ಇತ್ತೀಚೆಗೆ ಕೃಷಿ ತಾಪಂಡ, "ಈಗ ನಾನು ದುಃಖವನ್ನು ಹೊತ್ತುಕೊಂಡು ಬದುಕುವುದಲ್ಲ, ಅದರ ಜೊತೆಗೆ ಬದುಕುವುದನ್ನು ಕಲಿತಿದ್ದೇನೆ" ಎಂದು ಹೃದಯ ಮುರಿದಿರುವ ಎಮೋಜಿಯೊಂದಿಗೆ ಪೋಸ್ಟ್ ಹಂಚಿಕೊಂಡಿದ್ದರು.

ಆತ್ಮೀಯ ಗೆಳೆಯ ವೈಶಾಖ್ ಅಗಲಿಕೆಯ ನೋವಿನಿಂದ ಇನ್ನೂ ಹೊರಬರಲಾಗದ ನಟಿ ಕೃಷಿ ತಾಪಂಡ, ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಭಾವುಕ ಪೋಸ್ಟ್ ಮೂಲಕ ಮತ್ತೊಮ್ಮೆ ಅಭಿಮಾನಿಗಳ ಗಮನ ಸೆಳೆದಿದ್ದರು. ತಮ್ಮ ಮನಸ್ಥಿತಿಯನ್ನು ತೆರೆದಿಟ್ಟಿದ್ದ ನಟಿಗೆ ಇದೀಗ ಸ್ನೇಹಿತರು, ಅಭಿಮಾನಿಗಳು ಹಾಗೂ ಚಿತ್ರರಂಗದ ಹಲವರು ಧೈರ್ಯ ತುಂಬುತ್ತಿದ್ದಾರೆ.

ಇತ್ತೀಚೆಗೆ ಕೃಷಿ ತಾಪಂಡ, "ಈಗ ನಾನು ದುಃಖವನ್ನು ಹೊತ್ತುಕೊಂಡು ಬದುಕುವುದಲ್ಲ, ಅದರ ಜೊತೆಗೆ ಬದುಕುವುದನ್ನು ಕಲಿತಿದ್ದೇನೆ" ಎಂದು ಹೃದಯ ಮುರಿದಿರುವ ಎಮೋಜಿಯೊಂದಿಗೆ ಪೋಸ್ಟ್ ಹಂಚಿಕೊಂಡಿದ್ದರು. ಈ ಸಾಲುಗಳು ಅವರ ಮನದಾಳದ ನೋವನ್ನು ಪ್ರತಿಬಿಂಬಿಸುತ್ತಿದ್ದರಿಂದ, ಸಾವಿರಾರು ಅಭಿಮಾನಿಗಳು ಕಾಮೆಂಟ್‌ಗಳ ಮೂಲಕ ಸಾಂತ್ವನ ಹೇಳಿ ಬೆಂಬಲ ಸೂಚಿಸಿದ್ದರು.

ರಾಧಾ ರಮಣ ನಟಿ ಕಾವ್ಯ ಗೌಡ ಭಾವುಕ ಸಂದೇಶ

ಕಿರುತೆರೆ ನಟಿ ಕಾವ್ಯ ಗೌಡ ಕೂಡ ಕೃಷಿ ತಾಪಂಡ ಅವರ ಪೋಸ್ಟ್‌ಗೆ ಪ್ರತಿಕ್ರಿಯಿಸಿ, ಧೈರ್ಯ ತುಂಬುವ ಸಂದೇಶ ಬರೆದಿದ್ದಾರೆ. "ಕೃಷಿ, ಈಗ ಎಲ್ಲವೂ ತುಂಬಾ ಭಾರವಾಗಿ ಅನಿಸುತ್ತಿದೆ ಎಂಬುದು ನನಗೆ ಗೊತ್ತು. ಆದರೆ ಕಷ್ಟದ ದಿನಗಳು ಶಾಶ್ವತವಲ್ಲ. ಸಮಯದೊಂದಿಗೆ ಎಲ್ಲವೂ ನಿಧಾನವಾಗಿ ಬದಲಾಗುತ್ತದೆ. ಧೈರ್ಯವಾಗಿ ಮುಂದೆ ಹೆಜ್ಜೆ ಇಡು. ಮೊದಲಿಗೆ ನಿನ್ನ ಬಗ್ಗೆ ನೀನೇ ಕಾಳಜಿ ವಹಿಸು," ಎಂದು ಅವರು ಬರೆದಿದ್ದಾರೆ.

ಮುಂದುವರಿದು, "ಹೀಲಿಂಗ್ ಎನ್ನುವುದು ಒಂದೇ ದಿನದಲ್ಲಿ ಆಗುವುದಿಲ್ಲ. ಆದರೆ ಮುಂದೆ ಇಡುವ ಪ್ರತಿಯೊಂದು ಸಣ್ಣ ಹೆಜ್ಜೆಯೂ ಬಹಳ ಮಹತ್ವದ್ದು. ಭರವಸೆ ಕಳೆದುಕೊಳ್ಳಬೇಡ. ನೀನು ತುಂಬಾ ಗಟ್ಟಿಯಾದ ವ್ಯಕ್ತಿ. ಮಾತನಾಡಬೇಕು ಅನಿಸಿದಾಗ ನಾನು ಯಾವಾಗಲೂ ನಿನ್ನ ಜೊತೆಯಲ್ಲಿದ್ದೇನೆ. ಸಮಯವೇ ಎಲ್ಲ ಗಾಯಗಳಿಗೂ ಉತ್ತರ ನೀಡುತ್ತದೆ. ಸಾಯಿ ರಾಮ್," ಎಂದು ಕಾವ್ಯ ಗೌಡ ತಮ್ಮ ಸಂದೇಶದಲ್ಲಿ ಉಲ್ಲೇಖಿಸಿದ್ದಾರೆ.

ಕಾವ್ಯ ಗೌಡಗೆ ಮೆಚ್ಚುಗೆ

ಕಾವ್ಯ ಗೌಡ ಅವರ ಈ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆದಿದ್ದು, ಅಭಿಮಾನಿಗಳು ಅವರ ಸಂವೇದನಾಶೀಲತೆಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಸಂಕಷ್ಟದ ಸಮಯದಲ್ಲಿ ಸ್ನೇಹಿತೆಯ ಪರವಾಗಿ ನಿಂತು ಧೈರ್ಯ ತುಂಬಿದ ಕಾವ್ಯ ಗೌಡ ಅವರ ನಡೆಗೆ ಹಲವರು ಪ್ರಶಂಸೆ ವ್ಯಕ್ತಪಡಿಸಿದ್ದು, ಕೃಷಿ ತಾಪಂಡ ಕೂಡ ಈ ನೋವಿನ ಸಮಯವನ್ನು ಧೈರ್ಯದಿಂದ ಎದುರಿಸಲಿ ಎಂದು ಹಾರೈಸುತ್ತಿದ್ದಾರೆ.