ಕರ್ನಾಟಕ ಕಾಂಗ್ರೆಸ್ ಸರ್ಕಾರದ ಸಂಪುಟ ವಿಸ್ತರಣೆ ಕುರಿತ ದೆಹಲಿ ಸಭೆ ಮತ್ತೆ ಮುಂದೂಡಲ್ಪಟ್ಟಿದೆ. ಹೈಕಮಾಂಡ್ ನಾಯಕರ ವಿಳಂಬ ಧೋರಣೆಯಿಂದಾಗಿ ರಾಜ್ಯ ನಾಯಕರು ಮತ್ತು ಸಚಿವ ಆಕಾಂಕ್ಷಿ ಶಾಸಕರಲ್ಲಿ ತೀವ್ರ ಅಸಮಾಧಾನ ಉಂಟಾಗಿದ್ದು, ಕೆಲವರು ದೆಹಲಿಯಿಂದ ವಾಪಸಾಗುತ್ತಿದ್ದಾರೆ. ಈ ರಾಜಕೀಯ ಹೈಡ್ರಾಮಾ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ನವದೆಹಲಿ/ಬೆಂಗಳೂರು (ಜು.29): ಕರ್ನಾಟಕ ಕಾಂಗ್ರೆಸ್ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ಹಾಗೂ ಪುನರ್ರಚನೆಯ ಕಸರತ್ತು ದೆಹಲಿಯಲ್ಲಿ ತೀವ್ರ ಕುತೂಹಲ ಮತ್ತು ಹೈಡ್ರಾಮಾಗೆ ಕಾರಣವಾಗಿದೆ. ಇಂದು ರಾತ್ರಿ ಹೈಕಮಾಂಡ್ ನಾಯಕರ ಜೊತೆ ನಡೆಯಬೇಕಿದ್ದ ಪ್ರಮುಖ ಸಭೆಯು ಮತ್ತೆ ನಾಳೆಗೆ ಮುಂದೂಡಿಕೆಯಾಗಿದೆ. ಇದರಿಂದಾಗಿ ಕಳೆದೆರಡು-ಮೂರು ದಿನಗಳಿಂದ ದೆಹಲಿಯಲ್ಲೇ ಬೀಡುಬಿಟ್ಟಿರುವ ರಾಜ್ಯ ನಾಯಕರು ಹಾಗೂ ಸಚಿವ ಆಕಾಂಕ್ಷಿ ಶಾಸಕರಿಗೆ ತೀವ್ರ ನಿರಾಶೆಯಾಗಿದೆ.
ಸಭೆ ಮುಂದೂಡಿಕೆಗೆ ಕಾರಣವೇನು?
ಹೈಕಮಾಂಡ್ ನಾಯಕರು ಇತರೆ ಪ್ರಮುಖ ಕಾರ್ಯಕ್ರಮಗಳಲ್ಲಿ ಬ್ಯುಸಿಯಾಗಿರುವ ಹಿನ್ನೆಲೆಯಲ್ಲಿ ಇಂದಿನ ಸಭೆಯನ್ನು ಮುಂದೂಡಲಾಗಿದೆ ಎನ್ನಲಾಗಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಪತ್ರಿಕಾಗೋಷ್ಠಿ ಸೇರಿದಂತೆ ತುರ್ತು ರಾಜಕೀಯ ವಿದ್ಯಮಾನಗಳಿಂದಾಗಿ ನಾಯಕರು ಲಭ್ಯವಾಗಿಲ್ಲ. ಹೀಗಾಗಿ ಸಭೆಯನ್ನು ನಾಳೆಗೆ ಮುಂದೂಡಲಾಗಿದ್ದು, ನಾಳೆ ನಡೆಯಲಿರುವ ಚರ್ಚೆಗೂ ಇನ್ನು ನಿರ್ದಿಷ್ಟ ಸಮಯ ನಿಗದಿಯಾಗಿಲ್ಲದಿರುವುದು ರಾಜ್ಯ ನಾಯಕರ ತಲೆಬಿಸಿಗೆ ಕಾರಣವಾಗಿದೆ.
ಹೈಕಮಾಂಡ್ ಕರೆಗೆ ಕಾಯುತ್ತಿರುವ ರಾಜ್ಯ ನಾಯಕರು:
ಸಂಪುಟ ಸಚಿವರ ಅಂತಿಮ ಪಟ್ಟಿಗೆ ಸಮ್ಮತಿ ಪಡೆಯುವ ಸಲುವಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿದ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಸೇರಿದಂತೆ ರಾಜ್ಯದ ಪ್ರಮುಖ ನಾಯಕರು ಮೂರು ದಿನಗಳಿಂದ ದೆಹಲಿಯಲ್ಲೇ ಬೀಡುಬಿಟ್ಟಿದ್ದಾರೆ. ಇಂದು ರಾಹುಲ್ ಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಸಮ್ಮುಖದಲ್ಲಿ ಪಟ್ಟಿ ಫೈನಲ್ ಆಗಬೇಕಿತ್ತು. ಆದರೆ 'ಖರ್ಗೆ ಹಾಗೂ ರಾಹುಲ್ ಬ್ಯುಸಿ' ಎಂಬ ನೆಪ ಹೇಳಿ ಸಮಯವನ್ನು ಮುಂದೂಡಲಾಗುತ್ತಿದ್ದು, ಮೂರು ದಿನ ಕಳೆದರೂ ಹೈಕಮಾಂಡ್ನಿಂದ ಯಾವುದೇ ಸ್ಪಷ್ಟ ಕರೆ ಬಂದಿಲ್ಲ. ಹೈಕಮಾಂಡ್ನ ಈ ವಿಳಂಬ ನಡೆಗೆ ರಾಜ್ಯ ನಾಯಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬೇಸತ್ತು ಊರಿಗೆ ಹೊರಟ ಶಾಸಕರು:
ಇತ್ತ ಹೈಕಮಾಂಡ್ನ ಕರೆಗಾಗಿ ದೆಹಲಿಯ ಹೋಟೆಲ್ ಹಾಗೂ ಕರ್ನಾಟಕ ಭವನದಲ್ಲಿ ಕಾಯ್ದು ಬೇಸತ್ತಿರುವ ಸಚಿವ ಆಕಾಂಕ್ಷಿ ಶಾಸಕರು, 'ಸಿಗುತ್ತೋ-ಇಲ್ಲವೋ (Yes or No) ಎಂಬುದನ್ನು ಸ್ಪಷ್ಟವಾಗಿ ಹೇಳಿದರೆ ನಾವು ಊರಿಗೆ ಹೋಗುತ್ತೇವೆ' ಎಂಬ ನಿರ್ಧಾರಕ್ಕೆ ಬಂದಿದ್ದಾರೆ. ಸತತ ಮೂರು ದಿನಗಳಿಂದ ಯಾವುದೇ ಸ್ಪಷ್ಟನೆ ಸಿಗದೆ ದೆಹಲಿಯಲ್ಲಿ ಸಮಯ ವ್ಯರ್ಥ ಮಾಡುತ್ತಿದ್ದೇವೆ ಎಂದು ಭಾವಿಸಿದ ಕೆಲ ಶಾಸಕರು, ಈಗಾಗಲೇ ದೆಹಲಿಯಿಂದ ಸ್ವಗ್ರಾಮಗಳಿಗೆ ಮರಳಲು ಸಿದ್ಧರಾಗಿದ್ದಾರೆ. 'ಅಂತಿಮ ಪಟ್ಟಿಯಲ್ಲಿ ಹೆಸರಿದ್ದರೆ ಆಮೇಲೆ ನೋಡಿಕೊಳ್ಳೋಣ' ಎನ್ನುತ್ತಾ ಕೆಲ ಶಾಸಕರು ದೆಹಲಿಯಿಂದ ಕಾಲು ಕೀಳುತ್ತಿದ್ದಾರೆ.
ಹೈಕಮಾಂಡ್ ತೀರ್ಮಾನಕ್ಕೆ ಬದ್ಧ ಎಂದ ಸಂತೋಷ್ ಲಾಡ್
ದೆಹಲಿಯಿಂದ ಬೆಂಗಳೂರಿಗೆ ವಾಪಸ್ ಆಗಮಿಸಿದ ಸಂತೋಷ್ ಲಾಡ್ ಅವರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ನಾನು ಪೂರ್ವನಿಯೋಜಿತ ಕಾರ್ಯಕ್ರಮ ಹಿನ್ನೆಲೆ ವಾಪಸಾಗಿದ್ದೇನೆ. ಇವತ್ತು ರಾತ್ರಿಯೊಳಗೆ ಸಚಿವ ಸಂಪುಟ ಪಟ್ಟಿ ಅಂತಿಮವಾಗಲಿದೆ. ನನಗೂ ಸಚಿವ ಸ್ಥಾನ ಸಿಗುತ್ತದೆ ಎಂಬ ವಿಶ್ವಾಸವಿದೆ. ನಾನು ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿದ್ದೇನೆ. ಕಳೆದ ಬಾರಿ ಸಚಿವನಾಗಿದ್ದಾಗ ಒಳ್ಳೆಯ ಕೆಲಸ ಮಾಡಿದ್ದೇನೆ. ಅಂತಿಮವಾಗಿ ಹೈಕಮಾಂಡ್ ತೀರ್ಮಾನಕ್ಕೆ ನಾವೆಲ್ಲ ಬದ್ದ ಎಂದು ಹೇಳಿದರು.
ಒಟ್ಟಿನಲ್ಲಿ, ಸಂಪುಟ ವಿಸ್ತರಣೆ ಕಸರತ್ತು ದೆಹಲಿ ಅಂಗಳದಲ್ಲಿ ತೀವ್ರ ಕುತೂಹಲ ಮೂಡಿಸಿದ್ದು, ಹೈಕಮಾಂಡ್ನ ಈ ವಿಳಂಬ ನೀತಿಯು ರಾಜ್ಯ ಕಾಂಗ್ರೆಸ್ ನಾಯಕರು ಮತ್ತು ಶಾಸಕರ ತಾಳ್ಮೆ ಪರೀಕ್ಷಿಸುವಂತಾಗಿದೆ. ನಾಳೆಯಾದರೂ ಈ ಸಭೆ ನಡೆದು ಅಂತಿಮ ಪಟ್ಟಿಗೆ ಸಮ್ಮತಿ ಸಿಗಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.


