Curry leaf plant care: ಕರಿಬೇವಿನ ಗಿಡವು ಹಚ್ಚಹಸಿರಾಗಿ ಮತ್ತು ಸೊಂಪಾಗಿ ಬೆಳೆಯಬೇಕೆಂದು ಎಲ್ಲರೂ ಬಯಸುತ್ತಾರೆ. ಆದರೆ ಸರಿಯಾದ ನಿರ್ವಹಣೆ ಇಲ್ಲದೆ ಗಿಡದ ಬೆಳವಣಿಗೆ ಕುಂಠಿತವಾಗುವುದು ಸಾಮಾನ್ಯ. ಕರಿಬೇವಿನ ಗಿಡಕ್ಕೆ ಬೇಕಾದ ಬಿಸಿಲು, ನೀರು ಮತ್ತು ಮನೆಯಲ್ಲೇ ತಯಾರಿಸಬಹುದಾದ ನೈಸರ್ಗಿಕ ಗೊಬ್ಬರದ ಕುರಿತು ಗಾರ್ಡನಿಂಗ್ ತಜ್ಞೆ ಕೃಷ್ಣಶ್ರೀ ಯಲಮಂಚಿಲಿ ಅವರು ನೀಡಿರುವ ಉಪಯುಕ್ತ ಮಾಹಿತಿಯನ್ನು Video ಸಮೇತ ಈ ಲೇಖನದಲ್ಲಿ ತಿಳಿಯೋಣ.

ಕ್ಷಿಣ ಭಾರತದ ಪ್ರತಿಯೊಂದು ಅಡುಗೆಯಲ್ಲೂ ಕರಿಬೇವಿನ ಪಾತ್ರ ಬಹಳ ದೊಡ್ಡದು. ಇದು ಕೇವಲ ರುಚಿಗಷ್ಟೇ ಅಲ್ಲದೆ, ತನ್ನ ಅದ್ಭುತ ಔಷಧೀಯ ಗುಣಗಳಿಂದಾಗಿ ಭಾರತೀಯ ಅಡುಗೆಮನೆಯ ಅವಿಭಾಜ್ಯ ಅಂಗವಾಗಿದೆ. ಆದರೆ, ಅನೇಕರು ತಮ್ಮ ಮನೆಯಲ್ಲಿ ಅಥವಾ ಕಿಚನ್ ಗಾರ್ಡನ್‌ನಲ್ಲಿ ಕರಿಬೇವಿನ ಗಿಡ ಸರಿಯಾಗಿ ಬೆಳೆಯುತ್ತಿಲ್ಲ ಅಥವಾ ಎಲೆಗಳು ದಟ್ಟವಾಗಿ ಬರುತ್ತಿಲ್ಲ ಎಂದು ದೂರುತ್ತಾರೆ. ಈ ಸಮಸ್ಯೆಗೆ ಗಾರ್ಡನಿಂಗ್ ತಜ್ಞೆ ಕೃಷ್ಣಶ್ರೀ ಯಲಮಂಚಿಲಿ ಅವರು ಮನೆಯಲ್ಲಿಯೇ ಸಿಗುವ ಪದಾರ್ಥಗಳನ್ನು ಬಳಸಿ ಎಂದು ಕೆಲವು ಸುಲಭ ಹಾಗೂ ಅತ್ಯಂತ ಪರಿಣಾಮಕಾರಿ ಪರಿಹಾರಗಳನ್ನು ಸೂಚಿಸಿದ್ದಾರೆ.

ಹೀಗೆ ಮಾಡಿದ್ರೆ ಎತ್ತರ ಮಾತ್ರ ಹೆಚ್ಚಾಗುತ್ತೆ, ಎಲೆಗಳು ಬರಲ್ಲ

ಕರಿಬೇವು ಮೂಲತಃ ಉಷ್ಣವಲಯದ ಸಸ್ಯವಾಗಿದ್ದು, ಇದರ ಆರೋಗ್ಯಕರ ಬೆಳವಣಿಗೆಗೆ ಉತ್ತಮ ಬೆಳಕು ಮತ್ತು ಶಾಖದ ಅವಶ್ಯಕತೆ ಇರುತ್ತದೆ. ಗಿಡವು ಸೊಂಪಾಗಿ ಬೆಳೆಯಲು ದಿನಕ್ಕೆ ಕನಿಷ್ಠ 4 ರಿಂದ 5 ಗಂಟೆಗಳ ಕಾಲ ನೇರ ಬಿಸಿಲು ಸಿಗುವ ಜಾಗದಲ್ಲಿ ಅದನ್ನು ಇಡಬೇಕು. ಒಂದು ವೇಳೆ ನೀವು ಗಿಡವನ್ನು ಸಂಪೂರ್ಣವಾಗಿ ನೆರಳಿನಲ್ಲಿಟ್ಟರೆ, ಅದರ ಎತ್ತರ ಮಾತ್ರ ಹೆಚ್ಚಾಗುತ್ತದೆಯೇ ಹೊರತು ಎಲೆಗಳು ದಟ್ಟವಾಗಿ ಮತ್ತು ದೊಡ್ಡದಾಗಿ ಬರುವುದಿಲ್ಲ. ಸರಿಯಾದ ಬಿಸಿಲು ಸಿಕ್ಕಾಗ ಮಾತ್ರ ಗಿಡದ ಕಾಂಡವು ಸದೃಢವಾಗುತ್ತದೆ ಮತ್ತು ಎಲೆಗಳು ಸುಂದರವಾದ ಗಾಢ ಹಸಿರು ಬಣ್ಣವನ್ನು ಪಡೆದುಕೊಳ್ಳುತ್ತವೆ.

ಇದೇ ನೋಡಿ ಉಚಿತ ಮತ್ತು ನೈಸರ್ಗಿಕ ರಸಗೊಬ್ಬರ

ಗಿಡಕ್ಕೆ ಸರಿಯಾದ ಪೋಷಣೆ ನೀಡಲು ನೀವು ಮಾರುಕಟ್ಟೆಯಿಂದ ದುಬಾರಿ ರಾಸಾಯನಿಕ ಗೊಬ್ಬರಗಳನ್ನು ತರುವ ಅಗತ್ಯವೇ ಇಲ್ಲ. ನಿಮ್ಮ ಅಡುಗೆಮನೆಯಲ್ಲಿ ಅಕಸ್ಮಾತ್ ಉಳಿದುಹೋದ ಹಳೆಯ ಹುಳಿ ಮಜ್ಜಿಗೆಯು ಕರಿಬೇವಿನ ಗಿಡಕ್ಕೆ ಅಮೃತದಂತೆ ಕೆಲಸ ಮಾಡುತ್ತದೆ. ಮಜ್ಜಿಗೆಯಲ್ಲಿರುವ ಉತ್ತಮ ಬ್ಯಾಕ್ಟೀರಿಯಾ ಮತ್ತು ಲ್ಯಾಕ್ಟಿಕ್ ಆಮ್ಲವು ಮಣ್ಣನ್ನು ಹೆಚ್ಚು ಫಲವತ್ತಾಗಿಸಿ ಗಿಡದ ಬೆಳವಣಿಗೆಯನ್ನು ವೇಗಗೊಳಿಸುತ್ತದೆ. ಒಂದು ಭಾಗ ಹುಳಿ ಮಜ್ಜಿಗೆಗೆ 5 ಭಾಗ ಸಾಮಾನ್ಯ ನೀರನ್ನು ಬೆರೆಸಿ ತೆಳುವಾದ ದ್ರಾವಣವನ್ನು ತಯಾರಿಸಿಕೊಳ್ಳಿ. ಇದನ್ನು ವಾರಕ್ಕೊಮ್ಮೆ ಗಿಡದ ಬುಡಕ್ಕೆ ಹಾಕುವುದರಿಂದ ಗಿಡಕ್ಕೆ ಅಗತ್ಯವಿರುವ ಎಲ್ಲಾ ಪೋಷಕಾಂಶಗಳು ಲಭಿಸಿ ಬೇರುಗಳು ಗಟ್ಟಿಗೊಳ್ಳುತ್ತವೆ.

ಎಲೆ ಕೀಳುವ ಸರಿಯಾದ ವಿಧಾನ

ಹೆಚ್ಚಿನ ಜನರು ಅಡುಗೆಗೆ ಬೇಕಾದಾಗ ಕೇವಲ ಎಲೆಗಳನ್ನು ಮಾತ್ರ ಗಿಡದಿಂದ ಎಳೆದು ಬಿಡಿಸುತ್ತಾರೆ, ಇದು ಗಿಡದ ಬೆಳವಣಿಗೆಗೆ ಮಾಡುವ ದೊಡ್ಡ ತಪ್ಪು. ಕೇವಲ ಎಲೆಗಳ ಬದಲಿಗೆ ಇಡೀ ಚಿಕ್ಕ ರೆಂಬೆಯನ್ನೇ ಕೀಳಬೇಕು. ಹೀಗೆ ಮಾಡುವುದರಿಂದ ಆ ಕತ್ತರಿಸಿದ ಜಾಗದಲ್ಲಿ ಎರಡು ಅಥವಾ ಅದಕ್ಕಿಂತ ಹೆಚ್ಚು ಹೊಸ ಕವಲುಗಳು ಮೊಳೆಯಲು ಪ್ರಾರಂಭಿಸುತ್ತವೆ. ಗಿಡವು ಕೇವಲ ಮೇಲಕ್ಕೆ ನೇರವಾಗಿ ಬೆಳೆಯುತ್ತಿದ್ದರೆ, ಅದರ ತುದಿ ಭಾಗವನ್ನು ಕತ್ತರಿಸಬೇಕು. ಇದನ್ನು 'ಪಿಂಚಿಂಗ್' ಎನ್ನಲಾಗುತ್ತದೆ. ವರ್ಷಕ್ಕೊಮ್ಮೆ ಫೆಬ್ರವರಿ ತಿಂಗಳಲ್ಲಿ ಅಥವಾ ಮಳೆಗಾಲದ ಸಮಯದಲ್ಲಿ ಹಗುರವಾದ ಕಟ್ (ಪ್ರೂನಿಂಗ್) ಮಾಡುವುದರಿಂದ ಗಿಡವು ದಟ್ಟವಾದ ಪೊದೆಯಂತೆ ಹರಡಿಕೊಂಡು ಬೆಳೆಯಲು ಬಹಳ ಸಹಕಾರಿಯಾಗುತ್ತದೆ.

ಮಣ್ಣಿನ ಗುಣಮಟ್ಟ ಮತ್ತು ಕೀಟಗಳ ನಿರ್ವಹಣೆ

ಗಿಡವಿರುವ ಕುಂಡದಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳುವುದು ಅತ್ಯಂತ ಮುಖ್ಯ. ಕುಂಡದಲ್ಲಿ ನೀರು ಸರಿಯಾಗಿ ಹೊರಹೋಗಲು ಉತ್ತಮ ರಂಧ್ರಗಳಿರಲಿ, ಇಲ್ಲದಿದ್ದರೆ ಬೇರುಗಳು ಕೊಳೆತು ಎಲೆಗಳು ಹಳದಿಯಾಗಿ ಉದುರಿಹೋಗುತ್ತವೆ. ಮಣ್ಣನ್ನು ತಯಾರಿಸುವಾಗ ಅದಕ್ಕೆ ಸ್ವಲ್ಪ ಪ್ರಮಾಣದ ಮರಳು ಮತ್ತು ಒಣಗಿದ ಸಗಣಿ ಗೊಬ್ಬರವನ್ನು ಬೆರೆಸಿದರೆ ಬೇರುಗಳು ಸುಲಭವಾಗಿ ಹರಡಲು ಬೇಕಾದ ವಾತಾವರಣ ಸಿಗುತ್ತದೆ. ಕೊನೆಯದಾಗಿ, ಕರಿಬೇವಿನ ಗಿಡಕ್ಕೆ ಬಿಳಿ ಕೀಟಗಳ ಬಾಧೆ ಕಂಡುಬಂದಲ್ಲಿ ಬೇವಿನ ನೀರು ಅಥವಾ ಮೇಲೆ ತಿಳಿಸಿದ ಮಜ್ಜಿಗೆಯ ದ್ರಾವಣವನ್ನೇ ಎಲೆಗಳ ಮೇಲೆ ಸಿಂಪಡಿಸಿ. ಇದರಿಂದ ಗಿಡವು ರೋಗಮುಕ್ತವಾಗಿ, ಹಚ್ಚಹಸಿರಾಗಿ ನಿಮ್ಮ ಮನೆಯ ಅಂದವನ್ನು ಹೆಚ್ಚಿಸುತ್ತದೆ.

View post on Instagram