ರಾಜಕೀಯ ಕ್ರಾಂತಿ ಎಬ್ಬಿಸಲು ಮುಂದಾಗಿದ್ದ ಶಾಸಕರಿಗೆ ಸಿದ್ದು ಗುದ್ದು
ರಾಜ್ಯದಲ್ಲಿ ಲೋಕಸಭಾ ಚುನಾವಣೆ ಮುಕ್ತಾಯವಾಗುತ್ತಿದ್ದಂತೆಯೇ ರಾಜಕೀಯ ಕ್ರಾಂತಿ ಎಬ್ಬಿಸಲು ಮುಂದಾಗಿದ್ದ ಕಾಂಗ್ರೆಸ್ ಶಾಸಕರಿಗೆ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಖಡಕ್ ವಾರ್ನ್ ಮಾಡಿದ್ದಾರೆ. ಇದ್ರಿಂದ ಸಮಾನ ಮನಸ್ಕ ಕಾಂಗ್ರೆಸ್ ಶಾಸಕರ ಸಭೆ ಕ್ಯಾನ್ಸಲ್ ಆಗಿದೆ.
ಬೆಂಗಳೂರು, (ಏ.29): ಬಿಡಿಎ ಅಧ್ಯಕ್ಷ ಹಾಗೂ ಶಾಸಕ ಎಸ್.ಟಿ.ಸೋಮಶೇಖರ್ ಅವರು ಕರೆದಿದ್ದ ಸಮಾನ ಮನಸ್ಕ ಶಾಸಕರ ಸಭೆ ರದ್ದಾಗಿದೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಖಾಡಕ್ಕೆ ಇಳಿದಿದ್ದರಿಂದ ಸಮಾನ ಮನಸ್ಕ ಶಾಸಕರು ತಮ್ಮ ನಿಲುವು ಬದಲಿಸಿದ್ದಾರೆ.
ಲೋಕಸಭಾ ಮತದಾನ ಮುಗಿಯುತ್ತಿದ್ದಂತೆಯೇ ರಾಜಕೀಯ ಕ್ರಾಂತಿ ಎಬ್ಬಿಸಿದ ಕಾಂಗ್ರೆಸ್ ಶಾಸಕ
'ರಾಜಕೀಯ ಪರಿಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದೆ' ಎಂದು ಹೇಳಿದ್ದ ಯಶವಂತಪುರ ಕ್ಷೇತ್ರದ ಕಾಂಗ್ರೆಸ್ ಶಾಸಕ ಸೋಮಶೇಖರ್ ಅವರು ಸಮಾನ ಮನಸ್ಕ ಶಾಸಕರ ಸಭೆ ಕರೆದಿದ್ದರು. ಮೈತ್ರಿ ಸರ್ಕಾರದ ವಿರುದ್ಧ ಈ ಸಭೆ ಕರೆಯಲಾಗಿದೆ ಎಂದು ವಿಶ್ಲೇಷಿಸಲಾಗಿತ್ತು.
ಸಭೆಗೆ ಶಾಸಕರನ್ನು ಆಹ್ವಾನಿಸಿದ್ದ ಆಹ್ವಾನ ಪತ್ರ ವೈರಲ್ ಆಗಿತ್ತು. ಇದಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದು, ಯಾವುದೇ ಕಾರಣಕ್ಕೂ ಸಭೆ ನಡೆಸಬಾರದು ಎಂದು ಎಲ್ಲರಿಗೂ ಖಡಕ್ ವಾರ್ನಿಂಗ್ ನೀಡಿದ್ದಾರೆ. ಇದ್ರಿಂದ ಸಭೆಯನ್ನು ರದ್ದು ಮಾಡಲಾಗಿದೆ ಎಂದು ಉನ್ನತ ಮೂಲಗಳಿಂದ ತಿಳಿದುಬಂದಿದೆ.
ಮತ್ತೊಂದೆಡೆ ಚಿಂಚೋಳಿ ಮತ್ತು ಕುಂದಗೋಳ ವಿಧಾನಸಭೆ ಉಪ ಚುನಾವಣೆ ನಾಮಪತ್ರ ಸಲ್ಲಿಕೆ ಹಿನ್ನೆಲೆಯಲ್ಲಿ ಬಹುತೇಕ ಶಾಸಕರು ಅಲ್ಲಿಗೆ ತೆರಳಿದ್ದಾರೆ. ಹಾಗಾಗಿ ಸಭೆಯಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ.
ಈ ಕಾರಣದಿಂದ ಸಮಾನ ಮನಸ್ಕ ಶಾಸಕರ ಸಭೆ ಮುಂದೂಡಲಾಗಿದೆ ಎಂದು ಸೋಮಶೇಖರ್ ಸಬೂಬು ನೀಡಿದ್ದಾರೆ.