ಮದುವೆಗೆ ಓಕೆ ಅನ್ನೋ ಮುನ್ನ ಹಿಂಗೆಲ್ಲ ಯೋಚಿಸಿದ್ದೀರಾ?
ಹಿರಿಯರು ನಿಶ್ಚಯಿಸಿದ ಹುಡುಗ ಅಥವಾ ಹುಡುಗಿಯನ್ನುಬಾಳ ಸಂಗಾತಿಯೆಂದು ಒಪ್ಪಿಕೊಳ್ಳೋ ಮುನ್ನ ಮನಸ್ಸಿನ ಮಾತು ಹಂಚಿಕೊಳ್ಳೋದು, ಒಂದಿಷ್ಟು ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳೋದು ಅಗತ್ಯ.ಇಲ್ಲವಾದ್ರೆ ಮುಂದೆ ವೈವಾಹಿಕ ಬದುಕು ಹಳಿ ತಪ್ಪಿದ್ರು ತಪ್ಪಬಹುದು.
ಮದುವೆ ಸ್ವರ್ಗದಲ್ಲಿನಿಶ್ಚಯವಾಗುತ್ತೆ ಅನ್ನೋ ಮಾತಿದೆ. ಅದೇನೇ ಆದ್ರೂ ಭೂಮಿ ಮೇಲೆ ನಡೆಯೋ ಮದುವೆ ವಿಚಾರದಲ್ಲಿಪ್ರತಿಯೊಬ್ಬರೂ ಒಂದಿಷ್ಟು ಎಚ್ಚರಿಕೆ ವಹಿಸಿದ್ರೆ ಭವಿಷ್ಯ ಸುಖ,ನೆಮ್ಮದಿಯಿಂದ ಕೂಡಿರುತ್ತೆ.ಅದ್ರಲ್ಲೂ ಮನೆಯವರು ನಿಶ್ಚಯಿಸಿದ ವಿವಾಹವಾಗಿದ್ರೆ ನೀವು ಒಂದಿಷ್ಟು ವಿಷಯಗಳ ಕಡೆಗೆ ಗಮನ ಹರಿಸೋದು ಅತ್ಯಗತ್ಯ. ಪ್ರೇಮ ವಿವಾಹವಾಗುತ್ತಿರೋರಿಗೆ ತಮ್ಮ ಭಾವಿ ಸಂಗಾತಿ ಬಗ್ಗೆ ಒಂದಿಷ್ಟು ಮಾಹಿತಿ ಇದ್ದೇಇರುತ್ತೆ.ಹಲವು ದಿನಗಳ ಅಥವಾ ವರ್ಷಗಳ ಒಡನಾಟ ಒಬ್ಬರನ್ನೊಬ್ಬರು ಅರಿಯಲು ನೆರವಾಗಿರುತ್ತೆ.ಹಾಗಂತ ಪ್ರೇಮ ವಿವಾಹವಾದೋರೆಲ್ಲ ಸುಖವಾಗಿದ್ದಾರೆ ಎಂದು ಭಾವಿಸಬೇಡಿ.ಇಂದು ವಿಚ್ಛೇದನೆ ಕೋರಿ ಕೋರ್ಟ್ ಮೆಟ್ಟಿಲೇರುತ್ತಿರೋ ವಿವಾಹಗಳಲ್ಲಿ ಪ್ರೀತಿಸಿ ಸತಿ-ಪತಿಗಳಾದವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.ಹೀಗಾಗಿ ಆರೇಂಜ್ ಮ್ಯಾರೇಜ್ ಯಶಸ್ಸಿನ ಬಗ್ಗೆ ಮಾತ್ರ ಅನುಮಾನ ವ್ಯಕ್ತಪಡಿಸೋ ಅಗತ್ಯವಿಲ್ಲ.ಆದ್ರೆ ಮನೆಯವರು ಇಷ್ಟಪಟ್ರು ಅಥವಾ ಒತ್ತಾಯಿಸಿದ್ರು ಎಂಬ ಕಾರಣಕ್ಕೆ ಮನಸ್ಸಿನಲ್ಲಿ ಹತ್ತಾರು ಅನುಮಾನ,ಗೊಂದಲಗಳನ್ನಿಟ್ಟುಕೊಂಡು ಮದುವೆಯಾಗಬೇಡಿ.ಒಂದು ಡ್ರೆಸ್ ಖರೀದಿಸೋ ಮುನ್ನ ಹತ್ತಾರು ಬಾರಿ ಆಲೋಚಿಸೋ ನಾವು, ಜೀವನಪರ್ಯಂತ ಒಟ್ಟಿಗಿರೋ ವ್ಯಕ್ತಿಯ ಆಯ್ಕೆಗೂ ಮುನ್ನ ಯೋಚಿಸೋದ್ರಲ್ಲಿ ಯಾವುದೇ ತಪ್ಪಿಲ್ಲ.ಹೀಗಾಗಿ ಹಿರಿಯರು ನಿಶ್ಚಯಿಸಿದ ಮದುವೆಗೆ ಓಕೆ ಅನ್ನೋ ಮುನ್ನ ಈ ಕೆಳಗಿನ ಕೆಲವು ವಿಚಾರಗಳನ್ನು ಸ್ಪಷ್ಟಪಡಿಸಿಕೊಳ್ಳಿ.
ಮಗುವಿಗೆ ಪಾಲಕರು ನೀಡಬೇಕಿರೋದು ಲಂಚವೋ, ಬಹುಮಾನವೋ?
ಭೇಟಿಯಾಗಿ ಮಾತನಾಡಿ
ಹಿಂದಿನ ಕಾಲದಲ್ಲಿ ಮದುವೆಗೂ ಮುನ್ನ ಹುಡುಗ-ಹುಡುಗಿ ಭೇಟಿಯಾಗೋದು ಬಿಡಿ, ಮುಖ ಸಹ ನೋಡುವಂತಿರಲಿಲ್ಲ.ಆದ್ರೆ ಈಗ ಹಾಗಿಲ್ಲ,ಮದುವೆಯನ್ನು ಮನೆಯವರೇ ನಿಶ್ಚಯಿಸಿದ್ರೂ ಹುಡುಗ, ಹುಡುಗಿ ಭೇಟಿಯಾಗಿ ಮಾತನಾಡಲು,ಸುತ್ತಾಡಲು ಯಾರೂ ಅಡ್ಡಿಪಡಿಸೋದಿಲ್ಲ. ಮನೆಯವರು ತೋರಿಸಿದ ಹುಡುಗ ಅಥವಾ ಹುಡುಗಿಯನ್ನು ಬಾಳ ಸಂಗಾತಿಯನ್ನಾಗಿ ಆಯ್ಕೆ ಮಾಡೋ ಮುನ್ನ ಅವರೊಂದಿಗೆ ಕೂತು ಮಾತನಾಡಿ. ಒಂದೇ ಭೇಟಿಯಲ್ಲಿ ನಿರ್ಧಾರ ಕೈಗೊಳ್ಳಲು ಸಾಧ್ಯವಾಗದಿದ್ರೆ ಇನ್ನೊಮ್ಮೆ ಭೇಟಿಯಾಗಿ ಮಾತನಾಡಿ. ಇದ್ರಲ್ಲಿ ಯಾವುದೇ ತಪ್ಪಿಲ್ಲ.
ಉದ್ಯೋಗ, ಆರ್ಥಿಕ ಸ್ಥಿತಿ
ನಾವು ಆದರ್ಶ, ಗುಣ, ನಡತೆಗಳ ಜೊತೆ ಉದ್ಯೋಗ ಹಾಗೂ ಆರ್ಥಿಕ ಸ್ಥಿತಿಯ ಬಗ್ಗೆಯೂ ಗಮನ ಹರಿಸಬೇಕಾದ ಅಗತ್ಯ ಇಂದಿನ ದಿನಗಳಲ್ಲಿ ಹೆಚ್ಚಿದೆ. ಭವಿಷ್ಯದ ದೃಷ್ಟಿಯಿಂದ ಹುಡುಗ ಅಥವಾ ಹುಡುಗಿಯ ಗುಣ-ನಡತೆ ಜೊತೆ ಆತ ಅಥವಾ ಆಕೆಯ ಉದ್ಯೋಗದ ಬಗ್ಗೆಯೂ ಯೋಚಿಸಬೇಕಾಗುತ್ತೆ. ಹುಡುಗಿ ಅಥವಾ ಹುಡುಗನ ವಿದ್ಯಾರ್ಹತೆ, ಉದ್ಯೋಗದ ಬಗ್ಗೆ ಮಾಹಿತಿ ಕೇಳಿ ತಿಳಿದುಕೊಳ್ಳೋದ್ರಲ್ಲಿ ಯಾವುದೇ ತಪ್ಪಿಲ್ಲ. ಮದುವೆ ಬಳಿಕ ಪತಿ ಉದ್ಯೋಗ ಚೆನ್ನಾಗಿಲ್ಲಅಥವಾ ತನಗಿಂತ ಕಡಿಮೆ ವಿದ್ಯಾರ್ಹತೆ ಹೊಂದಿದ್ದಾನೆ ಎಂಬ ಕಾರಣಕ್ಕೆ ಪತ್ನಿ ಮನಸ್ಸು ಕೆಡಿಸಿಕೊಳ್ಳೋದು ಅಥವಾ ಪತ್ನಿ ತನಗಿಂತ ಜಾಸ್ತಿ ಸಂಬಳ ಪಡೆಯುತ್ತಾಳೆ ಎಂಬ ಕಾರಣಕ್ಕೆ ಪತಿ ಕೀಳರಿಮೆ ಬೆಳೆಸಿಕೊಂಡು ಸಂಬಂಧ ಕೆಡಿಸಿಕೊಳ್ಳೋದಕ್ಕಿಂತ ವಿವಾಹಕ್ಕೆ ಮುನ್ನವೇ ಈ ಬಗ್ಗೆ ವಿಚಾರಿಸೋದು ಒಳ್ಳೆಯದು.
ಈ ಗುಣ ಪತಿಯಲ್ಲಿದ್ದರೇ ನೀವು ಲಕ್ಕಿ ಅನ್ನೋದರಲ್ಲಿ ಸಂಶಯ ಬೇಡ
ಅನುಮಾನಗಳನ್ನು ಪರಿಹರಿಸಿಕೊಳ್ಳಿ
ಗುರುತು ಪರಿಚಯವಿಲ್ಲದ ವ್ಯಕ್ತಿ ಜೊತೆ ಇಡೀ ಜೀವನ ಕಳೆಯೋ ನಿರ್ಧಾರ ಕೈಗೊಳ್ಳೋದು ಖಂಡಿತಾ ಸುಲಭದ ಕೆಲಸವಲ್ಲ.ಮನಸ್ಸಿನಲ್ಲಿ ನೂರಾರು ಪ್ರಶ್ನೆಗಳು,ಅನುಮಾನಗಳಿರುತ್ತವೆ. ಮದುವೆಗೆ ಓಕೆ ಅನ್ನೋ ಮುನ್ನ ಅವುಗಳನ್ನು ಪರಿಹರಿಸಿಕೊಳ್ಳೋದು ಒಳ್ಳೆಯದು. ಅನುಮಾನಗಳೊಂದಿಗೆ ಮದುವೆಯಾದ್ರೆ ಮುಂದೆ ಸಂಕಷ್ಟ ಎದುರಾಗೋದು ಗ್ಯಾರಂಟಿ.
ಕನಸು, ಆದ್ಯತೆಗಳ ಬಗ್ಗೆ ವಿವರಿಸಿ
ಭವಿಷ್ಯದ ಕುರಿತು ಪ್ರತಿಯೊಬ್ಬರಿಗೂ ಕನಸುಗಳಿರುತ್ತವೆ.ಆದ್ರೆ ಮದುವೆ ಬಳಿಕ ನಿಮ್ಮ ಕನಸು ನನಸಾಗಲು ಸಂಗಾತಿಯ ಬೆಂಬಲವೂ ಅಗತ್ಯ.ಹೀಗಾಗಿ ಮದುವೆಗೆ ಮುನ್ನವೇ ನಿಮ್ಮ ಕನಸು, ಆದ್ಯತೆಗಳ ಬಗ್ಗೆ ಮುಕ್ತವಾಗಿ ಮಾತನಾಡಿ. ಉದಾಹರಣೆಗೆ ಹುಡುಗೀರಿಗೆ ಪದವಿ ಮುಗಿಯುತ್ತಿದ್ದಂತೆ ಕುಟುಂಬದವರು ಹುಡುಗನನ್ನು ನೋಡಿ ಮದುವೆ ಫಿಕ್ಸ್ ಮಾಡುತ್ತಾರೆ. ಆದ್ರೆ ಕೆಲವು ಹುಡುಗೀರಿಗೆ ಇನ್ನೂ ಓದು ಮುಂದುವರಿಸಬೇಕು, ಕೆಲಸಕ್ಕೆ ಸೇರಬೇಕು ಎಂಬ ಬಯಕೆ ಇರುತ್ತೆ. ಮದುವೆಯಾದ ಬಳಿಕ ಹುಡುಗನ ಬಳಿ ಇದನ್ನೆಲ್ಲ ಹೇಳಿ ಆತ ಒಪ್ಪಿಕೊಳ್ಳದಿದ್ರೆ ಬೇಸರಪಟ್ಟುಕೊಳ್ಳೋ ಬದಲು ಮೊದಲೇ ಹೇಳಿಬಿಡೋದು ಒಳ್ಳೆಯದು.
ನಿಮ್ಮನ್ನು ನೀವು ಪ್ರೀತಿಸೋದು ಮುಖ್ಯ: ಈ ಸೂತ್ರಗಳನ್ನು ಅಳವಡಿಸಿ
ಕುಟುಂಬದ ಮಾಹಿತಿ ಪಡೆಯಿರಿ
ಮದುವೆ ಕೇವಲ ಹುಡುಗ-ಹುಡುಗಿಗೆ ಮಾತ್ರ ಸಂಬಂಧಿಸಿದ ವಿಷಯವಲ್ಲ.ಇದು ಎರಡು ಕುಟುಂಬಗಳನ್ನು ಬೆಸೆಯೋ ನಂಟು.ಅಲ್ಲದೆ, ಮದುವೆಯಾದ ಬಳಿಕ ಪರಸ್ಪರ ಒಬ್ಬರು ಇನ್ನೊಬ್ಬರ ಕುಟುಂಬದೊಂದಿಗೆ ಹೊಂದಿಕೊಂಡು ಬಾಳೋದು ಅವಶ್ಯ. ಹೀಗಾಗಿ ಮದುವೆಗೆ ಮುನ್ನ ಪರಸ್ಪರ ಒಬ್ಬರ ಕುಟುಂಬದ ಬಗ್ಗೆ ಇನ್ನೊಬ್ಬರು ತಿಳಿದುಕೊಳ್ಳೋದ್ರಲ್ಲಿ ತಪ್ಪಿಲ್ಲ.
ಜಂಟಿ ಪಯಣಕ್ಕೆ ಜೊತೆಯಾಗಬಹುದೇ ಯೋಚಿಸಿ
ಮದುವೆಯೆಂದ್ರೆ ಬದುಕಿನ ಪಯಣಕ್ಕೆ ಜೊತೆಗಾರರನ್ನು ಸೇರಿಸಿಕೊಳ್ಳೋದು. ಹೀಗಾಗಿ ಜಂಟಿ ಪಯಣ ಪ್ರಾರಂಭಿಸೋ ಮುನ್ನ ಹೊಂದಾಣಿಕೆ ಬಗ್ಗೆಯೂ ಯೋಚಿಸಿ. ನಿಮ್ಮ ಗುಣ, ಯೋಚನೆಗೆ ಆಕೆ ಅಥವಾ ಆತ ಹೊಂದಿಕೆಯಾಗುತ್ತಾರಾ ಎಂಬ ಬಗ್ಗೆ ಗಂಭೀರ ಚಿಂತನೆ ನಡೆಸೋದು ಒಳ್ಳೆಯದು. ಹಿರಿಯರು ಮದುವೆಯಾದ ಮೇಲೆ ಆತ ಅಥವಾ ಆಕೆ ಸರಿ ಹೋಗುತ್ತಾಳೆ, ಮುಂದೆ ಎಲ್ಲ ಚೆನ್ನಾಗಿ ನಡೆಯುತ್ತೆ ಎಂಬ ಕಿವಿಮಾತು ಹೇಳ್ಬಹುದು. ಆದ್ರೆ ಅದೆಲ್ಲವೂ ನಿಜವೆಂದು ನೀವು ಭಾವಿಸೋ ಅಗತ್ಯವಿಲ್ಲ. ನಿಮ್ಮ ಮನಸ್ಸಿನ ಮಾತನ್ನು ಕೇಳಲು ಮರೆಯಬೇಡಿ.