Asianet Suvarna News Asianet Suvarna News

ಆಡಳಿತ ಮಾಡಲಾಗದ ಸಿದ್ದರಾಮಯ್ಯ ಸರ್ಕಾರ ವಿಸರ್ಜಿಸಲಿ: ಶಾಸಕ ಸಿದ್ದು ಸವದಿ

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಯ್ದುಕೊಳ್ಳಲು ವಿಫಲವಾಗಿರುವ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಸತತ ಕೊಲೆ, ಹಲ್ಲೆ ಪ್ರಕರಣಗಳ ನಡುವೆ ೪೨ ವಸ್ತುಗಳ ಬೆಲೆ ಏರಿಕೆ ಮಾಡಿ ರಾಜ್ಯದ ಜನತೆಯನ್ನು ದರೋಡೆ ಮಾಡುತ್ತಿದೆ. 

mla siddu savadi slams on cm siddaramaiah at bagalkote gvd
Author
First Published Jun 26, 2024, 9:20 PM IST | Last Updated Jun 26, 2024, 9:20 PM IST

ರಬಕವಿ-ಬನಹಟ್ಟಿ (ಜೂ.26): ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಯ್ದುಕೊಳ್ಳಲು ವಿಫಲವಾಗಿರುವ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಸತತ ಕೊಲೆ, ಹಲ್ಲೆ ಪ್ರಕರಣಗಳ ನಡುವೆ ೪೨ ವಸ್ತುಗಳ ಬೆಲೆ ಏರಿಕೆ ಮಾಡಿ ರಾಜ್ಯದ ಜನತೆಯನ್ನು ದರೋಡೆ ಮಾಡುತ್ತಿದೆ. ಬಿಟ್ಟಿ ಭಾಗ್ಯಗಳ ನೀಡಿದಂತೆ ಮಾಡಿ, ರೈತರ, ಬಡವರ, ದಲಿತರು ಸೇರಿದಂತೆ ಎಲ್ಲ ಜನತೆಗೂ ಹತ್ತರಷ್ಟು ದರ ಏರಿಕೆ ಬರೆ ಎಳೆದು ನೆಮ್ಮದಿಯಿಂದ ಬದುಕುವ ಭಾಗ್ಯ ಕಸಿದುಕೊಂಡಿದ್ದು ಆಡಳಿತ ನಡೆಸಲಾಗದ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರವನ್ನು ವಿಸರ್ಜಿಸಿ ಜನಾದೇಶಕ್ಕೆ ಮುಂದಾಗಲಿ ಎಂದು ಶಾಸಕ ಸಿದ್ದು ಸವದಿ ಸವಾಲು ಹಾಕಿದರು.

1975ರ ತುರ್ತು ಪರಿಸ್ಥಿತಿ ಹೇರಿಕೆ ವಿರೋಧಿಸಿ ಜಮಖಂಡಿ-ಕಾಗವಾಡ ರಾಜ್ಯ ಹೆದ್ದಾರಿ ಮೇಲೆ ಕಾರ್ಯಕರ್ತರೊಡನೆ ಪ್ರತಿಭಟನೆ ನಡೆಸಿ ಮಾತನಾಡಿದರು.  ಆಡಳಿತ ಮಾಡಲಾಗದ ದುಸ್ಥಿತಿಗೆ ತಲುಪಿದ್ದಾರೆ ಎಂದು ಆರೋಪಿಸಿದರು.ದೇಶದ ಜನತೆ ಕಾಂಗ್ರೆಸ್‌ನ ತುಷ್ಠೀಕರಣಕ್ಕೆ ತಕ್ಕ ಪಾಠ ಕಲಿಸಿದ್ದರೂ ಸೋತರೂ ವಿಜಯೋತ್ಸವ ಆಚರಿಸಕೊಳ್ಳುವ ಮೂಲಕ ಕಾಂಗ್ರೆಸ್ ತನ್ನ ನೈತಿಕ ದಿವಾಳಿತನ ಜಗಜ್ಜಾಹೀರುಗೊಳಿಸಿದೆ ಎಂದು ಲೇವಡಿ ಮಾಡಿದರು.

ಬಿಜೆಪಿ ಸಂವಿಧಾನ ಬದಲಿಸುತ್ತದೆಂದು ಹರಟುವ ಕಾಂಗ್ರೆಸ್ ನಾಯಕರು ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಅವರ ನಾಯಕಿ ಇಂದಿರಾಗಾಂಧಿ ಸಂವಿಧಾನದ ಆಶಯಗಳಿಗೆ ಬೆಂಕಿ ಇಟ್ಟದ್ದು ಇಂದಿಗೆ ೫೦ ವರ್ಷವಾದರೂ ನೆನಪಿಗೆ ಬರುತ್ತಿಲ್ಲವೇ ಎಂದು ಪ್ರಶ್ನಿಸಿದರು. ಅರ್ಧ ಗಂಟೆ ಕಾಲ ನಗರದ ಎಂಎಂ ಬಂಗ್ಲೆ ಎದುರು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದ ಬಿಜೆಪಿ ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೋಗಿದರು. ವಾಹನ ಸಂಚಾರ ಸ್ಥಗಿತಗೊಂಡು ಸವಾರರು ಪರದಾಡುವಂತಾಯಿತು.

ಸಣ್ಣಪುಟ್ಟ ತಪ್ಪು ಮಾಡಿದ ಕುಟುಂಬಗಳಿಗೆ ಸಾವಿರಾರು ರೂಪಾಯಿ ದಂಡ: ಬರಿಸದಿದ್ದರೆ ಗ್ರಾಮದಿಂದ ಸಾಮಾಜಿಕ ಬಹಿಷ್ಕಾರ!

ಪ್ರತಿಭಟನೆಯಲ್ಲಿ ಮಾಜಿ ನಗರಾಧ್ಯಕ್ಷ ಶ್ರೀಶೈಲ ಬೀಳಗಿ, ಸಂಜಯ ತೆಗ್ಗಿ, ಧರೆಪ್ಪ ಉಳ್ಳಾಗಡ್ಡಿ, ಸುರೇಶ ಅಕ್ಕಿವಾಟ, ಚಿದಾನಂದ ಹೊರಟ್ಟಿ, ಪ್ರಭಾಕರ ಮೊಳೇದ, ಭುಜಬಲಿ ವೆಂಕಟಾಪುರ, ಶಿವಪ್ಪ ಬಾಗಲಕೋಟ, ಬಸವರಾಜ ತೆಗ್ಗಿ ಬಸವರಾಜ ಕುಂಚನೂರ, ಶ್ರೀಶೈಲ ಯಾದವಾಡ, ಮಹಾಲಿಂಗಪ್ಪ ಕುಳ್ಳೋಳ್ಳಿ, ಮಲ್ಲಪ್ಪ ಗುರವ, ಸುಭಾಸ್ ಚೋಳಿ, ಸಂಜು ಬಾರಕೋಲ, ವಿಜಯಪ್ರಕಾಶ ದಾನಿಗೊಂಡ, ಪ್ರಭು ಹೂಗಾರ, ರಾಮಣ್ಣ ಹಿಡಕಲ್, ಸಚೀನ್ ಕೊಡತೆ ಸೇರಿದಂತೆ ಮಹಾಲಿಂಗಪುರ, ತೇರದಾಳ, ಜಗದಾಳ, ನಾವಲಗಿ, ತಮದಡ್ಡಿ, ಹಳಿಂಗಳಿ, ಚಿಮ್ಮಡ, ಹನಗಂಡಿ ಗ್ರಾಮಗಳ ಸಾವಿರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.

Latest Videos
Follow Us:
Download App:
  • android
  • ios