R Madhavan Parenting Tips: ಮಕ್ಕಳನ್ನು ಬೆಳೆಸುವುದು ಎಂದರೆ ಅವರ ಜೊತೆ ಸದಾ ಇರುವುದು ಎಂದರ್ಥವೇ? ಖಂಡಿತ ಇಲ್ಲ ಎನ್ನುತ್ತಾರೆ ನಟ ಆರ್. ಮಾಧವನ್. ಕೇವಲ ಕ್ವಾಲಿಟಿ ಟೈಮ್ ಕಳೆಯುವ ಬದಲು, ಮಗುವಿನ ಆತ್ಮವಿಶ್ವಾಸ ಮತ್ತು ಸ್ವತಂತ್ರ ಗುಣವನ್ನು ಹೇಗೆ ಹೆಚ್ಚಿಸಬಹುದು ಎಂಬುದನ್ನ ಮ್ಯಾಡಿ ಇಲ್ಲಿ ವಿವರವಾಗಿ ಹಂಚಿಕೊಂಡಿದ್ದಾರೆ. 

ಸಿನಿಮಾ ರಂಗದಲ್ಲಿ 'ಚಾಕೊಲೇಟ್ ಬಾಯ್' ಆಗಿ ಮಿಂಚಿದ ನಟ ಆರ್. ಮಾಧವನ್, ಇಂದು ಕೇವಲ ಒಬ್ಬ ಯಶಸ್ವಿ ನಟ ಮಾತ್ರವಲ್ಲ, ಒಬ್ಬ ಶಿಸ್ತಿನ ತಂದೆಯಾಗಿಯೂ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಅವರು ತಮ್ಮ ಪೇರೆಂಟಿಂಗ್ ಸ್ಟೈಲ್ ಬಗ್ಗೆ ಅಚ್ಚರಿಯ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಕೇವಲ 'ಕ್ವಾಲಿಟಿ ಟೈಮ್' ಕಳೆಯುವುದಕ್ಕಿಂತ ಮಗನಿಗೆ ಮೌಲ್ಯಗಳನ್ನು ಕಲಿಸುವುದು ಮುಖ್ಯ ಎನ್ನುತ್ತಾರೆ 'ಮ್ಯಾಡಿ'.

ಕ್ವಾಲಿಟಿ ಟೈಮ್ ಎನ್ನುವುದು ಕೇವಲ ತೋರಿಕೆಯಲ್ಲ

ಇಂದಿನ ಕಾಲದಲ್ಲಿ ಪೋಷಕರು ಮಕ್ಕಳ ಜೊತೆ ಅತಿ ಹೆಚ್ಚು ಸಮಯ ಕಳೆಯಬೇಕು ಎನ್ನುವ ಒತ್ತಡದಲ್ಲಿರುತ್ತಾರೆ. ಆದರೆ ಮಾಧವನ್ ಇದನ್ನು "ಕಾಸ್ಮೆಟಿಕ್ ಫಾದರ್" (ಕೇವಲ ತೋರಿಕೆಗಾಗಿ ಎಲ್ಲ ಕಡೆ ಹಾಜರಿರುವ ತಂದೆ) ಎಂದು ಕರೆಯುತ್ತಾರೆ. "ಮಕ್ಕಳ ಜೊತೆ ಕಾಲ ಕಳೆಯಲು ಸಮಯ ಸಿಗಬಹುದು ಅಥವಾ ಸಿಗದೇ ಇರಬಹುದು. ಆದರೆ ಮಕ್ಕಳಿಗಾಗಿ ವೃತ್ತಿಜೀವನವನ್ನು ನಿರ್ಲಕ್ಷಿಸಬೇಡಿ" ಎಂಬುದು ಅವರ ನೇರ ಮಾತು.

“ನೀವು ನನ್ನ ಜೊತೆ ಸಮಯ ಕಳೆಯುತ್ತಿಲ್ಲ”
ಮಾಧವನ್ ಮಗ ವೇದಾಂತ್‌ಗೆ 6 ವರ್ಷವಿದ್ದಾಗ "ನೀವು ನನ್ನ ಜೊತೆ ಸಮಯ ಕಳೆಯುತ್ತಿಲ್ಲ" ಎಂದು ದೂರಿದಾಗ, ಮಾಧವನ್ ತಮ್ಮ ತಂದೆಯ ಉದಾಹರಣೆ ನೀಡಿದ್ದರು. "ನನ್ನ ತಂದೆ ಕೂಡ ನನ್ನ ಜೊತೆ ಸದಾ ಇರುತ್ತಿರಲಿಲ್ಲ, ಆದರೆ ನನಗೆ ಬೆಂಬಲ ಬೇಕಾದಾಗ ಅವರು 'ಮಿಂಚಿನ ವೇಗದಲ್ಲಿ' ಬಂದು ಬಂಡೆಯಂತೆ ನಿಲ್ಲುತ್ತಿದ್ದರು" ಎಂದು ಮಗನಿಗೆ ತಿಳಿಹೇಳಿದ್ದರು.

ನಂಬಿಕೆ ಮತ್ತು ಬೆಂಬಲ
ಮಾಧವನ್ ಅವರ ಪ್ರಕಾರ ತಂದೆಯಾದವನು ಮಗನ ಪ್ರತಿ ಶಾಲಾ ಆಟೋಟಗಳಲ್ಲೂ ಹಾಜರಿರಬೇಕು ಎಂದೇನಿಲ್ಲ. ಆದರೆ ಮಗನಿಗೆ ಯಾವಾಗ ಸಹಾಯದ ಅಗತ್ಯವಿರುತ್ತದೆಯೋ ಆಗ ತಂದೆ ಸದಾ ಜೊತೆಗಿರಬೇಕು. ಜೀವನದಲ್ಲಿ ಶಿಸ್ತು, ಆತ್ಮವಿಶ್ವಾಸ ಮತ್ತು ಸ್ವತಂತ್ರವಾಗಿ ಬದುಕುವ ಗುಣಗಳನ್ನು ಕಲಿಸಬೇಕು. ಮಗನಿಗೆ ಬೇಕಾದ ಸೌಲಭ್ಯಗಳನ್ನು ಒದಗಿಸಿ, ಅವನು ಇಷ್ಟಪಟ್ಟಿದ್ದನ್ನು ಸಾಧಿಸಲು ಮುಕ್ತ ಅವಕಾಶ ನೀಡಬೇಕು.

ಫಲ ನೀಡಿದ ‘ಮ್ಯಾಡಿ ಮೆಥಡ್’
ಇಂದು ವೇದಾಂತ್ ಭಾರತದ ಅತ್ಯಂತ ಭರವಸೆಯ ಈಜುಪಟುವಾಗಿ (Swimmer) ಹೊರಹೊಮ್ಮಿದ್ದಾರೆ. ಥೈಲ್ಯಾಂಡ್, ಮಲೇಷಿಯಾ ಮತ್ತು ಏಷ್ಯನ್ ಏಜ್ ಗ್ರೂಪ್ ಚಾಂಪಿಯನ್‌ಶಿಪ್‌ಗಳಲ್ಲಿ ಹಲವಾರು ಪದಕಗಳನ್ನು ಗೆದ್ದಿದ್ದಾರೆ. ಕೇವಲ ಕ್ರೀಡೆಯಲ್ಲಿ ಮಾತ್ರವಲ್ಲದೆ, ಪ್ರಾಣಿಗಳ ಮೇಲಿನ ದಯೆಗಾಗಿ 9ನೇ ವಯಸ್ಸಿನಲ್ಲೇ 'PETA ಕಂಪ್ಯಾಶನೇಟ್ ಕಿಡ್' ಪ್ರಶಸ್ತಿ ಪಡೆದಿದ್ದಾರೆ. ತಂದೆಯ ಸಿನಿಮಾ ಯಶಸ್ಸಿನ ನೆರಳಿನಲ್ಲಿ ಬದುಕುವ ಬದಲು, ಸ್ವತಃ ಕಷ್ಟಪಟ್ಟು ಭಾರತಕ್ಕೆ ಒಲಿಂಪಿಕ್ ಪದಕ ತರುವ ಕನಸು ಕಾಣುತ್ತಿದ್ದಾರೆ.

ಸೋಲು ಮತ್ತು ಅನುಭವಕ್ಕೆ ಅವಕಾಶ ನೀಡಿ

"ಸಾಮಾನ್ಯ ಭಾರತೀಯ ಮಗುವಿನಂತೆ ಬದುಕು, ಆಚೆ ಹೋಗಿ ಆಟವಾಡು, ಸೋಲುಗಳನ್ನು ಅನುಭವಿಸು" ಎಂದು ಮಾಧವನ್ ಮಗನಿಗೆ ಸಲಹೆ ನೀಡುತ್ತಾರೆ. ಪೋಷಕರು ಸದಾ ಮಕ್ಕಳ ಹಿಂದೆ ಇರುವುದಕ್ಕಿಂತ, ಅವರಿಗೆ ಸರಿಯಾದ ಮೌಲ್ಯಗಳನ್ನು ನೀಡಿ ದೂರದಿಂದಲೇ ಬೆಂಬಲವಾಗಿ ನಿಂತರೆ ಚಾಂಪಿಯನ್ ಆಗಿ ಬೆಳೆಯುತ್ತಾರೆ ಎಂಬುದಕ್ಕೆ ವೇದಾಂತ್ ಅವರೇ ಸಾಕ್ಷಿ.

ಆತ್ಮವಿಶ್ವಾಸ 'ಸರಸರನೆ' ಹೆಚ್ಚಾಗುತ್ತೆ
ಮಕ್ಕಳು ತಪ್ಪು ಮಾಡಿದಾಗ ತಕ್ಷಣ ಬೈಯುವ ಬದಲು, ಅವರು ಅದನ್ನು ಸ್ವತಃ ಸರಿಪಡಿಸಿಕೊಳ್ಳಲು ಸ್ವಲ್ಪ ಸಮಯ ನೀಡಿ. ನಿಮ್ಮ ಅತಿಯಾದ ಹಸ್ತಕ್ಷೇಪವಿಲ್ಲದೆ ಅವರು ಸಮಸ್ಯೆಗಳನ್ನು ಎದುರಿಸುವುದನ್ನು ಕಲಿತರೆ, ಅವರ ಆತ್ಮವಿಶ್ವಾಸ 'ಸರಸರನೆ' ಹೆಚ್ಚಾಗುತ್ತದೆ!

ಮಾಧವನ್ ಮಗನ ಸಾಧನೆಗಾಗಿ ಪ್ರಾಯೋಗಿಕವಾಗಿಯೂ ಬೆಂಬಲ ನೀಡಿದರು. ವೇದಾಂತ್ ಅವರ ಈಜು ತರಬೇತಿಗೆ ಅಡ್ಡಿಯಾಗಬಾರದು ಎಂದು ತಮ್ಮ ಕುಟುಂಬವನ್ನೇ ದುಬೈಗೆ ಸ್ಥಳಾಂತರಿಸಿದರು. ಇದರ ಫಲವಾಗಿಯೇ ಇಂದು ವೇದಾಂತ್ ಖೇಲೋ ಇಂಡಿಯಾದಂತಹ ಪ್ರತಿಷ್ಠಿತ ಕೂಟಗಳಲ್ಲಿ ಏಳು ಪದಕಗಳನ್ನು ಗೆದ್ದು ಭಾರತದ ಕೀರ್ತಿ ಹೆಚ್ಚಿಸುತ್ತಿದ್ದಾರೆ.

View post on Instagram