Asianet Suvarna News Asianet Suvarna News

ಬೆಳಕು ಹೋದ್ಮೇಲೆ ರಾತ್ರಿ ಬರಬೇಕು ಎಂದಿದ್ದ ಅಪ್ಪು: ಪುನೀತ್‌ ನೆನೆದು ಭಾವುಕರಾದ ರಮೇಶ್‌ ಅರವಿಂದ್‌

*  ಕಣ್ಣಲ್ಲಿ ಕಣ್ಣಿಟ್ಟು ಮಾತಾಡಿದರು, ಮರುದಿನ ಕಣ್ಣನ್ನೇ ದಾನ ಮಾಡಿದರು: ರಮೇಶ್‌ ಅರವಿಂದ್‌
*  ಪುನೀತ್‌ ರಾಜಕುಮಾರ್‌ ನಿಧನಕ್ಕೆ ಶ್ರದ್ಧಾಂಜಲಿ 
*  ಅಪ್ಪುವಿನ ನಗುಮುಖ ನೆನೆದರೆ ಮನಸ್ಸಿಗೆ ನೋವಾಗುತ್ತದೆ

Ramesh Aravind Talks Over Puneeth Rajkumar grg
Author
Bengaluru, First Published Nov 7, 2021, 8:29 AM IST

ಬೆಂಗಳೂರು(ನ.07):  ‘ಹಿಂದಿನ ದಿನ ಕಣ್ಣಲ್ಲಿ ಕಣ್ಣಿಟ್ಟು 2 ಗಂಟೆಗಳ ಕಾಲ ಮಾತನಾಡಿದ ವ್ಯಕ್ತಿ ಮರುದಿನ ಕಣ್ಣನ್ನೇ ದಾನ ಮಾಡಿದರು ಅಂದರೆ ನಂಬೋಕಾಗ್ತಿಲ್ಲ’ ಎಂದು ನಟ ರಮೇಶ್‌ ಅರವಿಂದ್‌(Ramesh Aravind) ಭಾವುಕವಾಗಿ ಹೇಳಿದ್ದಾರೆ.

ರಮೇಶ್‌ ಅರವಿಂದ್‌ ನಿರ್ದೇಶಿಸಿ ನಟಿಸಿರುವ ‘100’ ಚಿತ್ರದ ಸುದ್ದಿಗೋಷ್ಠಿಗೂ ಮುನ್ನ ಪುನೀತ್‌ ರಾಜಕುಮಾರ್‌(Puneeth Rajkumar) ಅವರ ನಿಧನಕ್ಕೆ(Death) ಶ್ರದ್ಧಾಂಜಲಿ ಸಲ್ಲಿಸಲಾಯಿತು. ಈ ವೇಳೆ ಮಾತನಾಡಿದ ಅವರು, ‘ಹಿಂದಿನ ದಿನ ಪುನೀತ್‌ ಸಾಂದರ್ಭಿಕವಾಗಿ ಮಾತನಾಡುತ್ತಾ, ಬೆಳಕು ಹೋದ ಮೇಲೆ ರಾತ್ರಿ ಬರಲೇಬೇಕಲ್ವಾ ಅಂದಿದ್ದರು. ಇದಕ್ಕೆ ಕಾಕತಾಳೀಯ ಅನ್ನಬೇಕೋ, ಬೇರೆ ಥರ ಅರ್ಥ ಕಲ್ಪಿಸಬೇಕೋ ಗೊತ್ತಾಗ್ತಿಲ್ಲ’ ಎಂದು ನೊಂದು ನುಡಿದರು.

Bengaluru| ಎಲ್ಲೆಂದರಲ್ಲಿ ಪುನೀತ್‌ ಪ್ರತಿಮೆ ಸ್ಥಾಪಿಸದಂತೆ ಬಿಬಿಎಂಪಿ ಸೂಚನೆ

‘ಬಹಳ ಹಿಂದೆ ಪುನೀತ್‌ ಒಂದು ಕೆಂಪು ಚೇರ್‌ನಲ್ಲಿ ಕೂತು ಅವರ ಕತೆ ಹೇಳಿದ್ದರು. ಆಮೇಲೆ ಪುನೀತ್‌ ಮೊದಲ ಸಿನಿಮಾದ(Movie) ಸಕ್ಸಸ್‌ ಮೀಟ್‌ನಲ್ಲಿ ರಜನಿ, ನಾನು ಎಲ್ಲ ಭಾಗವಹಿಸಿದ್ದು, ಫ್ಯಾಮಿಲಿ ಜೊತೆ ಕಳೆದ ಕ್ಷಣಗಳೆಲ್ಲ ಸಾಕಷ್ಟಿವೆ. ಆದರೆ ಎಲ್ಲಕ್ಕಿಂತ ಹೆಚ್ಚಾಗಿ ಅವರನ್ನು ಕಳೆದುಕೊಳ್ಳೋದಕ್ಕೂ ಹಿಂದಿನ ದಿನ ಗುರುಕಿರಣ್‌(Gurukiran) ಮನೆಯಲ್ಲಿ ಜೊತೆಯಾಗಿ ಕಳೆದ ಕ್ಷಣಗಳು, ಅಲ್ಲಿ ಆಡಿದ ಮಾತುಗಳು ನನ್ನನ್ನು ಹೆಚ್ಚು ಕಾಡುತ್ತವೆ. ಅವತ್ತು ಎರಡು ಗಂಟೆಗಳ ಕಾಲ ಕಣ್ಣಲ್ಲಿ ಕಣ್ಣಿಟ್ಟು ಮಾತನಾಡಿದ ವ್ಯಕ್ತಿ ಮರುದಿನ ಕಣ್ಣುಗಳನ್ನೇ ದಾನ ಮಾಡಿದರು ಅಂದರೆ ಈಗಲೂ ನನಗೆ ನಂಬಲು ಆಗುತ್ತಿಲ್ಲ. ಅಂದು ನಾನು ಬುದ್ಧನ ಮಾತನ್ನು ಹೇಳುತ್ತಿದ್ದೆ. ಬುದ್ಧ ಹೇಳುತ್ತಾನೆ, ಬದುಕಿನಲ್ಲಿ ನಾವು ಇಷ್ಟಪಡುವ ಎಲ್ಲಾ ವಿಷಯಗಳನ್ನು ಒಂದಲ್ಲ ಒಂದು ದಿನ ಕಳೆದುಕೊಳ್ಳಲೇಬೇಕಾಗುತ್ತೆ. ಚೆಂದದ ಕೂದಲು, ಸುಂದರ ಹಲ್ಲುಗಳು ಎಲ್ಲ ಬಿದ್ದುಹೋಗುತ್ತವೆ. ಯೌವನ ಅಂತ ಸಂಭ್ರಮ ಪಡುತ್ತೀವಲ್ಲಾ, ಆಗ ಮುಪ್ಪು ಕಾಲಿಂಗ್‌ ಬೆಲ್‌ ಹೊಡಿಯೋಕೆ ಕಾಯ್ತಾ ಇರುತ್ತೆ ಅಂದಿದ್ದೆ. ಆಗ ಅಪ್ಪು ಹೇಳಿದರು, ‘ಹೌದು ಸಾರ್‌, ಬೆಳಕು ಹೋದ ಮೇಲೆ ರಾತ್ರಿ ಬರಲೇಬೇಕಲ್ವಾ, ಅದೇ ಅಲ್ವಾ ಜೀವನ’ ಅಂತ. ಅದರ ಮರುದಿನವೇ ಆ ಬೆಳಕು ಹೋಗುತ್ತೆ, ಅಪ್ಪುನ ಕಳೆದುಕೊಳ್ಳುತ್ತೇವೆ ಅಂದರೆ ಏನು ಹೇಳೋದು ಇದಕ್ಕೆ..’ ಎಂದು ರಮೇಶ್‌ ಭಾವುಕವಾಗಿ(Emotion) ನುಡಿದರು.

‘ಒಬ್ಬ ವ್ಯಕ್ತಿ ನಮಗೆ ಇಷ್ಟವಾಗ್ತಾರೆ ಅಂದರೆ ಯಾವುದೋ ಒಂದು ಕಾರಣಕ್ಕೆ ಇಷ್ಟವಾಗೋದಲ್ಲ, ಅದಕ್ಕೆ ಹಲವು ಕಾರಣಗಳಿರುತ್ತವೆ. ಹಾಗೇ ಅಪ್ಪು ನಮಗೆ ಇಷ್ಟವಾಗೋದಕ್ಕೋ ಅವರ ನಟನೆ, ಡ್ಯಾನ್ಸ್‌(Dance), ವಿನಯ, ಪ್ರೀತಿ, ಸರಳತೆ, ಮನೆತನ ಎಲ್ಲವೂ ಕಾರಣ. ಅಂಥಾ ಅಪ್ಪುವಿಗೆ(Appu), ಅವರ ನಗುವಿಗೆ, ಜೊತೆಗೆ ಕಳೆದ ನೆನಪುಗಳಿಗೆ ನಮನಗಳು’ ಎಂದು ರಮೇಶ್‌ ನುಡಿದರು.

ಡಾ.ರಮಣ ನಿರ್ಲಕ್ಷ್ಯದಿಂದ ಪುನೀತ್‌ ನಿಧನ?: ಗೊಂದಲ ನಿವಾರಿಸದಿದ್ರೆ ನಾವೇ ವಿಚಾರಿಸಿಕೊಳ್ತೇವೆ ಎಂದ ಫ್ಯಾನ್ಸ್‌

ನಿರ್ಮಾಪಕ(Producer) ಎಂ.ರಮೇಶ್‌ ರೆಡ್ಡಿ(M Ramesh Reddy) ಮಾತನಾಡಿ, ‘ಸಲಗ(Salaga) ಈವೆಂಟ್‌ನಲ್ಲಿ ಅಪ್ಪು ಜೊತೆಗೆ ಕೂತಿದ್ದೆ. ಅವರ ಜೊತೆಗೆ ಒಂದು ಸಿನಿಮಾ ಮಾಡುವ ಕನಸಿತ್ತು. ಈಗ ಅಪ್ಪುವಿನ ನಗುಮುಖ ನೆನೆದರೆ ಮನಸ್ಸಿಗೆ ನೋವಾಗುತ್ತದೆ’ ಎಂದರು.

ಪುನೀತ್‌ ಅವರ ನಾಲ್ಕು ಚಿತ್ರಗಳಿಗೆ ಛಾಯಾಗ್ರಹಣ(Photography) ಮಾಡಿದ ಸಿನಿಮಾಟೋಗ್ರಾಫರ್‌(Cinematographer) ಸತ್ಯ ಹೆಗಡೆ, ‘ಪುನೀತ್‌ ಅವರ ಅಭಿಮಾನಿಗಳೇ ನಮ್ಮನೆ ದೇವ್ರು ಹಾಡನ್ನು 14 ಕ್ಯಾಮರಾ ಬಳಸಿ ಶೂಟ್‌ ಮಾಡಿದ್ದು ಅವಿಸ್ಮರಣೀಯ ನೆನಪು. ಶೂಟಿಂಗ್‌ನಲ್ಲಿ(Shooting) ಅವರಿರುವ ಪ್ರತಿ ಗಳಿಗೆಯೂ ಸಂಭ್ರಮದ್ದೇ ಆಗಿರುತ್ತಿತ್ತು. ಒಂದು ತಿಂಗಳ ಹಿಂದಷ್ಟೇ ಅವರ ಜೊತೆಗೆ ಅರ್ಧ ದಿನ ಕಳೆದಿದ್ದೆ. ಅವರ ಈಗಿನ ಗೈರುಹಾಜರಿ ನನ್ನ ಊಹೆಗೂ ನಿಲುಕದ್ದು’ ಎಂದರು.
 

Follow Us:
Download App:
  • android
  • ios