'ಮೊಟ್ಟೆ ಮೊದ್ಲಾ ಕೋಳಿ ಮೊದ್ಲಾ ಎನ್ನುವಂತಾಗಿದೆ. ಒಳ್ಳೆ ಸಿನಿಮಾ ಕೊಟ್ರೆ ಜನ ನೋಡ್ತಿಲ್ವಾ, ಜನ ನೋಡೋದಕ್ಕೆ ಒಳ್ಳೆ ಸಿನಿಮಾ ಕೊಡ್ತಿಲ್ವಾ ಎನ್ನುವಂತಾಗಿದೆ. ಒಳ್ಳೆ ಸಿನಿಮಾ ಬಂದಾಗ ಜನ ನೋಡ್ತಾರೆ. 'ಸು ಫ್ರಂ ಸೋ' ಸಿನಿಮಾ ಬಂದಾಗ ಎಲ್ಲಾ ನುಗ್ಗಿ ನೋಡಿದ್ರು. ಜೆಪಿ ತುಮ್ಮಿನಾಡು ಹೊಸ ನಿರ್ದೇಶಕರು.

ಇಂದು, (07 July 2026) ಸ್ಯಾಂಡಲ್‌ವುಡ್ ಪ್ಯಾನ್ ಇಂಡಿಯಾ ಸ್ಟಾರ್ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿಯವರು ನಿನ್ನೆ ಬೆಂಗಳೂರಿನಲ್ಲಿ ತಮ್ಮ 43ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಪತ್ನಿ ಪ್ರಗತಿ ಶೆಟ್ಟಿ, ಮಗ-ಮಗಳು ಜೊತೆ ನಿನ್ನೆ ಆಗಮಿಸಿದ್ದ ರಿಷಬ್ ಶೆಟ್ಟಿಯವರು ಮಾಧ್ಯಮಗಳ ಜೊತೆಯಲ್ಲಿ ಮಾತುಕತೆ ನಡೆಸಿದ್ದಾರೆ. ತಮ್ಮ ಹುಟ್ಟುಹಬ್ಬದ ಸಂಭ್ರಮದ ಸಮಯದಲ್ಲಿ ಸಾಕಷ್ಟು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ತಮ್ಮ ಮುಂದಿನ ಯೋಜನೆಗಳ ಬಗ್ಗೆಯೂ ಪ್ರತಿಕ್ರಿಯಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈ ಮಾತುಕತೆ ವೇಳೆ 'ಜೈ ಹನುಮಾನ್' ಸಿನಿಮಾದ ಬಗ್ಗೆ ಕೂಡ ಮಾತನ್ನಾಡಿದ್ದಾರೆ. ಪ್ರಶಾಂತ್ ವರ್ಮಾ ನಿರ್ದೇಶನದ 'ಜೈಹನುಮಾನ್' ಚಿತ್ರವು ತೆಲುಗು ಅಲ್ಲ ಕನ್ನಡ ಸಿನಿಮಾ ಎಂದು ಹೇಳಿ ಶಾಕ್ ಮೂಡಿಸಿದ್ದಾರೆ. ಅದು ಹೇಗೆ ಎನ್ನುವ ಪ್ರಶ್ನೆಗೆ ತಮ್ಮದೇ ಆದ ಶೈಲಿಯಲ್ಲಿ ಸ್ಪಷ್ಟನೆ ಕೊಟ್ಟಿದ್ದಾರೆ. "ಕನ್ನಡ ಬಿಟ್ಟು ನಾವು ಎಲ್ಲೂ ಹೋಗಲ್ಲ. ಯಾರೋ ಕೇಳಿದ್ರು, 'ಜೈಹನುಮಾನ್' ತೆಲುಗು ಸಿನ್ಮಾ ಅಲ್ವಾ ಅಂತ.. ನಾನು ಇಲ್ಲ ಕನ್ನಡ ಸಿನ್ಮಾ ಅಂದೆ..' ಎಂದಿದ್ದಾರೆ.

ತೆಲುಗು ನಿರ್ಮಾಪಕ, ನಿರ್ದೇಶಕರ ಸಿನಿಮಾ 'ಜೈ ಹನುಮಾನ್' ಅದು ಹೇಗೆ ಕನ್ನಡ ಸಿನಿಮಾ ಆಗುತ್ತದೆ ಎಂಬ 'ಮರುಪ್ರಶ್ನೆ'ಗೆ ಉತ್ತರಿಸಿದ್ದಾರೆ ರಿಷಬ್ ಶೆಟ್ಟಿಯವರು. 'ಹೌದು ಈ ಚಿತ್ರದ ನಿರ್ಮಾಪಕರು, ನಿರ್ದೇಶಕರು ತೆಲುಗಿನವ್ರು.. ಹೀರೊ ನಾನು ಕನ್ನಡದವನು. ಹನುಮಂತ ಹಾಗೂ ನಾನು ಇಬ್ಬರೂ ಕನ್ನಡದವ್ರು.. ಹಾಗಾಗಿ ಈ ಚಿತ್ರ ಕನ್ನಡ ಸಿನಿಮಾ ತಾನೇ ಎಂದೆ" ಎಂದಿದ್ದಾರೆ ರಿಷಬ್. ಇದೀಗ ಅವರ ಈ ಹೇಳಿಕೆ ಇದೀಗ ವೈರಲ್ ಆಗ್ತಿದೆ.

'ಜೈಹನುಮಾನ್' ಸಿನಿಮಾ ಯಾವ ಭಾಷೆಯಲ್ಲಿ ಚಿತ್ರೀಕರಣವಾಗುತ್ತದೆ ಎನ್ನುವ ಪ್ರಶ್ನೆಗೆ ರಿಷಬ್ ಶೆಟ್ಟಿಯವರು "ತೆಲುಗಿನವ್ರು ತೆಲುಗಿನಲ್ಲಿ ಮಾತನಾಡ್ತಾರೆ, ಕನ್ನಡದವ್ರು ಕನ್ನಡದಲ್ಲಿ ಮಾತನಾಡ್ತಾರೆ, ಹಿಂದಿಯವ್ರು ಹಿಂದಿಯಲ್ಲಿ ಮಾತನಾಡ್ತಾರೆ. ಒಟ್ಟಾರೆ ಪ್ಯಾನ್ ಇಂಡಿಯಾ ಸಿನಿಮಾ ಹಲವು ಭಾಷೆಗಳಲ್ಲಿ ಬರುತ್ತೆ. ಈಗ ಸಿನಿಮಾ ಡಬ್ಬಿಂಗ್ ಮಾಡುವುದು ಸುಲಭವಾಗಿದೆ. ನಿರ್ದೇಶಕರಿಗೆ ಯಾವ ಭಾಷೆಯಲ್ಲಿ ಬೇಕೋ ಆ ಭಾಷೆಯಲ್ಲಿ ಚಿತ್ರೀಕರಣ ಮಾಡ್ತಾರೆ" ಎಂದು ತಿಳಿಸಿದ್ದಾರೆ.

ನಿನ್ನೆ ಕನ್ನಡ ಚಿತ್ರರಂಗದ ಸದ್ಯದ ಪರಿಸ್ಥಿತಿ ಬಗ್ಗೆ ರಿಷಬ್ ಶೆಟ್ಟಿ ಪ್ರತಿಕ್ರಿಯಿಸಿದ್ದಾರೆ. 'ಮೊಟ್ಟೆ ಮೊದ್ಲಾ ಕೋಳಿ ಮೊದ್ಲಾ ಎನ್ನುವಂತಾಗಿದೆ. ಒಳ್ಳೆ ಸಿನಿಮಾ ಕೊಟ್ರೆ ಜನ ನೋಡ್ತಿಲ್ವಾ, ಜನ ನೋಡೋದಕ್ಕೆ ಒಳ್ಳೆ ಸಿನಿಮಾ ಕೊಡ್ತಿಲ್ವಾ ಎನ್ನುವಂತಾಗಿದೆ. ಒಳ್ಳೆ ಸಿನಿಮಾ ಬಂದಾಗ ಜನ ನೋಡ್ತಾರೆ. 'ಸು ಫ್ರಂ ಸೋ' ಸಿನಿಮಾ ಬಂದಾಗ ಎಲ್ಲಾ ನುಗ್ಗಿ ನೋಡಿದ್ರು. ಜೆಪಿ ತುಮ್ಮಿನಾಡು ಹೊಸ ನಿರ್ದೇಶಕರು. ರಾಜ್ ಬಿಟ್ರೆ ಎಲ್ಲಾ ಹೊಸ ಕಲಾವಿದರೇ.. ಸಿನಿಮಾ ಇಷ್ಟವಾಗಿದ್ದಕ್ಕೆ ಜನ ನೋಡಿದ್ರು.. ಜನಪ್ರಿಯ ಕಲಾವಿದರು ಇದ್ದೂ ಜನ ನೋಡ್ಲಿಲ್ಲ ಅಂದ್ರೆ, ಸಿನಿಮಾ ಚೆನ್ನಾಗಿಲ್ಲ ಅಂತ ಅರ್ಥ.

ಅಷ್ಟೇ ಅಲ್ಲ, ಇನ್ನೂ ಸಾಕಷ್ಟು ಸಂಗತಿಗಳ ಬಗ್ಗೆ ರಿಷಬ್ ಶೆಟ್ಟಿಯವರು ಮಾತನ್ನಾಡಿದ್ದಾರೆ. ಮಲಯಾಳಂನಲ್ಲಿ 'ವಾಳಾ- 2', ತಮಿಳಿನಲ್ಲಿ 'ಯೂತ್' ಎನ್ನುವ ಸಿನಿಮಾಗಳು ಬಂತು.. ಹೊಸಬರ ಸಿನಿಮಾ ಆಗಿದ್ರೂ ಅದು 200 ಕೋಟಿ ಕಲೆಕ್ಷನ್ ಆಯ್ತು.. ಕಲೆಕ್ಷನ್‌ ನಂಬರ್‌ಗಿಂತಲೂ ಅಷ್ಟು ಜನ ನೋಡಿದ್ರು ಎನ್ನುವುದು ಮುಖ್ಯ. ಓಟಿಟಿ ಬಂದಿದೆ ಅಂತ ಎಲ್ಲರೂ ಹೇಳ್ತಾರೆ. ಆದರೆ ಟಿವಿ ರೀತಿ ಈಗ ಓಟಿಟಿ ಕೂಡ ಹಳೇದಾಯ್ತು.. ಓಟಿಟಿಗೆ ಬೇಕಾದ ಕಂಟೆಂಟ್ ಸಿಕ್ತಿದೆ, ಅದು ಅದರ ಪಾಡಿಗೆ ನಡಿತಿದೆ. ಥಿಯೇಟರ್‌ಗೆ ಬಂದು ಜನ ಸಿನಿಮಾ ನೋಡಲು ಈಗ ಏನು ಮಾಡಬೇಕು ಎನ್ನುವುದು ಮುಖ್ಯ. 'ಚಿತ್ರಮಂದಿರವೇ ಅಂತಿಮ' ಎಂದು ರಿಷಬ್ ಶೆಟ್ಟಿ ವಿವರಿಸಿದ್ದಾರೆ.

ಸಣ್ಣ ಬಜೆಟ್ ಸಿನಿಮಾ ಆದರೆ ವರ್ಷಕ್ಕೆ ಒಂದು ಮಾಡಬಹುದು. ಬಿಗ್ ಬಜೆಟ್ ಸಿನಿಮಾ ಅಂದಾಗ ಅದಕ್ಕೆ ಬೇಕಾಗಿರುವ ಅಗತ್ಯಗಳು ಸಿಗಲು ತಡವಾಗುತ್ತದೆ. ನಾನು 'ಜೈಹನುಮಾನ್' ಸಿನಿಮಾದಲ್ಲಿ ನಟಿಸುವುದರ ಜೊತೆ ಎರಡು ಪ್ರಾಜೆಕ್ಟ್ ಸ್ಕ್ರಿಪ್ಟ್ ಮಾಡ್ತಿದ್ದೀನಿ. ಕೆಲವೊಮ್ಮೆ ಆಗುತ್ತೆ, ಕೆಲವೊಮ್ಮೆ ಆಗೋದಿಲ್ಲ. 'ಕಾಂತಾರ' ಸಿನಿಮಾ ಒಂದೇ ವರ್ಷದಲ್ಲಿ ಕಥೆ ಬರೆದು, ಚಿತ್ರೀಕರಣ ಮಾಡಿ ಬಿಡುಗಡೆಯನ್ನೂ ಮಾಡಿಬಿಟ್ಟೆವು. ಸಿನಿಮಾ ಅನ್ನೋದು ಆಗಬೇಕು ಮಾಡೋಕೆ ಆಗಲ್ಲ. 'ಕಾಂತಾರ-1' ನಾವು ಮಾಡಿದ ಸಿನಿಮಾ' ಎಂದು ರಿಷಬ್ ಶೆಟ್ಟಿ ಮಾರ್ಮಿಕ ಅರ್ಥದಲ್ಲಿ ಹೇಳಿದ್ದಾರೆ.

ಇನ್ನೂ ಒಂದು ಸೀಕ್ರೆಟ್ ಹೇಳಿದ್ದಾರೆ ರಿಷಬ್ ಶೆಟ್ಟಿ. 'ಬರಹಗಾರರನ್ನು ಕನ್ನಡ ಚಿತ್ರರಂಗದಲ್ಲಿ ಬೆಳೆಸುತ್ತಿಲ್ಲ. ಮೊದಲಿನಿಂದ ಅದೇ ತಪ್ಪು ಮಾಡಿದ್ದಕ್ಕೆ ಈಗ ಪರಿಸ್ಥಿತಿ ಈ ರೀತಿಯಾಗಿದೆ. ಬೆಂಗಳೂರಿನ ಬರಹಗಾರರು ಈಗ ಮುಂಬೈನಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರ ಬಗ್ಗೆ ನಮಗೆ ಗೊತ್ತಿಲ್ಲ. ನಾವು ಬರಹಗಾರರನ್ನು ಬೆಳೆಸುತ್ತಿದ್ದೇವೆ. ಅವರಿಂದ ಮುಂದೆ ಚಿತ್ರರಂಗಕ್ಕೆ ಕೊಡುಗೆಗಳು ಖಂಡಿತ ಸಿಗಲಿವೆ' ಎಂದಿದ್ದಾರೆ.