Asianet Suvarna News Asianet Suvarna News

ಬಿಎಂಟಿಸಿ ಬಸ್‌ನಲ್ಲಿ ಮುಂದೆ ಹೋಗಿ ಎಂದ ಕಂಡಕ್ಟರ್‌ಗೆ ಚಾಕು ಚುಚ್ಚಿದ ಪ್ರಯಾಣಿಕ!

ಬೆಂಗಳೂರಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಬಿಎಂಟಿಸಿ ಬಸ್ ನಿರ್ವಾಹಕನೊಬ್ಬನ ಮೇಲೆ ಪ್ರಯಾಣಿಕನೊಬ್ಬ ಚಾಕುವಿನಿಂದ ಇರಿದ ಘಟನೆ ನಡೆದಿದೆ. ಘಟನೆಯಲ್ಲಿ ಗಾಯಗೊಂಡ ನಿರ್ವಾಹಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ.

BMTC bus Shocking incident Passenger attacked with knife on conductor sat
Author
First Published Oct 2, 2024, 3:28 PM IST | Last Updated Oct 2, 2024, 3:29 PM IST

ಬೆಂಗಳೂರು (ಅ.02): ಕ್ಷುಲ್ಲಕ ಕಾರಣಕ್ಕೆ ಪ್ರಯಾಣಿಕನೊಬ್ಬ ಬಿಎಂಟಿಸಿ ವೋಲ್ವೋ ಬಸ್‌ ನಿರ್ವಾಹನ ಹೊಟ್ಟೆಗೆ ಚಾಕುವಿನಿಂದ ಇರಿದಿರುವ ಘಟನೆ ಮಂಗಳವಾರ ಸಂಜೆ ಸುಮಾರು 7 ಗಂಟೆಗೆ ವೈಟ್‌ಫೀಲ್ಡ್‌ನ ಐಟಿಪಿಎಲ್‌ ಸಮೀಪದ ವೈದೇಹಿ ಆಸ್ಪತ್ರೆ ಜಂಕ್ಷನ್‌ನಲ್ಲಿ ಬಳಿ ಘಟನೆ ನಡೆದಿದೆ.

ಬಿಎಂಟಿಸಿ 13ನೇ ಘಟಕದ ವೋಲ್ವೋ ಬಸ್‌ ನಿರ್ವಾಹಕ ಯೋಗೇಶ್‌(45) ಚಾಕು ಇರಿತಕ್ಕೆ ಒಳಗಾದವರು. ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆ ಸಂಬಂಧ ಜಾರ್ಖಂಡ್‌ ಮೂಲದ ಹರ್ಷ ಸಿನ್ಹಾ(25) ಎಂಬಾತನನ್ನು ಬಂಧಿಸಿರುವ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಬಸ್ಸಿನಲ್ಲಿ ಏಕಾಏಕಿ ಕಂಡಕ್ಟರ್‌ಗೆ ಚಾಕು ಚುಚ್ಚಿದ್ದರಿಂದ ಪ್ರಯಾಣಿಕರು ಭಯಭೀತರಾಗಿದ್ದರು. ಎಲ್ಲರೂ ಯುವಕನ ಪುಂಡಾಟಕ್ಕೆ ಬೆಚ್ಚಿಬಿದ್ದು ಬಸ್‌ನಿಂದ ಇಳಿದು ಓಡಿ ಹೋಗಿದ್ದಾರೆ.

ಮುಂದೆ ಹೋಗು ಎಂದಿದ್ದಕ್ಕೆ ಚಾಕು ಇರಿದ: ಬಿಎಂಟಿಸಿಯ ಘಟಕ 13ರ ವೋಲ್ವೋ ಬಸ್‌(ಕೆಎ-57ಎಫ್‌-0015) ವೈಟ್‌ಫೀಲ್ಡ್‌ನ ಐಟಿಪಿಎಲ್‌ ಕಡೆಯಿಂದ ಹೂಡಿಗೆ ತೆರಳುತ್ತಿತ್ತು. ವೇಳೆ ಹೂಡಿಗೆ ತೆರಳಲು ಬಸ್‌ ಏರಿದ ಹರ್ಷ ಸಿನ್ಹಾ ಬಾಗಿಲ ಬಳಿ ನಿಂತಿದ್ದಾನೆ. ಈ ವೇಳೆ ನಿರ್ವಾಹಕ ಯೋಗೇಶ್‌ ಮುಂದೆ ಹೋಗುವಂತೆ ಹೇಳಿದ್ದಾರೆ. ಇದರಿಂದ ಕೋಪಗೊಂಡ ಹರ್ಷ ಸಿನ್ಹಾ ಏಕಾಏಕಿ ಚಾಕು ತೆಗೆದು ಯೋಗೇಶ್‌ ಹೊಟ್ಟೆಗೆ ಇರಿದು ಹಲ್ಲೆ ಮಾಡಿದ್ದಾನೆ. ತಕ್ಷಣ ರಕ್ತಸ್ರಾವವಾಗಿ ಕುಸಿದು ಬಿದ್ದ ನಿರ್ವಾಹಕ ಯೋಗೇಶ್‌ನನ್ನು ಪ್ರಯಾಣಿಕರು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಇದನ್ನೂ ಓದಿ: ಕನ್ನಡತಿ ಸೀರಿಯಲ್ ನಟಿ ಜೊತೆಗೆ ಲಿವ್ ಇನ್ ರಿಲೇಶನ್: ಮದುವೆಗೆ ನಿರಾಕರಿಸಿದ್ದಕ್ಕೆ ಪ್ರಾಣಬಿಟ್ಟ ಯುವಕ

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್:  ಬಿಎಂಟಿಸಿ ಬಸ್ ರಶ್ ಆಗಿದ್ದು, ಟಿಕೆಟ್ ವಿತರಣೆ ಮಾಡುತ್ತಿದ್ದ ಕಂಡಕ್ಟರ್ ಎಲ್ಲ ಪ್ರಯಾಣಿಕರನ್ನು ಮುಂದಕ್ಕೆ ಕಳಿಸುತ್ತಾ ಬರುತ್ತಿದ್ದಾರೆ. ಈ ವೇಳೆ ಬಾಗಿಲ ಬಳಿ ನಿಂತಿದ್ದ ಯುವಕನಿಗೆ ಮುಂದಕ್ಕೆ ಹೋಗುವಂತೆ ಹೇಳಿದ್ದಾರೆ. ಆಗ ಆತನಿಗೆ ಕನ್ನಡ ಬಾರದ ಹಿನ್ನೆಲೆಯಲ್ಲಿ ಮುಂದಕ್ಕೆ ಹೋಗಿ ಎಂದು ಮೈಮುಟ್ಟಿ ಹೇಳಿದ್ದಾರೆ. ಇದರಿಂದ ಆಕ್ರೋಶಗೊಂಡ ಯುವಕ ತನ್ನ ಜೇಬಿನಲ್ಲಿದ್ದ ಚಾಕುವನ್ನು ತೆಗೆದು ಸೀದಾ ಕಂಡಕ್ಟರ್ ಹೊಟ್ಟೆಗೆ ಚುಚ್ಚಿದ್ದಾನೆ. ಇದರಿಂದ ಕಂಡಕ್ಟರ್ ನಾನು ಸತ್ತು ಹೋದೇ ಎಂದು ಜೋರಾಗಿ ಕೂಗಿಕೊಂಡಿದ್ದಾರೆ. ರಕ್ತದ ಮಡುವಿನಲ್ಲಿ ಕಂಡಕ್ಟರ್ ಬಿದ್ದು ಒದ್ದಾಡುತ್ತಿದ್ದಾಗ ಸಹ ಪ್ರಯಾಣಿಕರು ಆತನನ್ನು ಹಿಡಿದುಕೊಳ್ಳಲು ಮುಂದಾಗಿದ್ದಾನೆ. ಆಗ ಯುವಕ ಚಾಕು ಹಿಡಿದುಕೊಂಡು ಎಲ್ಲರಿಗೂ ಯಾರಾದರೂ ಬಂದರೆ ನಿಮಗೂ ಚಾಕು ಚುಚ್ಚುವುದಾಗಿ ಬೆದರಿಕೆ ಹಾಕಿದ್ದಾರೆ.

ಎಲ್ಲ ಪ್ರಯಾಣಿಕರಿಗೂ ಚಾಕು ತೋರಿಸುತ್ತಾ ಹಿಂದಕ್ಕೆ ಮುಂದಕ್ಕೆ ಓಡಾಡುತ್ತಾ ಕೋಪದಿಂದ ಚುಚ್ಚಲು ಮುಂದಾಗಿದ್ದಾನೆ. ಆಗ ಎಲ್ಲ ಪ್ತಯಾಣಿಕರು ಭಯಭೀತರಾಗಿ ಬಸ್ ನಿಂದ ಕೆಳಗೆ ಇಳಿದಿದ್ದಾರೆ. ಈ ವೇಳೆ ಚಾಕು ಹಿಡಿದು ಓಡಾಡುತ್ತಿದ್ದ ಯುವಕನನ್ನು ಬಸ್‌ನೊಳಗೆ ಕೂಡಿ ಹಾಕಿ ಬಾಗಿಲು ಹಾಕಲಾಗಿದೆ. ಬಸ್‌ನಿಂದ ಹೊರಗೆ ಬರಲು ಬಸ್ಸಿನ ಬಾಗಿಲು ಹಾಗೂ ಮುಂಬದಿಯ ಗಾಜನ್ನು ಒಡೆಯಲು ಕಾಲಿನಿಂದ ಒದ್ದಿದ್ದಾನೆ. ಈ ಎಲ್ಲ ವಿಡಿಯೋ ಬಸ್ಸಿನಲ್ಲಿರುವ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಇದನ್ನೂ ಓದಿ: ಕರ್ತವ್ಯನಿರತ ಪೊಲೀಸ್ ಪೇದೆಗೆ ಹಾರ್ಟ್ ಅಟ್ಯಾಕ್; ಆಸ್ಪತ್ರೆಯಲ್ಲಿ ಕೊನೆಯುಸಿರು!

ಜಾರ್ಖಂಡ್‌ ಮೂಲದ ಆರೋಪಿ ಹರ್ಷ ಸಿನ್ಹಾ ನಗರದ ಟೆಲಿಪರ್ಫಾಮೆನ್ಸ್‌ ಹೆಸರಿನ ಬಿಪಿಒ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಕಳೆದ ತಿಂಗಳು ಈತನನ್ನು ಕಂಪನಿ ಕೆಲಸದಿಂದ ತೆಗೆದು ಹಾಕಿತ್ತು ಎಂದು ತಿಳಿದು ಬಂದಿದೆ. ಈ ಸಂಬಂಧ ವೈಟ್‌ಫೀಲ್ಡ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

Latest Videos
Follow Us:
Download App:
  • android
  • ios