ನಂಜನಗೂಡಿನ ಶ್ರೀಕಂಠೇಶ್ವರ ಸ್ವಾಮಿ ಗೌತಮ ಪಂಚ ಮಹಾರಥೋತ್ಸವವು ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು. ರಥೋತ್ಸವದ ಸಮಯಕ್ಕೆ ಸರಿಯಾಗಿ ಬಂದ ಗರುಡ ಪಕ್ಷಿಯನ್ನು ಭಕ್ತರು ಕಣ್ತುಂಬಿಕೊಂಡರು.
ಮೈಸೂರು: ಗರಳಪುರಿ, ದಕ್ಷಿಣಕಾಶಿ ಎಂದೇ ಪ್ರಸಿದ್ಧಿ ಪಡೆದ ನಂಜನಗೂಡಿನ ಶ್ರೀಕಂಠೇಶ್ವರ ಸ್ವಾಮಿ ಗೌತಮ ಪಂಚ ಮಹಾರಥೋತ್ಸವವು ಸೋಮವಾರ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು. ಮೊದಲು ಗಣಪತಿ ರಥ, ನಂತರ ಶ್ರೀಕಂಠೇಶ್ವರ ಸ್ವಾಮಿ ದೊಡ್ಡರಥ, ಸುಬ್ರಹ್ಮಣ್ಯ, ಚಂಡಿಕೇಶ್ವರಸ್ವಾಮಿ, ಕೊನೆಯಲ್ಲಿ ಪಾರ್ವತಮ್ಮನವರ ರಥಗಳು 1.5 ಕಿ.ಮೀ. ರಥ ಬೀದಿಯಲ್ಲಿ ಸಂಚರಿಸಿದವು. ಲಕ್ಷಾಂತರ ಭಕ್ತರು ರಥಕ್ಕೆ ಹಣ್ಣು-ಧವನ ಎಸೆದು ಹರಕೆ ತೀರಿಸಿಕೊಂಡರು. ರಥೋತ್ಸವದ ಸಮಯಕ್ಕೆ ಸರಿಯಾಗಿ ಬಂದ ಗರುಡ ಪಕ್ಷಿಯನ್ನು ಭಕ್ತರು ಕಣ್ತುಂಬಿಕೊಂಡರು.
ರಥೋತ್ಸವದ ವೇಳೆ ಗರುಡ ಆಗಮನದ ದೃಶ್ಯವನ್ನು ಭಕ್ತರು ಮೊಬೈಲ್ನಲ್ಲಿ ಸೆರೆ ಹಿಡಿದುಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದು, ವಿಡಿಯೋ ವೈರಲ್ ಆಗುತ್ತಿದೆ. Suresh Kumar Belli ಎಂಬವರು ತಮ್ಮ ಫೇಸ್ಬುಕ್ ಪೇಜ್ನಲ್ಲಿ ಗರುಡ ಆಗಮನದ ವಿಡಿಯೋ ಹಂಚಿಕೊಂಡಿದ್ದು, ಇಲ್ಲಿಯವರೆಗೆ 1.68 ಲಕ್ಷಕ್ಕೂ ಅಧಿಕ ವ್ಯೂವ್, 8 ಸಾವಿರಕ್ಕೂ ಹೆಚ್ಚು ಲೈಕ್ಸ್ ಪಡೆದುಕೊಂಡಿದೆ.
ನಂಜನಗೂಡು ಜಾತ್ರೆಯಲ್ಲಿ ಹೃದಯಾಘಾತಕ್ಕೆ ವ್ಯಕ್ತಿ ಬಲಿ
ದಕ್ಷಿಣ ಕಾಶಿ ಖ್ಯಾತಿಯ ಶ್ರೀಕಂಠೇಶ್ವರ ಸ್ವಾಮಿ ದೊಡ್ಡ ಜಾತ್ರೆಗೆ ಬಂದಿದ್ದ ಭಕ್ತರೊಬ್ಬರು ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಸೋಮವಾರ ಜರುಗಿದೆ. ಬೆಂಗಳೂರು ಗ್ರಾಮಾಂತರ ಮಾಗಡಿ ನಿವಾಸಿ ನಂಜುಂಡಸ್ವಾಮಿ (58) ಮೃತ ದುರ್ದೈವಿ. ಜಾತ್ರೆಗಾಗಿ ಮಾಗಡಿಯಿಂದ ಆಗಮಿಸಿದ್ದ ನಂಜುಂಡಸ್ವಾಮಿ. ಕಿಡ್ನಿ ವೈಫಲ್ಯಕ್ಕೆ ತುತ್ತಾಗಿ ಡಯಾಲಿಸಿಸ್ ಪಡೆಯುತ್ತಿದ್ದರು ಎನ್ನಲಾಗಿದ್ದು, ಜಾತ್ರೆಯ ದೊಡ್ಡ ರಥ ಚಲಿಸುವ ವೇಳೆ ದೇವಾಲಯದ ಮೂಲೆ ಗಣಪತಿ ದೇವಸ್ಥಾನದ ಮುಂಭಾಗದಲ್ಲಿ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ನೂಕು ನುಗ್ಗಲು ಉಂಟಾಗಿ ಅಪ್ಪ, ಮಗನಿಗೆ ಗಾಯ
ಇನ್ನು ದೇವಾಲಯದ ಮುಂಭಾಗ ಗೌತಮ ಪಂಚ ಮಹಾ ರಥೋತ್ಸವಕ್ಕೆ ಚಾಲನೆ ನೀಡುತ್ತಿದ್ದ ವೇಳೆಯಲ್ಲಿ ನಿರೀಕ್ಷೆಗೂ ಮೀರಿದ ಜನ ಸೇರಿದ ಕಾರಣದಿಂದ ನೂಕು ನುಗ್ಗಲು ಉಂಟಾಗಿ ಕೆಳಗೆ ಬಿದ್ದು ಪಟ್ಟಣದ ಶಂಕರಪುರ ಬಡಾವಣೆಯ ರಂಗಸ್ವಾಮಿ (52), ಆತನ ಪುತ್ರ ಅಪ್ಪು (13) ಗಾಯಗೊಂಡಿದ್ದಾರೆ.
ಜಾತ್ರೆಯಲ್ಲಿ ಭಾಗಿಯಾಗಿದ್ದ ರಂಗಸ್ವಾಮಿ ದೇವಾಲಯದ ಮುಂಭಾಗದ ಲಾಡು ಪ್ರಸಾದ ನೀಡುವ ಕೌಂಟರ್ ಬಳಿ ರಥ ವೀಕ್ಷಣೆ ಮಾಡುತ್ತಿದ್ದ ವೇಳೆ ನೂಕು ನುಗ್ಗಲು ಉಂಟಾಗಿ ಕೆಳಗೆ ಬಿದ್ದಿದ್ದಾರೆ, ಅವರ ಮೇಲೆ ಹತ್ತು ಮಂದಿ ಮೇಲೆ ಬಿದ್ದ ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದಾರೆ, ಅವರನ್ನು ನಂಜನಗೂಡಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.
ನಂಜುಂಡೇಶ್ವರನ ಜಾತ್ರೆ ಕುರಿತು ಎಡಿಸಿ ಡಾ.ಶಿವರಾಜ್ ರಿಂದ ಗೀತ ರಚನೆ
ನಂಜನಗೂಡು ದೊಡ್ಡ ಜಾತ್ರೆ ಹಿನ್ನೆಲೆಯಲ್ಲಿ ಈ ಬಾರಿ ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಪಿ. ಶಿವರಾಜ್ ಅವರು ಗೀತೆಯನ್ನು ರಚಿಸಿ ಖ್ಯಾತ ಗಾಯಕ ಹೇಮಂತ್ ಅವರಿಂದ ಹಾಡಿಸಿ ಶಾಸಕ ದರ್ಶನ್ ಧ್ರುವನಾರಾಯಣ್ಅವರ ಮೂಲಕ ಬಿಡುಗಡೆಗೊಳಿಸಿದ್ದಾರೆ. ಗೀತೆಯ ರಂಗು ಕಳೆದ ಬಾರಿಯ ದಸರಾ ಗೀತೆಯ ಮೂಲಕ ತಮ್ಮದೇ ಆದ ರೀತಿಯಲ್ಲಿ ಕೊಡುಗೆ ನೀಡಿದ್ದ ಡಾ.ಪಿ. ಶಿವರಾಜ್ ಅವರು ಈ ಬಾರಿ ನಂಜನಗೂಡು ದೊಡ್ಡ ಜಾತ್ರೆಗೆ ಸಂಬಂಧಿಸಿದಂತೆ ಅರ್ಥಪೂರ್ಣವಾದ ಗೀತೆಯನ್ನು ರಚಿಸಿ ಅದನ್ನು ಗಾಯಕ ಹೇಮಂತ್ ಅವರಿಂದ ಹಾಡಿಸಿದ್ದಾರೆ.
ನಂಜುಂಡೇಶ್ವರನ ಜಾತ್ರೆ ಮತ್ತು ನಂಜುಂಡೇಶ್ವರನ ಕುರಿತಾದ ಈ ಗೀತೆಗೆ ಉತ್ತಮ ಸಂಗೀತವೂ ದೊರಕಿದೆ. ಉತ್ತಮ ಸಾಹಿತ್ಯದ ಮೂಲಕ ಸಾರ್ವಜನಿಕರಿಗೆ ದೊಡ್ಡ ಜಾತ್ರೆಯ ಸಂದೇಶವನ್ನು ನೀಡಿ, ಜೊತೆಗೆ ಭಕ್ತಾಧಿಗಳನ್ನು ಸ್ವಾಗತಿಸುವ ರೀತಿಯಲ್ಲಿ ಇದೆ.
ಇದನ್ನೂ ಓದಿ: ಇಂದು ಸಪ್ತ ರಾಶಿಗಳಿಗೆ ಸಿಗಲಿದೆ ಕುಬೇರನ ಕೃಪೆ; ಆಕಸ್ಮಿಕ ಧನಲಾಭದ ಜೊತೆ ಶುಭ ಸುದ್ದಿ
ಶಾಸಕ ದರ್ಶನ್ ಧೃವನಾರಾಯಣ್ ಅವರು ದೊಡ್ಡಜಾತ್ರೆ ಗೀತೆಯನ್ನು ಬಿಡುಗಡೆಗೊಳಿಸಿ ಶುಭ ಕೋರಿದರು. ಅಲ್ಲದೆ ಗೀತೆಯು ಉತ್ತಮವಾಗಿ ಮೂಡಿ ಬಂದಿದೆ. ಜಾತ್ರೆಯ ಆಶೋತ್ತರಗಳನ್ನು ಪ್ರತಿಬಿಂಬಿಸುತ್ತಿದೆ ಎಂದು ಅವರು ಡಾ.ಶಿವರಾಜ್ ಅವರ ಪ್ರಯತ್ನವನ್ನು ಶ್ಲಾಘಿಸಿದ್ದಾರೆ.
ಇದನ್ನೂ ಓದಿ: ಈ ದಿಕ್ಕಿನಲ್ಲಿರುವ ಮನಿ ಪ್ಲಾಂಟ್ ಭಿಕ್ಷುಕನನ್ನು ಸಹ ಶ್ರೀಮಂತನನ್ನಾಗಿ ಮಾಡಬಹುದು, ಆದ್ರೆ ಈ 4 ತಪ್ಪು ಮಾಡ್ಬೇಡಿ


