'ಸೆಪ್ಟೆಂಬರ್ 17ರೊಳಗೆ ಸರ್ಕಾರ ಪತನ'
ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿರುವ ಜಾರಕಿಹೊಳಿ ಸಹೋದರರ ಪ್ರಹಸನ ಮುಂದುವರಿದಿದೆ. ಅತ್ತ ಕಾಂಗ್ರೆಸ್ ನಾಯಕರು ಅತೃಪ್ತ ಸಂಧಾನಕ್ಕೆ ಮುಂದಾದರೆ ಇತ್ತ ಸರ್ಕಾರ ಪತನಗೊಳ್ಳುವ ಬಗ್ಗೆ ಬಿಜೆಪಿ ನಾಯಕರೋರ್ವರು ಭವಿಷ್ಯ ನುಡಿದಿದ್ದಾರೆ.
ಬೆಂಗಳೂರು : ಸಮ್ಮಿಶ್ರ ಸರ್ಕಾರ ಹಾಗೂ ಕಾಂಗ್ರೆಸ್ ಪಕ್ಷದ ವಿರುದ್ಧ ಮುನಿಸಿಕೊಂಡಿರುವ ಶಾಸಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮಸ್ಕಿ ಶಾಸಕ ಪ್ರತಾಪ್ಗೌಡ ಪಾಟೀಲ್, ಬಳ್ಳಾರಿಯ ನಾಗೇಂದ್ರ, ವಿಜಯನಗರದ ಆನಂದ್ ಸಿಂಗ್ ಜತೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮಾತುಕತೆ ನಡೆಸಿದ್ದು, ಇನ್ನೂ ಕೆಲವರು ಅತೃಪ್ತರನ್ನು ಸಂಪರ್ಕಿಸಿದ್ದಾರೆ ಎನ್ನಲಾಗಿದೆ.
ಈ ನಡುವೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿದೇಶದಿಂದ ಮರಳಿದ ತಕ್ಷಣವೇ ಸಮ್ಮಿಶ್ರ ಸರ್ಕಾರದ ಅಳಿವು, ಉಳಿವಿಗೆ ಮುಹೂರ್ತ ನಿಗದಿಯಾಗಲಿದೆ ಎಂದು ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ ಹೇಳಿದ್ದಾರೆ.
ಸೆ.17ರೊಳಗೆ ಸರ್ಕಾರ ಪತನವಾಗುವ ನಿರೀಕ್ಷೆ ಇದೆ. ರಾಜ್ಯ ಸರ್ಕಾರದ ಭವಿಷ್ಯ ಬೆಳಗಾವಿ ರಾಜಕಾರಣಿಗಳ ಕೈಯಲ್ಲಿದೆ. ಸಚಿವ ರಮೇಶ್ ಜಾರಕಿಹೊಳಿ ಸೇರಿ ಯಾರೇ ಬಿಜೆಪಿಗೆ ಬಂದರೂ ಸ್ವಾಗತ ಎಂದು ಅವರು ಹೇಳಿದ್ದಾರೆ.