Asianet Suvarna News Asianet Suvarna News

ಕಾಂತಾರ 2: ರಿಷಬ್ ಶೆಟ್ಟಿ ತಂದೆಯಾಗಿ ಮೋಹನ್ ಲಾಲ್? ಇಲ್ಲಿದೆ ಸತ್ಯ

ಕಾಂತಾರ 2 ಸಿನಿಮಾದಲ್ಲಿ ಮೋಹನ್ ಲಾಲ್  ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಈ ಮಾತು ಎಷ್ಟು ಸತ್ಯ ಎನ್ನುವ ಮಾಹಿತಿ ಇಲ್ಲಿದೆ ನೋಡಿ.. 

Kantara 2 Mohanlal to play Rishab Shettys father Heres the truth sat
Author
First Published Oct 4, 2024, 6:52 PM IST | Last Updated Oct 4, 2024, 6:52 PM IST

ಬೆಂಗಳೂರು (ಅ,04): ಇಡೀ ದೇಶವೇ ಹೆಮ್ಮೆ ಪಡುವಂತೆ ಮಾಡಿದ ಕನ್ನಡ ಚಿತ್ರರಂಗದ ಸಿನಿಮಾಗಳಲ್ಲಿ ಕಾಂತಾರ ಸಿನಿಮಾವೂ ಒಂದು. ಈ ಚಿತ್ರದ ನಾಯಕ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿಗೆ ಉತ್ತಮ ನಟನೆಗಾಗಿ ರಾಷ್ಟ್ರ ಪ್ರಶಸ್ತಿ ಕೂಡ ಪಡೆದಿದ್ದಾರೆ. ಇದರ ಬೆನ್ನಲ್ಲೇ ಕಾಂತಾರ ಸೀಕ್ವೆಲ್ ಬಗ್ಗೆ ಭಾರೀ ನಿರೀಕ್ಷೆಗಳು ಮೂಡಿದೆ. ಕಾಂತಾರ-2ರಲ್ಲಿ ಮೋಹನ್ ಲಾಲ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಅನ್ನೋ ಸುದ್ದಿ ಹರಿದಾಡ್ತಿದೆ.

ರಿಷಬ್ ಶೆಟ್ಟಿ ಅವರ ತಂದೆಯ ಪಾತ್ರದಲ್ಲಿ ಮೋಹನ್ ಲಾಲ್ ಕಾಣಿಸಿಕೊಳ್ಳಲಿದ್ದಾರೆ ಅನ್ನೋ ಮಾಹಿತಿ ಇದೆ. ಆದರೆ, ಈ ಬಗ್ಗೆ ಚಿತ್ರತಂಡ ಇನ್ನೂ ಅಧಿಕೃತವಾಗಿ ಏನನ್ನೂ ಹೇಳಿಲ್ಲ. ಕಾಂತಾರ ಸಿನಿಮಾದ ಪ್ರಿಕ್ವೆಲ್ ಆಗಿ ರಿಷಬ್ ಶೆಟ್ಟಿ ಈ ಚಿತ್ರ ನಿರ್ದೇಶಿಸಲಿದ್ದಾರೆ. ಜಯರಾಮ್ ಕೂಡ ಕಾಂತಾರ 2ರಲ್ಲಿ ನಟಿಸುತ್ತಿದ್ದಾರೆ ಅನ್ನೋ ಸುದ್ದಿ ಕೂಡ ಹರಿದಾಡುತ್ತಿದೆ. ಆದರೆ, ಕಾಂತಾರ ಸಿನಿಮಾದಲ್ಲಿ ಈವರೆಗೆ ಮೂರು ದೃಶ್ಯಗಳಲ್ಲಿ ಮಾತ್ರ ರಿಷಭ್ ಶೆಟ್ಟಿ ತಂದೆ ಪಾತ್ರಧಾರಿಯಾಗಿ ಡಬಲ್ ಆಕ್ಟಿಂಗ್ ನೋಡಿದ್ದೇವೆ. ಆದರೆ, ಇದೀಗ ಪ್ರೀಕ್ವೆಲ್‌ನಲ್ಲಿ ತಂದೆ-ತಾಯಿ ಇಬ್ಬರ ಕಥೆಯನ್ನು ಹೇಳಬೇಕಾದ್ದರಿಂದ ಬೇರೊಬ್ಬ ಸ್ಟಾರ್ ನಟನನ್ನು ತೋರಿಸಲು ಚಿತ್ರತಂಡ ಯೋಜನೆ ರೂಪಿಸಿಕೊಂಡಿದೆ ಎಂದು ಹೇಳಲಾಗುತ್ತಿದೆ. ಈ ಸಂಬಂಧಪಟ್ಟಂತೆ ಸಾಮಾಜಿಕ ಜಾಲತಾಣದಲ್ಲಿಯೂ ಪೋಸ್ಟ್‌ಗಳು ಹರಿದಾಡುತ್ತಿವೆ. ಈ ಬಗ್ಗೆ ಚಿತ್ರತಂಡ ಸ್ಪಷ್ಟನೆ ನೀಡಬೇಕಿದೆ.

ಬಾಲಿವುಡ್ ಸಿನಿಮಾದಲ್ಲಿ ರಿಷಬ್ ಶೆಟ್ಟಿ: ಬಾಲಿವುಡ್ ಪ್ರವೇಶದ ಬಗ್ಗೆ ರಿಷಬ್ ಶೆಟ್ಟಿ ಹಿಂದೆ ನೀಡಿದ್ದ ಹೇಳಿಕೆ ಮತ್ತೆ ಚರ್ಚೆಗೆ ಗ್ರಾಸವಾಗಿದೆ. ಹಿಂದಿ ಮತ್ತು ಇತರೆ ಭಾಷೆಗಳಿಂದ ಸಿನಿಮಾ ಆಫರ್ ಗಳು ಬರ್ತಿವೆ. ಆದರೆ, ನಾನು ಕನ್ನಡ ಸಿನಿಮಾಗಳಿಗೆ ಮಾತ್ರ ಬದ್ಧನಾಗಿರಲು ಬಯಸುತ್ತೇನೆ ಅಂತ ಹೇಳಿದ್ದರು. ಕನ್ನಡ ಪ್ರೇಕ್ಷಕರಿಗೆ ನಾನು ಚಿರಋಣಿ. ಹಾಗಾಗಿ ಕನ್ನಡದಲ್ಲೇ ಸಿನಿಮಾ ಮಾಡಬೇಕು ಅನ್ನೋದು ನನ್ನ ಆಸೆ. ನಾನು ಬೇರೆ ಭಾಷೆಗಳಲ್ಲಿ ಡಬ್ ಮಾಡಬಲ್ಲೆ. ಹಿಂದಿ ಕೂಡ ಚೆನ್ನಾಗಿ ಮಾತನಾಡ್ತೀನಿ. ಮುಂಬೈ ಪ್ರೊಡಕ್ಷನ್ ಹೌಸ್ ನಲ್ಲಿ ಕೆಲಸ ಮಾಡಿದ್ದೇನೆ. ಇದೀಗ ಬಾಲಿವುಡ್ ಗೆ ಹೋಗುವ ಯಾವುದೇ ಯೋಚನೆ ಇಲ್ಲ ಅಂತ ರಿಷಬ್ ಶೆಟ್ಟಿ ಸ್ಪಷ್ಟಪಡಿಸಿದ್ದಾರೆ. ಕಾಂತಾರ ಸಿನಿಮಾ 2022ರ ಸೆಪ್ಟೆಂಬರ್ ನಲ್ಲಿ ತೆರೆಕಂಡಿತ್ತು. ಸಾಮಾನ್ಯ ಕನ್ನಡ ಚಿತ್ರವಾಗಿ ಬಿಡುಗಡೆಯಾದ ಕಾಂತಾರ.. ಮೌತ್ ಪಬ್ಲಿಸಿಟಿ ಮೂಲಕ ಇಡೀ ದೇಶಾದ್ಯಂತ ಮೆಚ್ಚುಗೆ ಗಳಿಸಿತ್ತು. 'ಕೆಜಿಎಫ್' ನಿರ್ಮಾಪಕರು ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ನಡಿ ವಿಜಯ್ ಕಿರಗಂದೂರ್ ಈ ಚಿತ್ರವನ್ನ ನಿರ್ಮಿಸಿದ್ದರು.

ಇದನ್ನೂ ಓದಿ: ಶಿವಣ್ಣನ ಕಾಲಿಗೆ ಬಿದ್ದ ಧೃವ ಸರ್ಜಾ: ಮಾರ್ಟಿನ್‌ಗಾಗಿ ಬೈರತಿ ರಣಗಲ್ ಮುಂದೂಡಿಕೆ!

ಹೊಸ ಪ್ರಯೋಗಕ್ಕೆ ಮುಂದಾದ ರಿಷಬ್ ಶೆಟ್ಟಿ: ತಾವು ನಟಿಸಿ, ನಿರ್ದೇಶನ ಮಾಡಿದ್ದ ಕಾಂತಾರ ಸಿನಿಮಾದಲ್ಲಿ ಒಂದು ಪ್ರದೇಶಕ್ಕೆ ಸೀಮಿತವಾಗಿದ್ದ ಆಚರಣೆಯ ಬಗ್ಗೆ ಕಣ್ಣಿಗೆ ಕಟ್ಟುವಂತೆ ತೋರಿಸಿದ್ದ ರಿಷಬ್‌ ಶೆಟ್ಟಿ.. ಇದೀಗ ಕಾಂತಾರ ಪ್ರಿಕ್ವೆಲ್ ಸಿನಿಮಾದಲ್ಲಿ ಹೊಸ ಬಗೆಯ ಹೋರಾಟ ತೋರಿಸಲು ಮುಂದಾಗಿದ್ದಾರೆ. ರಿಷಬ್ ಶೆಟ್ಟಿ ಇದೀಗ ಕಾಂತಾರ ಪ್ರಿಕ್ವೆಲ್ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾದಲ್ಲಿ ಕಲರಿಪಯಟ್ಟು ಹೋರಾಟದ ಶೈಲಿಯನ್ನ ತೋರಿಸಲಿದ್ದಾರೆ ಅನ್ನೋ ಮಾತು ಕೇಳಿ ಬರ್ತಿದೆ.  ಈ ಬಗ್ಗೆ ಈಗಾಗಲೇ ಹಲವು ಫೋಟೋಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು.

ಈ ಕಲರಿಪಯಟ್ಟು ಅಂದ್ರೆ ಏನು?: ದಿ ಮಾರ್ಷಲ್ ಆರ್ಟ್ ಆಫ್ ಕಲರಿಪಯಟ್ಟು ಶತಮಾನಗಳಿಂದ ಕೇರಳದಲ್ಲಿ ಬೇರೂರಿರುವ ಒಂದು ವಿಶಿಷ್ಟವಾದ ದೈಹಿಕ ಕಸರತ್ತು. ಇದು ಕೂಡ ಅಳಿವಿನಂಚಿನಲ್ಲಿರುವ ವ್ಯಾಯಾಮ ಹಾಗೂ ವೈಯಕ್ತಿಕ ಸಂರಕ್ಷಣಾ ಕಲೆ. ಆರ್ಯ, ದ್ರಾವಿಡ ಜನಾಂಗ ಬಳಸುತ್ತಿದ್ದ ಅತ್ಯಂತ ಪ್ರಾಚೀನವಾದ ಆತ್ಮ ರಕ್ಷಣಾ ಕಲೆಯಾಗಿದೆ. ಒಂದು ಕಾಲದಲ್ಲಿ ಈ ಕಲೆ ಬಹಳ ಪ್ರಸಿದ್ಧಿಯಲ್ಲಿತ್ತು. ರಾಜರು ಇದನ್ನ ವಿಶೇಷವಾಗಿ ಪೋಷಿಸುತ್ತಿದ್ದರು ಅನ್ನೋ ಮಾಹಿತಿ ಇದೆ.

ಇದನ್ನೂ ಓದಿ: ಮಾರ್ಟಿನ್ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ ಡೈರೆಕ್ಟರ್: ಸಿನಿಮಾ ರಿಲೀಸ್‌ಗಿಲ್ಲ ಟೆನ್ಷನ್!

ನಟ-ನಿರ್ದೇಶಕ ರಿಷಬ್ ಶೆಟ್ಟಿ ಕಾಂತಾರ ಪ್ರಿಕ್ವೆಲ್ ಸಿನಿಮಾದಲ್ಲಿ ಈ ಕಲರಿಪಯಟ್ಟು ತೋರಿಸಲು ಹೊರಟಿದ್ದಾರೆ. ಇದಕ್ಕಾಗಿ ಕೇರಳದಲ್ಲಿರುವ ಒಬ್ಬ ತಜ್ಞರಿಂದ ರಿಷಬ್ ಶೆಟ್ಟಿ ಈಗಲೇ ಕಲರಿಪಯಟ್ಟು ಫೈಟ್ ಕಲಿತಿದ್ದಾರೆ ಎನ್ನುವ ಮಾತು ಕೇಳಿ ಬರ್ತಿದೆ. ಎಷ್ಟೇ ಕಷ್ಟವಾದರೂ ಈ ಕಲೆಯನ್ನ ರಿಷಬ್ ಶೆಟ್ಟಿ ತುಂಬಾ ಇಷ್ಟಪಟ್ಟು ಕಲಿತಿದ್ದಾರಂತೆ. ಕಲರಿಪಯಟ್ಟು ಫೈಟ್ ಕಲಿಯುವ ವಿಡಿಯೋವನ್ನ ರಿಷಬ್ ಶೆಟ್ಟಿ ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಕಾಂತಾರ ಪ್ರಿಕ್ವೆಲ್ ಚಿತ್ರೀಕರಣ ಈಗಾಗಲೇ ಬಹುತೇಕ ಮುಗಿದಿದ್ದು, ಶೀಘ್ರದಲ್ಲೇ ಚಿತ್ರ ತೆರೆಗೆ ಬರಲಿದೆ.

Latest Videos
Follow Us:
Download App:
  • android
  • ios