Asianet Suvarna News Asianet Suvarna News

ಜನರ ಮನೆ ಬಾಗಿಲಿಗೆ ಆಡಳಿತ ಸರ್ಕಾರದ ಉದ್ದೇಶ: ಸಚಿವ ಎಚ್‌.ಕೆ.ಪಾಟೀಲ್‌

ರಾಜ್ಯದ ಜನರ ಮನೆ ಬಾಗಿಲಿಗೆ ಆಡಳಿತ ತೆಗೆದುಕೊಂಡು ಹೋಗುವ ಇಚ್ಛಾಶಕ್ತಿಯೊಂದಿಗೆ ಪ್ರಜೆಗಳತ್ತ ಪ್ರಭುತ್ವ ಈ ಕಲ್ಪನೆಯೊಂದಿಗೆ ನಮ್ಮ ಸರ್ಕಾರ ಕಾರ್ಯ ನಿರ್ವಹಿಸುತ್ತಿದೆ. ಹಿರಿಯ ಅಧಿಕಾರಿಗಳು, ಸಿಬ್ಬಂದಿಗಳು ಸ್ಪಂದಿಸಿ ಕೆಲಸ ಮಾಡಬೇಕು ಇಲ್ಲವಾದಲ್ಲಿ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ ಎಂದು ಸಚಿವ ಎಚ್.ಕೆ.ಪಾಟೀಲ್‌ ಹೇಳಿದರು.

The Government objective is to bring people to their doorsteps Says Minister HK Patil gvd
Author
First Published Jan 31, 2024, 6:03 AM IST

ಗದಗ (ಜ.31): ರಾಜ್ಯದ ಜನರ ಮನೆ ಬಾಗಿಲಿಗೆ ಆಡಳಿತ ತೆಗೆದುಕೊಂಡು ಹೋಗುವ ಇಚ್ಛಾಶಕ್ತಿಯೊಂದಿಗೆ ಪ್ರಜೆಗಳತ್ತ ಪ್ರಭುತ್ವ ಈ ಕಲ್ಪನೆಯೊಂದಿಗೆ ನಮ್ಮ ಸರ್ಕಾರ ಕಾರ್ಯ ನಿರ್ವಹಿಸುತ್ತಿದೆ. ಹಿರಿಯ ಅಧಿಕಾರಿಗಳು, ಸಿಬ್ಬಂದಿಗಳು ಸ್ಪಂದಿಸಿ ಕೆಲಸ ಮಾಡಬೇಕು ಇಲ್ಲವಾದಲ್ಲಿ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ ಎಂದು ಕಾನೂನು, ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ್‌ ಹೇಳಿದರು. ಮಂಗಳವಾರ ಇಲ್ಲಿ ಮುಂಡರಗಿ ತಾಲೂಕು ಮಟ್ಟದ ಜನತಾ ದರ್ಶನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

75 ವರ್ಷದ ನಂತರವೂ ನಮಗೆ ಶೌಚಾಲಯವಿಲ್ಲ, ಇರುವ ಶೌಚಾಲಯಗಳು ಸ್ವಚ್ಛವಾಗಿಲ್ಲ ಎಂದರೆ, ಇಂತಹ ಆಡಳಿತ ವ್ಯವಸ್ಥೆಯ ಬಗ್ಗೆ ಸಾರ್ವಜನಿಕರಿಗೆ ಸಹಜವಾಗಿಯೇ ಆಕ್ರೋಶ ಉಂಟಾಗುತ್ತದೆ. ಸಾರ್ವಜನಿಕರ ಸಮಸ್ಯೆಗಳ ಬಗ್ಗೆ ಈ ತಾತ್ಸಾರ ಮನೋಭಾವ ಆಡಳಿತ ವ್ಯವಸ್ಥೆಗೆ ಬಿಸಿ ಮುಟ್ಟಿಸಿ, ಜಿಡ್ಡುಗಟ್ಟಿದ ಆಡಳಿತವನ್ನು ಚುರುಕುಗೊಳಿಸುವುದೇ ಜನತಾ ದರ್ಶನ ಮುಖ್ಯ ಉದ್ದೇಶವಾಗಿದೆ ಎಂದ ಅವರು ಜಿಲ್ಲಾ ಕೇಂದ್ರದಲ್ಲಿ ನಡೆದ ಜನತಾ ದರ್ಶನ ಅಂಕಿಗಳು ಮತ್ತು ಸಾಧಿಸಿದ ಪ್ರಗತಿಯ ಕುರಿತು ವಿವರಿಸಿದರು.

ಕಾಂಗ್ರೆಸ್ ಸಮುದ್ರ ಇದ್ದಂತೆ, ಶೆಟ್ಟರ್ ಬಂದ್ರು ಅಂತಾ ಉಕ್ಕಲಿಲ್ಲ, ಹೋದ್ರು ಅಂತಾ ಕಡಿಮೆಯಾಗಲ್ಲ: ಸಚಿವ ಎಚ್‌.ಕೆ.ಪಾಟೀಲ್‌

ಸರ್ಕಾರಿ ಶಾಲೆಗೆ ಚಾವಣಿ ಇಲ್ಲ: ವಾರ್ಡ್ ನಂ 16ರಲ್ಲಿರುವ ಸರ್ಕಾರಿ ಶಾಲೆಗೆ ಚಾವಣಿ ಇಲ್ಲ. ಮಕ್ಕಳಿಗೆ ಸಮಸ್ಯೆಯಾಗುತ್ತಿದೆ ಎಂದಾಗ ಸಚಿವರು ಮಾತನಾಡಿ, ಈ ಶಾಲೆಯೂ ಶಾಸಕ ದತ್ತು ತೆಗೆದುಕೊಂಡ ಶಾಲೆ ಆಗಿದೆ. ಇನ್ನೆರಡು ತಿಂಗಳಲ್ಲಿ ಈ ಸಮಸ್ಯೆ ಬಗೆಹರಿಸಲಾಗುವುದು. ಡಿಡಿಪಿಐ ಈ ಸಮಸ್ಯೆ ತುರ್ತು ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು. ಸೂರು ಇಲ್ಲದ ಹಿನ್ನೆಲೆ ತಾಲೂಕಿನ ಬಿದರಳ್ಳಿಯ ಇಬ್ಬರು ರೈತರು ಮನವಿ ಮಾಡಿಕೊಂಡರು. ಈ ವೇಳೆ ಬಿದರಳ್ಳಿ ಗ್ರಾಮದ ಪಿಡಿಒ ಅವರನ್ನು ಸ್ಥಳಕ್ಕೆ ಕರೆಸುವಂತೆ ಸಚಿವರು ಇಒ ಅವರಿಗೆ ಸೂಚಿಸಿದರು. 

ಸಮಯ ಕಳೆದರೂ ಪಿಡಿಒ ಜನತಾ ದರ್ಶನಕ್ಕೆ ಆಗಮಿಸದೇ ಇರುವುದರಿಂದ ಅಧಿಕಾರಿಗಳ ಮೇಲೆ ಸಚಿವರು ಕೋಪಗೊಂಡರು. ಕೆಲ ಸಮಯ ನಂತರ ಪಿಡಿಒ ಆಗಮಿಸಿ ಸಮಜಾಯಿಷಿ ಉತ್ತರ ನೀಡಿದರು. ಈ ನಡುವೆ ಸಚಿವರು ಒಂದು ವಾರದೊಳಗೆ ಅರ್ಜಿದಾರರಿಗೆ ನಿವೇಶನ ಪತ್ರ ವಿತರಿಸುವಂತೆ ಸೂಚಿಸಿದರು. ವಿತರಣೆ ಮಾಡದೇ ಇದ್ದರೆ ದೂರು ಸಲ್ಲಿಸುವಂತೆ ತಿಳಿಸಿದರು. ಜನತಾ ದರ್ಶನದಲ್ಲಿ ರೋಣ ಶಾಸಕ, ಖನಿಜ ನಿಗಮದ ಅಧ್ಯಕ್ಷ ಜಿ.ಎಸ್.ಪಾಟೀಲ, ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ, ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಸೇರಿದಂತೆ ಹಿರಿಯ ಅಧಿಕಾರಿಗಳು, ಮುಂಡರಗಿ ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.

ಅಮಾನತ್ತಿಗೆ ಸೂಚನೆ: ಕಾರ್ಮಿಕ ರಾಮಚಂದ್ರಪ್ಪ ಗುಗ್ಗರಿ ಎಂಬುವವರು ತಮ್ಮ ಮಗಳ ಮದುವೆಗೆ ಇಲಾಖೆಯಿಂದ ನೀಡುವ ಸಹಾಯಧನ 60 ಸಾವಿರ ವಿತರಿಸುವಂತೆ ಇಲಾಖೆಗೆ ಕಳೆದ ವರ್ಷವೇ ಅರ್ಜಿ ಸಲ್ಲಿಸಿದ್ದರು. ಆದರೆ, ಒಂದು ವರ್ಷ ನಂತರ ಅರ್ಜಿಯನ್ನು ಕಾರ್ಮಿಕ ಇಲಾಖೆ ಅಧಿಕಾರಿಗಳು ಬೆಂಗಳೂರಿಗೆ ವರ್ಗಾವಣೆ ಮಾಡಿದ್ದನ್ನು ಸಚಿವರು ಗಮನಿಸಿ, ಸೇವಾ ನಿರ್ಲಕ್ಷ್ಯ ಎಸಗಿದ ಅಧಿಕಾರಿಯನ್ನು ಅಮಾನತ್ತಿನಲ್ಲಿ ಇಡಲು ಜಿಲ್ಲಾಧಿಕಾರಿಗೆ ಸೂಚಿಸಿ, ಸಾಧ್ಯವಾದಷ್ಟು ಬೇಗನೇ ಸಮಸ್ಯೆ ಬಗೆ ಹರಿಸುವಂತೆ ಹಿರಿಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಚಾಮುಂಡಿಬೆಟ್ಟಕ್ಕೆ ರೋಪ್ ವೇ ಸಾಧಕ ಬಾಧಕ ಚರ್ಚಿಸಿ ತೀರ್ಮಾನ: ಸಚಿವ ಎಚ್.ಕೆ.ಪಾಟೀಲ್

ಸೋಲಾರ್ ಬಳಕೆ ಮಾಡಿ: ವಿದ್ಯುತ್ ಇಲಾಖೆಗೆ ಸಂಬಂಧಿಸಿದಂತೆ ಹೊಸ ಗುಮ್ಮಗೋಳ ಗ್ರಾಮದ ರೈತರು ಕೊಳವೆ ಬಾವಿಗೆ ವಿದ್ಯುತ್ ಪೂರೈಕೆಗೆ ವಿದ್ಯುತ್ ಕಂಬ ಅಳವಡಿಸುವಂತೆ ಇಲಾಖೆಗೆ ಸೂಚಿಸುವಂತೆ ಮನವಿ ಮಾಡಿದರು. ಮನವಿಯನ್ನು ಗಂಭೀರವಾಗಿ ಪರಿಗಣಿಸಿದ ಸಚಿವರು ವಿದ್ಯುತ್ ಇಲಾಖೆ ಅಧಿಕಾರಿಗಳನ್ನು ಸ್ಥಳದಲ್ಲೆ ಸಂಪರ್ಕಿಸಿ ಸಮಸ್ಯೆ ಬಗೆಹರಿಸಲು ಏನು ತೊಂದರೆ ಎಂದರು. ಇದೇ ಸಂದರ್ಭದಲ್ಲಿ ಕೊಳವೆ ಬಾವಿಗೆ ವಿದ್ಯುತ್ ಪೂರೈಕೆಗೆ ಸೋಲಾರ್ ಅಳವಡಿಸಿಕೊಳ್ಳಲು ಇಲಾಖಾ ಅಧಿಕಾರಿಗಳು ಸೂಚಿಸಿದರು. ಇದಕ್ಕೆ ರೈತರು ಒಪ್ಪದೇ ಇದ್ದಾಗ, ಬೇರೆ ರಾಜ್ಯಗಳಿಗೆ ಹೋಗಿ ಸೋಲಾರ್ ಕೊಳವೆ ಬಾವಿ ಪರಿಶೀಲಿಸಿಕೊಂಡು ಬಂದಿರುವ ರೈತರಿಂದ ಸೋಲಾರ್ ಸಾಧಕ ಬಾಧಕಗಳನ್ನು ಜನತಾ ದರ್ಶನದಲ್ಲಿದ್ದ ಎಲ್ಲರಿಗೂ ಮಾಹಿತಿ ನೀಡಿಸಿದರು. 15 ದಿನಗಳ ಒಳಗಾಗಿ ವಿದ್ಯುತ್ ಪೂರೈಕೆ ಮಾಡುವ ಭರವಸೆಯನ್ನು ನೀಡಿದರು.

Follow Us:
Download App:
  • android
  • ios