ದಕ್ಷಿಣ ಮಧ್ಯ ರೈಲ್ವೆ ಇಲಾಖೆಯು ಕಾಕಿನಾಡ-ಮೈಸೂರು ಎಕ್ಸ್ಪ್ರೆಸ್ ಎಂಬ ಹೊಸ ರೈಲನ್ನು ಆರಂಭಿಸಿದೆ. ಈ ರೈಲು ಮೈಸೂರು, ಬೆಂಗಳೂರಿನಿಂದ ಮಂತ್ರಾಲಯಕ್ಕೆ ಹೋಗುವ ಭಕ್ತರಿಗೆ ಅನುಕೂಲ ಕಲ್ಪಿಸಲಿದ್ದು, ಮೇ 1 ರಿಂದ ಸಂಚಾರ ಆರಂಭಿಸಲಿದೆ. ಇದು ಉತ್ತರ ಕರ್ನಾಟಕದ ಪ್ರಯಾಣಿಕರಿಗೂ ಸಹಕಾರಿಯಾಗಿದೆ.
ಈಗ ಬೇಸಿಗೆ ರಜೆ. ಎಷ್ಟೇ ಬಿರು ಬಿಸಿಲು ಇದ್ದರೂ ದೇವರ ದರ್ಶನದ ವಿಷಯಕ್ಕೆ ಬಂದಾಗ ಅವೆಲ್ಲಾ ಯೋಚನೆ ಬರುವುದೇ ಇಲ್ಲ. ಅದರಲ್ಲಿಯೂ ಮಂತ್ರಾಲಯಕ್ಕೆ ಹೋಗಬೇಕು, ರಾಯರ ದರ್ಶನ ಮಾಡಬೇಕು ಎನ್ನುವ ಭಕ್ತರು ಹಲವರು. ಇದಾಗಲೇ ಕೆಲವು ರೈಲುಗಳು ಮಂತ್ರಾಲಯಕ್ಕೆ ಇದ್ದರೂ, ಕೆಲವು ಸ್ಥಳಗಳ ಜನರಿಗೆ ಇದರ ಅನುಕೂಲತೆ ಇರುವುದಿಲ್ಲ. ಬಸ್ಸಿನಲ್ಲಿ ಹೋಗಲು ಹಲವರಿಗೆ ಇಷ್ಟವಾಗದೇ ಹೋಗಬಹುದು. ಏಕೆಂದರೆ, ರೈಲಿನ ಪ್ರಯಾಣವೇ ತುಂಬಾ ಕ್ಷೇಮ ಹಾಗೂ ಖುಷಿಯಾಗಿರುತ್ತದೆ. ಇಂಥವರಿಗೆ ಇದೀಗ ದಕ್ಷಿಣ ಮಧ್ಯ ರೈಲ್ವೆ ಇಲಾಖೆ (South Central Railway) ಭರ್ಜರಿ ಗುಡ್ನ್ಯೂಸ್ ಕೊಟ್ಟಿದೆ.
ಕಾಕಿನಾಡ-ಮೈಸೂರು ಎಕ್ಸ್ಪ್ರೆಸ್
ಕಾಕಿನಾಡ-ಮೈಸೂರು ಎಕ್ಸ್ಪ್ರೆಸ್ (Kakinada Town - Mysuru Express) ಇದಾಗಿದೆ. ರೈಲಿನ ಸಂಖ್ಯೆ 17289/17290. ಮೇ 1ರಿಂದ ಇದಕ್ಕೆ ಚಾಲನೆ ದೊರೆಯಲಿದೆ. ಮೈಸೂರು, ಮಂಡ್ಯ ಹಾಗೂ ಬೆಂಗಳೂರಿನ ಆಸುಪಾಸು ಜನರಿಗೆ ಇದು ತುಂಬಾ ಅನುಕೂಲ ಕಲ್ಪಿಸಲಿದೆ. ಮೈಸೂರಿನಿಂದ ಸಂಜೆ 5:05ಕ್ಕೆ ಹೊರಡುವ ಈ ರೈಲು, ಬೆಂಗಳೂರು ಸಿಟಿಯಿಂದ ರಾತ್ರಿ 8:25ಕ್ಕೆ ಹೊರಡಲಿದೆ. ಇದು ಮರುದಿನ ನಸುಕಿನ 3:28ಕ್ಕೆ ಮಂತ್ರಾಲಯ ರಸ್ತೆ (Mantralayam Road) ನಿಲ್ದಾಣವನ್ನು ತಲುಪಲಿದೆ. ಇದರಿಂದಾಗಿ ಬೆಳಗ್ಗೆ ತುಂಗಭದ್ರೆಯಲ್ಲಿ ಸ್ನಾನಮಾಡಿ, ರಾಘವೇಂದ್ರ ಸ್ವಾಮಿಗಳ ದರ್ಶನ ಪಡೆಯಬಹುದಾಗಿದೆ.
ಇದರ ಜೊತೆಗೆ, ಉತ್ತರ ಕರ್ನಾಟಕದ ಜನತೆಗೂ ತುಂಬಾ ಅನುಕೂಲ ಆಗಿದೆ. ರಾಯಚೂರು, ಕೃಷ್ಣ, ಯಾದಗಿರಿ ಮತ್ತು ಸೇಡಂ ಭಾಗದ ಪ್ರಯಾಣಿಕರು ಬೆಂಗಳೂರು ಅಥವಾ ಮೈಸೂರಿಗೆ ಬರಲು ಇದು ಅನುಕೂಲ ಕಲ್ಪಿಸಿದೆ. ಕಾಕಿನಾಡದಿಂದ ಸೋಮವಾರ ಮತ್ತು ಶುಕ್ರವಾರ ಹಾಗೂ ಮೈಸೂರಿನಿಂದ ಮಂಗಳವಾರ ಮತ್ತು ಶನಿವಾರ ಈ ರೈಲು ಸಂಚರಿಸಲಿದೆ.
ಕಾಕಿನಾಡದಿಂದ ಬರುವ ರೈಲು ನಸುಕಿನ 2:30ಕ್ಕೆ ಯಾದಗಿರಿ, 3:48ಕ್ಕೆ ರಾಯಚೂರು ಮೂಲಕ ಮಧ್ಯಾಹ್ನ 12:20ಕ್ಕೆ ಕೆ.ಎಸ್.ಆರ್ ಬೆಂಗಳೂರು ಸಿಟಿ ತಲುಪುತ್ತದೆ. ಮೈಸೂರಿನಿಂದ ಸಂಜೆ ಹೊರಡುವ ರೈಲು ನಸುಕಿನ 4:43ಕ್ಕೆ ರಾಯಚೂರು ಹಾಗೂ 5:58ಕ್ಕೆ ಯಾದಗಿರಿಯನ್ನು ತಲುಪುತ್ತದೆ.
17289 ರೈಲ್ವೆಯ ರೂಟ್ ಹೀಗಿದೆ...
ಆಂಧ್ರ ಪ್ರದೇಶ: ಕಾಕಿನಾಡ ಟೌನ್, ಸಮಲ್ಕೋಟ್, ರಾಜಮಂಡ್ರಿ, ನಿಡದವೋಲು, ತನುಕು, ಭೀಮಾವರಂ ಟೌನ್, ಅಕಿವಿಡು, ಕೈಕಲೂರು, ಗುಡಿವಾಡ, ವಿಜಯವಾಡ, ಗುಂಟೂರು
ತೆಲಂಗಾಣ: ನಲ್ಗೊಂಡ, ಸಿಕಂದರಾಬಾದ್, ಬೇಗಂಪೇಟ್, ಲಿಂಗಂಪಲ್ಲಿ, ವಿಕಾರಾಬಾದ್
ಕರ್ನಾಟಕ/ಗಡಿ: ಸೇಡಂ, ಯಾದಗಿರಿ, ರಾಯಚೂರು, ಮಂತ್ರಾಲಯ ರಸ್ತೆ, ಆದೋನಿ, ಗುಂತಕಲ್, ಅನಂತಪುರ, ಧರ್ಮಾವರಂ, ಹಿಂದೂಪುರ, ಯಲಹಂಕ, ಬೆಂಗಳೂರು ಕ್ಯಾಂಟ್, ಕೆಎಸ್ಆರ್ ಬೆಂಗಳೂರು, ಕೆಂಗೇರಿ, ರಾಮನಗರ, ಮಂಡ್ಯ, ಮೈಸೂರು
17290 ರೈಲ್ವೆ ರೂಟ್ ಹೀಗಿದೆ...
ಕರ್ನಾಟಕ: ಮೈಸೂರು, ಮಂಡ್ಯ, ಕೆಎಸ್ಆರ್ ಬೆಂಗಳೂರು, ಯಲಹಂಕ
ತೆಲಂಗಾಣ: ವಿಕಾರಾಬಾದ್, ಸಿಕಂದರಾಬಾದ್, ಲಿಂಗಂಪಲ್ಲಿ, ನಲ್ಗೊಂಡ
ಆಂಧ್ರಪ್ರದೇಶ: ಗುಂಟೂರು, ವಿಜಯವಾಡ, ರಾಜಮಂಡ್ರಿ, ಸಮಲ್ಕೋಟ್, ಕಾಕಿನಾಡ ಪಟ್ಟಣ


