ಕಾಂಗ್ರೆಸ್ ಸರ್ಕಾರವು ಗೃಹಲಕ್ಷ್ಮಿ ಮತ್ತು ಗೃಹಜ್ಯೋತಿ ಯೋಜನೆಗಳ ಫಲಾನುಭವಿಗಳ ಪರಿಶೀಲನೆ ನಡೆಸುತ್ತಿದ್ದು, ಪಡಿತರ ಕಾರ್ಡ್‌ಗಳ ಪರಿಷ್ಕರಣೆಗೆ ಮೂರು ತಿಂಗಳ ಕಾಲ ತಡೆ ನೀಡಿದೆ. ಸಚಿವ ರಿಜ್ವಾನ್ ಅರ್ಷದ್ ಅವರು ಸದ್ಯಕ್ಕೆ ಯಾವುದೇ ಬಿಪಿಎಲ್, ಎಪಿಎಲ್ ಕಾರ್ಡ್ ರದ್ದು ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದು, ಸಚಿವ ರಾಯರೆಡ್ಡಿ ಅವರ ಹೇಳಿಕೆಯನ್ನು ಸಾಮರಸ್ಯದ ಭಾಷಣವೆಂದು ಸಮರ್ಥಿಸಿಕೊಂಡಿದ್ದಾರೆ.

ಮೈಸೂರು: ಸಿಎಂ ಡಿಕೆ ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಗೃಹಲಕ್ಷ್ಮಿ ಮತ್ತು ಗೃಹಜ್ಯೋತಿ ಯೋಜನೆಗಳ ಫಲಾನುಭವಿಗಳ ಪಟ್ಟಿಯ ಪರಿಶೀಲನೆ ನಡೆಸುತ್ತಿದೆ. ಇದರ ನಡುವೆ ಪಡಿತರ ಕಾರ್ಡ್‌ಗಳ ಪರಿಷ್ಕರಣೆಗೆ ಬ್ರೇಕ್ ಹಾಕಲಾಗಿದೆ. ಯಾವ ಬಿಪಿಎಲ್, ಎಪಿಎಲ್ ಕಾರ್ಡ್ ಗಳನ್ನ ರದ್ದು ಮಾಡುವುದಿಲ್ಲ ಎಂದು ಸಚಿವ ರಿಜ್ವಾನ್ ಅರ್ಷದ್ ಹೇಳಿದ್ದಾರೆ.

ಕಾರ್ಡ್ ರದ್ದು ಮಾಡಿದರೆ ಬಡವರಿಗೆ ಅನ್ಯಾಯ!

ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ರಿಜ್ವಾನ್ ಅರ್ಷದ್, ಮೂರು ತಿಂಗಳ ಕಾಲ ಯಾವ ಕಾರ್ಡ್ ರದ್ದು ಮಾಡದಂತೆ ಸೂಚನೆ ಕೊಟ್ಟಿದ್ದೇನೆ. ಬಿಪಿಎಲ್ ನಲ್ಲಿ ಅನರ್ಹರು ಇದ್ದಾರೆ ಎಂಬುದು ಗೊತ್ತಿದೆ. ಬಿಪಿಎಲ್ ಮಾನದಂಡ ಇವತ್ತಿನ ಆರ್ಥಿಕ ವ್ಯವಸ್ಥೆಗೆ ಸರಿಹೋಗುತ್ತಿಲ್ಲ. ಮಾನದಂಡಗಳನ್ನ ಬದಲಾಯಿಸಬೇಕಿದೆ. ಇನ್ನೂ ಬಹಳಷ್ಟು ಅರ್ಹರು ಬಿಪಿಎಲ್ ಕಾರ್ಡ್ ನಿಂದ ಹೊರಗಡೆ ಇದ್ದಾರೆ. ಅವರನ್ನ ಒಳಗಡೆ ಸೇರಿಸಬೇಕಿದೆ. ಏಕಾಏಕಿ ಕಾರ್ಡ್ ಡೀಲಿಟ್ ಮಾಡಿದರೆ ಬಡವರಿಗೆ ಅನ್ಯಾಯವಾಗುತ್ತದೆ. ಸದ್ಯಕ್ಕೆ ರಾಜ್ಯದಲ್ಲಿ ಬಿಪಿಎಲ್ ಎಪಿಎಲ್ ಕಾರ್ಡ್ ರದ್ದು ಇಲ್ಲ. ಮೂರು ತಿಂಗಳ ನಂತರ ಒಂದು ಸ್ಪಷ್ಟ ರೂಪ ಕೊಡುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.

ರಾಯರೆಡ್ಡಿ ಮಾಡಿದ್ದು ಸಾಮರಸ್ಯದ ಭಾಷಣ

ಇದೇ ಸಂದರ್ಭದಲ್ಲಿ ಸಚಿವ ರಾಯರೆಡ್ಡಿ ಹೇಳಿಕೆಯನ್ನು ಸಚಿವ ರಿಜ್ವಾನ್ ಅರ್ಷದ್ ಸಮರ್ಥಿಸಿಕೊಂಡಿದ್ದಾರೆ. ರಾಯರೆಡ್ಡಿ ಹೇಳಿರುವುದರಲ್ಲಿ ತಪ್ಪೇನಿದೆ ಹೇಳಿ, ಅವರು ಯಾವ ಧರ್ಮವನ್ನ ಕೀಳು ಎಂದು ಹೇಳಿಲ್ಲ. ಹಿಂದೂ ಮುಸ್ಲಿಂರ ನಡುವೆ ಸಾಮರಸ್ಯ ಮೂಡಿಸಲು ಅವರು ಮುಸ್ಲಿಂ ಧರ್ಮದ ಪ್ರೀತಿಯಿಂದ ಮಾತನಾಡಿದ್ದಾರೆ. ಅದರಲ್ಲಿ ತಪ್ಪು ಯಾಕೆ ಹುಡುಕಬೇಕು? ಹಾಗಾದರೆ ಒಂದು ಧರ್ಮದವರು ಇನ್ನೊಂದು ಧರ್ಮದ ಬಗ್ಗೆ ಮಾತನಾಡಬಾರದಾ? ಇದು ಸಾಮರಸ್ಯಕ್ಕಾಗಿ ಮಾಡಿರುವ ಭಾಷಣ. ಅವರು ಬೇರೆ ಯಾವ ಧರ್ಮವನ್ನ ಟೀಕೆ ಮಾಡಿಲ್ಲ ಎಂದು ಹೇಳಿದ್ದಾರೆ.

ಚಾಮುಂಡಿ ಬೆಟ್ಟಕ್ಕೆ ಹೋಗುತ್ತೇನೆ, ತಪ್ಪಾ?

ಅಲ್ಲದೇ, ಒಬ್ಬರನ್ನ ಒಳ್ಳೆಯವರು ಎಂದ ಮಾತ್ರಕ್ಕೆ ಅವರ ಪಕ್ಕ ಇದವರನ್ನ ಕೆಟ್ಟವರು ಯಾಕೆ ಎಂದು ಅಂದುಕೊಳ್ಳಬೇಕು. ನಾಳೆ ನಾನು ಸಹ ಚಾಮುಂಡಿ ಬೆಟ್ಟಕ್ಕೆ ಹೋಗುತ್ತೇನೆ. ದೇವರ ಪ್ರಾರ್ಥನೆ ಮಾಡುತ್ತೇನೆ, ಅದು ತಪ್ಪಾ? ರಾಯರೆಡ್ಡಿ ಮುಸ್ಲಿಂ ಧರ್ಮ ಮಾತ್ರ ಶ್ರೇಷ್ಟ ಎಂದು ಹೇಳಿಲ್ಲ. ಮುಸ್ಲಿಂರನ್ನ ಗುಡ್ ವಿಲ್ ನಲ್ಲಿ ಇಟ್ಟುಕೊಳ್ಳಲು ಎರಡು ಮಾತು ಆಡಿದ್ದಾರೆ. ಇದರಲ್ಲಿ ಯಾಕೆ ಬಿಜೆಪಿ ರಾಜಕೀಯ ಮಾಡುತ್ತಿದೆ. ಬಿಜೆಪಿಗೆ ಯಾವಗಲೂ ಹಿಂದು ಮುಸ್ಲಿಂ ವಿಚಾರ ಬೇಕು. ಹಿಂದೂ ಮುಸ್ಲಿಂ ಅಜೆಂಡಾ ಮಾತ್ರ ಅವರ ರಾಜಕೀಯರ ವಿಷಯ. ಬಿಜೆಪಿಯಲಿ ಒಬ್ಬೇ ಒಬ್ಬ ಕೂಡ ಬರದ ಬಗ್ಗೆ ಮಾತನಾಡಿಲ್ಲ ಎಂದು ಟೀಕಿಸಿದ್ದಾರೆ.