‘ಕೈಯಲ್ಲಿ ಫೋನಿದೆ, ಅಕೌಂಟ್ನಲ್ಲಿ ಡೇಟಾ ಇದೆ ಅಂದಮಾತ್ರಕ್ಕೆ ಯಾರ ಬಗ್ಗೆ ಬೇಕಾದರೂ ಹಾದರ-ಬೀದರ ಚರ್ಚೆ ಮಾಡ್ತೀರಾ?" ಎಂಬ ರಮ್ಯಾ ಅವರ ಪ್ರಶ್ನೆ ಅಲ್ಲಿ ನೆರೆದಿದ್ದವರಿಗೆ ಚುರುಕ್ ಮುಟ್ಟಿಸುವಂತಿತ್ತು. ಕ್ಷಮೆ ಕೇಳಲು ಬಂದವರತ್ತ ತಿರುಗಿಯೂ ನೋಡದ ರಮ್ಯಾ, ’ನಾನು ಯಾವುದೇ ಕಾರಣಕ್ಕೂ ಕೇಸ್ ವಾಪಸ್ ಪಡೆಯಲ್ಲ' ಎಂದಿದ್ದಾರೆ.
Ramya revange on Darshan Fans Trollers- ಸ್ಯಾಂಡಲ್ ವುಡ್ ಕ್ವೀನ್ 'ರಿವೇಂಜ್' ಮೋಡ್: ಕಣ್ಣೀರಿಟ್ಟ ಟ್ರೋಲರ್ಸ್, ಕರಗದ ರಮ್ಯಾ!
ಸ್ಯಾಂಡಲ್ ವುಡ್ ಅಂಗಳದಲ್ಲಿ ಮಾತ್ರವಲ್ಲ, ರಾಜಕೀಯ ರಣರಂಗದಲ್ಲೂ ಮಿಂಚಿದ್ದ 'ಕ್ವೀನ್' ರಮ್ಯಾ ಈಗ ನ್ಯಾಯಾಲಯದ ಅಖಾಡದಲ್ಲಿ ಅಬ್ಬರಿಸುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಕೀಳುಮಟ್ಟದ ಪದಗಳಿಂದ ದಾಳಿ ಮಾಡಿದವರಿಗೆ "ಪಾಠ ಕಲಿಸದೆ ಬಿಡೆನು" ಎಂದು ರಮ್ಯಾ ಈಗ ರಣಕಾಹಳೆ ಮೊಳಗಿಸಿದ್ದಾರೆ. ಈ ಹೈ-ವೋಲ್ಟೇಜ್ ಡ್ರಾಮಾ ನಡೆದಿದ್ದು ಬೆಂಗಳೂರಿನ 46ನೇ ಸಿಟಿ ಸಿವಿಲ್ ನ್ಯಾಯಾಲಯದ ಆವರಣದಲ್ಲಿ!
ಕೋರ್ಟ್ ಅಂಗಳದಲ್ಲಿ ಕಣ್ಣೀರಿನ ಮಳೆ!
ಕೋರ್ಟ್ ಕಲಾಪ ಅಂದಮೇಲೆ ವಾದ-ಪ್ರತಿವಾದ ಸಾಮಾನ್ಯ. ಆದರೆ ಇಲ್ಲಿ ನಡೆದಿದ್ದೇ ಬೇರೆ. ನಟ ದರ್ಶನ್ ಅವರ ಅಭಿಮಾನಿಗಳು ಎನ್ನಲಾದ ಕೆಲವು ಕಿಡಿಗೇಡಿಗಳು ರಮ್ಯಾ ಅವರ ವಿರುದ್ಧ ಅಶ್ಲೀಲವಾಗಿ ಕಾಮೆಂಟ್ ಮಾಡಿ ಈಗ ಪೊಲೀಸರ ಅತಿಥಿಗಳಾಗಿದ್ದಾರೆ. ಯಾವಾಗ ಕೇಸ್ ಸೀರಿಯಸ್ ಆಯ್ತೋ, ಆಗಲೇ ನೋಡಿ ಅಸಲಿ ಸಿನಿಮಾ ಶುರುವಾಗಿದ್ದು! ಕೋರ್ಟ್ ಆವರಣಕ್ಕೆ ರಮ್ಯಾ ಬರುತ್ತಿದ್ದಂತೆ, ಆರೋಪಿಗಳು ಮತ್ತು ಅವರ ಕುಟುಂಬದವರು ಒಬ್ಬೊಬ್ಬರಾಗಿ ರಮ್ಯಾ ಕಾಲಿಗೆ ಬಿದ್ದು ಅಕ್ಷರಶಃ ಪ್ರಲಾಪಿಸಿದ್ದಾರೆ. "ತಾಯಿ, ನಮ್ಮಿಂದ ತಪ್ಪಾಯ್ತು, ಕ್ಷಮಿಸಿಬಿಡಿ.. ಕೇಸ್ ವಾಪಸ್ ತಗೊಳ್ಳಿ" ಎಂದು ಅಂಗಲಾಚಿದ್ದಾರೆ. ಅಲ್ಲಿ ನೆರೆದಿದ್ದವರು ಒಂದು ಕ್ಷಣ ಮರುಗುವಂತೆ ಆ ಕಣ್ಣೀರಿನ ದೃಶ್ಯಗಳಿದ್ದವು.
ಕಲ್ಲಿನಂತಾದ 'ಪದ್ಮಾವತಿ': ಕ್ಷಮೆಯ ಮಾತಿಲ್ಲ!
ಇಷ್ಟೆಲ್ಲಾ ಹೈಡ್ರಾಮಾ ನಡೆದರೂ ರಮ್ಯಾ ಮಾತ್ರ ತಮ್ಮ ನಿರ್ಧಾರದಿಂದ ಇಂಚೂ ಕದಲಲಿಲ್ಲ. "ಕೈಯಲ್ಲಿ ಫೋನಿದೆ, ಅಕೌಂಟ್ನಲ್ಲಿ ಡೇಟಾ ಇದೆ ಅಂದಮಾತ್ರಕ್ಕೆ ಯಾರ ಬಗ್ಗೆ ಬೇಕಾದರೂ ಹಾದರ-ಬೀದರ ಚರ್ಚೆ ಮಾಡ್ತೀರಾ?" ಎಂಬ ರಮ್ಯಾ ಅವರ ಪ್ರಶ್ನೆ ಅಲ್ಲಿ ನೆರೆದಿದ್ದವರಿಗೆ ಚುರುಕ್ ಮುಟ್ಟಿಸುವಂತಿತ್ತು. ಕ್ಷಮೆ ಕೇಳಲು ಬಂದವರತ್ತ ತಿರುಗಿಯೂ ನೋಡದ ರಮ್ಯಾ, "ಇಂಟರ್ನೆಟ್ ಸಿಕ್ಕಾಗ ಬಾಯಿಗೆ ಬಂದ ಹಾಗೆ ಟೈಪ್ ಮಾಡಿದ್ದೀರಾ, ಈಗ ಕಾನೂನು ತನ್ನ ಕೆಲಸ ಮಾಡಲಿ. ನಾನು ಯಾವುದೇ ಕಾರಣಕ್ಕೂ ಕೇಸ್ ವಾಪಸ್ ಪಡೆಯಲ್ಲ" ಎಂದು ಖಡಕ್ ಆಗಿ ಹೇಳಿಬಿಟ್ಟರು. ಇದು ಕೇವಲ ರಮ್ಯಾ ಅವರ ವೈಯಕ್ತಿಕ ಹೋರಾಟವಾಗಿರಲಿಲ್ಲ, ಬದಲಿಗೆ ಸೋಷಿಯಲ್ ಮೀಡಿಯಾದಲ್ಲಿ ಹೆಣ್ಣುಮಕ್ಕಳನ್ನು ಅವಹೇಳನ ಮಾಡುವ ಪ್ರತಿಯೊಬ್ಬರಿಗೂ ಕೊಟ್ಟ 'ವಾರ್ನಿಂಗ್ ಬೆಲ್' ಆಗಿತ್ತು.
ಸೈಬರ್ ಕಿಡಿಗೇಡಿಗಳಿಗೆ ಪಾಠ!
ಸದ್ಯ ಸಿಸಿಬಿ ಪೊಲೀಸರು ಈ ಪ್ರಕರಣದಲ್ಲಿ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದು, ವಿಚಾರಣೆ ಚುರುಕುಗೊಂಡಿದೆ. "ನಾನು ಎಷ್ಟು ಬಾರಿ ಬೇಕಾದರೂ ಕೋರ್ಟ್ಗೆ ಅಲೆದಾಡಲು ಸಿದ್ಧ, ಆದರೆ ಇಂಥವರಿಗೆ ತಕ್ಕ ಶಿಕ್ಷೆಯಾಗಲೇಬೇಕು. ಇನ್ನೊಮ್ಮೆ ಸೋಷಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡುವ ಮುನ್ನ ನೂರು ಬಾರಿ ಯೋಚಿಸುವಂತಾಗಬೇಕು" ಎಂಬ ರಮ್ಯಾ ಅವರ ಕಿಡಿ ಈಗ ಇಡೀ ಸ್ಯಾಂಡಲ್ ವುಡ್ನಲ್ಲಿ ಸಂಚಲನ ಮೂಡಿಸಿದೆ.
ಒಟ್ಟಿನಲ್ಲಿ, ಪರದೆಯ ಮೇಲೆ ಕ್ಯೂಟ್ ಆಗಿ ಕಾಣುತ್ತಿದ್ದ 'ಪದ್ಮಾವತಿ', ಈಗ ಸೈಬರ್ ಕ್ರೈಂ ವಿರುದ್ಧ ಸೈನ್ಯ ಕಟ್ಟಿ ನಿಂತಿದ್ದು, ಟ್ರೋಲರ್ಸ್ಗಳಿಗೆ ನಡುಕ ಶುರುವಾಗಿದೆ. ಮುಂದೆ ಈ ಟ್ರೋಲರ್ಸ್ ಸ್ಥಿತಿ-ಗತಿ ಎಲ್ಲಿಗೆ ಹೋಗಿ ಮುಟ್ಟುತ್ತೋ ಗೊತ್ತಿಲ್ಲ! ಸದ್ಯಕ್ಕಂತೂ ರಮ್ಯಾ ಕೇಸ್ ಹಿಂಪಡೆಯುವ ಲಕ್ಷಣ ಕಾಣಿಸುತ್ತಿಲ್ಲ.


