ಯಾವುದೇ ಒಬ್ಬ ನಟನಿಗೆ ಅಭಿಮಾನಿಗಳು ಆಸ್ತಿ. ಆದರೆ ಆ ಆಸ್ತಿಯೇ ಅತಿರೇಕಕ್ಕೆ ಹೋದಾಗ ಅದು ಆ ನಟನ ಜೀವನವನ್ನೇ ಭಸ್ಮ ಮಾಡುವ ಜ್ವಾಲೆಯಾಗುತ್ತೆ ಅನ್ನೋದಕ್ಕೆ ಈ ಇಡೀ ಪ್ರಕರಣವೇ ಒಂದು ಸಾಕ್ಷಿ. ಸದ್ಯ ಈ ಅಭಿಮಾನಿಗಳ ಅವಾಂತರವೇ ಎಲ್ಲಿ ಮುಳುವಾಗುತ್ತೋ ಅಂತ ಸ್ವತಃ ದರ್ಶನ್ಗೇ ಟೆನ್ಷನ್ ಶುರುವಾಗಿದೆ ಎನ್ನಲಾಗ್ತಿದೆ.
ನಟ ದರ್ಶನ್ಗೆ ಹೊಸ ಸಂಕಷ್ಟ!
Darshan Thoogudeepa Fans: ಅಭಿಮಾನಿ ಅಂದ್ರೆ ಯಾರು? ನೆಚ್ಚಿನ ನಟನ ಸಿನಿಮಾ ಗೆದ್ದಾಗ ಹಾಲಿನ ಅಭಿಷೇಕ ಮಾಡುವವನಾ? ತಾರೆಯರ ಹುಟ್ಟುಹಬ್ಬಕ್ಕೆ ರಕ್ತದಾನ ಮಾಡಿ ಸಮಾಜಸೇವೆ ಮಾಡುವವನಾ? ಖಂಡಿತಾ ಹೌದು. ಆದರೆ, ಅದೇ ಅಭಿಮಾನ ತಲೆಗೇರಿದರೆ ಏನಾಗುತ್ತೆ? ಅತಿರೇಕದ ಅಭಿಮಾನ ಒಬ್ಬ ಸ್ಟಾರ್ ನಟನನ್ನು ಎಲ್ಲಿಗೆ ತಂದು ನಿಲ್ಲಿಸುತ್ತೆ ಅನ್ನೋದಕ್ಕೆ ದರ್ಶನ್ ಇವತ್ತಿನ ಸ್ಥಿತಿಯೇ ಸಾಕ್ಷಿ.
ಒಂದಲ್ಲ ಎರಡಲ್ಲಾ ದಾಸನ ಅಭಿಮಾನಿಗಳ ಅವಾಂತರ..!
ಅಭಿಮಾನಿಗಳಿಂದಲೇ ದರ್ಶನ್ಗೆ ಮತ್ತಷ್ಟು ಸಂಕಷ್ಟ ಫಿಕ್ಸ್..!?
ಹೌದು, ದರ್ಶನ್ ಅಭಿಮಾನಿಗಳ ಆರ್ಭಟ ನಿನ್ನೆಯದ್ದಲ್ಲ. ಸಿನಿಮಾ ರಿಲೀಸ್ ಆದಾಗ ಥಿಯೇಟರ್ ಮುಂದೆ ದಾಂಧಲೆ ಮಾಡುವುದು, ಬೇರೆ ನಟರನ್ನ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡುವುದು ಹೊಸದೇನಲ್ಲ. ಆದರೆ ಈ ಬಾರಿ ಅಭಿಮಾನದ ಹೆಸರಿನಲ್ಲಿ ನಡೆದಿದ್ದು ಕ್ರೌರ್ಯದ ಪರಮಾವಧಿ. ಕೊಲೆ ಕೇಸ್ನ ಸಾಕ್ಷಿಯನ್ನ ಬೆದರಿಸಿ ಅಂದರ್ ಆಗಿದ್ದಾರೆ ದಾಸನ ಮೂವರು ಪುಂಡ ಅಭಿಮಾನಿಗಳು.
ಈ ಹಿಂದೆ ದರ್ಶನ್ಗೆ ಸಿಕ್ಕಿದ್ದ ಬೇಲ್ ಅನ್ನು ಸುಪ್ರೀಂ ಕೋರ್ಟ್ ರದ್ದು ಮಾಡಿದಾಗ ಸ್ಯಾಂಡಲ್ ವುಡ್ ನಟಿ ರಮ್ಯಾ ರೇಣುಕಾ ಕುಟುಂಬಕ್ಕೆ ನ್ಯಾಯ ಸಿಕ್ಕಿದೆ ಅಂತ ಸೋಷಿಯಲ್ ಮಿಡಿಯಾದಲ್ಲಿ ಪೋಸ್ಟ್ ಹಾಕಿದ್ರು. ಅದನ್ನೇ ನೆಪ ಮಾಡಿಕೊಂಡು ಕೆಲವು ಕೆಡಿ ಫ್ಯಾನ್ಸ್ ರಮ್ಯಾಗೆ ಸೋಷಿಯಲ್ ಮಿಡಿಯಾದಲ್ಲಿ ಕೆಟ್ಟಾಕೊಳಕಾಗಿ ನಿಂದಿಸಿದ್ರು. ಅಷ್ಟೇ ಅಲ್ಲ ನಿನ್ನನ್ನ ರೇಪ್ ಮಾಡ್ತೀವಿ ಅಂತ ಬೆದರಿಕೆ ಹಾಕಿದ್ರು.
ಆದ್ರೆ ರಮ್ಯಾ ಬೇರೆಯವರ ರೀತಿ ಇದನ್ನ ಸಹಿಸಿಕೊಂಡು ಸುಮ್ಮನಾಗಲಿಲ್ಲ. ಸೀದಾ ಸೈಬರ್ ಠಾಣೆಗೆ ದೂರು ಕೊಟ್ರು. ರಮ್ಯಾಗೆ ಕೆಟ್ಟ ಕಾಮೆಂಟ್ ಮಾಡಿ ಬೆದರಿಕೆ ಹಾಕಿದ್ದವರನ್ನ ಪೊಲೀಸರು ಬೇಟೆಯಾಡಿ, ಜೈಲಿಗಟ್ಟಿದ್ರು. ಆದರೂ ಈ ‘ಕೆಡಿ’ ಫ್ಯಾನ್ಸ್ ಬುದ್ಧಿ ಕಲಿಯಲಿಲ್ಲ ಅನ್ನೋದಕ್ಕೆ ಈಗಿನ ಘಟನೆಯೇ ಸಾಕ್ಷಿ.
ಜೈಕಾರ ಹಾಕಿದವರಿಂದಲೇ ದರ್ಶನ್ ಜೈಲು ಸೇರಿದ್ದಾರೆ
ಯಾರು ದರ್ಶನ್ ಹೋದಲ್ಲೆಲ್ಲಾ 'ಡಿ ಬಾಸ್.. ಡಿ ಬಾಸ್..' ಅಂತ ಜೈಕಾರ ಹಾಕ್ತಿದ್ರೋ, ಯಾರನ್ನ ದರ್ಶನ್ ನನ್ನ ‘ಸೆಲೆಬ್ರಿಟಿಗಳು’ ಅಂತ ಕೊಂಡಾಡ್ತಿದ್ರೋ.. ಇವತ್ತು ಅದೇ ಜೈಕಾರ ಹಾಕಿದವರಿಂದಲೇ ದರ್ಶನ್ ಜೈಲು ಸೇರಿದ್ದಾರೆ. ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಕಿಡ್ನಾಪ್ ಮಾಡಿ ತಂದಿದ್ದೇ ದರ್ಶನ್ ಅಭಿಮಾನಿ ಸಂಘದ ಪದಾಧಿಕಾರಿಗಳು! ನೆಚ್ಚಿನ ನಟನ ಖುಷಿಗಾಗಿ, ಆತನನ್ನ ಮೆಚ್ಚಿಸಲು ಹೋಗಿ ಇವತ್ತು ತಾವೂ ಜೈಲು ಸೇರಿ, ತಮ್ಮ ಬಾಸ್ ಅನ್ನೂ ಜೈಲಿಗೆ ತಳ್ಳಿದ್ದಾರೆ ಈ ಕೆಡಿ ಫ್ಯಾನ್ಸ್!
ದರ್ಶನ್ ಜೈಲಿಗೆ ಹೋದ ಮೇಲಾದರೂ ಈ ಅಭಿಮಾನಿಗಳು ಶಾಂತರಾದರಾ? ಇಲ್ಲ ಜೈಲಿನ ಮುಂದೆಯೇ ಪೊಲೀಸರ ಎದುರೇ ಅರಚಾಟ, ಹಾರಾಟ ನಡೆಸ್ತಾ ಇದ್ದಾರೆ. ತನಿಖೆಗೆ ಅಡ್ಡಿಪಡಿಸುವಂತೆ ವರ್ತಿಸ್ತಾ ಇದ್ದಾರೆ. ಇತ್ತ ಸೋಷಿಯಲ್ ಮೀಡಿಯಾದಲ್ಲಂತೂ ಮೃತನ ಕುಟುಂಬಕ್ಕೆ ನ್ಯಾಯ ಸಿಗಬಾರದು ಎಂಬಂತೆ ಪೋಸ್ಟ್ಗಳನ್ನ ಹಾಕ್ತಾ ಇದ್ದಾರೆ. ಅಭಿಮಾನಿಗಳ ಈ ಉದ್ಧಟತನದ ವರ್ತನೆಗಳು ಕೋರ್ಟ್ನಲ್ಲಿ ಮತ್ತು ತನಿಖಾಧಿಕಾರಿಗಳ ಮುಂದೆ ದರ್ಶನ್ ಪಾಲಿಗೆ ಮತ್ತಷ್ಟು ಸಂಕಷ್ಟ ತಂದೊಡ್ಡುವುದು ಗ್ಯಾರಂಟಿ ಅಂತಿದ್ದಾರೆ ಕಾನೂನು ತಜ್ಞರು.
ಸದ್ಯ ಸಾಕ್ಷಿಗೆ ಬೆದರಿಕೆ ಹಾಕಿ ಅಂದರ್ ಆಗಿರೋ ಡಿ ಕಂಪನಿ ಫ್ಯಾನ್ ಪೇಜ್ ಅಡ್ಮಿನ್ ಪುನೀತ್, ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲೂ ಇನ್ವಾಲ್ವ್ ಆಗಿದ್ದ. ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಬೆಂಗಳೂರಿನ ಪಟ್ಟಣಗೆರೆ ಶೆಡ್ನಲ್ಲಿ ಕೊಲೆ ಮಾಡಿದ ನಂತರ, ಆತನ ಶವವನ್ನು ರಾಜಕಾಲುವೆಗೆ ಎಸೆಯಲು ಬಳಸಿದ್ದು ಒಂದು ಬಿಳಿ ಬಣ್ಣದ ಸ್ಕಾರ್ಪಿಯೋ ಕಾರು. ಈ ಕಾರಿನ ಮಾಲೀಕನೇ ಈಗ ಬಂಧಿತನಾಗಿರುವ ಈ ಪುನೀತ್. ಈತ ಪ್ರಕರಣದ ಪ್ರಮುಖ ಸಾಕ್ಷಿಗಳಲ್ಲಿ ಒಬ್ಬನಾಗಿದ್ದವನು. ಪೊಲೀಸರು ಈತನ ಸ್ಕಾರ್ಪಿಯೋ ಕಾರನ್ನ ಈಗಾಗಲೇ ಜಪ್ತಿ ಮಾಡಿದ್ದಾರೆ.
ಯಾವಾಗ ಪೊಲೀಸರು ಪುನೀತ್ನನ್ನು ಸಾಕ್ಷಿಯನ್ನಾಗಿ ಪರಿಗಣಿಸಿದರೋ, ಆತ ಕಾನೂನಿನ ಪರವಾಗಿ ನಿಲ್ಲಬೇಕಿತ್ತು. ಆದರೆ, ದರ್ಶನ್ ಮೇಲಿನ ಅಂಧಾಭಿಮಾನದಿಂದ ಪುನೀತ್ ದಾರಿ ತಪ್ಪಿದ್ದಾನೆ. ಪ್ರಕರಣದ ಮತ್ತೊಬ್ಬ ಸಾಕ್ಷಿಯಾದ ಸಂದೀಪ್ ಎಂಬುವವರನ್ನ ಬೆದರಿಸಿ, ದರ್ಶನ್ ವಿರುದ್ಧ ಸಾಕ್ಷಿ ಹೇಳದಂತೆ ತಡೆಯಲು ಯತ್ನಿಸಿದ್ದಾನೆ. ಅಂದರೆ, ಸ್ವತಃ ಸಾಕ್ಷಿಯಾಗಿದ್ದ ಪುನೀತ್, ಸಾಕ್ಷಿ ನಾಶಕ್ಕೆ ಕೈಹಾಕಿ ಈಗ ತಾನೇ ಆರೋಪಿಯಾಗಿ ಕಂಬಿ ಎಣಿಸುವ ಪರಿಸ್ಥಿತಿ ಬಂದಿದೆ.
ಯಾವುದೇ ಒಬ್ಬ ನಟನಿಗೆ ಅಭಿಮಾನಿಗಳು ಆಸ್ತಿ. ಆದರೆ ಆ ಆಸ್ತಿಯೇ ಅತಿರೇಕಕ್ಕೆ ಹೋದಾಗ ಅದು ಆ ನಟನ ಜೀವನವನ್ನೇ ಭಸ್ಮ ಮಾಡುವ ಜ್ವಾಲೆಯಾಗುತ್ತೆ ಅನ್ನೋದಕ್ಕೆ ಈ ಇಡೀ ಪ್ರಕರಣವೇ ಒಂದು ಸಾಕ್ಷಿ. ಸದ್ಯ ಈ ಅಭಿಮಾನಿಗಳ ಅವಾಂತರ ಎಲ್ಲಿ ತನ್ನನ್ನ ಪರ್ಮನೆಂಟ್ ಆಗಿ ಜೈಲಲ್ಲಿ ಮುದ್ದೆ ಮುರಿವಂತೆ ಮಾಡುತ್ತೋ ಅಂತ ದರ್ಶನ್ಗೆ ಟೆನ್ಷನ್ ತಂದಿದೆ. ಇನ್ಮುಂದೆ ನಟ ದರ್ಶನ್ ಹಾಗು ಅವರ ಫ್ಯಾನ್ಸ್ ಪರಿಸ್ಥಿತಿ ಏನಾಗಲಿದೆ ಎಂಬುದನನ್ನು ಯಾರೂ ಊಹಿಸೋದು ಕಷ್ಟ ಎಂಬ ಪರಿಸ್ಥಿತಿ ಬಂದಿದೆ.
ಹೆಚ್ಚಿನ ಮಾಹಿತಿಗೆ 'ಸಿನಿಮಾ ಹಂಗಾಮ' ನೋಡಿ...


