ಮದುವೆಯಾದ ಒಂದೇ ತಿಂಗಳಿಗೆ ಪತಿ ಸುದೀಪ್ ರೈ ಆತ್ಮ*ಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ, ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಕರಾವಳಿಯ ನಟಿ ಸೌಮ್ಯ ಶೆಟ್ಟಿಯನ್ನು ಕಾರ್ಕಳ ಪೊಲೀಸರು ಬಂಧಿಸಿದ್ದಾರೆ. ಸುದೀಪ್ ರೈ ಅವರ ತಂದೆ ನೀಡಿದ ದೂರಿನ ಅನ್ವಯ ಈ ಬಂಧನ ನಡೆದಿದೆ.

ಪತಿ ಆತ್ಮ*ಹತ್ಯೆ ಪ್ರಕರಣ ನಟಿ ಸೌಮ್ಯ ಶೆಟ್ಟಿ ಬಂಧನ

ಉಡುಪಿ: ಮದುವೆಯಾದ ಒಂದೇ ತಿಂಗಳಿಗೆ ಪತಿ ವಿಷ ಸೇವಿಸಿ ಸಾವಿಗೆ ಶರಣಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಕರಾವಳಿಯ ಖ್ಯಾತ ನಟಿ ಸೌಮ್ಯ ಶೆಟ್ಟಿಯನ್ನು ಪೊಲೀಸರು ಬಂಧಿಸಿದ್ದಾರೆ. ವಿಷ ಸೇವಿಸಿದ ಸೌಮ್ಯ ಶೆಟ್ಟಿ ಪತಿ ಸುದೀಪ್ ರೈ ಮಾರ್ಚ್‌ 31ರಂದು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುದೀಪ್ ರೈ ತಂದೆ ಪೊಲೀಸರಿಗೆ ಸೌಮ್ಯ ವಿರುದ್ಧ ದೂರು ನೀಡಿದ್ದರು. ಈ ಪ್ರಕರಣದ ವಿಚಾರಣೆ ನಡೆಸುತ್ತಿರುವ ಪೊಲೀಸರು ಈಗ ಸೌಮ್ಯ ಶೆಟ್ಟಿಯನ್ನು ಬಂಧಿಸಿದ್ದಾರೆ. ಸುದೀಪ್ ರೈ ದಕ್ಷಿಣ ಕನ್ನಡ ಜಿಲ್ಲೆಯ ನೆಲ್ಯಾಡಿ ಮೂಲದ ಉದ್ಯಮಿಯಾಗಿದ್ದು, ಸೌಮ್ಯ ಜೊತೆ ಮದುವೆಯ ನಂತರ ಅವರು ಉಡುಪಿ ಜಿಲ್ಲೆಯ ಕಾರ್ಕಳದ ಬಂಗ್ಲೆಗುಡ್ಡೆಯ ಪತ್ನಿ ಮನೆಯಲ್ಲೇ ವಾಸವಿದ್ದರು.

Add Asianetnews Kannada as a Preferred SourcegooglePreferred

14 ದಿನಗಳ ನ್ಯಾಯಾಂಗ ಬಂಧನಕ್ಕೆ ಸೌಮ್ಯ ಶೆಟ್ಟಿ

ಸೌಮ್ಯ ಶೆಟ್ಟಿ ತನ್ನ ಮಗ ಆತ್ಮ*ಹತ್ಯೆ ಮಾಡಿಕೊಳ್ಳುವುದಕ್ಕೆ ಪ್ರಚೋದನೆ ನೀಡಿದ್ದಾಳೆ ಎಂದು ಸುದೀಪ್ ರೈ ತಂದೆ ಪೊಲೀಸರಿಗೆ ದೂರು ನೀಡಿದ್ದರು. ಈಗ ಕಾರ್ಕಳದಲ್ಲಿ ಸೌಮ್ಯ ಶೆಟ್ಟಿಯನ್ನು ಪೊಲೀಸರು ಬಂಧಿಸಿದ್ದಾರೆ. ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಅವರಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.

ಸೌಮ್ಯ ಶೆಟ್ಟಿ ಹಾಗೂ ಸುದೀಪ್ ರೈ ಅವರು ಪರಸ್ಪರ ಪ್ರೀತಿಸುತ್ತಿದ್ದರು. ಈ ವರ್ಷದ ಫೆ.17ರಂದು ಅವರಿಬ್ಬರು ಮದುವೆಯಾಗಿದ್ದರು. ಸೌಮ್ಯ ಕಾರ್ಕಳದವರಾಗಿದ್ದರೆ, ಸುದೀಪ್ ರೈ ದ.ಕ ಜಿಲ್ಲೆ ನೆಲ್ಯಾಡಿಯವರು, ಮದುವೆಯ ಬಳಿಕ ಸುದೀಪ್ ರೈ ಕಾರ್ಕಳದ ಬಂಗ್ಲೆಗುಡ್ಡೆಯ ಪತ್ನಿ ಮನೆಯಲ್ಲೇ ಇದ್ದರು. ಆದರೆ ಮಾ17ರಂದು ಮನೆಗೆ ಬಂದಿದ್ದ ಸುದೀಪ್ ರೈ ತಾಯಿ ಜೊತೆ ನೆಲ್ಯಾಡಿ ಭಾಗದಲ್ಲಿ ಕಾರಿನಲ್ಲಿ ತೆರಳುತ್ತಿದ್ದಾಗ ಸುದೀಪ್ ಕಾರಿಗೆ ಅಡ್ಡಗಟ್ಟಿದ್ದ ಸೌಮ್ಯ ಶೆಟ್ಟಿ ಅವಾಚ್ಯ ಶಬ್ದಗಳಿಂದ ಅವರಿಗೆ ನಿಂದಿಸಿ ಬೆದರಿಕೆ ಹಾಕಿದ್ದಾಳೆಂದು ಸೌಮ್ಯ ಶೆಟ್ಟಿ ಅತ್ತೆ ಮಾವ ಆರೋಪಿಸಿದ್ದಾರೆ.

ಇದನ್ನೂ ಓದಿ: ಹೋರ್ಮುಜ್ ತೆರೆಯಲು ಜಲಬಾಂಬ್ ಅಡ್ಡಿ: ತಾನೇ ಹೂತಿಟ್ಟ ಬಾಂಬ್ ಎಲ್ಲಿದೆ ಎಂದು ಇರಾನ್‌ಗೆ ಗೊತ್ತಿಲ್ಲ

ಆ ಬಳಿಕ ಮಾ.22ರಂದು ಸುದೀಪ್ ವಿಷ ಪದಾರ್ಥ ಸೇವಿಸಿರುವುದಾಗಿ ಸೌಮ್ಯ ಶೆಟ್ಟಿ ಸುದೀಪ್ ರೈ ಸಂಬಂಧಿಕರಿಗೆ ಕರೆ ಮಾಡಿ ಹೇಳಿದ್ದಳು. ನಂತರ ಸುದೀಪ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಮಾರ್ಚ್ 29ರಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸುದೀಪ್ ರೈ ಮೃತಪಟ್ಟಿದ್ದರು. ಹೀಗಾಗಿ ಸುದೀಪ್ ರೈ ತಂದೆ ಸೊಸೆ ಸೌಮ್ಯ ಶೆಟ್ಟಿ ವಿರುದ್ಧ ಮಾನಸಿಕ ಚಿತ್ರಹಿಂಸೆ ನೀಡಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾರೆ ಎಂದು ಆರೋಪಿಸಿ ದೂರು ದಾಖಲಿಸಿದ್ದರು. ಈ ಬಗ್ಗೆ ತನಿಖೆ ನಡೆಸಿದ್ದ ಕಾರ್ಕಳ ನಗರ ಪೊಲೀಸ್ ಠಾಣೆಯ ಪ್ರಭಾರ ಪೊಲೀಸ್ ನಿರೀಕ್ಷಕ ಮಂಜಪ್ಪ ಈಗ ಸೌಮ್ಯ ಶೆಟ್ಟಿಯನ್ನು ಬಂಧಿಸಿದ್ದು, ಪ್ರಾಥಮಿಕ ತನಿಖೆ ನಡೆಸಿ ಸಾಕ್ಷ್ಯ ಪುರಾವೆ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.