'ಟಾಕ್ಸಿಕ್' ಸಿನಿಮಾ ಬಿಡುಗಡೆಗೆ ಸಜ್ಜಾಗಿರುವ ನಟ ಯಶ್, ಇದೀಗ 'ಆಪ್ ಕಿ ಅದಾಲತ್' ಶೋನಲ್ಲಿ ಭಾಗವಹಿಸಿದ ಮೊದಲ ಕನ್ನಡಿಗ ಎನಿಸಿಕೊಂಡಿದ್ದಾರೆ. ಶೋನಲ್ಲಿ ಪತ್ರಕರ್ತ ರಜತ್ ಶರ್ಮಾ ಅವರ ಸವಾಲಿನ ಪ್ರಶ್ನೆಗಳಿಗೆ ಯಶ್ ತಮ್ಮದೇ ಖದರ್ನಲ್ಲಿ ಉತ್ತರಿಸಿದ್ದಾರೆ.
ಬೆಂಗಳೂರು (ಆ.13): ಕೆಜಿಎಫ್-2 ರಿಲೀಸ್ ಆದ 4 ವರ್ಷಗಳ ಬಳಿಕ ರಾಕಿಂಗ್ ಸ್ಟಾರ್ ಯಶ್ ಥಿಯೇಟರ್ ಪರದೆಯ ಮೇಲೆ ಬರೋಕೆ ಸಜ್ಜಾಗಿದ್ದಾರೆ. ಹಲವು ಬಾರಿ ರಿಲೀಸ್ ಡೇಟ್ ಘೋಷಣೆಯಾಗಿ ಮುಂದೂಡಿಕೆಯಾಗಿದ್ದ ಟಾಕ್ಸಿಕ್ ಸಿನಿಮಾ ಇದೇ 26 ರಂದು ತೆರೆ ಕಾಣಲಿದ್ದು, ಎರಡು ವಾರಕ್ಕೆ ಮುನ್ನವೇ ಚಿತ್ರದ ಸೆನ್ಸಾರ್ ಪ್ರಕ್ರಿಯೆ ಕೂಡ ಮುಕ್ತಾಯವಾಗಿದೆ. ನಿರೀಕ್ಷೆಯಂತೆ ಚಿತ್ರಕ್ಕೆ ಎ ಸರ್ಟಿಫಿಕೇಟ್ ಕೂಡ ಸಿಕ್ಕಿದೆ. ಇದರ ನಡುವೆ ಯಶ್ ಸಿನಿಮಾದ ಪ್ರಮೋಷನ್ಗಳಲ್ಲಿ ಬ್ಯುಸಿಯಾಗಿದ್ದಾರೆ. ಬೆಂಗಳೂರಿನಲ್ಲಿ ಇತ್ತೀಚೆಗೆ ಸಿನಿಮಾದ ಟ್ರೇಲರ್ ರಿಲೀಸ್ಗೆ ಸಿನಿಮಾದಲ್ಲಿ ನಟಿಸಿದ್ದ ಘಟನಾನುಘಟಿ ಸ್ಟಾರ್ಗಳನ್ನು ಅವರು ಸಿಲಿಕಾನ್ ಸಿಟಿಗೆ ಕರೆಸಿದ್ದರು. ಈಗ ಅವರು ಮತ್ತೊಂದು ಮೈಲಿಗಲ್ಲು ನೆಟ್ಟಿದ್ದು, ಸುದೀರ್ಘ 34 ವರ್ಷಗಳಿಂದ ನಡೆದು ಬರುತ್ತಿರುವ ಇಂಡಿಯಾ ಟಿವಿಯ ಆಪ್ ಕಿ ಅದಾಲತ್ ಶೋನಲ್ಲಿ ಭಾಗವಹಿಸಿದ ಮೊದಲ ಕನ್ನಡಿಗ ಎನಿಸಿಕೊಂಡಿದ್ದಾರೆ.
ಹಿರಿಯ ಪತ್ರಕರ್ತ ರಜತ್ ಶರ್ಮ ನಡೆಸಿಕೊಡಿವ ಈ ಶೋನಲ್ಲಿ ಕೋರ್ಟ್ ಸೆಟ್ನಲ್ಲಿ ನಡೆಯುತ್ತದೆ. ಕಟೆಕಟೆಯಲ್ಲಿ ಗಣ್ಯರನ್ನು ಕೂರಿಸಿ ಅವರಿಗೆ ಸವಾಲ್ ಹಾಕುವ ರೀತಿಯಲ್ಲಿ ರಜತ್ ಶರ್ಮ ಶೋ ನಡೆಸಿಕೊಡುತ್ತಾರೆ. ಯಶ್ ಭಾಗವಹಿಸಿದ ಆಪ್ ಕಿ ಅದಾಲತ್ನ ಸಣ್ಣ ಟ್ರೇಲರ್ಅನ್ನು ಇಂಡಿಯಾ ಟಿವಿ ತನ್ನ ಯೂಟ್ಯೂಬ್ ಚಾನೆಲ್ನಲ್ಲಿ ಹಂಚಿಕೊಂಡಿದ್ದು, ಯಶ್ ಆಟಿಟ್ಯೂಡ್ಗೆ ಸ್ವತಃ ಟಿವಿಯವರೇ ದಂಗಾಗಾಗಿದ್ದಾರೆ. ಯಶ್ ಕಾ ಆಟಿಟ್ಯೂಡ್...'ಮುಜೆ ಫರ್ಕ್ ನಹಿ ಪಡ್ತಾ' (ಯಶ್ ಆಟಿಟ್ಯೂಡ್.. ನನಗೆ ಅದ್ಯಾವುದೂ ಸಮಸ್ಯೆಯಲ್ಲ) ಎಂದು ಹೇಳಿದ್ದನ್ನು ಹೈಲೈಟ್ ಮಾಡಿದೆ.
ಇದರಲ್ಲಿ ಯಶ್ ಮಾತನಾಡಿರುವ ರೀತಿ ಅದೆಷ್ಟು ಆತ್ಮವಿಶ್ವಾಸದಿಂದ ಕೂಡಿದೆಯೆಂದರೆ ಕನ್ನಡಿಗರು ಮಾತ್ರವಲ್ಲ ಬಾಲಿವುಡ್ ಮಂದಿ ಕೂಡ ಈ ಶೋ ವೀಕ್ಷಿಸಲು ಕಾತರದಿಂದ ಕಾಯ್ತಿದ್ದಾರೆ. ಇದರಲ್ಲಿ ಯಶ್ಗೆ ಪ್ರಶ್ನೆ ಮಾಡುವ ರಜತ್ ಶರ್ಮ, 'ನೀವು ಟಿವಿಯಲ್ಲಿ ಕೆಲಸ ಮಾಡುತ್ತಿದ್ದ ಸಮಯದಲ್ಲಿ, ಆರು ಫಿಲ್ಮ್ಗಳಲ್ಲಿ ನಟಿಸುವ ಆಫರ್ ಬಂದಿತ್ತಂತೆ. ಆದರೆ ನೀವು ಆರೂ ಫಿಲ್ಮ್ ಮಾಡುವವರಲ್ಲಿ ಸ್ಕ್ರಿಪ್ಟ್ ಬೇಕು ಎಂದು ಕೇಳಿದ್ದರಂತೆ..' ಎಂದಿದ್ದಕ್ಕೆ, 'ಇದರಲ್ಲಿ ತಪ್ಪಿದೆಯೇ..?' ಎಂದು ಯಶ್ ಉತ್ತರಿಸಿದ್ದಾರೆ.
'ಟಿವಿ ಸೀರಿಯಲ್ ಮಾಡೋನು ಸ್ಕ್ರಿಪ್ಟ್ ಕೇಳ್ತಾನೆ.. ಎಂದು ಅವರು ಮಾತನಾಡಿಕೊಂಡಿದ್ದರು..' ಎಂದು ರಜತ್ ಶರ್ಮ ಹೇಳಿದ್ದಕ್ಕೆ, 'ಅವರು ಹೇಳಿರಬಹುದು ಸರ್.. ಆದರೆ, ಈಗ ಅವರು ಈಗ ಎಲ್ಲಿದ್ದಾರೆ ಅನ್ನೋದೇ ಗೊತ್ತಿಲ್ಲ..' ಎಂದು ಯಶ್ ಹೇಳಿದ್ದಾರೆ. ಆದರೆ ನಿಮ್ಮ ಕೈಯಿಂದ ಆ ಏಳೂ ಸಿನಿಮಾಗಳು ಹೋದವಲ್ಲ ಅನ್ನೋ ಪ್ರಶ್ನೆಗೆ, ನನಗೆ ಅದರಿಂದ ಯಾವ ಸಮಸ್ಯೆಯೂ ಇಲ್ಲ ಎಂದು ರಾಕಿಂಗ್ ಸ್ಟಾರ್ ಹೇಳಿದ್ದಾರೆ.
ಯಶ್ ಮಾತಿಗೆ ಹಿಂದಿ ಲೋಕ ಶಾಕ್
ನೀವು ಚಿತ್ರರಂಗದಲ್ಲಿ ದೊಡ್ಡ ಸ್ಟಾರ್ ಆದ ಬಳಿಕ, ನೀವು ಹೈಯೆಸ್ಟ್ ಪೇಯ್ಡ್ 50 ಕೋಟಿ ರೂಪಾಯಿ ಒಂದು ಸಿನಿಮಾಕ್ಕೆ ಬೇಕು ಎಂದು ಕೇಳಿದ್ದರಂತೆ ಎನ್ನುವ ಪ್ರಶ್ನೆಗೆ ಆಟಿಟ್ಯೂಡ್ನಲಲೇ ಉತ್ತರಿಸಿದ ಯಶ್, 'ಇಲ್ಲ ಸರ್..ಅದಕ್ಕಿಂತ ಹೆಚ್ಚೇ ಕೇಳಿದ್ದೇ..' ಎಂದು ಕೆಜಿಎಫ್ ಸ್ಟೈಲ್ನಲ್ಲಿ ಉತ್ತರ ನೀಡಿದ್ದಾರೆ. ಇದು ಯಶ್ ಆಪ್ ಕೀ ಅದಾಲತ್ ಶೋನಲ್ಲಿ ಮಾತನಾಡಿರುವ ಜಸ್ಟ್ ಟೀಸರ್ ಮಾತ್ರ. ಆದರೆ, ಇಡೀ ಶೋ ಇನ್ನಷ್ಟು ಖದರ್ ಆಗಿರುವ ಸೂಚನೆಯಂತೂ ಇದರಿಂದ ಸಿಕ್ಕಿದೆ. ಶನಿವಾರ ರಾತ್ರಿ 10 ಗಂಟೆಗೆ ಇಂಡಿಯಾ ಟಿವಿಯಲ್ಲಿ ಈ ಶೋ ಪ್ರಸಾರವಾಗಲಿದೆ.


