ಶಿಕಾರಿಪುರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ 'ಪ್ರಜಾಸೇವೆ ಆಂದೋಲನ'ಕ್ಕೆ ಚಾಲನೆ ನೀಡಿದರು. ಇದು ಜನರ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸುವ ಸರ್ಕಾರದ ಹೊಸ ಯೋಜನೆಯಾಗಿದೆ ಎಂದು ವಿವರಿಸಿದರು. ಇದೇ ವೇಳೆ ಸಂಸದ ಬಿ.ವೈ. ರಾಘವೇಂದ್ರ ಅವರು ಕೆರೆ ಒತ್ತುವರಿ, ರೈತರ ಸಮಸ್ಯೆಗಳು ಮತ್ತು ಇಲಾಖೆಗಳಲ್ಲಿನ ಭ್ರಷ್ಟಾಚಾರದಂತಹ ಗಂಭೀರ ವಿಷಯಗಳನ್ನು ಪ್ರಸ್ತಾಪಿಸಿ ಅಧಿಕಾರಿಗಳ ಗಮನ ಸೆಳೆದರು.
ಶಿಕಾರಿಪುರ: ಪ್ರಜಾಸೇವೆ ಆಂದೋಲನ ಮುಖ್ಯಮಂತ್ರಿಗಳ ಕನಸಿನ ಕೂಸು. ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾದ ಅವಧಿಯಲ್ಲಿ ಜಾರಿಗೊಳಿಸಿದ್ದ ಜನಸ್ಪಂದನ ಕಾರ್ಯಕ್ರಮ ಇದೀಗ ಜನ ಸಾಮಾನ್ಯರ ಸಮಸ್ಯೆ ಪರಿಹರಿಸಲು ಹೊಸ ಪ್ರಜಾಸೇವೆಯ ರೂಪದಲ್ಲಿ ಬಂದಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.
ಪ್ರಜಾಸೇವೆ ಆಂದೋಲನಾ ಸಭೆ ಉದ್ಘಾಟನೆ
ಮಂಗಳವಾರ ಪಟ್ಟಣದ ಸಾಂಸ್ಕೃತಿಕ ಭವನದಲ್ಲಿ ನಡೆದ ಪ್ರಜಾಸೇವೆ ಆಂದೋಲನಾ ಸಭೆ ಉದ್ಘಾಟಿಸಿ ಮಾತನಾಡಿ, ಜನರು ತಮಗೆ ಆಗಬೇಕಾದ ಕೆಲಸ ಕಾರ್ಯಗಳಿಗಾಗಿ ಸರ್ಕಾರಿ ಕಚೇರಿಗೆ ಅಲೆದಾಡುತ್ತಾ ಇರುತ್ತಾರೆ, ಆದರೆ ಈ ಕಾರ್ಯಕ್ರಮದಿಂದ ಜನರ ಸಮಸ್ಯೆಗಳನ್ನು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಗಮನಕ್ಕೆ ತಂದು ಜನರ ಸಮಸ್ಯೆ ತುರ್ತಾಗಿ ಇತ್ಯರ್ಥಪಡಿಸಲು ಅನುಕೂಲವಾಗುತ್ತದೆ, ಜನರು ಮಂತ್ರಿಗಳನ್ನು ಹುಡುಕಿಕೊಂಡು ಬರುವುದು ಈ ಕಾರ್ಯಕ್ರಮದಿಂದ ತಪ್ಪುತ್ತದೆ. ಜನತೆ ಈ ಕಾರ್ಯಕ್ರಮವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಈಗ ಜನತೆ ನೀಡುವ ಅಹವಾಲು ಅರ್ಜಿಗಳನ್ನು ಸಂಬಂದಿಸಿದ ಇಲಾಖೆಯವರು ಶೀಘ್ರವಾಗಿ ಇತ್ಯರ್ಥಗೊಳಿಸಬೇಕು, ಜನರ ಸಮಸ್ಯೆಗಳ ಅರ್ಜಿಗಳ ಮಾಹಿತಿ ಸಿ.ಎಂ ಲಾಗಿನ್ಗೆ ಹೋಗುತ್ತದೆ, ನಾನೂ ಸೇರಿ ಅಧಿಕಾರಿಗಳು ಸಬೂಬು ಹೇಳಲು ಸಾಧ್ಯವಿಲ್ಲ. ಇದೊಂದು ಸೇವಾ ಕಾರ್ಯ, ಮುಖ್ಯವಾಗಿ ಅಧಿಕಾರಿ ವರ್ಗದವರು ಈ ಯೋಜನೆ ಗಂಭೀರವಾಗಿ ಪರಿಗಣಿಸಬೇಕು ಎಂದರು.
ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ಪ್ರತಿ ಸರ್ಕಾರಗಳೂ ಪ್ರಜಾಸೇವೆ ಮಾಡಿಕೊಂಡು ಬರುತ್ತಿವೆ, ಇವುಗಳು ಯಶಸ್ವಿಯಾಗಲು ಅಧಿಕಾರಿಗಳ ಸಮಯ ಪ್ರಜ್ಞೆಯ ಅಗತ್ಯವಿದೆ. ಕಂದಾಯ ಮತ್ತು ಆರ್ ಡಿ ಪಿ ಆರ್ ಇಲಾಖೆಯಲ್ಲಿ ಅತಿ ಹೆಚ್ಚು ಭ್ರಷ್ಟಾಚಾರ ನಡೆಯುತ್ತಿರುವ ಬಗ್ಗೆ ದಾಖಲೆಯನ್ನು ಸಚಿವ ಖಂಡ್ರೆಯವರು ಬಿಡುಗಡೆ ಮಾಡಿದ್ದಾರೆ. ದೇವರ ದಯೆಯಿಂದ ಶಿವಮೊಗ್ಗ ಜಿಲ್ಲೆ ಹತ್ತನೇ ಸ್ಥಾನದಲ್ಲಿದೆ, ಜಿಲ್ಲಾಮಟ್ಟದ ಮತ್ತು ತಾಲೂಕು ಮಟ್ಟದ ಎಲ್ಲ ಇಲಾಖೆಯ ಅಧಿಕಾರಿಗಳು ಈ ನಿಟ್ಟಿನಲ್ಲಿ ಗಮನಹರಿಸಬೇಕು ಎಂದರು.
ಹೈವೇ ಬೈಪಾಸ್ ನಿರ್ಮಾಣದಲ್ಲಿ ಜಮೀನು ಕಳೆದುಕೊಂಡವರಿಗೆ ನೀಡಲು ಪರಿಹಾರ ಧನ ಬಂದಿದೆ. ಆದರೆ ಪೋಡಿ ಆಗದ ಕಾರಣ ರೈತರಿಗೆ ಹಣ ತಲುಪಿಸಲಾಗುತ್ತಿಲ್ಲ. ಜಿಲ್ಲಾಧಿಕಾರಿಗಳು ಇದನ್ನು ಕಾನೂನು ವ್ಯಾಪ್ತಿಯಲ್ಲಿ ರೈತರಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಮುಂದಾಗಬೇಕು. ಈ ಬಗ್ಗೆ ಜಿಲ್ಲಾ ಮಂತ್ರಿಗಳು ಗಮನಹರಿಸಿ ಎಂದು ಮನವಿ ಮಾಡಿದರು.
ರಾಜ್ಯದಲ್ಲಿ ಅತಿ ಹೆಚ್ಚು ಕೆರೆಗಳನ್ನು ಹೊಂದಿರುವ ತಾಲೂಕು ಸೊರಬ, ಹೊರತುಪಡಿಸಿದರೆ ಶಿಕಾರಿಪುರ ತಾಲೂಕು ಎರಡನೇ ಸ್ಥಾನದಲ್ಲಿದೆ. ಸಚಿವ ಈಶ್ವರ್ ಖಂಡ್ರೆಯವರು ಬಿಡುಗಡೆಮಾಡಿದ ಪಟ್ಟಿಯಲ್ಲಿ ಜಿಲ್ಲೆಯಲ್ಲಿನ 4351 ಕೆರೆಯಲ್ಲಿ 1017 ಕೆರೆಗಳು ಒತ್ತುವರಿಯಾಗಿವೆ. 488 ಒತ್ತುವರಿ ಮುಕ್ತವಾಗಿವೆ. 539 ಕೆರೆಗಳು ಇನ್ನೂ ಮುಕ್ತವಾಗಿಲ್ಲ. ಅಧಿಕಾರಿಗಳು ಇದರ ಬಗ್ಗೆ ಗಮನಹರಿಸಿ ಉಳಿದ ಕೆರೆಗಳನ್ನು ಒತ್ತುವರಿ ಮುಕ್ತಗೊಳಿಸಬೇಕು ಎಂದರು.
ರೈತರು ತಮ್ಮ ಹೊಲಗಳಿಗೆ ಟಿಸಿ ಹಾಕಿಸಿಕೊಳ್ಳಲು 20 ರಿಂದ 25 ಸಾವಿರದವರೆಗೆ ಲಂಚ ಕೊಡುವಂತಹ ದುಸ್ಥಿತಿ ಇದೆ, ಇದನ್ನು ಪ್ರೂವ್ ಮಾಡಲು ಆಗುವುದಿಲ್ಲ. ಎಲ್ಲ ಸರ್ಕಾರಗಳು ಇದ್ದಾಗಲೂ ಈ ಲಂಚಾವತಾರ ನಡೆಯುತ್ತಲೇ ಇತ್ತು. ಇನ್ಮುಂದೆ ಆದರೂ ಅಧಿಕಾರಿಗಳು ಬರಗಾಲದಲ್ಲಿ ರೈತರಿಗೆ ಕಣ್ಣೀರು ಹಾಕಿಸುವ ಕೆಲಸ ದಯವಿಟ್ಟು ಮಾಡಬೇಡಿ ಎಂದರು.
ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಮಾತನಾಡಿ, ಸರ್ಕಾರದ ನಡೆ ಜನರ ಕಡೆಗೆ ಎಂಬ ಪ್ರಜಾಸೇವೆ ಕಾರ್ಯಕ್ರಮ ಇಂದು ಶಿಕಾರಿಪುರದಲ್ಲಿ ವಿದ್ಯುಕ್ತವಾಗಿ ಪ್ರಾರಂಭಿಸುತ್ತಿದ್ದೇವೆ. ಪ್ರತಿ ಮೊದಲನೆ ಶನಿವಾರ ಮತ್ತು ಕೊನೆಯ ಶನಿವಾರ ಈ ಕಾರ್ಯಕ್ರಮ ಜರುಗಲಿದ್ದು ,ಜನರ ಅನುಕೂಲಕ್ಕಾಗಿ ಅವರ ಅಹವಾಲುಗಳನ್ನು ಸ್ವೀಕರಿಸಿ, ಅಂಚೆ ಮೂಲಕವೂ ಸ್ವೀಕರಿಸಿ ಜನರ ಸಮಸ್ಯೆಗಳನ್ನು ಶೀಘ್ರ ಇತ್ಯರ್ಥಗೊಳಿಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಕೃಷಿಕ ಸಮಾಜದ ಅಧ್ಯಕ್ಷ ನಗರದ ಮಹದೇವಪ್ಪ, ತಾ.ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ನಾಗರಾಜಗೌಡ, ಜಿಪಂ ಸಿಇಒ ಹೇಮಂತ್, ಪೋಲಿಸ್ ವರಿಷ್ಠಾಧಿಕಾರಿ ನಿಖಿಲ್ ಬಿ, ತಹಸೀಲ್ದಾರ್ ವಾಣಿ, ಇಒ ನಾಗರಾಜ್ ಹಾಗೂ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಪಾದಯಾತ್ರೆ ಸರ್ಕಾರವನ್ನು ಭಯಬೀಳಿಸಿದೆ: ಸಂಸದ
ಮಾಧ್ಯಮದವರೊಂದಿಗೆ ಬಿ.ವೈ. ರಾಘವೇಂದ್ರ ಮಾತನಾಡಿ, ಕಸ್ತೂರಿರಂಗನ್ ವರದಿ ಮತ್ತು ಗಾಡ್ಗೀಳ್ ವರದಿ ಇವುಗಳು ಕಾಂಗ್ರೆಸ್ನ ಪಾಪದ ಕೂಸುಗಳು. ನಾವೂ ಕೂಡ ಅದನ್ನು ತಿದ್ದುಪಡಿ ಮಾಡಬೇಕು, ಯಾವುದೇ ರೀತಿಯಲ್ಲಿ ಜನತೆಗೆ ತೊಂದರೆಯಾಗಬಾರದು ಎಂದು ಒತ್ತಾಯ ಮಾಡುತ್ತೇವೆ, ಅನಗತ್ಯವಾಗಿ ತಾಲೂಕಿನಲ್ಲಿ ಜನರಿಗೆ ಭಯ ಬೀಳಿಸುವುದು ಅಗತ್ಯವಿಲ್ಲ ಎಂದು ಹೇಳಿದರು. ಬಳ್ಳಾರಿ ಪಾದಯಾತ್ರೆ ಸಮಾರೋಪಕ್ಕೆ ಸರ್ಕಾರ ಅನುಮತಿ ನೀಡುತ್ತಿಲ್ಲವಲ್ಲ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಒಂದು ವಾರಗಳ ಕಾಲ "ನ ಭೂತೋ ನ ಭವಿಷ್ಯತಿ '''' ಎಂದು ನಡೆದ ಪಾದಯಾತ್ರೆ ಸರ್ಕಾರವನ್ನು ಭಯ ಬೀಳಿಸಿದೆ, ಇದು ಗೃಹಮಂತ್ರಿಗಳ ದ್ವೇಷದ ರಾಜಕಾರಣ, ರಾಜಕೀಯದಲ್ಲಿ ಯಾರೂ ಕೂಡ ಶಾಶ್ವತವಲ್ಲ, ಹಿಂದೆ ರಾಹುಲ್ ಗಾಂಧಿಯವರು ಅದೇ ಮೈದಾನದಲ್ಲಿ ಕಾರ್ಯಕ್ರಮ ಮಾಡಿದ್ದಾರೆ, ಅವರಿಗೊಂದು ನ್ಯಾಯ. ನಮಗೊಂದು ನ್ಯಾಯಾನಾ? ಎಂದು ಪ್ರಶ್ನಿಸಿದರು.


