ದೇಶದೆಲ್ಲೆಡೆ ಇಂದು ಗೌರಿ ಗಣೇಶ ಹಬ್ಬದ ಸಂಭ್ರಮ. ಆದರೆ ಕಾಂಗ್ರೆಸ್ ಟ್ರಬಲ್ ಶೂಟರ್ ಡಿಕೆ ಶಿವಕುಮಾರ್ ದೆಹಲಿಯಲ್ಲಿ ಇಡಿ ಅಧಿಕಾರಿಗಳೆರೆದುರು ವಿಚಾರಣೆಗೆ ಹಾಜರಾಗಾಬೇಕಾಯಿತು. ಹಬ್ಬದ ದಿನ ಡಿಕೆಶಿ ಅಪ್ಪನನ್ನು ನೆನೆದು ಡಿಕೆಶಿ ಕಣ್ಣೀರು ಹಾಕಿದರೆ, ಮಗನ ಸಂಕಷ್ಟ ನೋಡಿ ತಾಯಿ ಕೊರಗಿದರು. ದೆಹಲಿ ಮಾತ್ರವಲ್ಲ ಕರ್ನಾಟಕದಲ್ಲೂ ಹಲವು ರಾಜಕಾರಣಿಗಳು ತುಂತುರ ಮಳೆಯಲ್ಲೂ ಬೆವತಿದ್ದಾರೆ. ಫೋನ್ ಕದ್ದಾಲಿಕೆ ಪ್ರಕರಣವನ್ನು ಕೈಗೆತ್ತಿಕೊಂಡಿರುವ CBI ಮತ್ತೊಂದು ಬೇಟೆಗೆ ಇಳಿದಿದೆ. ರಾಜಕೀಯ ಹೊರತುಪಡಿಸಿದರೆ, ಕಿಚ್ಚ ಸುದೀಪ್‌ ವಿಶೇಷವಾಗಿ ತಮ್ಮ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ. ಸಿನಿ ತಾರೆಯರ ಗೌರಿ ಗಣೇಶ ಹಬ್ಬ, ವೆಸ್ಟ್ ಇಂಡೀಸ್ ಪ್ರವಾಸದಲ್ಲಿರುವ ಟೀಂ ಇಂಡಿಯಾ ವಿಕೆಟ್ ಕೀಪರ್ ಪಂತ್ ದಾಖಲೆಯ ಪ್ರದರ್ಶನ ಸೇರಿದಂತೆ ಹತ್ತು ಹಲವು ಸುದ್ದಿಗಳು ಸಂಚಲನ ಸೃಷ್ಟಿಸಿತು. ಸೆಪ್ಟೆಂಬರ್ 2 ರ ಟಾಪ್ 10 ಸುದ್ದಿಗಳ ವಿವರ ಇಲ್ಲಿದೆ.

1 ಅಪ್ಪನ ನೆನೆದು ಕರಗಿದ ಡಿಕೆಶಿ; ಮಗನ ಕಣ್ಣೀರು ನೋಡಿ ಕೊರಗಿದ ಅಮ್ಮ! 

Add Asianetnews Kannada as a Preferred SourcegooglePreferred

ಅತ್ತ ದೆಹಲಿಯಲ್ಲಿ ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳ ಮುಂದೆ ಮನಿ ಲಾಂಡರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗಿರುವ ಡಿ.ಕೆ. ಶಿವಕುಮಾರ್ ಅಪ್ಪನನ್ನು ನೆನೆದು ಕಣ್ಣಿರು ಹಾಕಿದ್ದಾರೆ. ಮಗನ ಕಣ್ಣೀರು ಕಂಡು ಇತ್ತ ಬೆಂಗಳೂರಿನಲ್ಲಿ ಡಿಕೆಶಿ ಅಮ್ಮ ಕೂಡಾ ಅತ್ತಿದ್ದಾರೆ.


2 ಫೋನ್ ಟ್ಯಾಪಿಂಗ್ ಬೆನ್ನಲ್ಲೇ ಮತ್ತೊಂದು ಬೇಟೆಗಿಳಿದ CBI; ಹಲವರಿಗೆ ನಡುಕ ಶುರು!

ರಾಜಕಾರಣಿಗಳು ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳ ಫೋನ್ ಕದ್ದಾಲಿಕೆ ಪ್ರಕರಣವನ್ನು ತನಿಖೆಗೆತ್ತಿಕೊಂಡಿರುವ CBI ಮತ್ತೊಂದು ಬೇಟೆಗಿಳಿದಿದೆ. ಇದರ ಬೆನ್ನಲ್ಲೇ ಹಲವಾರು ರಾಜಕಾರಣಿ ಮತ್ತು ಹಿರಿಯ ಸರ್ಕಾರಿ ಅಧಿಕಾರಿಗಳಿಗೆ ನಡುಕ ಶುರುವಾಗಿದೆ. 


3 Fact Check: ಮೋದಿ ಭೇಟಿ ವೇಳೆ ಕೇಸರಿ ಬಟ್ಟೆ ಧರಿಸಿದ್ರಾ ದುಬೈ ರಾಜಕುಮಾರ?

ಅಬುದಾಬಿ ರಾಜಕುಮಾರ ಮಹಮ್ಮದ್‌ ಬಿನ್‌ ಝಾಯೇದ್‌ ಭಾರತದ ಪ್ರಧಾನಿ ನರೇಂದ್ರ ಮೋದಿ ಭೇಟಿ ವೇಳೆ ಕೇಸರಿ ಬಟ್ಟೆಧರಿಸಿದ್ದರು ಎನ್ನುವ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದು ನಿಜನಾ ಅನ್ನೋ ಕುತೂಹಲಕ್ಕೆ ಈ ಸುದ್ದಿ ಉತ್ತರ ನೀಡಲಿದೆ. 


4 ಕೇಕ್ ಕಟ್ ಮಾಡದೇ ಅಭಿಮಾನಿಗಳ ಜೊತೆ ಬರ್ತಡೇ ಸೆಲಬ್ರೇಟ್ ಮಾಡಿದ ಸುದೀಪ್

ಸ್ಯಾಂಡಲ್ ವುಡ್ ಪೈಲ್ವಾನ್ ಕಿಚ್ಚ ಸುದೀಪ್ ಗೆ 46 ನೇ ಹುಟ್ಟುಹಬ್ಬದ ಸಂಭ್ರಮ. ಜೆ ಪಿ ನಗರ ಸುದೀಪ್ ನಿವಾಸಕ್ಕೆ ಅಭಿಮಾನಿಗಳು ಆಗಮಿಸಿ ಹುಟ್ಟುಹಬ್ಬವನ್ನು ಸಂಭ್ರಮಿಸಿದರು. ಪ್ರವಾಹದ ಪ್ರಯುಕ್ತ ಸಿಂಪಲ್ ಆಗಿ ಆಚರಿಸಿಕೊಂಡಿದ್ದಾರೆ. ಪೈಲ್ವಾನ್ ಚಿತ್ರ ತಂಡ ಹಾಡೊಂದನ್ನು ರಿಲೀಸ್ ಮಾಡಿ ಶುಭಾಶಯ ಕೋರಿದೆ. 

5 ಸಿನಿ ತಾರೆಯರ ಮನೆಯಲ್ಲಿ ಗೌರಿ-ಗಣೇಶ ಹಬ್ಬ!

ಗೌರಿ-ಗಣೇಶ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸುತ್ತಿರುವ ಸಿನಿ ತಾರೆಯರು ತಮ್ಮ ಹಬ್ಬದ ದಿನ ಹೇಗಿರುತ್ತದೆ ಎಂದು ಮಾತನಾಡಿದ್ದಾರೆ. ಸ್ಯಾಂಡಲ್‌‍ವುಡ್ ತಾರೆಯರ ಗೌರಿ ಗಣೇಶ ಹಬ್ಬದ ಸಡಗರ ಇಮ್ಮಡಿಯಾಗಿದೆ. ಈ ಸಂಭ್ರಮದಲ್ಲಿ ನೀವು ಪಾಲ್ಗೊಳ್ಳಿ. 

6 ಮೋದಿ ಜೊತೆ ಚಂದ್ರಯಾನ-2 ವೀಕ್ಷಣೆಗೆ ಸಿಂಧನೂರು ವಿದ್ಯಾರ್ಥಿನಿ ಆಯ್ಕೆ

ಸೆ.7 ರಂದು ಬೆಂಗಳೂರಿನ ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ ಕಚೇರಿಯಲ್ಲಿ ಚಂದ್ರನ ಅಂಗಳದಲ್ಲಿ ಚಂದ್ರಯಾನ-2 ನೌಕೆ ಇಳಿಯುವುದನ್ನು ಪ್ರಧಾನಿ ನರೇಂದ್ರ ಮೋದಿ ಜತೆಗೆ ವೀಕ್ಷಿಸಲು ರಾಯಚೂರು ಜಿಲ್ಲೆ ಸಿಂಧನೂರು ನಗರದ ಡಾಫಡಿಲ್ಸ್‌ ಕಾನ್ಸೆಫ್ಟ್‌ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಜಿ.ವೈಷ್ಣವಿ ನಾಗರಾಜ ಆಯ್ಕೆಯಾಗಿದ್ದಾರೆ.

7 ಭಾರತಕ್ಕೆ ಆತಂಕಕಾರಿ ಎಚ್ಚರಿಕೆ ನೀಡಿದ ಗುಪ್ತಚರ ಇಲಾಖೆ

ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ಭಾರತದ ವಿರುದ್ಧ ಸಮರ ಸಾರುವ ಎಚ್ಚರಿಕೆಯನ್ನು ಪಾಕಿಸ್ತಾನ ನೀಡಿದ ಬೆನ್ನಲ್ಲೇ, ಭಾರತದ ನೌಕಾ ನೆಲೆಗಳ ಬಗ್ಗೆ ಪಾಕ್‌ ಮಿತ್ರ ರಾಷ್ಟ್ರ ಚೀನಾ ಬೇಹುಗಾರಿಕೆ ನಡೆಸುತ್ತಿದೆ ಎನ್ನಲಾದ ಕಳವಳಕಾರಿ ವಿಚಾರ ಬೆಳಕಿಗೆ ಬಂದಿದೆ. ಈ ಕುರಿತು ಗುಪ್ತಚರ ದಳ ಎಚ್ಚರಿಕೆ ನೀಡಿದೆ.

8 ಕಲ್ಲು ಹೊಡೆಯುವ ಹಬ್ಬದ ಆಟ : 400 ಮಂದಿಗೆ ಗಾಯ!

ಇಲ್ಲಿನ ಛಿಂಡ್ವಾರಾ ಜಿಲ್ಲೆಯಲ್ಲಿ ನಡೆಯುವ ಕಲ್ಲೆಸೆಯುವ ಗೋಟ್‌ಮಾರ್‌ (ಗೋಟ್‌-ಕಲ್ಲು, ಮಾರ್‌-ಹೊಡೆ) ಹಬ್ಬದಲ್ಲಿ 400ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ. ಇದರಲ್ಲಿ 12 ಜನರು ತೀವ್ರವಾಗಿ ಗಾಯಗೊಂಡರೆ, ಇನ್ನಿಬ್ಬರು ಕಣ್ಣಿಗೆ ಪೆಟ್ಟು ಮಾಡಿಕೊಂಡಿದ್ದಾರೆ. 400 ವರ್ಷಗಳ ಇತಿಹಾಸವಿರುವ ಈ ಹಬ್ಬವನ್ನು ಪಂದುರ್ನಾ ಮತ್ತು ಸಾವರ್‌ಗಾಂವ್‌ ಗ್ರಾಮಸ್ಥರು ಪ್ರತಿವರ್ಷ ಆಚರಿಸುತ್ತಾರೆ. 

9 ಹೊಸ ಮೈಲಿಗಲ್ಲು ನಿರ್ಮಿಸಿದ ಪಂತ್; ಧೋನಿ ದಾಖಲೆ ಉಡೀಸ್!

ವೆಸ್ಟ್ ಇಂಡೀಸ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಯುವ ವಿಕೆಟ್ ಕೀಪರ್ ರಿಷಬ್ ಪಂತ್ ಹೊಸ ಮೈಲಿಗಲ್ಲು ನಿರ್ಮಿಸಿದ್ದಾರೆ. ರಿಷಬ್ ಪಂತ್, ವಿಂಡೀಸ್‌ನ ಕ್ರೈಗ್ ಬ್ರಾಥ್ವೈಟ್ ಕ್ಯಾಚ್ ಹಿಡಿಯೋ ಮೂಲಕ 50 ಬ್ಯಾಟ್ಸ್‌ಮನ್ ಬಲಿ ಪಡೆದ ಸಾಧನೆ ಮಾಡಿದರು. ಈ ಮೂಲಕ ಮಾಜಿ ಕ್ರಿಕೆಟಿಗ, ಎಂ.ಎಸ್.ಧೋನಿ ದಾಖಲೆಯನ್ನು ಮುರಿದರು.

10 ಕಿಂಗ್ಸ್‌ಟನ್ ಟೆಸ್ಟ್: ಭಾರತದ ಬಿಗಿ ಹಿಡಿತದಲ್ಲಿ ಕೆರಿಬಿಯನ್ನರು

ಐಸಿಸಿ ಟೆಸ್ಟ್ ಚಾಂಪಿಯನ್ ಶಿಪ್’ನ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ತನ್ನ ಸಾಮರ್ಥ್ಯಕ್ಕೆ ತಕ್ಕಂತಹ ಪ್ರದರ್ಶನ ತೋರಿದೆ. ಇದರೊಂದಿಗೆ ಎರಡನೇ ಟೆಸ್ಟ್ ಪಂದ್ಯದಲ್ಲೂ ವಿಂಡೀಸ್ ಎದುರು ಜಯಭೇರಿ ಬಾರಿಸುವತ್ತ ವಿರಾಟ್ ಪಡೆ ಮುನ್ನುಗ್ಗುತ್ತಿದೆ.