ಸ್ವಾತಂತ್ರ್ಯ ದಿನಾಚರಣೆಯಂದು ನಟ ಕಿಶೋರ್, ಜೈಲಿನಲ್ಲಿರುವ ಎಂಟು ಮುಸ್ಲಿಮರ ಪಟ್ಟಿಯನ್ನು ಹಂಚಿಕೊಂಡು ವಿವಾದ ಸೃಷ್ಟಿಸಿದ್ದಾರೆ. ಈ ಪಟ್ಟಿಯಲ್ಲಿ ಐಬಿ ಅಧಿಕಾರಿ ಅಂಕಿತ್ ಶರ್ಮಾ ಹತ್ಯೆಯ ದೋಷಿ ತಾಹಿರ್ ಹುಸೇನ್ ಹೆಸರಿದ್ದು, ಕೊಲೆಗಾರನ ಪರ ನಿಂತಿದ್ದಕ್ಕೆ ಕಿಶೋರ್ ತೀವ್ರ ಟೀಕೆಗೆ ಗುರಿಯಾಗಿದ್ದಾರೆ.

ಬೆಂಗಳೂರು (ಆ.15): ಇಡೀ ದೇಶ ಇಂದು 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಣೆ ಮಾಡುತ್ತಿದೆ. ಕೆಂಪುಕೋಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಮಾಣೆಕ್‌ ಷಾ ಪರೇಡ್‌ ಗ್ರೌಂಡ್‌ನಲ್ಲಿ ಸಿಎಂ ಡಿಕೆ ಶಿವಕುಮಾರ್‌ ಧ್ವಜಾರೋಹಣ ಮಾಡಿ ದೇಶದ, ನಾಡಿನ ಅಭಿವೃದ್ಧಿಗೆ ಜೊತೆಯಾಗುವಂತೆ ಕರೆ ನೀಡಿದ್ದಾರೆ. ಮೋದಿ ತಮ್ಮ ಕೆಂಪುಕೋಟೆಯ ಭಾಷಣದಲ್ಲಿ ಶಕ್ತಿಯ ಸಪ್ತಧಾರಾ ಮಿಷನ್‌ನೊಂದಿಗೆ ಇಡೀ ದೇಶ ದಿಮಾಗಿ ನಕ್ಸಲರ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದು ವಾರ್ನಿಂಗ್‌ ಮಾಡಿದ್ದರು. ಈ ಇಡೀ ವಿಚಾರ ಹೈಲೈಟ್‌ ಆಗುವ ಹೊತ್ತಿಗಾಗಲೇ ಸೋಶಿಯಲ್‌ ಮೀಡಿಯಾದಲ್ಲಿ ಸ್ಯಾಂಡಲ್‌ವುಡ್‌ ನಟ ಕಿಶೋರ್‌ ತಮ್ಮ ವಿವಾದಾತ್ಮಕ ಪೋಸ್ಟ್‌ ಮಾಡಿದ್ದರು.

ವಿವಿಧ ಕಾರಣಗಳಿಗಾಗಿ ಭಾರತದ ಜೈಲುಗಳಲ್ಲಿರುವ ಎಂಟು ಮಂದಿ ಗಲಭೆ ಪ್ರಕರಣದ ಆರೋಪಿಗಳ ವಿವರಗಳನ್ನು ಒಳಗೊಂಡ ಗ್ರಾಫಿಕ್‌ಅನ್ನು ಪೋಸ್ಟ್‌ ಮಾಡಿದ್ದರು. ಅದರೊಂದಿಗೆ ಸ್ವಾತಂತ್ರ್ಯ ದಿನದ ಶುಭಾಶಯಗಳು ಎಂದು ಬರೆದುಕೊಂಡಿದ್ದರು. ಇದರಲ್ಲಿ ದೆಹಲಿ ಗಲಭೆ ಕೇಸ್‌ನಲ್ಲಿ ತಿಹಾರ್‌ ಜೈಲಲ್ಲಿರುವ ಶಾರ್ಜಿಲ್‌ ಇಮಾಮ್‌, ಉಮರ್‌ ಖಾಲಿದ್‌, ಖಾಲಿದ್‌ ಸೈಫಿ, ಸಲೀಂ ಮಲೀಕ್‌, ಆಥರ್‌ ಖಾನ್‌, ಫೈಜಾನ್‌ ಖಾನ್‌, ಇಶ್ರತ್‌ ಜಹಾನ್‌ ಹಾಗೂ ತಾಹಿರ್‌ ಹುಸೇನ್‌ ಹೆಸರನ್ನು ಪೋಸ್ಟ್ ಮಾಡಿ ಅವರು ಎಷ್ಟು ಅವಧಿಯಿಂದ ನ್ಯಾಯಾಂಗ ಬಂಧನದಲ್ಲಿದ್ದಾರೆ ಎಂದು ತಿಳಿಸಿದ್ದರು.

ಆದರೆ, ತಾಹಿರ್‌ ಹುಸೇನ್‌ನಂಥ ಕೊಲೆಗಾರನ ಪರವಾಗಿ ಕಿಶೋರ್‌ ನಿಂತಿರುವುದು ಎಲ್ಲರ ಆಕ್ರೋಶಕ್ಕೆ ಕಾರಣವಾಗಿದೆ. ಆಮ್‌ ಆದ್ಮಿ ಪಕ್ಷದ ಮಾಜಿ ಕೌನ್ಸಿಲರ್‌ ಆಗಿದ್ದ ತಾಹಿರ್‌ ಹುಸೇನ್‌ ಮಾಡಿರುವುದು ಅಂತಿಂಥ ಅಪರಾಧವಲ್ಲ. 2020ರಲ್ಲಿ ನಡೆದ ದೆಹಲಿ ಗಲಭೆಯ ವೇಳೆ ಐಬಿ ಅಧಿಕಾರಿ ಅಂಕಿತ್‌ ಶರ್ಮ ಹತ್ಯೆಯ ಪ್ರಮುಖ ಅಪರಾಧಿ. ಕಿಶೋರ್‌ ತಮ್ಮ ಪೋಸ್ಟ್‌ನಲ್ಲಿ ಪುಂಗಿರುವಂತೆ ಈತ ಈಗ ನ್ಯಾಯಾಂಗ ಬಂಧನದಲ್ಲಿಲ್ಲ. ಇತ್ತೀಚೆಗೆ ದೆಹಲಿ ಕೋರ್ಟ್‌ ಈತನನ್ನು ಪ್ರಕರಣದಲ್ಲಿ ದೋಷಿ ಎಂದು ಗುರುತಿಸಿ ಜೀವಾವಧಿ ಶಿಕ್ಷೆ ನೀಡಿ ಕಂಬಿ ಹಿಂದೆ ಕಳಿಸಿದೆ.

ಅಂಕಿತ್‌ ಶರ್ಮ ಹತ್ಯೆ ಕೇಸ್‌

2020ರ ಫೆಬ್ರವರಿಯಲ್ಲಿ ಈಶಾನ್ಯ ದೆಹಲಿಯ ಹಲವು ಭಾಗಗಳಲ್ಲಿ ಹಿಂಸಾಚಾರ ಭುಗಿಲೆದ್ದಿತ್ತು. ಈ ವೇಳೆ 26 ವರ್ಷದ ಐಬಿ ಅಧಿಕಾರಿ ಅಂಕಿತ್‌ ಶರ್ಮ ಅವರನ್ನು ದಾರುಣವಾಗಿ ಕೊಲೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಅದೇ ವರ್ಷದ ಜೂನ್‌ 3 ರಂದು ದೆಹಲಿ ಪೊಲೀಸ್ ಅಪರಾಧ ವಿಭಾಗದ ಅಧಿಕಾರಿಗಳು ಆರೋಪಪಟ್ಟಿಯನ್ನು ಸಲ್ಲಿಕೆ ಮಾಡಿದ್ದರು. ಮರಣೋತ್ತರ ಪರೀಕ್ಷೆಯಲ್ಲಿ ಅಂಕಿತ್‌ ಶರ್ಮ ಅವರ ದೇಹದ ಮೇಲೆ 51 ಗಾಯಗಳಾಗಿದ್ದವು. ಅವರ ಮೃತದೇಹ ಚರಂಡಿಯಲ್ಲಿ ಸಿಕ್ಕಿತ್ತು ಎಂದು ತಿಳಿಸಿದ್ದಾರೆ. ಅಂಕಿತ್‌ ಶರ್ಮ ಅವರ ಕೈಗೆ ಹಗ್ಗೆ ಕಟ್ಟಿ ಮೃತದೇಹವನ್ನು ಮೇಲೆಕ್ಕೆ ಎಳೆದ ಫೋಟೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿತ್ತು.

ಕೊಲೆಗಾರನ ಪರ ನಿಂತವನಿಗೆ ಕ್ಲಾಸ್‌

ಇನ್ನು ಕಿಶೋರ್‌ ಅವರ ಪೋಸ್ಟ್‌ಗೆ ಕ್ಲಾಸ್‌ ತೆಗೆದುಕೊಂಡಿರುವ ಹಲವರು, ನಿಮ್ಮಂಥ ನಗರ ನಕ್ಸಲರನ್ನೇ ಮೊದಲು ನೇಣಿಗೆ ಹಾಕಬೇಕು ಎಂದು ಕಾಮೆಂಟ್‌ ಮಾಡಿದ್ದಾರೆ. ಮನಸ್ಸಿಗೆ ಒಳ್ಳೆಯದು ಕಾಣುವ ಕನ್ನಡಕ ಸಿಗುತ್ತದಾ ಎಂದು ನೋಡಿ, ನಿಮಗೆ ಅದರ ಅಗತ್ಯ ತುಂಬಾ ಇರುವಂತೆ ಕಾಣುತ್ತಿದೆ ಎಂದು ಒನ್ನೊಬ್ಬರು ಸಲಹೆ ನೀಡಿದ್ದಾರೆ. ಇಂಥ ಪೋಸ್ಟ್‌ಗಳನ್ನು ಮಾಡಿದ ಬಳಿಕವೇ ನಿಮ್ಮಂಥವರ ಯೋಗ್ಯತೆ ಗೊತ್ತಾಗುತ್ತದೆ ಎಂದು ಮತ್ತೊಬ್ಬರು ಬರೆದಿದ್ದಾರೆ. ನಮ್ಮ ದೇಶಕ್ಕೆ ನೀವುಗಳೇ ದೊಡ್ಡ ಕ್ಯಾನ್ಸರ್‌ಗಳು ಎಂದು ಬರೆಯಲಾಗಿದೆ.