ಛತ್ತೀಸ್‌ಗಢದ ಬಿಜೆಪಿ ಸಂಸದ ಭೋಜರಾಜ್ ನಾಗ್ ಅವರು, ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ನಿಂಬೆಹಣ್ಣು ಕತ್ತರಿಸಿ ಮಳೆಯನ್ನು ನಿಲ್ಲಿಸಿರುವುದಾಗಿ ಹೇಳಿಕೊಂಡಿದ್ದಾರೆ. ಈ ಹೇಳಿಕೆಯು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಅವರು ತೀವ್ರ ಟ್ರೋಲ್‌ಗೆ ಒಳಗಾಗಿದ್ದಾರೆ ಮತ್ತು ಕಾಂಗ್ರೆಸ್‌ನಿಂದ ಟೀಕೆಗೆ ಗುರಿಯಾಗಿದ್ದಾರೆ.

ಬಲೋಡ್: ಛತ್ತೀಸ್‌ಗಢದ ಕಾಂಕೇರ್‌ನ ಬಿಜೆಪಿ ಸಂಸದ ಭೋಜರಾಜ್ ನಾಗ್ ಅವರು ಲಿಂಬೆ ಹಣ್ಣಿನ ಹೇಳಿಕೆ ನೀಡುವ ಮೂಲಕ ಸಕತ್​ ಸದ್ದು ಮಾಡುತ್ತಿದ್ದಾರೆ. ತಮ್ಮ ಹೇಳಿಕೆಗಳು ಮತ್ತು ಕಾರ್ಯ ನೀತಿಗಾಗಿ ಆಗಾಗ್ಗೆ ಸುದ್ದಿಯಲ್ಲಿರುವ ಅವರು ಲಿಂಬೆಹಣ್ಣು ಕತ್ತರಿಸುವ ಮೂಲಕ ಮಳೆಯನ್ನು ನಿಲ್ಲಿಸಿದ್ದೇನೆ ಎಂದು ಹೇಳಿಕೊಂಡಿದ್ದು, ಇದೀಗ ಭಾರಿ ಟ್ರೋಲ್​ ಆಗುತ್ತಿದ್ದಾರೆ. "ನಾನು ಬುದ್ಧದೇವ್ ಮತ್ತು ಮಹಾದೇವ್ ಅವರನ್ನು ಪ್ರಾರ್ಥಿಸಿದೆ, ನಿಂಬೆಹಣ್ಣು ಕತ್ತರಿಸಿದೆ, ಮತ್ತು ಮಳೆ ನಿಂತಿತು" ಎಂದು ಅವರು ಹೇಳಿದ್ದಾರೆ. ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ವಿಷ್ಣುದೇವ್ ಸಾಯಿ ಕೂಡ ಕಾರ್ಯಕ್ರಮದಲ್ಲಿ ಹಾಜರಿದ್ದರು. ಅವರ ಎದುರೇ ಹೀಗೆ ಹೇಳಿದ್ದಾರೆ ಸಂಸದ.

ವಾಸ್ತವವಾಗಿ, ಮುಖ್ಯಮಂತ್ರಿ ವಿಷ್ಣುದೇವ್ ಸಾಯಿ ಬಲೋಡ್ ಜಿಲ್ಲೆಯ ದೂಂದಿಲ್ಹೋರಾದಲ್ಲಿ ಮಹಾತಾರಿ ವಂದನ ಯೋಜನೆಯ 31 ನೇ ಕಂತನ್ನು ಬಿಡುಗಡೆ ಮಾಡಲು ಇದ್ದರು. ಸಂಸದ ಭೋಜರಾಜ್ ನಾಗ್ ಕೂಡ ಕಾರ್ಯಕ್ರಮದಲ್ಲಿ ಹಾಜರಿದ್ದರು. ಕಾರ್ಯಕ್ರಮದ ಸಮಯದಲ್ಲಿ ಮಳೆ ನಿರೀಕ್ಷಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ತಮ್ಮ ಭಾಷಣದಲ್ಲಿ ಸಂಸದರು, ನಿನ್ನೆ ರಾತ್ರಿಯಿಂದ ಹವಾಮಾನ ಕೆಟ್ಟದಾಗಿತ್ತು, ಆದರೆ ಬುದ್ಧದೇವ್ ಮತ್ತು ಮಹಾದೇವ್ ಅವರನ್ನು ಪ್ರಾರ್ಥಿಸಿ ನಿಂಬೆಹಣ್ಣು ಕತ್ತರಿಸುವ ಮೂಲಕ ಮಳೆಯನ್ನು ನಿಲ್ಲಿಸಿದೆ. ಕಾರ್ಯಕ್ರಮ ಯಶಸ್ವಿಯಾಗಿದೆ; ಈಗ ಮಳೆ ಬರಲಿ" ಎಂದು ಹೇಳಿದರು.

ನಗುವನ್ನು ನಿಯಂತ್ರಿಸಲು ಸಾಧ್ಯವಾಗದ ಸಿಎಂ

ಭೋಜರಾಜ್ ನಾಗ್ ಅವರ ಹೇಳಿಕೆಯನ್ನು ಕೇಳಿ, ಕಾರ್ಯಕ್ರಮದಲ್ಲಿ ಹಾಜರಿದ್ದ ಮುಖ್ಯಮಂತ್ರಿ ವಿಷ್ಣುದೇವ್ ಸಾಯಿ ಮತ್ತು ಇತರ ನಾಯಕರು ನಕ್ಕರು. ಸಂಸದರೂ ನಗುವನ್ನು ತಡೆದುಕೊಳ್ಳಲು ಸಾಧ್ಯವಾಗಲಿಲ್ಲ. ಈಗ ಮಳೆ ಬಂದರೆ ಮುಖ್ಯಮಂತ್ರಿಗೆ ಇಲ್ಲಿ ರಾತ್ರಿ ಉಳಿಯಲು ಯಾವುದೇ ತೊಂದರೆ ಇಲ್ಲ ಎಂದು ಅವರು ಹೇಳಿದರು. ಸಂಸದರು ತಮಾಷೆಯಾಗಿ ಈ ವಿಷಯ ಹೇಳಿದರೋ, ಸೀರಿಯಸ್​ ಆಗಿಯೋ ಗೊತ್ತಿಲ್ಲ. ಒಟ್ಟಿನಲ್ಲಿ ಅವರು ಸಕತ್​ ಟ್ರೋಲ್​ ಅಂತೂ ಆಗುತ್ತಿದ್ದಾರೆ. ಇದರಿಂದ ಇಂಥ ಒಬ್ಬ ಸಂಸದ ಇದ್ದಾರೆ ಎನ್ನುವುದು ತಿಳಿಯುತ್ತಿದೆ ಎಂದು ಕೆಲವರು ಹೇಳುತ್ತಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ಹೇಳಿಕೆ ವೈರಲ್

ಬಿಜೆಪಿ ಸಂಸದ ಭೋಜರಾಜ್ ನಾಗ್ ಅವರ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಬಿಜೆಪಿ ಸಂಸದರ ಹೇಳಿಕೆಗೆ ಕಾಂಗ್ರೆಸ್ ತಿರುಗೇಟು ನೀಡಿದೆ. ಸಂಸದರು ನಿಂಬೆಹಣ್ಣು ಕತ್ತರಿಸುವ ಮೂಲಕ ಮಳೆಯನ್ನು ನಿಲ್ಲಿಸಬಹುದಾದರೆ, ನಿಂಬೆಹಣ್ಣು ಕತ್ತರಿಸುವ ಮೂಲಕ ಸಕ್ಕರೆಯ ಬೆಲೆಯನ್ನು ಕಡಿಮೆ ಮಾಡಬೇಕು ಎಂದು ಬಲೋದ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಚಂದ್ರೇಶ್ ಹಿರ್ವಾನಿ ಹೇಳಿದ್ದಾರೆ. ಈ ಮಧ್ಯೆ, ಜನರು ವಿವಿಧ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ.

ಈ ಮಧ್ಯೆ ಬಿಜೆಪಿ ಸಂಸದರು ಮೂಢನಂಬಿಕೆ ಮತ್ತು ತಪ್ಪು ಮಾಹಿತಿಯನ್ನು ಪ್ರೋತ್ಸಾಹಿಸುತ್ತಿದ್ದಾರೆ ಎಂದು ಛತ್ತೀಸ್‌ಗಢ ಕಾಂಗ್ರೆಸ್ ಮುಖ್ಯಸ್ಥ ದೀಪಕ್ ಬೈಜ್ ಆರೋಪಿಸಿದ್ದಾರೆ. ಅಂದಹಾಗೆ, ಸಂಸದರು ನಿಂಬೆಹಣ್ಣು, ಮಂತ್ರ-ತಂತ್ರ ಹಾಗೂ ಅಡೆತಡೆಗಳು ಅಥವಾ ದುರಾದೃಷ್ಟವನ್ನು ನಿವಾರಿಸುವ ಆಚರಣೆಗಳಿಗೆ ಸಂಬಂಧಿಸಿದ ಹೇಳಿಕೆಗಳ ಮೂಲಕ 'ನಾಗ್' ಈ ಹಿಂದೆಯೂ ಗಮನ ಸೆಳೆದಿದ್ದರು.