ಈ ಚುನಾವಣೆ ಸತ್ಯ ಮತ್ತು ಅಸತ್ಯ, ಪ್ರಚಾರ ಮತ್ತು ಅಪಪ್ರಚಾರ, ಜ್ಞಾನ ಮತ್ತು ಅಜ್ಞಾನದ ಚುನಾವಣೆಯಾಗಿತ್ತು. ಆದರೆ ರಾಜ್ಯದ ಜನತೆ ಕಾಂಗ್ರೆಸ್‌ನ ಸತ್ಯ, ಜ್ಞಾನಕ್ಕೆ ಜಯ ಗಳಿಸಿಕೊಟ್ಟಿದ್ದಾರೆ ಎಂದು ಶಾಸಕ ಯು.ಟಿ.ಖಾದರ್‌ ಹೇಳಿದ್ದಾರೆ. 

ಮಂಗಳೂರು (ಮೇ.17): ಈ ಚುನಾವಣೆ ಸತ್ಯ ಮತ್ತು ಅಸತ್ಯ, ಪ್ರಚಾರ ಮತ್ತು ಅಪಪ್ರಚಾರ, ಜ್ಞಾನ ಮತ್ತು ಅಜ್ಞಾನದ ಚುನಾವಣೆಯಾಗಿತ್ತು. ಆದರೆ ರಾಜ್ಯದ ಜನತೆ ಕಾಂಗ್ರೆಸ್‌ನ ಸತ್ಯ, ಜ್ಞಾನಕ್ಕೆ ಜಯ ಗಳಿಸಿಕೊಟ್ಟಿದ್ದಾರೆ ಎಂದು ಶಾಸಕ ಯು.ಟಿ.ಖಾದರ್‌ ಹೇಳಿದ್ದಾರೆ. ಚುನಾವಣೆಯಲ್ಲಿ ವಿಜಯ ಸಾಧಿಸಿದ ಬಳಿಕ ಮೊದಲ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯ ದ್ವೇಷಪೂರಿತ, ತಾರತಮ್ಯದ, ಜನವಿರೋಧಿ ನೀತಿಗಳಿಂದ ರಾಜ್ಯದ ಜನತೆ ಸಾಕಷ್ಟುನೋವುಂಡಿದ್ದರು. ಆ ನೋವನ್ನು ಚುನಾವಣೆಯಲ್ಲಿ ಮತದಾನ ಮಾಡುವ ಮೂಲಕ ವ್ಯಕ್ತಪಡಿಸಿದ್ದಾರೆ. ರಾಜ್ಯದ ಜನರ ಹಿತಕ್ಕೆ ಪೂರಕವಾಗಿ ಕಾಂಗ್ರೆಸ್‌ ಸರ್ಕಾರ ಕಾರ್ಯ ನಿರ್ವಹಿಸಲಿದೆ ಎಂದರು.

Add Asianetnews Kannada as a Preferred SourcegooglePreferred

ಜನರ ಗೌರವಕ್ಕೆ ಧಕ್ಕೆ ಮಾಡಲ್ಲ: ಉಳ್ಳಾಲ ಕ್ಷೇತ್ರದ ಸರ್ವ ಧರ್ಮಗಳ ಜನರು ನನ್ನನ್ನು 5ನೇ ಬಾರಿ ಗೆಲ್ಲಿಸಿದ್ದಾರೆ. ನನ್ನ ಮೇಲೆ ಜನರು ಇಟ್ಟವಿಶ್ವಾಸಕ್ಕೆ, ಕ್ಷೇತ್ರದ ಜನರ ಗೌರವಕ್ಕೆ ಧಕ್ಕೆ ಬಾರದಂತೆ ಕೆಲಸ ಮಾಡುತ್ತೇನೆ. ಕ್ಷೇತ್ರದಲ್ಲಿ ಶಾಂತಿ, ಸಹಬಾಳ್ವೆಯ ಸಮಾಜ ಸೃಷ್ಟಿಮಾಡುವುದೇ ಪ್ರಥಮ ಆದ್ಯತೆ. ಸಾಮರಸ್ಯದ ಜೀವನ ಇದ್ದರೆ ಮಾತ್ರ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಸಾಧ್ಯ. ಜಿಲ್ಲೆಯ ಎಲ್ಲ ಹಿರಿಯ ನಾಯಕರ ಮಾರ್ಗದರ್ಶನದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವುದಾಗಿ ಖಾದರ್‌ ಹೇಳಿದರು.

ಹುಲಿಗೆಮ್ಮ ಜಾತ್ರೆಗೆ ಬರುತ್ತಿದೆ ಭಕ್ತಸಾಗರ: ಸಹಸ್ರಾರು ಪ್ರಾಣಿಬಲಿ ಅವ್ಯಾಹತ

ಕೇಂದ್ರದ ಹಕ್ಕು ಪಡೆದೇ ಸಿದ್ಧ: ರಾಜ್ಯಕ್ಕೆ ಕೇಂದ್ರದಿಂದ ಬರುವ ಯೋಜನೆಗಳು, ಅನುದಾನಗಳು ಭಿಕ್ಷೆಯಲ್ಲ. ಅದು ನಮ್ಮ ರಾಜ್ಯದ ಹಕ್ಕು. ಕೇಂದ್ರದಿಂದ ಏನೆಲ್ಲ ಹಕ್ಕಿನ ಪಾಲು ರಾಜ್ಯಕ್ಕೆ ಸಿಗಬೇಕೋ ಅವುಗಳನ್ನು ಪಡೆದೇ ಪಡೆಯುತ್ತೇವೆ. ಕೆಲಸ, ಅಭಿವೃದ್ಧಿ ಕಾರ್ಯಗಳಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ಸರ್ಕಾರಗಳ ನಡುವಿನ ವ್ಯತ್ಯಾಸವನ್ನು ಜನರಿಗೆ ತೋರಿಸಿಕೊಡುತ್ತೇವೆ ಎಂದರು.

ಕಾಂಗ್ರೆಸ್‌ ಸರ್ಕಾರ ಹಮ್ಮಿಕೊಂಡ ಅನೇಕ ಯೋಜನೆಗಳನ್ನು ಬಿಜೆಪಿ ಸರ್ಕಾರ ಮುಂದುವರಿಸಿಲ್ಲ. ಇಂದಿರಾ ಕ್ಯಾಂಟೀನ್‌ನಂತಹ ಜನಪರ ಯೋಜನೆಗಳನ್ನು ಬಂದ್‌ ಮಾಡಿದೆ. ಎಲ್ಲ ಕ್ಷೇತ್ರಗಳಿಗೆ ಸಮಾನ ರೀತಿಯಲ್ಲಿ ಅನುದಾನವನ್ನೂ ಹಂಚುತ್ತಿರಲಿಲ್ಲ. ಕಾಂಗ್ರೆಸ್‌ ಶಾಸಕರಿದ್ದ ಕಡೆಗಳಲ್ಲಿ ಅನುದಾನ ಕಡಿತವಾಗುತ್ತಿತ್ತು. ಬಿಜೆಪಿ ಸರ್ಕಾರದ ಇಂತಹ ತಾರತಮ್ಯ, ದ್ವೇಷದ ರಾಜಕಾರಣವನ್ನು ಎಂದೂ ಕಾಂಗ್ರೆಸ್‌ ಮಾಡಲ್ಲ ಎಂದರು. ಪಕ್ಷದ ಮುಖಂಡರಾದ ಕೋಡಿಜಾಲ್‌ ಇಬ್ರಾಹಿಂ, ಶಶಿಧರ ಹೆಗ್ಡೆ, ಮೊಹಮ್ಮದ್‌ ಮೋನು, ಶಾಹುಲ್‌ ಹಮೀದ್‌, ಸದಾಶಿವ ಉಳ್ಳಾಲ್‌, ಮಮತಾ ಗಟ್ಟಿ, ಶುಭೋದಯ ಆಳ್ವ ಮತ್ತಿತರರಿದ್ದರು.

ನನ್ನ ಗೆಲುವಿನಲ್ಲಿ ಹೊನ್ನಾವರದ ಮತದಾರರ ಪಾತ್ರ ದೊಡ್ಡದು: ಶಾಸಕ ದಿನಕರ ಶೆಟ್ಟಿ

ರೈ ಚುನಾವಣಾ ನಿವೃತ್ತಿಗೆ ಬಿಡಲ್ಲ: ಮಾಜಿ ಸಚಿವ ರಮಾನಾಥ ರೈ ಅವರು ಅತ್ಯಂತ ಹಿರಿಯ ರಾಜಕಾರಣಿ. ಜಿಲ್ಲೆಯ ಅಭಿವೃದ್ಧಿಗೆ ಕಾರಣಕರ್ತರು. ಪ್ರಾಮಾಣಿಕತೆಯಿಂದ ಇಷ್ಟೂವರ್ಷಗಳ ಕಾಲ ರಾಜಕಾರಣ ಮಾಡಿದವರು. ಅವರನ್ನು ಚುನಾವಣಾ ರಾಜಕಾರಣದಿಂದ ನಿವೃತ್ತಿಯಾಗಲು ನಾವು ಬಿಡಲ್ಲ. ಮುಂದೆಯೂ ಅವರು ಸಕ್ರಿಯ ರಾಜಕಾರಣದಲ್ಲಿ ಇರುತ್ತಾರೆ ಎಂದು ಯು.ಟಿ. ಖಾದರ್‌ ಪ್ರತಿಕ್ರಿಯಿಸಿದರು.