ತಮಿಳುನಾಡು ವಿಧಾನಸಭಾ ಚುನಾವಣೆಯ ಮತ ಎಣಿಕೆಯಲ್ಲಿ, ಆಡಳಿತಾರೂಢ ಡಿಎಂಕೆ ಪಕ್ಷವು ಅನಿರೀಕ್ಷಿತ ಹಿನ್ನಡೆ ಅನುಭವಿಸಿ ಮೂರನೇ ಸ್ಥಾನಕ್ಕೆ ಕುಸಿದಿದೆ. ನಟ ವಿಜಯ್ ಅವರ ಟಿವಿಕೆ ಪಕ್ಷ ಮುನ್ನಡೆ ಸಾಧಿಸಿದ್ದು, ಈ ಹಿನ್ನೆಲೆಯಲ್ಲಿ ಡಿಎಂಕೆ ಕಚೇರಿಯಲ್ಲಿದ್ದ ವಿಜಯೋತ್ಸವದ ಸಿದ್ಧತೆಗಳನ್ನು ತೆರವುಗೊಳಿಸಲಾಗಿದೆ.

ತಮಿಳುನಾಡು ವಿಧಾನಸಭಾ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ನಡೆಯುತ್ತಿರುವ ಹಿನ್ನೆಲೆಯಲ್ಲಿ, ಆಡಳಿತಾರೂಢ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಪಕ್ಷವು ಅಚ್ಚರಿಯ ಹಿನ್ನಡೆಯನ್ನು ಎದುರಿಸುತ್ತಿದೆ. ಈ ಬೆಳವಣಿಗೆಯ ನಡುವೆ, ಚೆನ್ನೈನಲ್ಲಿರುವ ಡಿಎಂಕೆ ಪ್ರಧಾನ ಕಚೇರಿ ‘ಅಣ್ಣಾ ಅರಿವಲಯಂ’ನಲ್ಲಿ ವಿಜಯೋತ್ಸವಕ್ಕಾಗಿ ಮಾಡಿದ್ದ ಎಲ್ಲಾ ಸಿದ್ಧತೆಗಳನ್ನು ತೆರವುಗೊಳಿಸಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸೋಮವಾರ, ಮೇ 4, 2026ರ ವೇಳೆಗೆ ಹೊರಬಂದ ಆರಂಭಿಕ ಮತ ಎಣಿಕೆ ಪ್ರವೃತ್ತಿಗಳು ಡಿಎಂಕೆ ನಿರೀಕ್ಷೆಗಳಿಗೆ ವಿರುದ್ಧವಾಗಿ ಸಾಗುತ್ತಿರುವುದನ್ನು ಸೂಚಿಸಿದ ಬೆನ್ನಲ್ಲೇ ಸುಲಭ ಗೆಲುವಿನ ನಿರೀಕ್ಷೆಯಲ್ಲಿದ್ದ ಪಕ್ಷವು, ಸದ್ಯ ಮೂರನೇ ಸ್ಥಾನಕ್ಕೆ ಕುಸಿದಿರುವುದು ಗಮನಾರ್ಹವಾಗಿದೆ.

ರಾಜಕೀಯ ಸಮೀಕರಣದಲ್ಲಿ ದೊಡ್ಡ ಬದಲಾವಣೆ

ಆರಂಭಿಕ ಟ್ರೆಂಡ್‌ಗಳು ತಮಿಳುನಾಡಿನ ರಾಜಕೀಯ ಚಿತ್ರಣದಲ್ಲೇ ಮಹತ್ವದ ಬದಲಾವಣೆಯನ್ನು ಸೂಚಿಸುತ್ತಿವೆ. ನಟ-ರಾಜಕಾರಣಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷವು ಭರ್ಜರಿ ಮುನ್ನಡೆ ಸಾಧಿಸಿದ್ದು, ಎರಡನೇ ಸ್ಥಾನದಲ್ಲಿ ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (ಎಐಎಡಿಎಂಕೆ) ಮುಂದುವರಿದಿದೆ. ಆಡಳಿತಾರೂಢ ಡಿಎಂಕೆ ಮೂರನೇ ಸ್ಥಾನಕ್ಕೆ ಇಳಿದಿರುವುದು ಪಕ್ಷದ ಕಾರ್ಯಕರ್ತರಿಗೆ ಆಘಾತ ಉಂಟುಮಾಡಿದೆ.

ಪ್ರಮುಖ ನಾಯಕರಿಗೂ ಹಿನ್ನಡೆ ಸೂಚನೆ

ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಹಾಗೂ ಅವರ ಪುತ್ರ ಉದಯನಿಧಿ ಸ್ಟಾಲಿನ್ ಕೂಡ ತಮ್ಮ ಕ್ಷೇತ್ರಗಳಲ್ಲಿ ಆರಂಭಿಕ ಎಣಿಕೆಯಲ್ಲಿ ಹಿನ್ನಡೆಯಲ್ಲಿದ್ದಾರೆ ಎಂಬ ವರದಿಗಳು ಹೊರಬಿದ್ದಿವೆ. ಇದು ಡಿಎಂಕೆ ವಲಯದದಲ್ಲಿ ಮತ್ತಷ್ಟು ಚಿಂತೆ ಮೂಡಿಸಿದೆ.

ಅಣ್ಣಾ ಅರಿವಲಯಂನಲ್ಲಿ ಬದಲಾಗಿದ ವಾತಾವರಣ

ಚೆನ್ನೈಯ ಅಣ್ಣಾ ಅರಿವಲಯಂನಲ್ಲಿ ವಿಜಯೋತ್ಸವಕ್ಕಾಗಿ ಮುಂಚಿತವಾಗಿ ಸಿದ್ಧಪಡಿಸಿದ್ದ ವೇದಿಕೆ, ಬ್ಯಾನರ್‌ಗಳು, ಟೆಂಟ್‌ಗಳು ಸೇರಿದಂತೆ ಎಲ್ಲಾ ವ್ಯವಸ್ಥೆಗಳನ್ನು ತೆರವುಗೊಳಿಸಲಾಗಿದೆ. ಆರಂಭದಲ್ಲಿ ಜಯದ ನಿರೀಕ್ಷೆಯಲ್ಲಿದ್ದ ಕಾರ್ಯಕರ್ತರು, ಹಿನ್ನಡೆ ಸುದ್ದಿ ಹೊರಬಂದಂತೆ ನಿರಾಶರಾಗಿ ಮನೆಗೆ ತೆರಳಿರುವುದು ಕಂಡುಬಂದಿದೆ

ಕೆಲವರು ಈ ಬೆಳವಣಿಗೆಯಿಂದ ದುಃಖಿತರಾಗಿ ಸ್ಥಳವನ್ನು ತೊರೆದರೆ, ಇನ್ನೂ ಕೆಲವು ಕಾರ್ಯಕರ್ತರು ಅಂತಿಮ ಫಲಿತಾಂಶ ಬದಲಾಗಬಹುದು ಎಂಬ ನಿರೀಕ್ಷೆಯಲ್ಲಿ ಇದ್ದು, ಅಗತ್ಯವಿದ್ದರೆ ಮತ್ತೆ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುವುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಆರಂಭಿಕ ಮತ ಎಣಿಕೆ ಪ್ರವೃತ್ತಿಗಳು ತಮಿಳುನಾಡಿನ ರಾಜಕೀಯದಲ್ಲಿ ದೊಡ್ಡ ಬದಲಾವಣೆಗೆ ಸೂಚನೆ ನೀಡುತ್ತಿದ್ದು, ಡಿಎಂಕೆ ಪಕ್ಷಕ್ಕೆ ಇದು ಪ್ರಮುಖ ಸವಾಲಾಗುತ್ತಿದೆ. ಅಂತಿಮ ಫಲಿತಾಂಶಗಳು ಹೊರಬರುವವರೆಗೆ ರಾಜಕೀಯ ಚಟುವಟಿಕೆಗಳು ಇನ್ನಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ. ಎಲ್ಲರ ಗಮನ ಇದೀಗ ಅಂತಿಮ ಫಲಿತಾಂಶದತ್ತ ಕೇಂದ್ರೀಕೃತವಾಗಿದೆ.