ಕಾಂಗ್ರೆಸ್ ಪಕ್ಷ ಎನ್ನುವುದು ಸಮುದ್ರ ಇದ್ದಂತೆ, ಶೆಟ್ಟರ್ ಬಂದ್ರು ಅಂತಾ ಉಕ್ಕಲಿಲ್ಲ, ಹೋದ್ರು ಅಂತಾ ಕಡಿಮೆಯಾಗಲ್ಲ. ಹೀಗೆ ಶೆಟ್ಟರ ಬಿಜೆಪಿಗೆ ಮರು ಸೇರ್ಪಡೆ ಕುರಿತು ಕಾನೂನು ಸಚಿವ ಎಚ್.ಕೆ. ಪಾಟೀಲ ಗದಗ ನಗರದಲ್ಲಿ ತಮ್ಮದೇ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದರು.

ಗದಗ (ಜ.29): ಕಾಂಗ್ರೆಸ್ ಪಕ್ಷ ಎನ್ನುವುದು ಸಮುದ್ರ ಇದ್ದಂತೆ, ಶೆಟ್ಟರ್ ಬಂದ್ರು ಅಂತಾ ಉಕ್ಕಲಿಲ್ಲ, ಹೋದ್ರು ಅಂತಾ ಕಡಿಮೆಯಾಗಲ್ಲ. ಹೀಗೆ ಶೆಟ್ಟರ ಬಿಜೆಪಿಗೆ ಮರು ಸೇರ್ಪಡೆ ಕುರಿತು ಕಾನೂನು ಸಚಿವ ಎಚ್.ಕೆ. ಪಾಟೀಲ ಗದಗ ನಗರದಲ್ಲಿ ತಮ್ಮದೇ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದರು. ಕಾಂಗ್ರೆಸ್ಸಿಗೆ ನೂರಾರು ವರ್ಷಗಳ ಇತಿಹಾಸವಿದೆ, ತತ್ವ ಸಿದ್ಧಾಂತ, ಜನಪರ ಕಾರ್ಯಕ್ರಮಗಳೇ ಕಾಂಗ್ರೆಸ್ ಸಂಘಟನೆಯ ಶಕ್ತಿಯಾಗಿದೆ. ಇದು ಕೇವಲ ಯಾರೊಬ್ಬರಿಂದ ಸಾಧ್ಯವಿಲ್ಲ. ನಮ್ಮದು ಕೋಟಿ ಕೋಟಿ ಕಾರ್ಯಕರ್ತರನ್ನು ಹೊಂದಿರುವ ಪಕ್ಷವಾಗಿದೆ. ಹಾಗಾಗಿ ಶೆಟ್ಟರ್ ಬಗ್ಗೆ ಹೆಚ್ಚಿಗೆ ಚರ್ಚಿಸುವುದು ಅವಶ್ಯವಿಲ್ಲ ಎಂದರು.

Add Asianetnews Kannada as a Preferred SourcegooglePreferred

ಯಾರೊ ಒಬ್ಬರು ಹೋದರು ಅಂತಾ ಕಾಂಗ್ರೆಸ್ ಮೇಲೆ ಪರಿಣಾಮ ಬೀರಲ್ಲ, ಶೆಟ್ಟರ್ ಅವರು ಜಂಟಲ್‌ಮ್ಯಾನ ಅಂತಾ ತಿಳಿದುಕೊಂಡು ಸ್ವಾಗತಿಸಿದ್ದೆವು, ಅವರು ಸಿಎಂ ಆದವರು, ಅವರಿಗೆ ಸೋಲಾದಾಗ ಗೌರವಕ್ಕೆ ಚ್ಯುತಿ ಬರಬಾರದು ಅಂತಾ ಎಂಎಲ್ ಸಿಯನ್ನು ಕೂಡಾ ಕಾಂಗ್ರೆಸ್ ಪಕ್ಷ ಮಾಡಿತ್ತು. ಅವರ ಜೊತೆಗೆ ನಮ್ಮ ಪಕ್ಷ ನಡೆದುಕೊಂಡ ರೀತಿ ಇದು, ಆದರೀಗ ಅವರೇ ಬಿಟ್ಟುಹೋಗಿದ್ದಾರೆ. ಹೋಗ್ಲಿ.. ಕಾಂಗ್ರೆಸ್ಸಿಗೆ ಚಿಂತೆ ಮಾಡುವ ವಿಷಯ ಏನಿಲ್ಲ ಅಂದರು. ಶೆಟ್ಟರ್ ಘರ್ ವಾಪ್ಸಿಯಿಂದ ಲಿಂಗಾಯತ ಮತಗಳು ಮತ್ತೆ ಬಿಜೆಪಿ ಕಡೆಗೆ ಎಂಬ ವಿಶ್ಲೇಷಣೆ ಕುರಿತು ಮಾತನಾಡುತ್ತಾ, ಕೆಲ ಆಸಕ್ತ ವರ್ಗ ಮಾತ್ರ ಹೀಗೆ ಮಾತನಾಡುತ್ತದೆ ಅಷ್ಟೇ. ಯಾವುದೇ ವರ್ಗ, ಯಾವುದೇ ಸಮೂಹ ಕಾಂಗ್ರೆಸ್ ಬಿಟ್ಟು ಹೋಗುವ ಪ್ರಶ್ನೆಯೇ ಇಲ್ಲ‌ ಎಂದರು.

ರಾಜ್ಯದ ಕೋಟ್ಯಂತರ ಬಡವರು ಒಟ್ಟಾಗಿ ಕಾಂಗ್ರೆಸ್ ಜೊತೆಗೆ ಬರುತ್ತಿದ್ದಾರೆ. ಈ ಕಾರಣಕ್ಕೆ ಹತಾಶರಾಗಿರುವ ರಾಜ್ಯ ಬಿಜೆಪಿ ಯಾರನ್ನಾದರೂ ಹಿಡ್ಕೊಂಡು ಬರೋದು. ಪಕ್ಷಾಂತರ ಮಾಡಿಸುವ ಕೆಲಸ ಮಾಡುತ್ತಿದ್ದಾರೆ. ಮೋದಿ ಅವರಿಗೆ ಸಾಧನೆ ಹೇಳೋದಕ್ಕೆ ಏನೂ ಇಲ್ಲ. ಯುವಕರಿಗೆ ಉದ್ಯೋಗ ಕೊಡಲಿಲ್ಲ, ಜನ ಕಲ್ಯಾಣದ ಕೆಲಸ ಮಾಡಲಿಲ್ಲ. ಚುನಾವಣೆ ಬಂತಲ್ಲ ಗಾಬರಿಯಾಗಿ ಅವರನ್ನ, ಇವರನ್ನ ಕರೆದುಕೊಂಡು ಬರುವ ಕೆಲಸ ಮಾಡುತ್ತಿದ್ದಾರೆ ಎಂದರು. ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ ಬಿಜೆಪಿ ಸೇರ್ಪಡೆ ವಿಚಾರ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಶಾಸಕ ಲಕ್ಷ್ಮಣ ಸವದಿ ನಾನು ಅರಿತಿರುವಂತೆ ನಿಷ್ಠುರವಾದಿ, ಜಂಟಲ್‌ಮ್ಯಾನ್. ಸವದಿ ಯಾವುದೇ ಕೆಳಮಟ್ಟದ ಆಲೋಚನೆ ಕೂಡಾ ಮಾಡಲ್ಲ ಎನ್ನುವ ವಿಶ್ವಾಸವಿದೆ. ಪಕ್ಷ ಬಿಡುವ ಆಲೋಚನೆ ಮಾಡಲ್ಲ. ಅಷ್ಟೊಂದು ರಾಜಕೀಯ ಪ್ರಬುದ್ಧತೆ ಅವರಲ್ಲಿದೆ ಎಂದು ಸಚಿವ ಎಚ್.ಕೆ. ಪಾಟೀಲ ವಿಶ್ವಾಸ ವ್ಯಕ್ತ ಪಡಿಸಿದರು.

ಭವಿಷ್ಯದ ವಿದ್ಯುತ್ ಭಾರ ನಿಭಾಯಿಸಲು ಸರ್ಕಾರ ಬದ್ಧ: ಸಚಿವ ಸತೀಶ್‌ ಜಾರಕಿಹೊಳಿ

ಲಾಲು-ನಿತೀಶ್ ಮಧ್ಯೆ ವ್ಯತ್ಯಾಸ ಇವೆ: ಇಂಡಿಯಾ ಒಕ್ಕೂಟದಲ್ಲಿ ಬಿರುಕು ವಿಚಾರ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಕೆಲವು ವಿಚಾರಗಳು ನಮಗೂ ಕೂಡಾ ನೋವು ತರುತ್ತಿವೆ. ಮತ್ತೆ ಹೊಂದಾಣಿಕೆ ಆಗುವ ಲಕ್ಷಣಗಳು ಅಲ್ಲಲ್ಲಿ ಕಾಣುತ್ತಿದೆ. ಬಿಹಾರದಲ್ಲಿ ಲಾಲು ಪ್ರಸಾದ ಯಾದವ್ ಹಾಗೂ ಸಿಎಂ ನಿತೀಶ್ ಕುಮಾರ ಅವರ ನಡುವೆಯೇ ವ್ಯತ್ಯಾಸ ಇವೆ ಎಂದಷ್ಟೇ ಹೇಳುವ ಮೂಲಕ ಆ ಕುರಿತು ಹೆಚ್ಚಿನ ಪ್ರತಿಕ್ರಿಯೆ ನೀಡಲಿಲ್ಲ.