ಸಚಿವ ಬಸವರಾಜ ರಾಯರೆಡ್ಡಿಯವರ ಹಜ್ ಯಾತ್ರೆಯ ಆಸೆಯ ಹೇಳಿಕೆಯನ್ನು ಶಾಸಕ ಎಸ್. ಎನ್. ಚನ್ನಬಸಪ್ಪ ತೀವ್ರವಾಗಿ ಖಂಡಿಸಿದ್ದಾರೆ. ಇದು ಯಾರನ್ನೋ ಓಲೈಕೆ ಮಾಡಲು ನೀಡಿದ ಹೇಳಿಕೆಯಾಗಿದ್ದು, ಹಿಂದೂ ಧರ್ಮಕ್ಕೆ ಮಾಡಿದ ಅಪಮಾನ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೊತೆಗೆ, ವಿದ್ಯಾರ್ಥಿಗಳ ಹೋರಾಟದಿಂದ ಕೆಪಿಎಸ್ಸಿ ಅಕ್ರಮದ ತನಿಖೆ ಚುರುಕುಗೊಂಡಿದೆ ಎಂದು ತಿಳಿಸಿದ್ದಾರೆ.
ಶಿವಮೊಗ್ಗ: ಬಸವರಾಜ ರಾಯರೆಡ್ಡಿಯವರು ಹಜ್ಗಾದರೂ ಹೋಗಲಿ, ಜೆರುಸಲೇಂಗಾದರೂ ಹೋಗಲಿ ಅದನ್ನು ಜನರಿಗೆ ಹೇಳಿ ಹೋಗುವ ಅಗತ್ಯವೇನಿದೆ ಎಂದು ಶಾಸಕ ಎಸ್. ಎನ್. ಚನ್ನಬಸಪ್ಪ ಆಕ್ರೋಶ ವ್ಯಕ್ತಪಡಿಸಿದರು. ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿರಿಯ ರಾಜಕಾರಣಿಯಾಗಿರುವ ಸಚಿವ ಬಸವರಾಜ ರಾಯರೆಡ್ಡಿ ಇಸ್ಲಾಂ ಶ್ರೇಷ್ಠ ಧರ್ಮ, ಮಠ-ಮಂದಿರ ಬದಲಿಗೆ ಹಜ್ ಯಾತ್ರೆಗೆ ಹೋಗೋ ಆಸೆಯಿದೆ ಎಂದು ಹೇಳುತ್ತಾರೆ ಎಂದರೆ ಅವರ ಬುದ್ದಿಗೆ ಏನು ಹೇಳೋಣ ಹೇಳಿ. ಲಜ್ಜೆಗೆಟ್ಟ ಮಾನಸಿಕತೆ ಇರೋರು ಹೀಗೆ ವರ್ತನೆ ಮಾಡುತ್ತಾರೆ. ಯಾರನ್ನೋ ಓಲೈಕೆ ಮಾಡಲು ಈ ರೀತಿ ಹೇಳಿಕೆ ನೀಡುತ್ತಾರೆ. ಈ ರೀತಿಯ ಮಾನಸಿಕತೆ ಇರುವವರು ಬಹಳ ಜನ ಇದ್ದಾರೆ. ಯಾರ್ಯಾರ ಮಾನಸಿಕತೆ ಹೇಗೆಗೆ ಎಂದೇ ಹೇಳಲು ಆಗಲ್ಲ ಎಂದು ಕುಟುಕಿದರು.
ಇಂತಹ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡಲು ಬೇಸರವಾಗುತ್ತೆ. ಅನೇಕರು ಮತಾಂತರವೇ ಆಗಿ ಹೋಗಿದ್ದಾರೆ. ಒಳ್ಳೊಳ್ಳೆ ರಾಜಕಾರಣಿಗಳು ಸಂಬಂಧವನ್ನೇ ಬೆಳೆಸಿದ್ದಾರೆ. ಅವರ ಕುಟುಂಬದ ವ್ಯವಸ್ಥೆಯಲ್ಲಿ ಸಂಬಂಧ ಬೆಳೆಸಿರುವುದು ಮಾಡಲಿ ಅದು ಅವರ ವಿವೇಚನೆಗೆ ಬಿಟ್ಟಿದ್ದು. ಆದರೆ, ಹೇಳಿ ಹೋಗೋದು ಯಾಕೇ ಅದೇನು ದೇಶ ಕಟ್ಟೋ ಕೆಲಸನಾ..? ಎಂದು ಪ್ರಶ್ನಿಸಿದರು.
ಅಯೋಧ್ಯೆ, ಮಥುರಾಗೆ ಹೋಗಿ ಬನ್ನಿ ಅಂತಾ ಕರೆ ಕೊಡಲಿ
ಇವರು ಈ ರೀತಿ ಹೇಳಿಕೆ ಕೊಡೋರು ಸೋಮನಾಥ, ಅಯೋಧ್ಯೆ, ಮಥುರಾಗೆ ಹೋಗಿ ಬನ್ನಿ ಅಂತಾ ಕರೆ ಕೊಡಲಿ ನೋಡೋಣ. ಕಾಂಗ್ರೆಸ್ ಮಾನಸಿಕತೆಯೇ ಬೇರೆ. ಕಾಂಗ್ರೆಸ್ನವರಿಗೆ ಮಠ, ಮಂದಿರಗಳಿಗಿಂತ ಮೆಕ್ಕಾ, ಮದೀನಾ ಶ್ರೇಷ್ಠನಾ? ನನಗೂ ಬಹಳ ಜನ ಮುಸ್ಲಿಂ ಸ್ನೇಹಿತರು ಇದ್ದಾರೆ. ಯಾರು ಯಾವ ಧರ್ಮದಲ್ಲಿ ಹುಟ್ಟಿರುತ್ತಾರೋ ಅವರಿಗೆ ಆ ಧರ್ಮ ಶ್ರೇಷ್ಠ. ಹಿಂದೂ ಧರ್ಮಕ್ಕೆ ಅಪಮಾನ ಮಾಡುವ ವ್ಯಕ್ತಿಗಳಿಗೆ ನಾವು ಸಹಿಸಲ್ಲ. ವೋಟ್ ಬ್ಯಾಂಕ್ ರಾಜಕಾರಣಕ್ಕೋಸ್ಕರ ಈ ರೀತಿ ಹೇಳಿಕೆ ನಾಯಕತ್ವಕ್ಕೆ ಅಪಮಾನ ಎಂದು ಹರಿಹಾಯ್ದರು.
ಸುಖಾಸುಮ್ಮನೆ ಈ ರೀತಿಯ ಹೇಳಿಕೆಗಳು ಸರಿಯಲ್ಲ. ಈ ಹಿಂದೆ ಭದ್ರಾವತಿ ಶಾಸಕ ಸಂಗಮೇಶ್ ಅವರು ಮುಂದಿನ ಜನ್ಮದಲ್ಲಿ ಹುಟ್ಟಿದರೆ ನಾನು ಮುಸಲ್ಮಾನ್ನಾಗಿ ಹುಟ್ಟುತ್ತೇನೆ ಎಂದಿದ್ದರು. ಆಗ ನಾನು ಈ ಜನ್ಮದಲ್ಲೇ ಹೋಗಿ ಎಂದಿದ್ದೆ. ಕೆಲವರ ಮಾನಸಿಕತೆ ಬದಲಾವಣೆ ಮಾಡಲು ಸಾಧ್ಯವಿಲ್ಲ. ವೋಟಿನ ರಾಜಕಾರಣ ಮುಸಲ್ಮಾನರಿಗೆ ಈಗ ಅರ್ಥವಾಗುತ್ತಿದೆ ಎಂದು ಲೇವಡಿ ಮಾಡಿದರು.
ವಿದ್ಯಾರ್ಥಿಗಳ ಹೋರಾಟದಿಂದ ತನಿಖೆ ಚುರುಕು:
ಈ ಹಿಂದೆ ಕೆಪಿಎಸ್ಸಿ ಅಕ್ರಮದ ಕುರಿತು ಚರ್ಚೆ ಮಾಡಲು ಸರ್ಕಾರ ಅವಕಾಶ ನೀಡಿರಲಿಲ್ಲ. ಅಕ್ರಮವನ್ನು ಮುಚ್ಚಿಹಾಕುವ ಹಾಗೂ ಹೋರಾಟವನ್ನು ಹತ್ತಿಕ್ಕುವ ಕೆಲಸ ನಡೆದಿತ್ತು. ಜ್ಞಾನೇಂದ್ರ ಅವರನ್ನು ಈ ಹಿಂದೆ ಬಚ್ಚಿಡಲಾಗಿತ್ತು. ಆದರೆ, ವಿದ್ಯಾರ್ಥಿಗಳು ನಡೆಸಿದ ತೀವ್ರ ಹೋರಾಟದ ಪರಿಣಾಮವಾಗಿ ತನಿಖೆಗೆ ಚುರುಕು ದೊರೆತು, ಇದೀಗ ಆತನ ಬಂಧನವಾಗಿದೆ. ಜ್ಞಾನೇಂದ್ರ ಜೈಲು ಪಾಲಾಗಿದ್ದು, ಈ ಅಕ್ರಮಕ್ಕೆ ಕೈಜೋಡಿಸಿದ ಪ್ರತಿಯೊಬ್ಬರಿಗೂ ಶಿಕ್ಷೆಯಾಗಲಿದೆ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಎಚ್ಚರಿಸಿದರು.


