ಸಿನಿಮಾಗಾಗಿ ತನ್ನನ್ನೇ ಅರ್ಪಿಸಿಕೊಳ್ಳುವ ಅಭಿಜಾತ ಕಲಾವಿದ ಧ್ರುವ ಸರ್ಜಾಗೆ ಹ್ಯಾಪಿ ಹುಟ್ಟುಹಬ್ಬ
ಯಾರೇ ಹತ್ತಿರ ಹೋದರೂ ಅವರನ್ನು ನೋಯಿಸದೆ ಪೋಟೋಗೆ ಪೋಸ್ ಕೊಟ್ಟು ನಮಸ್ಕರಿಸಿ ಕಳುಹಿಸುವ ಅಭಿಮಾನಿಗಳ ಸ್ಟಾರ್, ಮೂರು ಸೂಪರ್ಹಿಟ್ ಸಿನಿಮಾ ಕೊಟ್ಟರೂ ಅದೇ ವಿನಯ ಕಾಪಾಡಿಕೊಂಡಿರುವ ಸರಳ ಜೀವ, ಪಾತ್ರಕ್ಕಾಗಿ ಎಂಥಾ ಬದಲಾವಣೆಯನ್ನೂ ಮಾಡಬಲ್ಲ ಶ್ರದ್ಧಾವಂತ ಕಲಾವಿದ ಧ್ರುವ ಸರ್ಜಾ ಹುಟ್ಟುಹಬ್ಬ ಇಂದು.
‘ಅಭಿಮಾನಿಗಳೇ ನಮ್ ಅನ್ನದಾತರು. ಅಭಿಮಾನಿಗಳನ್ನು ಮನೆಯಬಳಿ ಬರಬೇಡಿ ಎನ್ನಲು ಮನಸ್ಸಿಲ್ಲ. ನೀವು ಇರುವ ಕಡೆಯಿಂದಲೇ ಹಾರೈಸಿ. ಅದೇ ನನಗೆ ಶ್ರೀರಕ್ಷೆ’ ಎಂದು ನೋವಿನಲ್ಲೇ ಹೇಳಿಕೊಂಡಿರುವ ಧ್ರುವ ಹುಟ್ಟುಹಬ್ಬದಂದು ದೊಡ್ಡ ಸಂಭ್ರಮವಿಲ್ಲ.
ಮೌನ ಮುರಿದ ಧ್ರುವಾ ಸರ್ಜಾ; ಇಂದ್ರಜಿತ್ಗೆ ಖಡಕ್ ವಾರ್ನ್
ಧ್ರುವ ಚಿತ್ರರಂಗಕ್ಕೆ ಬಂದಿದ್ದು 2012ರಲ್ಲಿ. ಅಲ್ಲಿಂದ ಇಲ್ಲಿಯವರೆಗೂ ನಾಯಕನಾಗಿ ನಾಲ್ಕು ಚಿತ್ರಗಳಲ್ಲಿ ನಟಿಸಿದ್ದಾರೆ. ಈ ಪೈಕಿ ಮೂರು ಚಿತ್ರಗಳೂ ಸೂಪರ್ ಹಿಟ್. ‘ಯಶಸ್ಸನ್ನು ಹೇಗೆ ಬೇಕೋ ಹಾಗೆ ಬಳಸಿಕೊಂಡಿದ್ದರೆ 30 ಚಿತ್ರಗಳಿಗೆ ಹೀರೋ ಆಗುತ್ತಿದ್ದರು ಧ್ರುವ. ಕ್ವಾಲಿಟಿ ಮತ್ತು ಕ್ವಾಂಟಿಟಿ ಇವೆರಡರಲ್ಲಿ ಕ್ವಾಲಿಟಿಗೆ ಮೊದಲ ಸ್ಥಾನ ಕೊಡುವ ವ್ಯಕ್ತಿ ಧ್ರುವ ಸರ್ಜಾ’ ಎಂದು ಚಿತ್ರರಂಗದಿಂದ ಹೇಳಿಸಿಕೊಂಡ ನಟನ ಬಗ್ಗೆ ಅವರ ಆಪ್ತರು ಹೇಳಿಕೊಂಡ ಮಾತುಗಳು ಇಲ್ಲಿದೆ.
ಯಾರನ್ನೂ ನೋಯಿಸದ ಆತ್ಮೀಯ
ಚೇತನ್ ಕುಮಾರ್, ನಿರ್ದೇಶಕ
ಧ್ರುವ ಸರ್ಜಾ ಶಕ್ತಿ
-ಯಾವುದೇ ಚಿತ್ರದ ಕತೆ ಕೇಳಿದ ಕೂಡಲೇ ತನ್ನ ಪಾತ್ರದ ಬಗ್ಗೆ ತಾನೇ ಪ್ರತ್ಯೇಕವಾಗಿ ಬರೆದುಕೊಂಡು ಪೂರ್ವ ತಯಾರಿ ಮಾಡಿಕೊಂಡು, ಅದನ್ನು ನಿರ್ದೇಶಕರ ಮುಂದೆ ಮಾಡಿ ತೋರಿಸುತ್ತಾರೆ.
- ಅತ್ಯಂತ ಬದ್ಧತೆ ತೋರುವ ನಟ. ಒಂದು ಚಿತ್ರ ಒಪ್ಪಿಕೊಂಡರೆ ಆ ಸಿನಿಮಾ ಮುಗಿಸುವ ತನಕ ಮತ್ತೊಂದು ಚಿತ್ರದ ಕತೆ ಕೂಡ ಕೇಳಲ್ಲ. ಒಂದಲ್ಲಾ ಎರಡು ವರ್ಷ ಆದರೂ ಒಪ್ಪಿರುವ ಸಿನಿಮಾ ಮುಗಿಸಿಯೇ ಮುಂದಿನ ಚಿತ್ರಕ್ಕೆ ಹೋಗುತ್ತಾರೆ.
ನನಗೇಕಿಷ್ಟ?
- ಯಾರೇ ಮನೆವರೆಗೂ ಹೋದರೂ ಅವರನ್ನು ಆತ್ಮೀಯವಾಗಿ ಮಾತನಾಡಿಸುತ್ತಾರೆ. ಅಭಿಮಾನಿಗಳು ಮೈ ಮೇಲೆ ಬಿದ್ದು ಮುತ್ತು ಕೊಟ್ಟರೂ ಬೇಸರ ಮಾಡಿಕೊಳ್ಳದ ವ್ಯಕ್ತಿ.
- ಸಿಕ್ಕ ಯಶಸ್ಸನ್ನು ಬಳಸಿಕೊಂಡು ಬರುವ ಎಲ್ಲ ಚಿತ್ರಗಳನ್ನು ಒಪ್ಪಿಕೊಂಡು ಹಣ ಮಾಡುವ ಉದ್ದೇಶ ಇಲ್ಲ. ಸಿನಿಮಾವನ್ನು ಮಿಸ್ಯೂಸ್ ಮಾಡಿಕೊಳ್ಳದ ವ್ಯಕ್ತಿ.
ಹಚ್ಚಿಕೊಂಡರೆ ಯಾವತ್ತೂ ಮರೆಯದ ಭಾವುಕ ಜೀವಿ
ನಂದಕಿಶೋರ್, ನಿರ್ದೇಶಕ
ಧ್ರುವ ಸರ್ಜಾ ಪ್ಲಸ್ ಪಾಯಿಂಟ್ಸು
- ತನ್ನ ಜತೆ ಸಿನಿಮಾ ಮಾಡಲು ಬರುವ ನಿರ್ದೇಶಕರನನ್ನು ಸಂಪೂರ್ಣವಾಗಿ ನಂಬುತ್ತಾರೆ. ಪ್ರತಿ ಚಿತ್ರಕ್ಕೂ ಹೊಸದಾಗಿ ತೆರೆ ಮೇಲೆ ಕಾಣಿಸಿಕೊಳ್ಳಬೇಕು ಎನ್ನುವ ಬದ್ಧತೆ. ‘ನೀವು ಹೇಳಿದಂತೆ ನಾನು’ ಎನ್ನುವ ನಿರ್ದೇಶಕನ ನಟ.
- ಪಾತ್ರಕ್ಕಾಗಿ ಬಿಟ್ಟಿದ್ದ ಗಡ್ಡ, ಕೂದಲು ಕೂಡ ಕಟ್ ಮಾಡಿಸಿಕೊಳ್ಳದೆ ಹಸಮಣೆ ಏರುವಷ್ಟರ ಮಟ್ಟಿಗಿನ ಸಿನಿಮಾ ಮೋಹಿ.
- ಆಂಜನೇಯನ ಪರಮ ಭಕ್ತ. ಹನುಮಂತನ ಶಕ್ತಿ ಮತ್ತು ಸ್ವಭಾವ ಧ್ರುವ ಅವರಲ್ಲೂ ಕಾಣಬಹುದು.
ಪೊಗರು ಟೀಸರ್ ಸಾಂಗ್ ಶೂಟಿಂಗ್ ಸೆಟ್ ಹೇಗಿದೆ? Exclusive ವಿಡಿಯೋ!
ನಂಗ್ಯಾಕಿಷ್ಟ?
- ಮಗು ಮನಸ್ಸು. ಧ್ರುವ ಮತ್ತು ಮಗು ಬೇರೆ ಬೇರೆ ಅಲ್ಲ ಅನಿಸುತ್ತದೆ.
- ತುಂಬಾ ಭಾವುಕ ಜೀವಿ. ಯಾರನ್ನಾದರೂ ಹಚ್ಚಿಕೊಂಡರೆ ಕೊನೆವರೆಗೂ ಮರೆಯಲ್ಲ.
- ತಮ್ಮೊಂದಿಗೆ ಕೆಲಸ ಮಾಡುವ ನಿರ್ದೇಶಕರನ್ನೂ ಗೆಳೆಯರಂತೆ ನೋಡುವ ಸ್ನೇಹಜೀವಿ.
-ಕಪಟ, ಕಲ್ಮಶ ಇಲ್ಲ. ಯಾರೇ ಆಗಲೇ ತೆರೆದ ಮನಸ್ಸಿನಿಂದ ಮಾತನಾಡಿಸುತ್ತಾರೆ.
"
ಧ್ರುವ ಮಿತಿಗಳೇ ಇಲ್ಲದ ನಟ
- ಉದಯ್ ಮೆಹ್ತಾ, ನಿರ್ಮಾಪಕ
ಧ್ರುವ ಸರ್ಜಾ ಅವರನ್ನು ಹಾಕಿಕೊಂಡು ಬಿಗ್ ಬಜೆಟ್ ಕಮರ್ಷಿಯಲ್ ಸಿನಿಮಾ ಮಾಡುತ್ತಿದ್ದೇವೆ. ನಿರ್ದೇಶಕ ನಂದ ಕಿಶೋರ್ ನಿರ್ದೇಶನ ಮಾಡಲಿದ್ದಾರೆ. ಧ್ರುವ ಸರ್ಜಾ ಸಿನಿಮಾ ಅಂದರೆ ಮನರಂಜನೆಗೆ ಕೊರತೆ ಇರೋದಿಲ್ಲ. ನಮ್ಮ ಸಿನಿಮಾವೂ ಅದಕ್ಕೆ ಹೊರತಾಗಿಲ್ಲ. ಇದರಲ್ಲಿ ಆ್ಯಕ್ಷನ್ನೂ ಇದೆ, ಎಮೋಶನ್ನೂ ಇದೆ. ಫ್ಯಾಮಿಲಿಗೆ ಹತ್ತಿರ ಆಗೋ ಥರವೂ ಇದೆ. ಇದೊಂದು ಪಕ್ಕಾ ಧ್ರುವ ಸರ್ಜಾ ಸಿನಿಮಾ ಎನ್ನಲಡ್ಡಿಯಿಲ್ಲ.
ನವೆಂಬರ್ನಿಂದ ಶೂಟಿಂಗ್ ಶುರು ಆಗಲಿದೆ. ಕತೆ ಈಗಾಗಲೇ ರೆಡಿ ಆಗಿದೆ. ಸ್ಕಿ್ರಪ್ಟ್ ವರ್ಕ್ ಮುಗಿದಿದೆ. ನಾಯಕಿ, ಉಳಿದ ಪಾತ್ರವರ್ಗದ ಆಯ್ಕೆ ಇನ್ನಷ್ಟೇ ನಡೆಯಬೇಕಿದೆ. ಲೊಕೇಶನ್ ಹಂಟಿಂಗ್ ನಡೆಯುತ್ತಿದೆ. ಇನ್ನೊಂದು ಹದಿನೈದು ದಿನಗಳಲ್ಲಿ ಈ ಕುರಿತು ಸ್ಪಷ್ಟವಾದ ಚಿತ್ರಣ ಸಿಗಲಿದೆ.
ವೈರಲ್ ಆಯ್ತು ಧ್ರುವ ಸರ್ಜಾ ವರ್ಕೌಟ್ ವಿಡಿಯೋ!
ಧ್ರುವ ಸರ್ಜಾ ಅವರನ್ನು 2013ರಿಂದಲೇ ನೋಡುತ್ತಾ ಬರುತ್ತಿದ್ದೇನೆ. ಅಂದೇ ಅವರನ್ನಿಟ್ಟು ಸಿನಿಮಾ ಮಾಡಬೇಕು ಅನ್ನುವ ಕನಸು ಕಂಡವ. ಜೊತೆಗೆ ಅವರು ಸ್ಟಾರ್ ಲೆವೆಲ್ಗೆ ಏರಿಯೇ ಏರುತ್ತಾರೆ ಅನ್ನುವ ಗಾಢ ನಂಬಿಕೆ ಇತ್ತು. ಆ ನಂಬಿಕೆಯನ್ನು ಕೇವಲ ಮೂರೇ ಸಿನಿಮಾಗಳಲ್ಲಿ ನಿಜ ಮಾಡಿದ್ದಾರೆ ಧ್ರುವ.
ನನಗೆ ಧ್ರುವ ಅವರಲ್ಲಿ ಬಹಳ ಇಷ್ಟವಾಗುವ ಗುಣ ಅವರ ಡೆಡಿಕೇಶನ್. ಒಂದು ಸಿನಿಮಾಕ್ಕಾಗಿ ಅವರು ಮೂರು ವರ್ಷ ಮೀಸಲಿಡುತ್ತಾರೆ. ಬಾಡಿ ಬಿಲ್ಡ್ ಮಾಡೋದಕ್ಕೂ ರೆಡಿ, ಬಾಡಿ ಇಳಿಸೋದಕ್ಕೂ ರೆಡಿ. ನಮ್ಮ ಹೆಚ್ಚಿನ ಹೀರೋಗಳು ಬಾಡಿ ಬಿಲ್ಡ್ ಮಾಡೋದಕ್ಕೇನೋ ರೆಡಿ ಇರ್ತಾರೆ. ಆದರೆ ಮತ್ತೆ ಬಾಡಿ ಇಳಿಸೋದು ಅವರಿಂದ ಸಾಧ್ಯವಾಗಿಲ್ಲ. ಆದರೆ ಧ್ರುವ ಹಾಗಲ್ಲ. ಒಮ್ಮೆ ಬಾಡಿ ಬಿಲ್ಡ್ ಮಾಡಿ ಬಾಲ್ಯದ ಪಾತ್ರಕ್ಕಾಗಿ 30 ಕೆಜಿಗಳಷ್ಟುತೂಕ ಇಳಿಸಿಕೊಂಡಿರುವ ಅದ್ಭುತ ನಟ ಅವರು. ಜೊತೆಗೆ ಅದ್ಭುತವಾಗಿ ನಟನೆ ಮಾಡ್ತಾರೆ, ಆ್ಯಕ್ಷನ್ನಲ್ಲೂ ಮಿಂಚುತ್ತಾರೆ. ಸ್ಕ್ರೀನ್ ಮೇಲೆ ಜನರನ್ನು ಹಿಡಿದಿಡುವ ಕಲೆ ಅವರಿಗೆ ಗೊತ್ತು.
ಧ್ರುವ ಅವರಲ್ಲಿ ಮಿತಿಗಳನ್ನೇನೂ ನಾನು ಕಂಡಿಲ್ಲ. ಅವರು ಮಿತಿಗಳೇ ಇಲ್ಲದ ನಟ ಅಂತ ಅನಿಸುತ್ತೆ.
ಜತೆಯಾಗಿ ಮತ್ತೊಂದು ಚಿತ್ರ ಮಾಡುತ್ತಿದ್ದೇವೆ: ಎಪಿ ಅರ್ಜುನ್
ನನ್ನ ‘ಅದ್ದೂರಿ’ ಚಿತ್ರದ ಮೂಲಕ ಧ್ರುವ ಸರ್ಜಾ ಚಿತ್ರರಂಗಕ್ಕೆ ಪರಿಚಯ ಆದರು ಎನ್ನುವ ಖುಷಿ ಇದೆ. ನಿರ್ದೇಶಕನಾಗಿ, ಗೆಳೆಯನಾಗಿ ನಾವಿಬ್ಬರು ಕೊನೆವರೆಗೂ ನೆನಪಿನಲ್ಲಿಟ್ಟುಕೊಳ್ಳುವಂತಹ ಸಿನಿಮಾ ಮಾಡಿದ್ದೇವೆ ಎಂಬುದು ಹೆಮ್ಮೆಯ ಸಂಗತಿ. ಧ್ರುವ ಯಶಸ್ಸು ನೋಡಿ ಖುಷಿ ಪಡುವವರಲ್ಲಿ ನಾನು ಮೊದಲಿಗ. ಯಾಕೆಂದರೆ ನನ್ನ ಫ್ರೆಂಡ್, ನನ್ನ ಚಿತ್ರದ ಹೀರೋ. ಎಲ್ಲಕ್ಕಿಂತ ಮುಖ್ಯವಾಗಿ ಒಳ್ಳೆಯ ಮನಸ್ಸು ಇರುವ ಸ್ನೇಹಿತ. ಅವರ ಹುಟ್ಟುಹಬ್ಬಕ್ಕೆ ನನ್ನ ಕಡೆಯಿಂದ ಉಡುಗೊರೆ ಎಂದರೆ ಇಬ್ಬರು ಜತೆಯಾಗಿ ಮತ್ತೊಂದು ಸಿನಿಮಾ ಮಾಡುತ್ತಿದ್ದೇನೆ. ಈ ಸಿನಿಮಾ ನನ್ನದೇ ಬ್ಯಾನರ್ನಲ್ಲಿ ನಿರ್ಮಾಣ ಆಗುತ್ತಿದೆ. ಎಂಟು ವರ್ಷಗಳ ನಂತರ ಮತ್ತೆ ಇಬ್ಬರು ಜತೆಗೂಡುತ್ತಿದ್ದೇನೆ. ನನ್ನ ಗೆಳೆಯ ಮತ್ತು ನಮ್ಮ ಹೀರೋಗೆ ನಾನು ಕೊಡುತ್ತಿರುವ ಉಡುಗೊರೆ ಇದು.
ನಮ್ಮಬ್ಬಿರ ಕಾಂಬಿನೇಷನಲ್ಲಿ ಬರುತ್ತಿರುವ ಸಿನಿಮಾ ಎಲ್ಲಾ ಭಾಷಿಗರಿಗೂ ತಲುಪುತ್ತದೆ. ಎಲ್ಲರಿಗೂ ಕನೆಕ್ಟ್ ಆಗುವಂತಹ ಕತೆ ಮಾಡಿಕೊಂಡಿದ್ದೇನೆ. ಜನವರಿ ತಿಂಗಳಲ್ಲಿ ನಟ ನಿಖಿಲ್ ಕುಮಾರ್ ಅವರ ಸಿನಿಮಾ ಶುರು ಮಾಡುತ್ತೇನೆ. ಇದು ಮುಗಿಸಿಕೊಂಡು ಧ್ರುವ ಸರ್ಜಾ ಜತೆ ಸಿನಿಮಾ ಮಾಡುವ ಪ್ಲಾನ್ ಮಾಡಿಕೊಂಡು ಎಲ್ಲವೂ ಓಕೆ ಆಗಿದೆ. ಇಷ್ಟುವರ್ಷಗಳಲ್ಲಿ ಕೇವಲ ನಾಲ್ಕು ಚಿತ್ರಗಳಲ್ಲಿ ಮಾತ್ರ ನಟಿಸಿದ್ದಾರೆ. ನಿರ್ಮಾಪಕ ಮತ್ತು ನಿರ್ದೇಶಕನ ಪ್ರೀತಿಯ ನಟ ಅಂದರೆ ಧ್ರುವ ಸರ್ಜಾ.