀತಿಯನ್ನು ಇಲ್ಲಿನ ಜನ ನೀಡಿದ್ದಾರೆ ಎಂದಿದ್ದಾರೆ.


