ಬಿ ನಾಗೇಂದ್ರ ರಾಜೀನಾಮೆಯಿಂದ ಹೋರಾಟ ನಿಲ್ಲುವುದಿಲ್ಲ, ಈ ಭ್ರಷ್ಟ ಸರ್ಕಾರ ತೊಲಗುವವರೆಗೂ ಹೋರಾಟ ಮುಂದುವರಿಯುತ್ತದೆ ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. ಸರ್ಕಾರದ ಹಗರಣಗಳ ವಿರುದ್ಧ 'ಬಳ್ಳಾರಿ ಚಲೋ' ಪಾದಯಾತ್ರೆ ನಡೆಯಲಿದೆ ಎಂದು ತಿಳಿಸಿದರು.

ರಾಯಚೂರು(ಸೆ.1) ಜನಾಕ್ರೋಶಕ್ಕೆ ಮಣಿದು ಬಿ ನಾಗೇಂದ್ರ ರಾಜೀನಾಮೆ ಕೊಟ್ಟಿದ್ದಾರೆ. ಆದರೆ ಈ ಹೋರಾಟ ಇಲ್ಲಿಗೆ ನಿಲ್ಲುವುದಿಲ್ಲ, ಈ ಸರ್ಕಾರ ಅಧಿಕಾರ ಬಿಟ್ಟು ತೊಲಗುವವರೆಗೆ ಹೋರಾಟ ಮುಂದುವರಿಯುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ರಾಯಚೂರಿನಿಂದ ಬಳ್ಳಾರಿಯವರೆಗೆ ಪಾದಯಾತ್ರೆ ವಿಚಾರ ಸಂಬಂಧ ಮಾತನಾಡಿದ ಬಿಎಸ್ ಯಡಿಯೂರಪ್ಪ ಅವರು, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ನೇತೃತ್ವದಲ್ಲಿ ನಡೆಯುತ್ತಿದೆ. ಕಾಂಗ್ರೆಸ್ ಸರ್ಕಾರದ ಹತ್ತು ಹಲವು ಹಗರಣಗಳ ವಿರುದ್ಧ ಈ ಬಳ್ಳಾರಿ ಚಲೋ ಯಾತ್ರೆ ಶುರುವಾಗಿದೆ. ಲಿಂಗಸೂಗೂರಿನಿಂದ ಬಳ್ಳಾರಿಯವರೆಗೆ ಪಾದಯಾತ್ರೆ ನಡೆಯುತ್ತೆ ಎಂದರು.

ಮುಖ್ಯಮಂತ್ರಿಗೆ ಈಗ ಜ್ಞಾನೋದಯ ಆಗಿದ್ರೆ ಸಂತೋಷ

ಇಂದಿನಿಂದ ಸಿಎಂ ಡಿಕೆ ಶಿವಕುಮಾರ್ ಬರ ಅಧ್ಯಾಯನ ಕೈಗೊಂಡಿರುವ ವಿಚಾರ ಸಂಬಂಧ ಪ್ರತಿಕ್ರಿಯಿಸಿದ ಯಡಿಯೂರಪ್ಪ ಅವರು, ಸಿಎಂಗೆ ಇನ್ನಾದರೂ ಜ್ಞಾನೋದಯ ಆಗಿ ಮನವರಿಕೆ ಆದ್ರೆ ಸಂತೋಷದ ಸಂಗತಿ. ಮೊದಲಿಗೆ ಸಿಎಂ ಡಿಕೆಶಿ ದೆಹಲಿಗೆ ಹೋಗೋದನ್ನ ನಿಲ್ಲಿಸಿ ಅಭಿವೃದ್ಧಿ ಕಡೆ ಗಮನ ಕೊಡಲಿ ಎಂದು ಸಲಹೆ ನೀಡಿದರು.

ಮುಂದೆ ಬಿಜೆಪಿ-ಜೆಡಿಎಸ್ ಮೈತ್ರಿ ಅಧಿಕಾರಕ್ಕೆ

ನಾವು 2028ರ ಚುನಾವಣೆಗಾಗಿ ಈ ಹೋರಾಟ ಪ್ರಾರಂಭಿಸಿಲ್ಲ. ಈ ಸರ್ಕಾರ ದರೋಡೆ, ಭ್ರಷ್ಟಾಚಾರದಲ್ಲಿ ತೊಡಗಿದೆ. ಭ್ರಷ್ಟ ಸರ್ಕಾರದ ವಿರುದ್ಧ ಜನಾಭಿಪ್ರಾಯ ಸಂಗ್ರಹಿಸಲು ಈ ಹೋರಾಟ ಮಾಡ್ತಿದ್ದೇವೆ. ಮುಂದೆ ಬಿಜೆಪಿ-ಜೆಡಿಎಸ್ ನೇತೃತ್ವದಲ್ಲಿ ಪೂರ್ಣ ಬಹಮತದೊಂದಿಗೆ ಅಧಿಕಾರಕ್ಕೆ ಬರುತ್ತೇವೆ ಅನ್ನುವ ವಿಶ್ವಾಸವಿದೆ ಎಂದರು.

ಈ ಸರ್ಕಾರದಲ್ಲಿ ಭ್ರಷ್ಟಾಚಾರದಲ್ಲಿ ಭಾಗಿಯಾಗಿರೋದು ನಾಗೇಂದ್ರ ಒಬ್ಬರೇ ಅಲ್ಲ. ಇನ್ನು ಅನೇಕ ಭ್ರಷ್ಟ ಸಚಿವರ ಬಗ್ಗೆ ಗಂಭೀರ ಆರೋಪಗಳಿವೆ. ಸರ್ಕಾರದ ವಿರುದ್ಧ ಆರೋಪಗಳಿವೆ. ಅದರ ವಿರುದ್ಧ ಹೋರಾಟ ಮಾಡಲಾಗುತ್ತೆ ಎಂದರು.