ವೈದ್ಯೆ ಕೃತಿಕಾ ರೆಡ್ಡಿ ಹತ್ಯೆ ಪ್ರಕರಣದಲ್ಲಿ, ಎಫ್‌ಎಸ್‌ಎಲ್ ತಜ್ಞರು ಆರೋಪಿ ಪತಿ ಮಹೇಂದ್ರ ರೆಡ್ಡಿಯ ಫೋನ್‌ನಿಂದ ಡಿಲೀಟ್ ಮಾಡಲಾಗಿದ್ದ ಡಿಜಿಟಲ್ ದಾಖಲೆಗಳನ್ನು ಮರುಸಂಪಾದಿಸಿದ್ದಾರೆ. ಈ ದಾಖಲೆಗಳಲ್ಲಿ, ಆತ ತನ್ನ ಮತ್ತೊಬ್ಬ ಪ್ರಿಯತಮೆಗೆ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡ ಸಂದೇಶಗಳು ಪತ್ತೆಯಾಗಿದೆ.

ಬೆಂಗಳೂರು (ಏ.8): ವೈದ್ಯೆ ಕೃತಿಕಾ ರೆಡ್ಡಿ ಹತ್ಯೆ ಪ್ರಕರಣದಲ್ಲಿ ಆರೋಪಿ ಮಹೇಂದ್ರ ರೆಡ್ಡಿಯ ಕರಾಳ ಮುಖ ಬಯಲಾಗಿದೆ. ಎಫ್‌ಎಸ್‌ಎಲ್ (FSL) ತಂಡವು ಆರೋಪಿಯ ಡಿಜಿಟಲ್ ಫೈಲ್‌ಗಳನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದು, ಮಹೇಂದ್ರ ರೆಡ್ಡಿ ತನ್ನ ಮತ್ತೊಬ್ಬ ಪ್ರಿಯತಮೆಗೆ ಕಳುಹಿಸಿದ್ದ ಶಾಕಿಂಗ್ ಮೆಸೇಜ್‌ಗಳು ತನಿಖೆಯ ದಿಕ್ಕನ್ನೇ ಬದಲಿಸಿವೆ.

ಎಫ್‌ಎಸ್‌ಎಲ್ ತಜ್ಞರು ಮಹೇಂದ್ರನ ಫೋನ್‌ನಿಂದ ಸುಮಾರು 485 ಫೋನ್‌ಪೇ (PhonePe) ಚಾಟ್‌ಗಳು ಮತ್ತು ಅಳಿಸಿಹಾಕಿದ್ದ ಡಿಜಿಟಲ್ ದಾಖಲೆಗಳನ್ನು ಮರುಸಂಪಾದಿಸಿದ್ದಾರೆ. ಈ ಸಂದೇಶಗಳು ಆರೋಪಿಯ ತಪ್ಪೊಪ್ಪಿಗೆಯಂತಿದ್ದು, ಆತ ಕೃತಿಕಾಳನ್ನು ಕೊಲೆ ಮಾಡಿದ ಬಳಿಕ ಆಕೆಯ ಸ್ಥಿತಿಯ ಬಗ್ಗೆ ಮತ್ತು ತನ್ನ ಭವಿಷ್ಯದ ಬಗ್ಗೆ ಪ್ರಿಯತಮೆಗೆ ಸುದೀರ್ಘವಾಗಿ ವಿವರಿಸಿದ್ದ.

ಮೆಸೇಜ್‌ಗಳಲ್ಲಿ ಏನಿದೆ?

ಆರೋಪಿ ಮಹೇಂದ್ರ ರೆಡ್ಡಿ ತನ್ನ ಪ್ರಿಯತಮೆಗೆ ಕಳುಹಿಸಿದ್ದ ಸಂದೇಶಗಳು ಅತ್ಯಂತ ಭೀಕರವಾಗಿವೆ. 'ನಾನು ಕೃತಿಕಾಳನ್ನು ಕೊಂದಿದ್ದೇನೆ. ಶೀಘ್ರದಲ್ಲೇ ಹೋಗಿ ನನ್ನ ಮತ್ತು ಅವಳ ಹೆತ್ತವರಿಗೆ ವಿಷಯ ತಿಳಿಸುತ್ತೇನೆ. ನಾನು ಕಂಬಿಗಳ ಹಿಂದೆ ಹೋಗುತ್ತೇನೆ, ಆಗ ನೀವೂ ಸೇರಿದಂತೆ ಎಲ್ಲರೂ ಸಂತೋಷವಾಗಿರುತ್ತೀರಿ ಎಂದು ಭಾವಿಸುತ್ತೇನೆ' ಎಂದು ಬರೆದಿದ್ದಾರೆ."ನಾನು ಕೊಲೆಗಾರನಂತೆ ಜೀವನ ನಡೆಸುತ್ತೇನೆ. ಕೊಲೆಗಾರ ಎಂದಿಗೂ ಸಂತೋಷವಾಗಿರಲು ಸಾಧ್ಯವಿಲ್ಲ. ಪೊಲೀಸರು ನಿಮಗೆ ಕರೆ ಮಾಡಿದರೆ, ನಾವು ಕೇವಲ ಸ್ನೇಹಿತರು ಎಂದು ಹೇಳಿ. ಬೇರೆ ಏನನ್ನೂ ಮಾತನಾಡಬೇಡಿ" ಎಂದು ಆತ ತನ್ನ ಪ್ರಿಯತಮೆಗೆ ಸೂಚನೆ ನೀಡಿ ಸಂದೇಶ ಕೂಡ ಕಳಿಸಿದ್ದ.

ಜಾಮೀನು ಅರ್ಜಿ ವಜಾ

ಈಗಾಗಲೇ ಸೆಷನ್ಸ್ ಕೋರ್ಟ್‌ನಲ್ಲಿ ಜಾಮೀನು ಪಡೆಯಲು ಮಹೇಂದ್ರ ರೆಡ್ಡಿ ಹರಸಾಹಸ ಪಟ್ಟಿದ್ದ. ಆದರೆ, ಎಫ್‌ಎಸ್‌ಎಲ್ ರಿಪೋರ್ಟ್ ಮೂಲಕ ಬಹಿರಂಗವಾಗಿರುವ ಈ ನಿರ್ಣಾಯಕ ಡಿಜಿಟಲ್ ಪುರಾವೆಗಳನ್ನು ಪರಿಗಣಿಸಿದ ನ್ಯಾಯಾಲಯ, ಮಂಗಳವಾರ ಆರೋಪಿಯ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ. ತನಿಖಾ ತಂಡವು ಅತ್ಯಂತ ಪಾರದರ್ಶಕವಾಗಿ ಮತ್ತು ವೈಜ್ಞಾನಿಕವಾಗಿ ಡಿಜಿಟಲ್ ಫೈಲ್‌ಗಳನ್ನು ಹೊರತೆಗೆದಿರುವುದು, ಪ್ರಕರಣದಲ್ಲಿ ಮಹೇಂದ್ರ ರೆಡ್ಡಿಯ ದೋಷಿ ಸಾಬೀತಾಗುವ ಸಾಧ್ಯತೆಯನ್ನು ಬಲಪಡಿಸಿದೆ.

ಚರ್ಮರೋಗ ತಜ್ಞೆ ಕೃತಿಕಾ ರೆಡ್ಡಿ ಕೊಲೆ ಪ್ರಕರಣ

ಬೆಂಗಳೂರಿನಲ್ಲಿ 2025ರ ಏಪ್ರಿಲ್‌ನಲ್ಲಿ ನಡೆದ ಚರ್ಮರೋಗ ತಜ್ಞೆ ಡಾ. ಕೃತಿಕಾ ರೆಡ್ಡಿ ಹತ್ಯೆ ಪ್ರಕರಣವು ವೈದ್ಯಕೀಯ ಲೋಕವನ್ನು ಬೆಚ್ಚಿಬೀಳಿಸಿತ್ತು. ವೃತ್ತಿಯಲ್ಲಿ ಸರ್ಜನ್ ಆಗಿದ್ದ ಮಹೇಂದ್ರ ರೆಡ್ಡಿ, ತನ್ನ ಪತ್ನಿ ಕೃತಿಕಾ ಅವರಿಗೆ ಅತಿಯಾದ ಪ್ರಮಾಣದಲ್ಲಿ 'ಪ್ರೊಪೋಫೋಲ್' (Propofol) ಎಂಬ ಅರಿವಳಿಕೆ ಔಷಧವನ್ನು ನೀಡುವ ಮೂಲಕ ಉಸಿರುಗಟ್ಟಿಸಿ ಹತ್ಯೆ ಮಾಡಿದ್ದ. ಕೊಲೆಯ ಬಳಿಕ ಇದೊಂದು ಸಹಜ ಸಾವು ಎಂದು ಬಿಂಬಿಸಲು ಆತ ಹರಸಾಹಸ ಪಟ್ಟಿದ್ದ. ಕೃತಿಕಾ ನಿಧನರಾದ ಸಂದರ್ಭದಲ್ಲಿ, ಯಾವುದೇ ಅನುಮಾನ ಬಾರದಂತೆ ಮರಣೋತ್ತರ ಪರೀಕ್ಷೆ (Post-mortem) ಮಾಡದಂತೆ ತಡೆಯಲು ಆರೋಪಿ ಪ್ರಯತ್ನಿಸಿದ್ದ. ಆದರೆ, ಶವಪರೀಕ್ಷೆಯಲ್ಲಿ ದೇಹದಲ್ಲಿ ಅತಿಯಾದ ಪ್ರಮಾಣದ ಅರಿವಳಿಕೆ ಔಷಧದ ಅಂಶ ಪತ್ತೆಯಾಗಿದ್ದೇ ಪ್ರಕರಣದಲ್ಲಿನ ದೊಡ್ಡ ತಿರುವಾಗಿತ್ತು.ತನಿಖೆಯ ಪ್ರಕಾರ, ಆರೋಪಿಯು ತನ್ನ ಇತರ ಪ್ರಿಯತಮೆಯರೊಂದಿಗಿನ ಅಕ್ರಮ ಸಂಬಂಧಕ್ಕಾಗಿ ಮತ್ತು ಕೃತಿಕಾಳ ಆಸ್ತಿಯನ್ನು ವಶಪಡಿಸಿಕೊಳ್ಳುವ ದುರಾಸೆಯಿಂದ ಈ ಕೃತ್ಯ ಎಸಗಿದ್ದ.